ಆ್ಯಪ್ನಗರ

ನಿರ್ಲಜ್ಜ ಶಾಸಕರ ಹನಿಟ್ರ್ಯಾಪ್‌: ಶಿಸ್ತುಕ್ರಮಕ್ಕೆ ಪಕ್ಷಗಳ ಹಿಂದೇಟೇಕೆ ?

ಆಡಳಿತದಲ್ಲಿರುವ ಬಿಜೆಪಿ ಶಾಸಕರೊಬ್ಬರ ಹನಿಟ್ರ್ಯಾಪ್‌ ಪ್ರಕರಣ ಬಯಲಾಗಿದೆ. ಈ ಪ್ರಕರಣದ ಬೆನ್ನು ಹತ್ತಿ, ಆರೋಪಿಗಳನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಇನ್ನಷ್ಟು ಶಾಸಕರು ಶಾಸಕರೂ ಕೂಡ ಇದರಲ್ಲಿಭಾಗಿಯಾಗಿರುವುದು ತಿಳಿದುಬಂದಿದೆ.

Vijaya Karnataka Web 29 Nov 2019, 5:00 am
ಆಡಳಿತದಲ್ಲಿರುವ ಬಿಜೆಪಿ ಶಾಸಕರೊಬ್ಬರ ಹನಿಟ್ರ್ಯಾಪ್‌ ಪ್ರಕರಣ ಬಯಲಾಗಿದೆ. ಈ ಪ್ರಕರಣದ ಬೆನ್ನು ಹತ್ತಿ, ಆರೋಪಿಗಳನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಇನ್ನಷ್ಟು ಶಾಸಕರು ಶಾಸಕರೂ ಕೂಡ ಇದರಲ್ಲಿಭಾಗಿಯಾಗಿರುವುದು ತಿಳಿದುಬಂದಿದೆ. ಇದರಲ್ಲಿಆಡಳಿತ ಪಕ್ಷದ ಕೆಲವು ಶಾಸಕರೂ, ಪ್ರತಿಪಕ್ಷಗಳ ಶಾಸಕರು ಹಾಗೂ ಅನರ್ಹ ಶಾಸಕರೂ ಇದ್ದಾರೆ. ಪಕ್ಷನಿಷ್ಠೆಯ ವಿಷಯದಲ್ಲಿಯಾವುದೇ ನೈತಿಕತೆ ಇಲ್ಲದ ಈ ಶಾಸಕರಿಗೆ ತಮ್ಮ ಲೈಂಗಿಕ ಸಾಹಸಗಳ ವಿಚಾರದಲ್ಲಿಯೂ ಯಾವುದೇ ಪಕ್ಷಭೇದವಿಲ್ಲ. ಸದನದ ಚರ್ಚೆಗಳಲ್ಲಿಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿಅನಾಸಕ್ತರಾಗಿರುವ ಇವರೆಲ್ಲಅನಂಗಲೀಲೆಯಲ್ಲಿಅತ್ಯಂತ ಹುರುಪಿನಿಂದ ಪಾಲ್ಗೊಳ್ಳುವಷ್ಟು ತಾಕತ್ತು ಇನ್ನೂ ಉಳಿಸಿಕೊಂಡಿರುವುದು ಮಾತ್ರ ಆಸಕ್ತಿಕರವಾಗಿದೆ. ನಟಿಯರ ಬಗ್ಗೆ ಇವರ ಆಸೆಬುರುಕತನ ಹಾಗೂ ವಿಡಿಯೋ ಚಿತ್ರೀಕರಣಕ್ಕೊಳಗಾಗುತ್ತಿರುವುದು ಗೊತ್ತಾಗದಂಥ ಇವರ ಮಗ್ನತೆ ಕೂಡ ಕುತೂಹಲಕರ. ಪೊಲೀಸರು ಹೇಳುವಂತೆ, ಇನ್ನಷ್ಟು ರಾಜಕಾರಣಿಗಳು ಈ ಹನಿಟ್ರ್ಯಾಪ್‌ನಲ್ಲಿಬಿದ್ದು ಒದ್ದಾಡುತ್ತಿದ್ದಾರೆ; ಆದರೆ ತಮ್ಮ ಸಾರ್ವಜನಿಕ ವರ್ಚಸ್ಸಿಗೆ ಧಕ್ಕೆಯಾಗುವ ಭಯದಿಂದ ದೂರು ನೀಡದೆ ಸುಮ್ಮನಿದ್ದಾರೆ.
Vijaya Karnataka Web edit


