ಆ್ಯಪ್ನಗರ

'ಚೆರ್ರಿ ಬ್ಲಾಸಂ'ನಲ್ಲಿ ವಾಷಿಂಗ್ಟನ್‌ ಸುತ್ತಿದ ಕತೆ; ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 10

ಒಂದು ಪ್ರದೇಶದಲ್ಲಿ ಕನಿಷ್ಠ ಎಂದರೂ ಮೂರೂವರೆ ಸಾವಿರ ಚೆರ್ರಿ ಮರಗಳಿದ್ದು, ಅವೆಲ್ಲದರಲ್ಲೂ ಹೂವುಗಳು ಒಮ್ಮೆಗೆ ಬಿರಿದಿವೆ ಎಂದುಕೊಳ್ಳಿ. ಆಗ ಹೇಗಿರುತ್ತದೆ? ಹೀಗೆ ಒಂಮ್ಮೆಗೆ ಚೆರ್ರಿ ಮರಗಳಲ್ಲಿ ಹೂವುಗಳು ಬಿರಿಯುವ ಸಂಭ್ರಮವೇ 'ಚೆರ್ರಿ ಬ್ಲಾಸಂ’.

Authored byಶ್ರೀನಾಥ್ ಭಲ್ಲೆ | Vijaya Karnataka Web 11 Jun 2021, 12:20 pm
ನನ್ನಾಕೆಗೆ ಬಂದ ದಿವ್ಯಾಲೋಚನೆ ಏನಪ್ಪಾ ಅಂದ್ರೆ ಮಗನಿಗೆ ಜಾವಳ ಮಾಡಬೇಕು ಅಂತ. ಆಯ್ತು ಆದರೆ ಎಲ್ಲಿ? ನಮ್ಮದೇ ಊರಿನ ದೇವಸ್ಥಾನದಲ್ಲಿ ಮಾಡುವುದಾ? ಸ್ವಲ್ಪ ದೂರದ ಮೇರಿಲ್ಯಾಂಡ್ ನಗರದ ಶಿವ-ವಿಷ್ಣು ದೇವಸ್ಥಾನದಲ್ಲಿ ಮಾಡುವುದಾ? ಅಥವಾ ಸೀದಾ ಪಿಟ್ಸ್‌ಬರ್ಗ್‌ ವೆಂಕಟರಮಣನ ಸನ್ನಿಧಾನದಲ್ಲಿ ಮಾಡುವುದಾ? ಎಂಬೆಲ್ಲಾ ಆಲೋಚನೆಗಳು ಓಡಾಡಿದವು. ಇವೆಲ್ಲದರ ಆಚೆಯ ಅದ್ಭುತವಾದ ಆಯ್ಕೆ ಎಂದರೆ ಭಾರತಕ್ಕೆ ಭೇಟಿ ನೀಡಿ ಘನ ಬೆಂಗಳೂರಿನಲ್ಲಿ ಮಾಡುವುದು ಅಂತ.
Vijaya Karnataka Web Cherry


ಇಲ್ಲಿಯೇ ಮಾಡುವುದರಲ್ಲಿ ಏನೇನೂ ತೊಂದರೆ ಇಲ್ಲ. ಎಲ್ಲಕ್ಕೂ ಅನುಕೂಲವೂ ಇದೆ, ಅಚ್ಚುಕಟ್ಟಾಗಿ ನಡೆಯುತ್ತದೆ ಕೂಡ. ಆದರೆ ಜಾವಳಕ್ಕೆ ಅಂತ ಬಂಧುವರ್ಗವನ್ನು ಇಲ್ಲಿಗೆ ಕರೆಸಲು ಬಸ್ ಅಥವಾ ಟ್ರೈನ್ ಮಾಡುವುದು ಆಗದ ಮಾತು ಬಿಡಿ. ಸರಿ, ನಾವೇ ಹೋಗಿ ಬರುವುದು ಅಂತ ಆದ ಮೇಲೆ ಮೊದಲಿಗೆ ಎರಡು ಬಲ ನೋಡಬೇಕು. ಮಗನಿಗೆ ಗುರುಬಲ, ನನಗೆ ವೀಸಾ ಬಲ. ಎರಡೂ ಕೂಡಿ ಬಂದರೆ ಮಾತ್ರ ದೇಶ ಬಿಟ್ಟು ಭಾರತ ವಿಸಿಟ್ ಮಾಡಿ ಕ್ಷೇಮವಾಗಿಯೂ ವಾಪಸ್ ಬರಬಹುದು. ಇಲ್ದಿದ್ರೆ ಎಲ್ಲೋ ಒಂದು ಕಡೆ ಇಮಿಗ್ರೇಷನ್‌ನಲ್ಲಿ ಸಿಕ್ಕಿಕೊಳ್ಳಬೇಕಾದೀತು.

