ಆ್ಯಪ್ನಗರ

ಸಂಪಾದಕೀಯ: ಮಹಿಳಾ ಕಾರ್ಮಿಕ ಬಲ ಕುಸಿತ

ಚೀನಾ ಸೇರಿದಂತೆ ಅನೇಕ ದೇಶಗಳು ಆರ್ಥಿಕ ಹಿಂಜರಿಕೆಯಿಂದ ತತ್ತರಿಸಿದ್ದರೂ ಭಾರತದ ಆರ್ಥಿಕ ಪ್ರಗತಿ ಮಾತ್ರ ಸುಸ್ಥಿರವಾಗಿದೆ ಎಂದು ಕೇಂದ್ರ ಸರಕಾರ ಪದೇ ಪದೆ ಹೇಳಿಕೊಳ್ಳುತ್ತಿದೆ.

Vijaya Karnataka Web 27 Jun 2016, 4:13 am
ಚೀನಾ ಸೇರಿದಂತೆ ಅನೇಕ ದೇಶಗಳು ಆರ್ಥಿಕ ಹಿಂಜರಿಕೆಯಿಂದ ತತ್ತರಿಸಿದ್ದರೂ ಭಾರತದ ಆರ್ಥಿಕ ಪ್ರಗತಿ ಮಾತ್ರ ಸುಸ್ಥಿರವಾಗಿದೆ ಎಂದು ಕೇಂದ್ರ ಸರಕಾರ ಪದೇ ಪದೆ ಹೇಳಿಕೊಳ್ಳುತ್ತಿದೆ. ‘ಮೇಕ್‌ ಇನ್‌ ಇಂಡಿಯಾ’, ‘ಸ್ಕಿಲ್‌ ಇಂಡಿಯಾ’ ದಂಥ ಆಕರ್ಷಕ ಹೆಸರಿನ ಯೋಜನೆಗಳ ಪ್ರಚಾರದ ಭರಾಟೆಯಿಂದ ಭಾರಿ ಉದ್ಯೊಗಳು ಸೃಷ್ಟಿಯಾಗುತ್ತವೆ ಎನ್ನುವ ನಂಬಿಕೆ ಹಲವರಲ್ಲಿ ನೆಲೆಸಿದೆ. ಆದರೆ ಇದರಲ್ಲಿ ಸತ್ಯಕ್ಕಿಂತ ಮಿಥ್ಯೆಯೇ ಹೆಚ್ಚು. ಕಳೆದ ದಶಕದಲ್ಲಿ ದೇಶದಲ್ಲಿ ಮಹಿಳಾ ಉದ್ಯೋಗಿಗಳ ಬಲ ಶೇ. 10ರಷ್ಟು ಕುಸಿತವಾಗಿದೆ ಎಂಬ ಆತಂಕಕಾರಿ ಸಂಗತಿಯನ್ನು ಉದ್ಯಮಗಳ ಸಂಘಟನೆ- ಅಸೋಚಂ ಹೇಳಿದೆ. ವಿಶ್ವಸಂಸ್ಥೆಯ ಅಂಕಿ ಅಂಶಗಳು ಮತ್ತು ಪಕ್ಕಾ ಅಧ್ಯಯನದಿಂದ ಕಂಡುಕೊಂಡ ಸಂಗತಿ ಇದು. 2000-2005ರ ಅವಧಿಯಲ್ಲಿ ಮಹಿಳಾ ಉದ್ಯೋಗಶೀಲತೆ ಪ್ರಮಾಣ ಶೇ. 34ರಿಂದ 37ಕ್ಕೆ ಜಿಗಿಯಿತು. ಆನಂತರ ಕಾರ್ಮಿಕ ಬಲ ಕುಸಿತದ ಹಾದಿ ಹಿಡಿದು, 2014ರ ವೇಳೆಗೆ ಶೇ. 27ಕ್ಕೆ ಬಂದು ಮುಟ್ಟಿದೆ. ಬ್ರಿಕ್ಸ್‌ ಗುಂಪಿಗೆ ಸೇರಿದ ಚೀನಾ, ಬ್ರೆಜಿಲ್‌, ರಷ್ಯಾ, ದಕ್ಷಿಣ ಆಫ್ರಿಕಾಗೆ ಹೋಲಿಸಿದರೂ ದೇಶದಲ್ಲಿ ಮಹಿಳಾ ಉದ್ಯೋಗಿಗಳ ಪ್ರಮಾಣ ಶೋಚನೀಯವಾಗಿ ಕಡಿಮೆಯಾಗಿದೆ ಎಂಬುದು ಅಸೋಚಂ ವರದಿಯ ಸಾರಾಂಶ. ನಮ್ಮ ಆರ್ಥಿಕ ಪ್ರಗತಿ ಏರುಗತಿಯಲ್ಲಿದೆ ಎಂದು ಹೇಳಿಕೊಂಡರೂ, ಈ ಬೆಳವಣಿಗೆಗಳು ಉದ್ಯೋಗವಕಾಶಗಳಾಗಿ ಮಾರ್ಪಡುತ್ತಿಲ್ಲ. ಹೊಸ ಹೊಸ ಯೋಜನೆಗಳು ಘೋಷಣೆಯಾಗುತ್ತಿದ್ದರೂ ನಿರುದ್ಯೋಗ ತಾಂಡವವಾಡುತ್ತಿದೆ. ದುಡಿಯುವ ಶಕ್ತಿ ಇರುವ ಕೈಗಳಿಗೆ ಕೆಲಸವಿಲ್ಲ ಎಂದರೆ ಅದೊಂದು ಕೇವಲ ಆರ್ಥಿಕ ಸಮಸ್ಯೆಯಲ್ಲ; ಅದಕ್ಕೆ ಬೇರೆ ಬೇರೆ ಆಯಾಮಗಳಿರುತ್ತವೆ; ಯುವ ಸಮುದಾಯ ಹತಾಶೆಗೊಳ್ಳುತ್ತದೆ; ಸಿನಿಕವಾಗುತ್ತದೆ. ಅಪರಾಧ ಪ್ರವೃತ್ತಿ ಹೆಚ್ಚುತ್ತದೆ. ಇದರಿಂದ ಇಡೀ ಸಮಾಜದ ಸ್ವಾಸ್ಥ್ಯವೇ ಕೆಟ್ಟು ಹೋಗುತ್ತದೆ. ಶಿಕ್ಷಣದ ಸಾರ್ವತ್ರೀಕರಣದಿಂದ ಮಹಿಳೆಯರು ಹೆಚ್ಚು ಹೆಚ್ಚು ಶಿಕ್ಷಿತರಾಗುತ್ತಿದ್ದಾರೆ; ಉದ್ಯೋಗದ ಅರ್ಹತೆ ಪಡೆಯುತ್ತಿದ್ದಾರೆ. ಸ್ವಾವಲಂಬನೆಯ ಹಂಬಲ ಅವರಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ಆದರೆ ಹೊಸ ಉದ್ಯೋಗದ ಮಾತಿರಲಿ, ಇರುವ ಉದ್ಯೋಗಗಳನ್ನೂ ಕಳೆದುಕೊಳ್ಳುತ್ತಿದ್ದಾರೆ ಎಂದರೆ ಈ ಪ್ರವೃತ್ತಿಯನ್ನು ಗಂಭೀರವಾಗಿ ಪರಿಗಣಿಸಬೇಕು.
Vijaya Karnataka Web editorial
ಸಂಪಾದಕೀಯ: ಮಹಿಳಾ ಕಾರ್ಮಿಕ ಬಲ ಕುಸಿತ


