ಆ್ಯಪ್ನಗರ

ಜನರನ್ನು ಸಂಕಷ್ಟಕ್ಕೆ ದೂಡುವುದು ಸಲ್ಲ

ಮಹದಾಯಿ ನದಿ ನೀರಿನಲ್ಲಿ ನಮ್ಮ ನ್ಯಾಯಯುತ ಪಾಲನ್ನು ಕೇಳುವುದು ಇದಕ್ಕಾಗಿ ಪ್ರತಿಭಟನೆಯ ಹಾದಿ ಹಿಡಿಯುವುದು ಖಂಡಿತ ತಪ್ಪಲ್ಲ. ಏಕೆಂದರೆ ಪ್ರಜಾತಂತ್ರದಲ್ಲಿ ಪ್ರತಿಭಟನೆಗಳು ಜನರ ಒಡಲಾಳದ ಅಭಿವ್ಯಕ್ತಿಗಳು. ಸರಕಾರದ ನಡೆಗಳನ್ನು ತಿದ್ದುವುದಕ್ಕೆ ಇರುವ ಮಾರ್ಗೋಪಾಯಗಳು. ಉತ್ತರ ಕರ್ನಾಟಕ ಭಾಗಕ್ಕೆ ನೀರು ಹರಿದರೆ ಇಲ್ಲಿನ ಜನಜೀವನದ ಗತಿಯೇ ಬದಲಾಗುತ್ತದೆ. ಈ ಕಾರಣಕ್ಕೆ ನಿರಂತರವಾಗಿ ಚಳವಳಿ ನಡೆಯುತ್ತಲೇ ಇದೆ. ಆದರೆ ಬಂದ್‌ ಎನ್ನುವುದು ಅಂತಿಮ ಅಸ್ತ್ರವಾಗಬೇಕೆ ಹೊರತು ಅದನ್ನು ಮನಸ್ಸಿಗೆ ಬಂದಂತೆ ಝಳಪಿಸಬಾರದು. ಯಾರೋ ಕೆಲವರು ಇಡೀ ರಾಜ್ಯದ ಮೇಲೆ ಬಂದ್‌ ಅನ್ನು ಹೇರಬಾರದು. ಇದರಿಂದ ಅಪಾರ ಆರ್ಥಿಕ ನಷ್ಟವಾಗುತ್ತದೆ; ಕೂಲಿಕಾರರ ಜೀವನ ದುರ್ಭರವಾಗುತ್ತದೆ; ಜನಸಾಮಾನ್ಯರು ಹೈರಾಣಾಗುತ್ತಾರೆ; ಎಲ್ಲರನ್ನೂ ಸಂಕಷ್ಟಕ್ಕೆ ಸಿಲುಕಿಸಿ ಏನನ್ನೋ ಸಾಧಿಸುತ್ತೇವೆ ಎಂಬುದರಲ್ಲಿ ಯಾವುದೇ ಅರ್ಥವಿಲ್ಲ.

Vijaya Karnataka Web 23 Jan 2018, 5:04 am

ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಮಹದಾಯಿ ನದಿಯಿಂದ ಕಳಸಾ ಬಂಡೂರಿ ನಾಲೆಗೆ ಏಳೂವರೆ ಟಿಎಂಸಿ ನೀರು ಹರಿಸಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟು ಹಲವು ವರ್ಷಗಳಿಂದ ಹೋರಾಟಗಳು ನಡೆಯುತ್ತಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಮಾತುಕತೆ ನಡೆದು ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ಫಲಪ್ರದವಾಗಿಲ್ಲ. ಹೀಗಾಗಿ ಈ ವಿವಾದ ನ್ಯಾಯಾಧಿಕರಣದಲ್ಲಿದೆ. ಅಲ್ಲಿ ವಾದ ಪ್ರತಿವಾದಗಳು ನಡೆದು ಕೆಲವೇ ತಿಂಗಳಲ್ಲಿ ಅಂತಿಮ ತೀರ್ಪು ಹೊರಬೀಳಲಿದೆ. ಈ ಮಧ್ಯೆ ಮಾತುಕತೆಗೆ ಗೋವಾ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ ಅದು ಗರಿಗಟ್ಟಿಕೊಳ್ಳಲಿಲ್ಲ. ಇದು ರಾಜಕೀಯ ತಿರುವು ಪಡೆದು, ಆರೋಪ, ಪ್ರತ್ಯಾರೋಪಗಳಲ್ಲಿ ಮುಳುಗಿರುವುದು ಎಲ್ಲರಿಗೂ ಗೊತ್ತು.