ಮೊದಲಿಗೆ ವೀಸಾ ಬಲ, ಪಾಸ್ಪೋರ್ಟ್ ಬಲ ಎಲ್ಲವೂ ಖಚಿತಪಡಿಸಿಕೊಂಡು ಆ ನಂತರ ಗುರುಬಲವನ್ನೂ ನೋಡಿ ಇಂಥಾ ದಿನ ಅಂತ ನಿಗದಿಯಾಯ್ತು. ನಾವು ಗುರುಬಲ ಖಚಿತಪಡಿಸಿಕೊಂಡ ಆರು ತಿಂಗಳ ನಂತರದ ದಿನವದು. ಅಲ್ಲಿಂದಾಚೆ ಟಿಕೆಟ್‌ ಖರೀದಿಯಾಗಬೇಕಲ್ಲಾ? ಸರಿ, ಇಂಟರ್‌ನೆಟ್‌ನಲ್ಲಿ ಹುಡುಕಾಟ, ಟ್ರಾವೆಲ್ ಕಂಪನಿಗಳಿಗೆ ಕರೆ ಮಾಡುವಿಕೆ ಇತ್ಯಾದಿಗಳೆಲ್ಲಾ ದಿನದಲ್ಲಿ ನನ್ನಾಕೆಯ ಕೆಲಸವೇ. ಹಲವಾರು ದಿನಗಳ ಕಾಲ ಠುಸ್ ಎಂದಿದ್ದ ಉತ್ಸಾಹ ಈಗ ಪೂರ್ಣವಾಗಿ ಬಲೂನಿನಂತೆ ಉಬ್ಬಿತ್ತು.

ಪ್ರಕೃತಿಯೇ ಸೃಷ್ಟಿಸಿದ ಸುಣ್ಣದ ಕಲ್ಲಿನ ಸುಂದರ ಕಲಾಕೃತಿ..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 9
ಟಿಕೆಟ್ ಬೆಲೆಗಳು ಸೀಸನಲ್‌ ಎಂಬುದೇ ಇಲ್ಲಿನ ಕಲಿಕೆ. ನಮ್ಮಲ್ಲಿ ಜೂನ್ ಮಧ್ಯದಲ್ಲಿ ಬೇಸಿಗೆ ರಜೆ ಆರಂಭವಾದರೆ ಸೆಪ್ಟೆಂಬರ್ ತಿಂಗಳ ಮೊದಲಲ್ಲಿ ಬರುವ ಲೇಬರ್‌ ಡೇ ಮರು ದಿನದಿಂದ ಶಾಲೆ ಆರಂಭ. ಏನು ಮಜಾ ಅಂದರೆ, ಪ್ರತೀ ವರ್ಷ ಶಾಲೆ ಆರಂಭವಾಗೋದೇ ಶುದ್ಧ ಮಂಗಳವಾರ! ದಿನ, ವಾರ, ತಿಥಿ ನೋಡುವುದಾದರೆ ಕೊಂಚ ಹಿಂಸೆಯೇ ಬಿಡಿ. ಇರಲಿ ಈ ಬೇಸಿಗೆಯ ಸಮಯದಲ್ಲಿ ಟಿಕೆಟ್ ಬೆಲೆ ರಾಕೆಟ್‌ನಂತೆ ಮೇಲೇರುತ್ತದೆ. ಇದರಂತೆಯೇ ಕ್ರಿಸ್ಮಸ್ ಹಬ್ಬದ ಸುತ್ತಮುತ್ತ ಸಹ ಬೆಲೆ ಹೆಚ್ಚು. ಮಿಕ್ಕ ದಿನಗಳಲ್ಲಿ ನಾನಾ ಕಾರಣಗಳಿಗೆ ಏರಿಳಿತ ಇರುತ್ತದೆ.

