ಆ್ಯಪ್ನಗರ

ಚುನಾವಣಾ ಕಣಕ್ಕೆ ಇಳಿಯುತ್ತಿದೆ ಕೋಟ್ಯಂತರ ಹಣ

ಚುನಾವಣಾ ಆಯೋಗ ಕಟ್ಟುನಿಟ್ಟಿನ ಮಾದರಿ ನೀತಿಸಂಹಿತೆಯನ್ನು ವಿಧಿಸಿದೆ. ದಾಖಲೆಯಿಲ್ಲದೆ 50,000 ರೂ.ಗಳಿಗಿಂತ ಅಧಿಕ ಹಣವನ್ನು ಕೊಂಡೊಯ್ಯುವಂತೆಯೇ ಇಲ್ಲ. ಆದರೂ ಅಧಿಕಾರಿಗಳ ಕಣ್ತಪ್ಪಿಸಿ ಹಣ ಒಯ್ಯಲಾಗುತ್ತಿದೆ.

Vijaya Karnataka 16 Mar 2019, 5:00 am
ಬೆಂಗಳೂರು ಹಾಗೂ ಹಾವೇರಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿಯಲ್ಲಿ ಸುಮಾರು 2 ಕೋಟಿ ರೂ. ಹಣ ಪತ್ತೆಯಾಗಿದೆ. ಈ ಹಣವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ಗುತ್ತಿಗೆದಾರರು ನೀಡಿದ್ದು, ಚುನಾವಣೆ ಪ್ರಚಾರಕ್ಕಾಗಿ ಬಳಸಲು ಉದ್ದೇಶಿಸಲಾಗಿತ್ತು ಎಂದು ವರದಿಯಾಗಿದೆ. ಇದಲ್ಲದೆ, ರಾಜ್ಯದಲ್ಲಿ ಈವರೆಗೆ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 8.57 ಕೋಟಿ ರೂ. ಮೌಲ್ಯದ ಮದ್ಯ, 54 ಲಕ್ಷ ರೂ. ನಗದು, 650 ಗ್ರಾಂ ಚಿನ್ನ ಹಾಗೂ 10 ಕಿ.ಲೋ. ಬೆಳ್ಳಿ ಆಭರಣಗಳು, 10.30 ಕೋಟಿ ರೂ. ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. ಶುಕ್ರವಾರ ಕೂಡ, ರಾಯಚೂರು ಮತ್ತಿತರೆಡೆ ಸಾಗಿಸಲಾಗುತ್ತಿದ್ದ ಅಕ್ರಮ ಹಣದ ಪತ್ತೆಯಾಗಿದೆ.
Vijaya Karnataka Web edit


ಲೋಕಸಭೆ ಚುನಾವಣೆ ಘೋಷಣೆಯಾಗಿದ್ದರೂ ಇನ್ನೂ ಪ್ರಚಾರದ ಕಣ ಕಾವೇರಿಲ್ಲ. ಆಗಲೇ ಇಷ್ಟೊಂದು ಪ್ರಮಾಣದ ಅಕ್ರಮ ಹಣ, ಮದ್ಯ, ಆಭರಣ, ಸಾಮಗ್ರಿ ಇತ್ಯಾದಿ ಪತ್ತೆಯಾಗುತ್ತವೆ ಎಂದಾದರೆ, ಚುನಾವಣೆಯನ್ನು ಶತಾಯಗತಾಯ ಗೆಲ್ಲಲು ಧನಬಲವುಳ್ಳವರು ಹೇಗೆ ಮುಂದಾಗಿದ್ದಾರೆ ಎಂದು ನಾವು ಊಹಿಸಬಹುದು. ಚುನಾವಣಾ ಆಯೋಗ ಕಟ್ಟುನಿಟ್ಟಿನ ಮಾದರಿ ನೀತಿಸಂಹಿತೆಯನ್ನು ವಿಧಿಸಿದೆ. ದಾಖಲೆಯಿಲ್ಲದೆ 50,000 ರೂ.ಗಳಿಗಿಂತ ಅಧಿಕ ಹಣವನ್ನು ಕೊಂಡೊಯ್ಯುವಂತೆಯೇ ಇಲ್ಲ. ಆದರೂ ಅಧಿಕಾರಿಗಳ ಕಣ್ತಪ್ಪಿಸಿ ಹಣ ಒಯ್ಯಲಾಗುತ್ತಿದೆ. ಅಭ್ಯರ್ಥಿ ಘೋಷಣೆಯಾದ ಬಳಿಕ, ಪ್ರತಿ ಅಭ್ಯರ್ಥಿಯೂ ಸುಮಾರು 70 ಲಕ್ಷ ರೂ.ಗಳನ್ನು ಪ್ರಚಾರಕ್ಕಾಗಿ ವೆಚ್ಚ ಮಾಡಬಹುದಾಗಿದೆ. ಆದರೆ ಇದಕ್ಕೂ ಸೂಕ್ತ ಲೆಕ್ಕವಿರಬೇಕು. ಆಯೋಗಕ್ಕೆ ಲೆಕ್ಕ ತೋರಿಸುವ ಮಂದಿ, ಜನರನ್ನು ಸೆಳೆಯುವುದಕ್ಕೆ ಮಾತ್ರ ಹಣದ ಆಮಿಷ ಒಡ್ಡುವ ಪುರಾತನ ತಂತ್ರವನ್ನೇ ಪುನರಾವರ್ತಿಸುತ್ತಾರೆ. ಇಲ್ಲಿ ನಿಕಷಕ್ಕೆ ಒಡ್ಡಬೇಕಾದುದು ತಮ್ಮ ಧನಬಲವನ್ನಲ್ಲ, ತಮ್ಮ ಸಾಧನೆ ಹಾಗೂ ಅರ್ಹತೆಯನ್ನು ಎಂಬ ಸರಳ ಸಂಗತಿಯೂ ಇವರಿಗೆ ಅಪಥ್ಯವಾಗಿದೆ. ಸಾಧನೆ ಅರ್ಹತೆಗಳೆರಡೂ ಇಲ್ಲದ ಅಭ್ಯರ್ಥಿಗಳಿಗೆ ಅಕ್ರಮ ಹಣದ ವಹಿವಾಟು ಅನಿವಾರ್ಯತೆಯೂ ಆಗಿದೆ.

