ಆ್ಯಪ್ನಗರ

ಏರೋ ಇಂಡಿಯಾ ಇಲ್ಲೇ ಇರಲಿ

ಬೆಂಗಳೂರಿನಲ್ಲಿ ಪ್ರತಿವರ್ಷ ನಡೆಯುವ ವೈಮಾನಿಕ ಪ್ರದರ್ಶನ 'ಏರೋ ಇಂಡಿಯಾ'ವನ್ನು ಈ ಬಾರಿ ಉತ್ತರ ಪ್ರದೇಶದ ಲಖನೌಗೆ ಸ್ಥಳಾಂತರಿಸುವ ಸಾಧ್ಯತೆ ಹೆಚ್ಚಿದೆ

Vijaya Karnataka 13 Aug 2018, 9:31 am
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿವರ್ಷ ನಡೆಯುವ ವೈಮಾನಿಕ ಪ್ರದರ್ಶನ 'ಏರೋ ಇಂಡಿಯಾ'ವನ್ನು ಈ ಬಾರಿ ಉತ್ತರ ಪ್ರದೇಶದ ಲಖನೌಗೆ ಸ್ಥಳಾಂತರಿಸುವ ಸಾಧ್ಯತೆ ಹೆಚ್ಚಿದೆ. ಶನಿವಾರ ಅಲಿಗಢ್‌ನಲ್ಲಿ ನಡೆದ ಸಭೆಯೊಂದರಲ್ಲಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಉಪಸ್ಥಿತಿಯಲ್ಲಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಏರೋ ಇಂಡಿಯಾವನ್ನು ತಮ್ಮ ರಾಜ್ಯಕ್ಕೆ ಸ್ಥಳಾಂತರಿಸುವ ಕುರಿತು ಶೀಘ್ರವೇ ಘೋಷಣೆ ಮಾಡಬೇಕೆಂದು ಹೇಳಿರುವುದು ಈ ಅನಿಸಿಕೆಗೆ ಪುಷ್ಟಿ ನೀಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು, ಈ ಕುರಿತು ಕೇಂದ್ರ ಸರಕಾರದ ನಿಲುವನ್ನು ಸ್ಪಷ್ಟಪಡಿಸುವಂತೆ ಟ್ವೀಟ್‌ ಮಾಡಿದ್ದಾರೆ. ಎನ್‌ಡಿಎ ಆಡಳಿತದಲ್ಲಿ ಕರ್ನಾಟಕ ರಾಜ್ಯ ಹಲವಾರು ಪ್ರಮುಖ ರಕ್ಷಣಾ ಕಾರ‍್ಯಕ್ರಮಗಳನ್ನು ಕಳೆದುಕೊಳ್ಳುತ್ತಿರುವುದರತ್ತಲೂ ಅವರು ಬೆಟ್ಟು ಮಾಡಿದ್ದಾರೆ.
Vijaya Karnataka Web air


1996ರಿಂದ ಬೆಂಗಳೂರಿನಲ್ಲಿ ಏರೋ ಇಂಡಿಯಾ ನಡೆಯುತ್ತಿದೆ. ಪ್ರತಿವರ್ಷ ಇಲ್ಲಿ ಪ್ರದರ್ಶನ ನಡೆದಾಗಲೂ ದೇಶ- ವಿದೇಶಗಳಿಂದ ಸಾವಿರಾರು ಗಣ್ಯರು, ಆಸಕ್ತರು ಬಂದು ಪಾಲ್ಗೊಳ್ಳುತ್ತಾರೆ. ಹೂಡಿಕೆ ವಲಯದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದಕ್ಕಾಗಿ ನಾನಾ ದೇಶಿ- ಬಹುರಾಷ್ಟ್ರೀಯ ಕಂಪನಿಗಳು ಈ ಪ್ರದರ್ಶನವನ್ನು ಎದುರು ನೋಡುತ್ತವೆ. 2017ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಏರೋ ಇಂಡಿಯಾ ನಡೆದಿತ್ತು. ಆ ಸಲವೇ, ಪ್ರದರ್ಶನವನ್ನು ಗೋವಾದತ್ತ ಸೆಳೆಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸುದ್ದಿಯಾಗಿತ್ತು. ಆದರೆ ಹಾಗೇನೂ ಆಗಿರಲಿಲ್ಲ. ಅಂತಾರಾಷ್ಟ್ರೀಯ ವಲಯದಲ್ಲೂ ದೇಶದ ವರ್ಚಸ್ಸನ್ನು ಹೆಚ್ಚಿಸಿರುವ ಈ ಪ್ರತಿಷ್ಠಿತ ಕಾರ‍್ಯಕ್ರಮದ ಮೇಲೆ ಹಲವಾರು ರಾಜ್ಯಗಳ ಕಣ್ಣಿರುವುದು ನಿಜ. ಆದರೆ ಈ ಬಾರಿ ಉ.ಪ್ರ.ದ ಮುಖ್ಯಮಂತ್ರಿಯೇ ಸಾರ್ವಜನಿಕವಾಗಿ ಕೇಂದ್ರದ ಮೇಲೆ ಒತ್ತಡ ಹಾಕಿದ್ದಾರೆ. ಆದರೆ ಕೇಂದ್ರ ಅದಕ್ಕೆ ಮಣಿದರೆ, ಕೆಲವು ಅನಪೇಕ್ಷಿತ ಬೆಳವಣಿಗೆಗಳು ಉಂಟಾಗುವುದು ಖಚಿತ.