ನಮಗಿನ್ನೂ ಈ ಶಾಲೆಯ ಬಿಸಿ ಇಲ್ಲದಿದ್ದುದರಿಂದ ಶಾಲೆಗಳು ನಡೆಯುತ್ತಿರುವಾಗಲೇ ಟಿಕೆಟ್ ನೋಡೋದು ಮತ್ತು ವಾಪಸ್ ಬರುವಾಗಲೂ ಕ್ರಿಸ್ಮಸ್ ರಜೆ ಮುಗಿದು ಹೊಸ ವರ್ಷ ಆರಂಭವಾದ ಮೇಲೆ ಬಂದರಾಯ್ತು ಎಂದೇ ನೋಡಿಕೊಂಡು ಟಿಕೆಟ್ ಬುಕ್ ಕೂಡಾ ಆಯ್ತು.

ಈ ಮಧ್ಯೆ ನಮ್ಮಲ್ಲೊಬ್ಬ ಬ್ಯಾಚುಲರ್ ಭಾರತಕ್ಕೆ ವಿಸಿಟ್ ಹೊಡೆದು ಮದುವೆ ಮಾಡಿಕೊಂಡು ಬಂದಿದ್ದ. ಮತ್ತೊಬ್ಬ ಸ್ನೇಹಿತನ ಸಂಸಾರ ಮಗುವಿನ ನಿರೀಕ್ಷೆಯಲ್ಲಿ. ಅಂದು ಬಿಸಿನೆಸ್ ಕ್ಲಾಸ್‌ನಲ್ಲಿ ಬಂದಿಳಿದಿದ್ದ ಹರಿಬಾಬುವಿನ ಧರ್ಮಪತ್ನಿ ಇಲ್ಲಿಗೆ ತಲುಪಿದ್ದರು. ಒಟ್ಟಿನಲ್ಲಿ ಜೀವನದ ಹಲವು ಹಂತದಲ್ಲಿದ್ದ ನಾಲ್ಕು ಸಂಸಾರಗಳು ವಾಷಿಂಗ್ಟನ್ ಡಿಸಿ ಟ್ರಿಪ್‌ಗೆ ಹೊರಟೆವು. ಇದಾವ ಸಮಯ ಎಂದರೆ ಚೆರ್ರಿ ಬ್ಲಾಸಂ ಸಮಯ.