ತಾಂತ್ರಿಕತೆಯ ಉನ್ನತೀಕರಣದ ಜತೆ ಹೆಜ್ಜೆ ಹಾಕದೆ ಮಹಿಳೆಯರು ಹಿಂಬೀಳುತ್ತಿದ್ದಾರೆ. ಉನ್ನತ ಶಿಕ್ಷಣ ಮತ್ತು ಕೌಶಲ್ಯಗಳ ಅಭಾವ ಅವರನ್ನು ಉದ್ಯೋಗ ಸ್ಪರ್ಧೆಗಳಲ್ಲಿ ಸೋಲುವಂತೆ ಮಾಡಿವೆ. ಇದರೊಂದಿಗೆ ಉದ್ಯೋಗದ ಸ್ಥಳಗಳಲ್ಲಿ ಯಾವುದೇ ಔದಾರ್ಯ ತೋರಿಸಿದ ನೀತಿಗಳು ಅವರ ಜಂಘಾಬಲವನ್ನು ಉಡುಗಿಸಿವೆ. ಕಾರ್ಮಿಕ ಕಾನೂನುಗಳ ಜಾರಿ ತುಂಬ ದುರ್ಬಲವಾಗಿರುವುದರಿಂದ ಯಾವುದೇ ಕಾರ್ಖಾನೆಗಳಲ್ಲಿ ಕೆಲಸಗಾರ್ತಿಯರಿಗೆ ಭದ್ರತೆ ಮತ್ತು ರಕ್ಷಣೆ ಇಲ್ಲದಂತಾಗಿದೆ. ಕೊಂಚ ರಿಯಾಯಿತಿ ಕೇಳಿದರೆ ಮನೆಗೆ ಕಳುಹಿಸಲು ಉದ್ಯಮ ಪತಿಗಳು ತುದಿಗಲ ಮೇಲೆ ನಿಂತಿರುತ್ತಾರೆ. ಈ ಎಲ್ಲ ಅಂಶಗಳು ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಕುಗ್ಗಿಸಿವೆ.
ಯಾವುದೇ ಸರಕಾರ ಭಾಗ್ಯ ಯೋಜನೆಗಳ ಮೂಲಕ ಉಚಿತ ಕಾಣಿಕೆಗಳನ್ನು ಹಂಚಿದರೂ ಅವು ಯಾವುವೂ ಉದ್ಯೋಗಕ್ಕೆ ಸಮನಲ್ಲ. ಕೆಲಸದ ಅರ್ಹತೆ ಇರುವವರನ್ನು ಕ್ರಿಯಾಶೀಲರನ್ನಾಗಿಸಿದರೆ ಆ ಸಮಾಜ ನಿಜಕ್ಕೂ ಜೀವಂತ ಹಾಗು ಚಲನಶೀಲವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವವರು ಉದ್ಯೋಗ ನಿರ್ಮಾಣವನ್ನು ಪರಮೋಚ್ಛ ಆದ್ಯತೆಯಾಗಿ ಪರಿಗಣಿಸಬೇಕು. ಖಾಲಿ ಇರುವ ಸರಕಾರಿ ಹುದ್ದೆಗಳನ್ನು ತುಂಬಬೇಕು. ಮಹಿಳಾ ಮೀಸಲನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಮಹಿಳಾ ಪರ ಇರುವಂತೆ ಕಾರ್ಮಿಕ ನೀತಿಯನ್ನು ರೂಪಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಘೋಷಣೆಯಾಗಿರುವ ಹೊಸ ಯೋಜನೆಗಳು ಜಾರಿಯಲ್ಲಿ ಏನಾಗಿವೆ ಎಂಬುದನ್ನು ಕಂಡುಕೊಳ್ಳಬೇಕು. ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಅನುತ್ಪಾದಕ ಸ್ಥಿತಿಯಲ್ಲಿಡುವ ಅಪಾಯವನ್ನು ಮನಗಾಣಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