Vijaya Karnataka Web
ಜನರನ್ನು ಸಂಕಷ್ಟಕ್ಕೆ ದೂಡುವುದು ಸಲ್ಲ

ಇಂಥ ಪರಿಸ್ಥಿತಿಯಲ್ಲಿ ಕೆಲ ವ್ಯಕ್ತಿಗಳು ಹಾಗೂ ಸಂಘಟನೆಗಳು ಇದೇ 25 ರಂದು ರಾಜ್ಯವ್ಯಾಪಿ ಬಂದ್‌ ಹಾಗೂ ಫೆಬ್ರವರಿ 4 ಕ್ಕೆ ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಮಹದಾಯಿ ನದಿ ನೀರಿನಲ್ಲಿ ನಮ್ಮ ನ್ಯಾಯಯುತ ಪಾಲನ್ನು ಕೇಳುವುದು ಇದಕ್ಕಾಗಿ ಪ್ರತಿಭಟನೆಯ ಹಾದಿ ಹಿಡಿಯುವುದು ಖಂಡಿತ ತಪ್ಪಲ್ಲ. ಏಕೆಂದರೆ ಪ್ರಜಾತಂತ್ರದಲ್ಲಿ ಪ್ರತಿಭಟನೆಗಳು ಜನರ ಒಡಲಾಳದ ಅಭಿವ್ಯಕ್ತಿಗಳು. ಸರಕಾರದ ನಡೆಗಳನ್ನು ತಿದ್ದುವುದಕ್ಕೆ ಇರುವ ಮಾರ್ಗೋಪಾಯಗಳು. ಉತ್ತರ ಕರ್ನಾಟಕ ಭಾಗಕ್ಕೆ ನೀರು ಹರಿದರೆ ಇಲ್ಲಿನ ಜನಜೀವನದ ಗತಿಯೇ ಬದಲಾಗುತ್ತದೆ. ಈ ಕಾರಣಕ್ಕೆ ನಿರಂತರವಾಗಿ ಚಳವಳಿ ನಡೆಯುತ್ತಲೇ ಇದೆ. ಆದರೆ ಬಂದ್‌ ಎನ್ನುವುದು ಅಂತಿಮ ಅಸ್ತ್ರವಾಗಬೇಕೆ ಹೊರತು ಅದನ್ನು ಮನಸ್ಸಿಗೆ ಬಂದಂತೆ ಝಳಪಿಸಬಾರದು. ಯಾರೋ ಕೆಲವರು ಇಡೀ ರಾಜ್ಯದ ಮೇಲೆ ಬಂದ್‌ ಅನ್ನು ಹೇರಬಾರದು. ಇದರಿಂದ ಅಪಾರ ಆರ್ಥಿಕ ನಷ್ಟವಾಗುತ್ತದೆ; ಕೂಲಿಕಾರರ ಜೀವನ ದುರ್ಭರವಾಗುತ್ತದೆ; ಜನಸಾಮಾನ್ಯರು ಹೈರಾಣಾಗುತ್ತಾರೆ; ಎಲ್ಲರನ್ನೂ ಸಂಕಷ್ಟಕ್ಕೆ ಸಿಲುಕಿಸಿ ಏನನ್ನೋ ಸಾಧಿಸುತ್ತೇವೆ ಎಂಬುದರಲ್ಲಿ ಯಾವುದೇ ಅರ್ಥವಿಲ್ಲ.