ಕಾರು.. ಸ್ನೇಹಿತರು.. ಟೂರು..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 8
ವಸಂತ ಕಾಲಿಟ್ಟಾಗ ಎಲ್ಲೆಡೆ ಚಿಗುರು ಮೂಡೋದು ಸಹಜ. ವಸಂತದ ಆ ತಂಗಾಳಿಯೇ ಒಂದು ಅನುಭವ. ಎಲ್ಲೆಡೆ ಚಿಗುರು, ಎಲ್ಲೆಡೆ ಹೂಗಳು ಬಿರಿಯುವ ಆ ಸನ್ನಿವೇಶವನ್ನು ಊಹಿಸಿಕೊಳ್ಳುವುದೇ ಒಂದು ಆನಂದವಾಗಿರುವಾಗ, ಒಂದು ಪ್ರದೇಶದಲ್ಲಿ ಕನಿಷ್ಠ ಎಂದರೂ ಮೂರೂವರೆ ಸಾವಿರ ಚೆರ್ರಿ ಮರಗಳಿದ್ದು, ಅವೆಲ್ಲದರಲ್ಲೂ ಹೂವುಗಳು ಬಿರಿದಿವೆ ಎಂದುಕೊಳ್ಳಿ ಆಗ ಹೇಗಿರುತ್ತದೆ? ಚೆರ್ರಿ ಮರಗಳಲ್ಲಿ ಹೂವುಗಳು ಬಿರಿಯುವ ಸಂಭ್ರಮವೇ 'ಚೆರ್ರಿ ಬ್ಲಾಸಂ’. ಇದರಲ್ಲೇನು ವಿಶೇಷ ಎಂದರೆ ಇದರ ಕಾಲಮಾನ ಹೆಚ್ಚೆಂದರೆ ಒಂದು ವಾರ ಅಷ್ಟೇ. ಇವೆಲ್ಲವೂ ಅರಳಿ ನಳನಳಿಸುವುದು ಹೆಚ್ಚೆಂದರೆ ಒಂದು ವಾರ ಅಷ್ಟೇ. ಆ ಸಮಯದಲ್ಲಿ ಅಲ್ಲಿದ್ದರೆ ನೋಡಿ ಆನಂದಿಸಬಹುದು. ಒಂದು ವಾರ ಮುಂಚೆ ಹೋದರೆ ಅಥವಾ ಒಂದು ವಾರದ ನಂತರ ಹೋದರು ಅದೊಂದು ಸಾಮಾನ್ಯ ನೋಟವಷ್ಟೇ ಆಗಿರುತ್ತದೆ. ಇಂಥಾ ಸೊಬಗನ್ನು ನೋಡಲೇ ನಾವುಗಳು ಹೋಗಿದ್ದು. ನೀವೂ ಮಾರ್ಚ್ ತಿಂಗಳ ಕೊನೆ ಅಥವಾ ಏಪ್ರಿಲ್ ತಿಂಗಳ ಆರಂಭದಲ್ಲಿ ಬನ್ನಿ.

ಭಾರತದ ಪಾರ್ಲಿಮೆಂಟ್ ಹೌಸ್‌ನಂತೆಯೇ ಇಲ್ಲಿನ ಕ್ಯಾಪಿಟಲ್‌ ಹಿಲ್‌. ಸೋಮವಾರದಿಂದ ಶನಿವಾರದವರೆಗೂ ಪಬ್ಲಿಕ್ ಅರ್ಥಾತ್ ಅಸಾಮಾನ್ಯರಾದ ಶ್ರೀಸಾಮಾನ್ಯ ಜನತೆಗೆ ವಿಸಿಟ್ ಮಾಡಲು ಅವಕಾಶವಿರುತ್ತದೆ. ಎಂಥದ್ದೇ ಸರಕಾರಿ ಕಚೇರಿಯಂತೆ ಇಲ್ಲಿಯೂ ಸಹ ಒಂದಷ್ಟು ಜಾಗಗಳನ್ನು ಮಾತ್ರ ವಿಸಿಟ್‌ನಲ್ಲಿ ತೋರಿಸಲಾಗುತ್ತದೆ. ಜನತೆಯ ಭೇಟಿಯಿಂದಾಗಿ ಅಲ್ಲಿನ ದಿನನಿತ್ಯದ ಕಾರ್ಯಾಚರಣೆಗೂ ಅಡ್ಡಿಯಾಗದಂತೆ ಎಚ್ಚರವಹಿಸಲಾಗಿರುತ್ತದೆ. ಅಂದು ನಮಗೆ ಇಲ್ಲಿಗೆ ಹೋಗಲಾಗಲಿಲ್ಲ. ಏಕೆಂದರೆ ಮುಂಚೆಯೇ ಭೇಟಿಗಾಗಿ ಅಪಾಯಿಂಟ್‌ಮೆಂಟ್‌ ಮಾಡಿಕೊಳ್ಳಬೇಕು. ನಮ್ಮದು ಪೂರ್ವನಿರ್ಧಾರಿತ ಭೇಟಿಯಾಗಿಲ್ಲದೆ ಇದ್ದುದರಿಂದ ಒಳಗೆ ಎಂಟ್ರಿ ಸಿಗಲಿಲ್ಲ.

