ಆ್ಯಪ್ನಗರ

ಆಧಾರ್‌ ಗೊಂದಲಗಳಿಗೆ ತೆರೆ

ದೇಶದ ಪ್ರತಿಯೊಬ್ಬ ನಾಗರಿಕರಿಗೆ 12 ಅಂಕಿಗಳ ಗುರುತು ಸಂಖ್ಯೆಯನ್ನು ನೀಡುವ ಆಧಾರ್‌ ಯೋಜನೆಯ ಸಂವಿಧಾನ ಬದ್ಧತೆಯನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ.

Vijaya Karnataka 27 Sep 2018, 2:14 pm
ದೇಶದ ಪ್ರತಿಯೊಬ್ಬ ನಾಗರಿಕರಿಗೆ 12 ಅಂಕಿಗಳ ಗುರುತು ಸಂಖ್ಯೆಯನ್ನು ನೀಡುವ ಆಧಾರ್‌ ಯೋಜನೆಯ ಸಂವಿಧಾನ ಬದ್ಧತೆಯನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ. ಆಧಾರ್‌ ಸಂಖ್ಯೆ ನೀಡುವುದಕ್ಕಾಗಿ ಸಂಗ್ರಹಿಸುವ ಜೈವಿಕ(ಬಯೋಮೆಟ್ರಿಕ್‌) ಹಾಗೂ ಇತರ ಮಾಹಿತಿಗಳು ವ್ಯಕ್ತಿಯ ಖಾಸಗಿ ಹಕ್ಕಿನ ಉಲ್ಲಂಘನೆಯಾಗುತ್ತದೆ. ದತ್ತಾಂಶಗಳು ಸುಲಭವಾಗಿ ಸೋರಿಕೆಯಾಗುತ್ತದೆ, ಮಾಹಿತಿಗಳು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತದೆ ಎನ್ನುವ ವಾದಗಳಿಗೆ ವಾಸ್ತವದ ನೆಲೆಗಟ್ಟಿಲ್ಲ. ಇದೊಂದು ಕಲ್ಪಿತ ಆತಂಕ ಎಂದು ಸಂವಿಧಾನ ಪೀಠ ಹೇಳಿದೆ. ಇದರೊಂದಿಗೆ ಆಧಾರ್‌ ಔಚಿತ್ಯದ ಕುರಿತು ಈವರೆಗಿನ ವಾದ- ವಿವಾದ ಮತ್ತು ಗೊಂದಲಗಳಿಗೆ ತೆರೆ ಎಳೆದಿದೆ.
Vijaya Karnataka Web aadhar