ಬೆಂಗಳೂರು ಸ್ವಾತಂತ್ರ್ಯೋತ್ತರ ಕಾಲದಿಂದಲೂ ದೇಶದ ರಕ್ಷಣಾ ವಲಯದ ಪ್ರಮುಖ ತಾಣಗಳಲ್ಲೊಂದು. ಸಾರ್ವಜನಿಕ ಸ್ವಾಮ್ಯದ ವೈಮಾನಿಕ ಮತ್ತು ರಕ್ಷಣಾ ಸಂಸ್ಥೆ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಕಾರಾರ‍ಯಚರಿಸುತ್ತಿರುವುದು ಇಲ್ಲಿ. ದೇಶದ ಹೆಮ್ಮೆಯನ್ನು ಮುಗಿಲಿನ ಎತ್ತರಕ್ಕೆ ಏರಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಲ್ಲಿದೆ. ದೇಶದ ನಾನಾ ಕಡೆಯ ಪ್ರತಿಷ್ಠಿತ ವಿಜ್ಞಾನಿಗಳು ಇಲ್ಲಿ ದುಡಿದಿದ್ದಾರೆ. ಕರ್ನಾಟಕ ಅವರ ಕರ್ಮಭೂಮಿಯಾಗಿದೆ. ದೇಶದ ಮಿಲಿಟರಿಗೆ ಬೇಕಾದ ಅತ್ಯಾಧುನಿಕ ರಕ್ಷಣಾಸಾಮಗ್ರಿಗಳು ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತವೆ. ಹೀಗೆ ಯಾವುದೇ ದೃಷ್ಟಿಯಿಂದ ನೋಡಿದರೂ ಬೆಂಗಳೂರು ವೈಮಾನಿಕ ಸಂಶೋಧನೆ, ರಕ್ಷಣಾ ಸಂಶೋಧನೆಗಳಲ್ಲಿ ಸುಭದ್ರವಾದ ನೆಲೆಗಟ್ಟನ್ನು ಹೊಂದಿದೆ. ಮುಖ್ಯವಾಗಿ, ಏರೋ ಇಂಡಿಯಾ ಎಂಬುದು 'ಬೆಂಗಳೂರಿನ ಬ್ರಾಂಡ್‌' ಆಗಿದೆ. ಇದಕ್ಕೆ ಇಲ್ಲಿ ಎರಡು ದಶಕಗಳ ಭದ್ರವಾದ ಹಿನ್ನೆಲೆಯಿದೆ. ಇಲ್ಲಿ ಅದಕ್ಕೆ ಬೇಕಾದ ಮೂಲಸೌಲಭ್ಯಗಳೂ ಸಾಕಷ್ಟಿವೆ. ಇದನ್ನು ಬೆಂಗಳೂರಿನಿಂದ ಸ್ಥಳಾಂತರಿಸುವುದು ಅನಗತ್ಯ ಹಾಗೂ ಅನಪೇಕ್ಷಿತ.

ಲಾಭದಾಯಕವಾಗಿ ನಡೆಯುತ್ತಿರುವ ಕಂಪನಿಗಳು ಅಥವಾ ಕಾರ್ಯಕ್ರಮಗಳಲ್ಲಿ ಮೂಗು ತೂರಿಸುವುದು, ಅದರಲ್ಲಿ ಬದಲಾವಣೆ ಮಾಡುವುದು ನಮ್ಮ ಸರಕಾರಗಳ ಚಾಳಿಯಾಗಿದೆ. ಇಂಥ ಹಸ್ತಕ್ಷೇಪಗಳಿಂದಾಗಿಯೇ ಅನೇಕ ಲಾಭದಾಯಕ ಕಾರ‍್ಯಕ್ರಮಗಳು ದಿವಾಳಿಯಾಗಿವೆ. ಏರೋ ಇಂಡಿಯಾವನ್ನು ಈಗಿರುವಂತೆಯೇ ಇರಗೊಡುವುದು ಅಥವಾ ಇನ್ನಷ್ಟು ಗಟ್ಟಿಗೊಳಿಸುವುದು ಸೂಕ್ತ. ಇತರ ರಾಜ್ಯಗಳಲ್ಲಿ ಸಾಧ್ಯವಿದ್ದರೆ ಇದಕ್ಕೆ ಪರ್ಯಾಯವಾದ ವೈಮಾನಿಕ ಕಾರ‍್ಯಕ್ರಮಗಳನ್ನು ಹಮ್ಮಿಕೊಂಡು, ಅದನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಕೇಂದ್ರ ಯೋಚಿಸಬಹುದು. ನಮ್ಮ ರಾಜ್ಯ ಸರಕಾರ ಕೂಡ, ಬೆಂಗಳೂರಿನ ಹೆಮ್ಮೆಯ ಕಾರ‍್ಯಕ್ರಮವಾಗಿರುವ ಏರೋ ಇಂಡಿಯಾವನ್ನು ಬಿಟ್ಟುಕೊಡಬಾರದು. ಈ ನಿಟ್ಟಿನಲ್ಲಿ ಕೇಂದ್ರದಿಂದ ಸ್ಪಷ್ಟನೆ ಪಡೆಯುವ ಹಾಗೂ ತನ್ನ ಸ್ಥಾನವನ್ನು ದೃಢಪಡಿಸಿಕೊಳ್ಳುವ ಹಕ್ಕು ರಾಜ್ಯಕ್ಕಿದೆ.

ಘ್ಕಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