ಪುತ್ರರತ್ನನ ಮೊದಲ ಹುಟ್ಟುಹಬ್ಬದ ಸಂಭ್ರಮ; ಶ್ರೀನಾಥ್‌ ಭಲ್ಲೆ ಅಮೆರಿಕ ಅನುಭವ ಕಥನ-ಭಾಗ 7
ವಾಷಿಂಗ್ಟನ್ ಡಿಸಿ'ಯ ಮತ್ತೊಂದು ವಿಶೇಷ ಎಂದರೆ ನಡಿಗೆ. ಇಲ್ಲಿಗೆ ಬಂದ ಮೇಲೆ ನಡೆಯಲು ಸಿದ್ಧವಿರಬೇಕು. ಕ್ಯಾಪಿಟಲ್‌ ಹಿಲ್‌ ಮುಂದಿರುವ ದೊಡ್ಡ ಬಯಲು, ವೈಟ್‌ ಹೌಸ್‌ ಇರುವ ಕಡೆ, ಸುತ್ತಲಿನ ಪಾರ್ಕ್ ಹೀಗೆ ಎಲ್ಲೆಡೆ ಸುತ್ತಿದೆವು. ಲಿಂಕನ್‌ ಮೆಮೋರಿಯಲ್‌ ಹಾಲ್‌ನಲ್ಲಿ ವಿರಾಜಮಾನರಾಗಿರುವ ಲಿಂಕನ್ ಪ್ರತಿಮೆಯ ಮುಂದೆ ಬಹುಶಃ ಸ್ಟ್ರೋಲರ್‌ ಎಡವಿರಬೇಕು ಅನ್ನಿಸುತ್ತದೆ. ನನ್ನ ಮಗರಾಯ ಲಿಂಕನ್ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದ್ದ!

ಕೊನೆಯಲ್ಲಿ ಒಂದು ಮೆಟ್ರೋ ರೈಲನ್ನೇರಿ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಸಾಗಿ ಆ ಪಯಣವನ್ನೂ ಮಾಡಿದೆವು. ಒಟ್ಟಾರೆ ಹೇಳೋದಾದ್ರೆ ಅದೊಂದು ವಿಶಿಷ್ಟವಾದ ಅನುಭವ. ದಿನದ ಕೊನೆಗೆ ಸುಸ್ತಾಗಿದ್ದು ನಿಜ. ಒಂದು ಕ್ಯಾಮೆರಾ ಬ್ಯಾಗ್, ದಪ್ಪನೆಯ ಜರ್ಕಿನ್, ನಮ್ಮೂರಿಗಿಂತ ಹತ್ತು ಡಿಗ್ರಿ ಕಡಿಮೆ ಇರುವ ಹವಾಮಾನದಲ್ಲಿ ಮಗರಾಯನ ಸ್ಟ್ರೋಲರ್‌ ತಳ್ಳಿಕೊಂಡೇ ಓಡಾಡಿದ್ದು ಖಂಡಿತ ವಿಶಿಷ್ಟ ಅನುಭವವೇ ಸರಿ.
ಸ್ನೇಹಿತರು, ಕಾರು, ಡ್ರೈವಿಂಗ್ ದರ್ಬಾರು..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 6
ಈ ಸಾಲಿನಲ್ಲೂ ಹಲವು ಸ್ನೇಹಗಳು ಊರನ್ನು ಬಿಟ್ಟು ಹೋಗಿದ್ದರು. ಹೊಸ ಸ್ನೇಹಗಳೂ ಬೆಳೆಯುತ್ತಾ ಸಾಗಿತ್ತು. ವಾರಾಂತ್ಯಗಳಲ್ಲಿ ಚಿಕ್ಕ ಪುಟ್ಟ ಸ್ಥಳಗಳಿಗೆ ಭೇಟಿ ಮುಂದುವರೆದಿತ್ತು. ನಾನೂ ಮತ್ತು ನನ್ನಾಕೆ ಸಕತ್ ಫೇಮಸ್ ಆಗಿದ್ದೆವು 'ಶ್ರೇಯಸ್ ಮಾಮ್, ಶ್ರೇಯಸ್ ಡ್ಯಾಡ್' ಅಂತ. ಎಷ್ಟೋ ಜನರಿಗೆ ನಮ್ಮಿಬ್ಬರ ಹೆಸರೇ ಗೊತ್ತಿರಲಿಲ್ಲ.