ಭಾರತದಂಥ ವೈವಿಧ್ಯಮಯ ದೇಶದಲ್ಲಿ ಎಲ್ಲರನ್ನೂ ಒಂದು ವ್ಯವಸ್ಥೆಗೆ ಒಳಪಡಿಸುವುದು ತುಂಬ ಕಠಿಣ. ಆಧಾರ್‌ ಪೂರ್ವದಲ್ಲಿ ಹಲವು ಗಣತಿಗಳು ನಡೆದಿದ್ದು, ದತ್ತಾಂಶಗಳಿದ್ದರೂ ಅವು ಆಧಾರ್‌ನಷ್ಟು ತಂತ್ರಜ್ಞಾನ ಸ್ನೇಹಿಯಾಗಿರಲಿಲ್ಲ; ಸುಲಭ ಬಳಕೆಯ ಅವಕಾಶಗಳೂ ಇರಲಿಲ್ಲ. ನಕಲು ಮಾಡುವುದಕ್ಕೆ, ತಪ್ಪು ಮಾಹಿತಿಗೆ ಧಾರಾಳ ಅವಕಾಶಗಳಿದ್ದವು. ಆದರೆ ಆಧಾರ್‌ ಈ ಮಿತಿಗಳನ್ನು ನಿವಾರಿಸಿತು. ಇದಲ್ಲದೆ ಸಾರ್ವಜನಿಕರು ನೀಡಿದ ಜೈವಿಕ ಗುರುತು ಹಾಗೂ ಇತರೆ ಮಾಹಿತಿಗಳನ್ನು ದುರುಪಯೋಗ ಪಡಿಸಿಕೊಂಡರೆ ಭಾರಿ ಮೊತ್ತದ ದಂಡ ಹಾಗು ಜೈಲು ಶಿಕ್ಷೆ ವಿಧಿಧಿಸುವ ಕಾನೂನುಬದ್ಧ ಅವಕಾಶಗಳನ್ನು ಆಧಾರ್‌ನಲ್ಲಿ ಕಲ್ಪಿಸಲಾಗಿದೆ. ಇಂಥ ಸುರಕ್ಷ ತೆಯ ಖಾತ್ರಿ ನೀಡಿದ ಕಾರಣಕ್ಕೆ 120 ಕೋಟಿ ಜನರು ಆಧಾರ್‌ ಸಂಖ್ಯೆಯನ್ನು ಪಡೆಯುವುದರ ಮೂಲಕ ಈ ಯೋಜನೆಗೆ ಉನ್ನತ ಮಟ್ಟದ ಅಂಗೀಕಾರ ನೀಡಿದ್ದರು. ಇದೀಗ ಸಂವಿಧಾನ ಪೀಠ 5 ತಿಂಗಳ ಅವಧಿಯಲ್ಲಿ ಸತತ 36 ದಿನಗಳ ಸುದೀರ್ಘ ವಿಚಾರಣೆ ನಂತರ ಚಾರಿತ್ರಿಕ ತೀರ್ಪು ನೀಡುವುದರ ಮೂಲಕ ಈ ಕಾರ್ಯಯೋಜನೆಯ ಉದ್ದೇಶ, ಆಶಯಗಳಿಗೆ ಅಧಿಕೃತತೆಯ ಮುದ್ರೆ ಒತ್ತಿದೆ. ಸರಕಾರದ ಹತ್ತು ಹಲವು ಯೋಜನೆಗಳು ಅರ್ಹರಿಗಿಂತ ಅನರ್ಹರಿಗೆ ಹೆಚ್ಚು ಸಂದಾಯವಾಗುವ ವ್ಯವಸ್ಥೆ ಇತ್ತು. ಇದರಿಂದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ವರ್ಗಗಳನ್ನು ಸಬಲೀಕರಣಗಳಿಸುವ ಮೂಲ ಉದ್ದೇಶಕ್ಕೆ ಭಂಗ ಉಂಟಾಗಿತ್ತು. ವಿಶಿಷ್ಟ ಗುರುತು ಸಂಖ್ಯೆಯಿಂದ ಹಲವು ಹತ್ತು ವಲಯಗಳಲ್ಲಿ ಹಣ ದುರುಪಯೋಗ, ಸೋರಿಕೆ ಮತ್ತು ನಕಲು ಹಾವಳಿಗೆ ತಡೆ ಬಿದ್ದಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 90 ಸಾವಿರ ಕೋಟಿ ರೂ. ಉಳಿತಾಯವಾಗುತ್ತಿದೆ. ನೇರ ನಗದು ವರ್ಗಾವಣೆಯಂಥ ಕ್ರಾಂತಿಕಾರಿ ಉಪಕ್ರಮಗಳಿಂದ ಅರ್ಹ ಫಲಾನುಭವಿಗಳಿಗೆ ಸರಕಾರದ ಸೌಲಭ್ಯಗಳು ಸಿಗುವಂತಾಗಿದೆ. ಈ ಕಾರಣಕ್ಕೆ ಆಧಾರ್‌ ಅತ್ಯಂತ ಸುರಕ್ಷಿತ, ಪಾರದರ್ಶಕ ಯೋಜನೆ ಎಂದು ಸಂವಿಧಾನ ಪೀಠ ಹೇಳಿದೆ.