ಇಲ್ಲಿಹನಿಟ್ರ್ಯಾಪ್‌ ಮಾಡಿದವನದು ಕಾನೂನಾತ್ಮಕವಾಗಿ ಅಪರಾಧ; ಅದಕ್ಕೆ ಒಳಗಾದವರದ್ದು ನೈತಿಕತೆ, ಚಾರಿತ್ರ್ಯದ ದಿವಾಳಿತನ. ಸಾರ್ವಜನಿಕ ಜೀವನದಲ್ಲಿಇರುವ ವ್ಯಕ್ತಿಗಳು, ಒಂದು ಕ್ಷೇತ್ರದ ಲಕ್ಷಾಂತರ ಜನರನ್ನು ಪ್ರತಿನಿಧಿಸುವ ವ್ಯಕ್ತಿಗಳು ತಮ್ಮ ಚಾರಿತ್ರ್ಯವನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ಅಪೇಕ್ಷಣೀಯ. ಆದರೆ ಈ ಶಾಸಕರಿಗೆ ತಮ್ಮ 'ಗಂಡಸುತನ' ಮೆರೆಯುವ ಹುಚ್ಚು. ಜನಾಪವಾದ ಭೀತಿ ಸದಾಕಾಲ ನಾಯಕನಲ್ಲಿಇರಬೇಕು. ಅದು ಆತ ಸಚ್ಚಾರಿತ್ರ್ಯವನ್ನು ಕಾಪಾಡಿಕೊಳ್ಳುವಂತೆ ಮಾಡುತ್ತದೆ. ಆದರೆ ಈ ಪ್ರಕರಣದಲ್ಲಿರುವ ಶಾಸಕರೆಲ್ಲಅದಕ್ಕೆಲ್ಲತಿಲಾಂಜಲಿ ಕೊಟ್ಟಿದ್ದಾರೆ. ಇದು ಸ್ಪಷ್ಟ ನೈತಿಕ ಅಧಃಪತನ. ಇವರು ಯಾವ ಮುಖ ಇಟ್ಟುಕೊಂಡು ಉಪಚುನಾವಣೆಯಲ್ಲಿಮತ ಕೇಳಲು ಜನತೆಯ ಮುಂದೆ ಹೋಗುತ್ತಾರೆ? ಇವರ ಹೆಸರುಗಳನ್ನು ಪೊಲೀಸರು ಬಹಿರಂಗಪಡಿಸದೆ ಇರಬಹುದು, ಆದರೆ ಎದುರಾಳಿ ಪಕ್ಷದವರು ಹಾಗೂ ಸಶಕ್ತ ಸಾಮಾಜಿಕ ಮಾಧ್ಯಮಗಳಲ್ಲಿರುವ ಪ್ರಜ್ಞಾವಂತರು ಜನರ ಅರಿವಿಗೆ ತಾರದೆ ಇರುತ್ತಾರೆಯೇ? ತಾವು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ತಿಳಿಯದು ಎಂದು ಇವರು ಭಾವಿಸಿರುವಂತಿದೆ.