''ವ್ಯಾಪಾರ ವಹಿವಾಟುಗಳನ್ನು ಬಲವಂತವಾಗಿ ಸ್ಥಗಿತಗೊಳಿಸುವುದು, ವಾಹನ ಸಂಚಾರಕ್ಕೆ ತಡೆಯೊಡ್ಡುವುದು ಜನರ ಸ್ವಾತಂತ್ರ್ಯವನ್ನೇ ಹರಣ ಮಾಡಿದಂತೆ. ಹೀಗಾಗಿ ಬಂದ್‌ ಎಂಬುದು ಅಸಂವಿಧಾನಿಕ ಎಂದು 1997ರಲ್ಲಿ ಕೇರಳ ಹೈಕೋರ್ಟ್‌ ತೀರ್ಪು ನೀಡಿತ್ತು. ಇದನ್ನು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜೆ.ಎಸ್‌. ವರ್ಮಾ ಕೂಡ ಎತ್ತಿ ಹಿಡಿದಿದ್ದರು. ಆದರೆ 2017ರಲ್ಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಹಾಗೂ ಡಿ. ವೈ ಚಂದ್ರಚೂಡ ಅವರನ್ನೊಳಗೊಂಡ ನ್ಯಾಯಪೀಠ '' ಪ್ರತಿಭಟನೆ ಮಾಡುವುದು ಸಂವಿಧಾನಿಕ ಹಕ್ಕು,'' ಎಂದು ಪ್ರತಿಪಾದಿಸಿತಾದರೂ ಬಂದ್‌ಅನ್ನು ಮಾನ್ಯ ಮಾಡಿಲ್ಲ. ಕೋರ್ಟ್‌ ತೀರ್ಪು ಮತ್ತು ಸಂವಿಧಾನಕ್ಕಿಂತ ಮಿಗಿಲಾದದ್ದು ಬೇರೆ ಯಾವುದೂ ಇಲ್ಲ. ಇದಕ್ಕೆ ಎಲ್ಲರೂ ತಲೆಬಾಗಲೇ ಬೇಕಾಗುತ್ತದೆ. ಬಂದ್‌ ಹೊರತುಪಡಿಸಿ ಸಾತ್ವಿಕ ರೂಪದಲ್ಲಿ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸುವುದು, ಅವುಗಳನ್ನು ಪೂರೈಸಿಕೊಳ್ಳುವ ಸಾಧ್ಯತೆಗಳು ಇದ್ದೇ ಇವೆ. ಇಂಥ ಆಂದೋಲನಗಳಿಂದಲೇ ಸ್ವಾತಂತ್ರ್ಯವನ್ನೇ ಗಳಿಸಿದ ದೇಶ ನಮ್ಮದು. ಈ ಪರಂಪರೆ ನಮಗೆ ಆದರ್ಶವಾಗಬೇಕು.
ಕೈಗಾ ಅಣುವಿದ್ಯುತ್‌ ಸ್ಥಾವರವನ್ನು ವಿರೋಧಿಸಿ ದೊಡ್ಡ ಆಂದೋಲನವೇ ನಡೆಯಿತು. ಇದನ್ನು ನಮ್ಮ ಹೆಮ್ಮೆಯ ಸಾಹಿತಿ ಶಿವರಾಮ ಕಾರಂತರು ಮುನ್ನಡೆಸಿದ್ದರು. ರಸ್ತೆ ತಡೆ, ಬಂದ್‌ನಂಥ ಉಪದ್ರವಕಾರಿ ಕ್ರಮಗಳನ್ನು ಅನುಸರಿಸಿದರೆ ತಾವು ಬರುವುದಿಲ್ಲ ಎನ್ನುವ ಪೂರ್ವ ಷರತ್ತನ್ನು ಹಾಕಿಯೇ ಅವರು ಈ ಚಳವಳಿಗೆ ಧುಮುಕಿದ್ದರು. ಇಂಥ ನಡೆಗಳು ನಮಗೆ ದಾರಿದೀಪವಾಗಬೇಕು. ಇಷ್ಟಕ್ಕೂ ಮಹದಾಯಿ ವಿವಾದ ನ್ಯಾಯಾಧಿಕರಣದಲ್ಲಿದೆ. ಇದೊಂದು ನ್ಯಾಯಿಕ ಹೋರಾಟ. ಬಂದ್‌ನಂಥ ಒತ್ತಡದ ಕ್ರಮಗಳಿಂದ ನ್ಯಾಯಾಧಿಕರಣವನ್ನು ಪ್ರಭಾವಿಸಲು ಆಗುವುದಿಲ್ಲ. ಜನ ಹಿತಕ್ಕೆ ಕಿಂಚಿತ್ತೂ ಧಕ್ಕೆಯಾಗದ ರೀತಿಯಲ್ಲಿ ಪ್ರತಿಭಟನೆಯ ಹಕ್ಕನ್ನು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಆಲೋಚಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