ಒಂದು ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡುವಾಗ ಹಲವು ತೊಂದರೆಗಳು ಇದ್ದೇ ಇರುತ್ತವೆ. ಇವುಗಳನ್ನು ಕಂಡುಕೊಳ್ಳುತ್ತಲೇ ಅವುಗಳನ್ನು ನಿವಾರಿಸಿಕೊಳ್ಳುವುದರತ್ತ ಗಮನ ಹರಿಸಬೇಕು ಎನ್ನುವುದು ಈ ತೀರ್ಪಿನ ಒಟ್ಟಾರೆ ಆಶಯ. ಈ ಕಾರಣಕ್ಕೇ ಆಧಾರ್‌ ಬಳಕೆಗೆ ಕೆಲವೊಂದು ನಿರ್ಬಂಧಗಳನ್ನು ಸಂವಿಧಾನ ಪೀಠ ವಿಧಿಸಿದೆ. ಬ್ಯಾಂಕ್‌ ಖಾತೆ ತೆರೆಯುವುದಕ್ಕೆ, ಮೊಬೈಲ್‌ ಸಿಮ್‌ ಪಡೆಯುವುದಕ್ಕೆ, ಶಾಲೆಗಳ ದಾಖಲಾತಿಗೆ, ಕೆಲವೊಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವುದಕ್ಕೆ ಆಧಾರ್‌ ಸಂಖ್ಯೆ ಕೇಳುವಂತಿಲ್ಲ ಎಂದು ನಿರ್ದೇಶಿಸಿದೆ. ಖಾಸಗಿ ಕಂಪನಿಗಳು ಕೂಡ ಆಧಾರ್‌ ದತ್ತಾಂಶಗಳನ್ನು ಅಪೇಕ್ಷಿಸುವಂತಿಲ್ಲ ಎಂದಿದೆ. ದತ್ತಾಂಶಗಳ ಸುರಕ್ಷತೆಗೆ ಅಗತ್ಯ ಕಾನೂನುಗಳನ್ನು ರೂಪಿಸಲು ಸರಕಾರಕ್ಕೆ ಸಲಹೆ ನೀಡಿದೆ. ಆಧಾರ್‌ ಕಾಯಿದೆ ಅಡಿಯಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದರೆ ಯಾರೇ ಆಗಲಿ ಕೋರ್ಟಿಗೆ ಮೊರೆ ಹೋಗಬಹುದು ಎನ್ನುವ ಅವಕಾಶವನ್ನು ನೀಡಲಾಗಿದೆ. ದೇಶದ ಆಡಳಿತ ಮತ್ತು ಜನ ಜೀವನವನ್ನು ನಿರ್ಣಾಯಕವಾಗಿ ಬದಲಾಯಿಸುವ ಇಂಥ ಕ್ರಾಂತಿಕಾರಿ ಯೋಜನೆಗಳು ಒಮ್ಮೆಲೆ ಪರಿಪೂರ್ಣವಾಗಿರುವುದಕ್ಕೆ ಸಾಧ್ಯವಿಲ್ಲ. ಲೋಪದೋಷಗಳನ್ನು ಕಂಡುಕೊಳ್ಳುತ್ತಲೇ ಅವುಗಳನ್ನು ಪರಿಷ್ಕರಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಆಧಾರ್‌ ಕೂಡ ಹೊರತಲ್ಲ. ದೇಶದ ರಕ್ಷಣೆ, ಭಾವೈಕ್ಯತೆಯನ್ನು ಹೆಚ್ಚಿಸುವ, ಇಡೀ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಬಲಗೊಳಿಸುವ ಇದನ್ನು ಇನ್ನೊಂದು ಮಜಲಿಗೆ ತೆಗೆದುಕೊಂಡು ಹೋಗುವುದಕ್ಕೆ ಈ ತೀರ್ಪು ನಮ್ಮ ಆಡಳಿತಗಾರರಿಗೆ ದೊಡ್ಡ ಬಲ ಮತ್ತು ಒತ್ತಾಸೆ ನೀಡಿದೆ. ಇದೊಂದು ಗುರುತರ ಹೊಣೆಗಾರಿಕೆ ಎಂದೇ ಎಲ್ಲರೂ ಪರಿಭಾವಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