ಇಂಥ ಸಂದರ್ಭದಲ್ಲಿಸಂಬಂಧಪಟ್ಟ ಪಕ್ಷ ಏನು ಮಾಡಬೇಕಿತ್ತು? ಕಳಂಕಿತ ಶಾಸಕರಿಂದ ತಕ್ಷಣವೇ ರಾಜೀನಾಮೆ ಕೊಡಿಸಿ ಪೊಲೀಸ್‌ ತನಿಖೆ ಅಥವಾ ಕನಿಷ್ಠ ಪಕ್ಷದ ಆಂತರಿಕ ತನಿಖೆಗಾದರೂ ಒಡ್ಡಬೇಕಿತ್ತು. ಆರೋಪಿತರು ಸಚ್ಚಾರಿತ್ರರು ಎಂದು ಸಾಬೀತಾದರೆ ಮಾತ್ರ ಪಕ್ಷದಲ್ಲಿಸ್ಥಾನ ಎನ್ನಬೇಕಿತ್ತು. ಅಂಥದ್ದೇನನ್ನೂ ಬಿಜೆಪಿ ಮಾಡಿದ ಹಾಗಿಲ್ಲ. ಈ ಪ್ರಕರಣವೆಂದೇನಲ್ಲ; ಈ ಹಿಂದೆ ನಡೆದ ಇಂಥದೇ ಇನ್ನೊಂದು ಪ್ರಕರಣದಲ್ಲೂಕಳಂಕಿತ ಶಾಸಕರ ಮೇಲೆ ಯಾವ ಕ್ರಮವೂ ಕೈಗೊಳ್ಳಲಾಗಿಲ್ಲ. ಸದನದಲ್ಲೇ ನೀಲಿಚಿತ್ರ ವೀಕ್ಷಿಸಿದ ಆರೋಪ ಹೊತ್ತ 'ಬ್ಲೂಬಾಯ್‌್ಸ' ಹಾಗೇ ಇದ್ದಾರೆ. ಅವರ 'ಮಹಾಸಾಹಸ'ಕ್ಕೆ ಪಕ್ಷದ ಶ್ಲಾಘನೆಯೋ ಎಂಬಂತೆ ಒಬ್ಬರಿಗೆ ಪದೋನ್ನತಿಯೂ ದೊರಕಿದೆ. ಭ್ರಷ್ಟತೆ ಮತ್ತು ಚಾರಿತ್ರ್ಯಹೀನತೆಗೆ ಏನೂ ವ್ಯತ್ಯಾಸವಿಲ್ಲ. ಕಿಂಚಿತ್‌ ಭ್ರಷ್ಟತೆಯ ಆರೋಪ ಕೇಳಿಬಂದರೂ, ಉನ್ನತ ಪದವಿಯಿಂದ ಕೆಳಗಿಳಿದು, ತನಿಖೆಗೆ ತನ್ನನ್ನು ಒಡ್ಡಿಕೊಂಡು, ಕ್ಲೀನ್‌ಚಿಟ್‌ ಪಡೆದು ಬಂದ ಆಡ್ವಾಣಿಯಂಥ ಮಹಾನಾಯಕರ ಆದರ್ಶ ಈ ಪಕ್ಷದ ಚರಿತ್ರೆಯಲ್ಲಿದೆ. ಆದರೆ ನಮ್ಮ ಇಲ್ಲಿನ ವರ್ತಮಾನದ ನಾಯಕರು ಮಾತ್ರ ಅದಕ್ಕೆಲ್ಲಕಣ್ಣಿದ್ದೂ ಕುರುಡರು.

ಆದರೆ, ಸದನದಲ್ಲಿನೀಲಿಚಿತ್ರ ವೀಕ್ಷಿಸಿದ್ದ ಶಾಸಕರಿಗೆ ಮತ್ತಿನ ಚುನಾವಣೆಯಲ್ಲಿಮತದಾರರು ಮಾತ್ರ ಸರಿಯಾಗಿಯೇ ತಪರಾಕಿ ಕೊಟ್ಟಿದ್ದಾರೆ ಎಂಬುದನ್ನು ಎಲ್ಲರೂ ನೆನಪಿಡಬೇಕು. ಜನತೆ ಎಚ್ಚರದಿಂದ ಎಲ್ಲವನ್ನೂ ವೀಕ್ಷಿಸುತ್ತಿದ್ದಾರೆ. ಭ್ರಷ್ಟರು, ಅನೀತಿವಂತರು ಹಾಗೂ ನಿರ್ಲಜ್ಜರನ್ನು ಶಿಕ್ಷಿಸುವುದಕ್ಕಾಗಿ ಇವರು ಕಾಯುತ್ತಿದ್ದಾರೆ. ಇಂಥವರನ್ನು ಸಾರ್ವಜನಿಕ ಜೀವನದಿಂದ ದೂರವಿಡುವುದು ಸಮಾಜಕ್ಕೂ ಒಳ್ಳೆಯದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