ಆರಂಭದಲ್ಲಿ ತಮಿಳುನಾಡಿನವರ ಸ್ನೇಹ ಹೆಚ್ಚಿತ್ತು. ಕನ್ನಡಿಗರ ಭೇಟಿ ಮತ್ತು ಸ್ನೇಹವಂತೂ ಆಗಾಗ್ಗೆ ನಡೆಯುತ್ತಲೇ ಇತ್ತು. ಕೆಲವು ಆಂಧ್ರದವರ ಭೇಟಿ, ಕೆಲವು ಕೇರಳದವರ ಸ್ನೇಹ, ಹೀಗೆ ನಮ್ಮ ಸ್ನೇಹ ಬಳಗ ಹೆಚ್ಚುತ್ತಾ ಸಾಗಿತ್ತು. ನಾವಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಹಲವಾರು ಮರಾಠಿ ಸಂಸಾರಗಳೂ ಇದ್ದು ಅವರೊಂದಿಗೆ ಸ್ನೇಹ ಬೆಳೆದಿತ್ತು. ಈಗಾಗಲೇ ಅವರೊಂದಿಗೆ ಸ್ನೇಹವಿದ್ದ ದೆಹಲಿಯ ಪಂಜಾಬಿ ಸಂಸಾರ, ಒಂದು ಗುಜರಾತ್ ಸಂಸಾರ, ಒಂದು ರಾಜಸ್ಥಾನಿ ಸಂಸಾರ, ಕಲ್ಕತ್ತಾದ ಅಗರವಾಲ್‌ ಸಂಸಾರ ಹೀಗೆ ಭಾರತ ದೇಶದ ಹಲವು ರಾಜ್ಯಗಳಿಂದ ಇಲ್ಲಿ ಬಂದು ನೆಲೆಸಿರುವವರ ಸ್ನೇಹ ಬೆಳೆಯುತ್ತಾ ಸಾಗಿತ್ತು. ಈಗಲೇ ಒಂದು ವಿಷಯ ಹೇಳಿಬಿಡ್ತೀನಿ, ಈಗಲೂ ನಾವೆಲ್ಲರೂ ಒಂದೆರಡು ಮೈಲಿಗಳ ಅಂತರದಲ್ಲೇ ಇದ್ದೇವೆ. ಎಲ್ಲರ ಸಂಪರ್ಕವಿದೆ. ಅಂದಿನ ಪುಟಾಣಿ ಮಕ್ಕಳು ಇಂದು ಒಂದು ಹಂತದ ಓದು ಮುಗಿಸಿ ಕೆಲಸಕ್ಕೂ ಸೇರಿದ್ದಾರೆ.

ಇನ್ನೇನು ಭಾರತದ ಪಯಣ ಹತ್ತಿರ ಬಂತು ಎಂದಾಗ ನಡೆದ ಭೀಕರ ಘಟನೆಯ ಬಗ್ಗೆ ಮುಂದಿನ ವಾರದಲ್ಲಿ ನೋಡೋಣ.
ಲೇಖಕರ ಬಗ್ಗೆ
ಶ್ರೀನಾಥ್ ಭಲ್ಲೆ
ಅಮೆರಿಕದ ರಿಚ್ಮಂಡ್ ನಿವಾಸಿಯಾಗಿರುವ ಶ್ರೀನಾಥ್ ಭಲ್ಲೆ ಅವರು ಬೆಂಗಳೂರಿನ ಚಾಮರಾಜಪೇಟೆಯವರು. ಜೀವನದ ಅನುಭವವನ್ನು ಎರಕಹೊಯ್ದು ಹಾಸ್ಯರಸ ಹೊಮ್ಮಿಸುವ ಲೇಖನಗಳನ್ನು ಬರೆಯುವುದರಲ್ಲಿ ನಿಸ್ಸೀಮರಾಗಿರುವ ಶ್ರೀನಾಥ್ ಭಲ್ಲೆ ಅವರು ಯಾವುದೇ ವಿಷಯದ ಬಗ್ಗೆ ಅಧಿಕಾರಯುತವಾಗಿ ಕನ್ನಡದಲ್ಲಿ ಬರೆಯಬಲ್ಲರು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