ಆದರೆ ಚುನಾವಣಾ ಆಯೋಗ ಮಾತ್ರ ಈ ಬಾರಿ ಆರಂಭದಿಂದಲೇ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಗಾ ಇಟ್ಟಿರುವುದು ಕಂಡುಬಂದಿದೆ. ರಾಜ್ಯದ ಎಲ್ಲೆಡೆ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅಕ್ರಮಗಳ ತಡೆಗೆ ಅಧಿಕಾರಿಗಳು ಕಟಿಬದ್ಧರಾಗಿದ್ದಾರೆ. ಈ ಶಿಸ್ತು ಹಾಗೂ ಎಚ್ಚರದ ಕಾರ್ಯವೈಖರಿಗಾಗಿ ಆಯೋಗವನ್ನು ಅಭಿನಂದಿಸಬೇಕಿದೆ. ಅಕ್ರಮ ಹಣದ ಮೂಲವನ್ನು ಶೀಘ್ರ ತನಿಖೆಯ ಮೂಲಕ ಪತ್ತೆ ಹಚ್ಚಿ, ಅಂಥ ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದಲೇ ಹೊರಗಿಡುವ ಕಠಿಣ ಕ್ರಮವನ್ನೂ ಆಯೋಗ ಕೈಗೊಳ್ಳುವ ಅಗತ್ಯವಿದೆ. ಶಾಸಕ- ಸಂಸದರಾಗಿ ಆಯ್ಕೆಯಾದ ಒಂದೇ ಅವಧಿಯಲ್ಲಿ ತಮ್ಮ ಸಂಪತ್ತನ್ನು ದುಪ್ಪಟ್ಟು- ಮುಪ್ಪಟ್ಟು ಮಾಡಿಕೊಂಡ ಜನಪ್ರತಿನಿಧಿಗಳ ಗಳಿಕೆಯ ಬಗೆಗೂ ಪರಿಶೀಲನೆ ನಡೆಯುವ ಅಗತ್ಯವಿದೆ. ಚುನಾವಣಾ ಅಕ್ರಮ ಎಂಬುದು ದ್ವಿಮುಖಿಯಾದುದು. ಆಮಿಷ ಪಡೆಯುವವರು ಇಲ್ಲದಿದ್ದರೆ ಕೊಡುವವರೂ ಇರುವುದು ಸಾಧ್ಯವಿಲ್ಲ. ಮತದಾರರು ಕೂಡ ಚಿಲ್ಲರೆ ಕಾಸಿಗಾಗಿ ತಮ್ಮ ಮತವನ್ನು ಮಾರಿಕೊಳ್ಳುವ ಅಲ್ಪಾವಸ್ಥೆಗೆ ಇಳಿಯಬಾರದು. ಇದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಹಾನಿಕರ. ಯಾಕೆಂದರೆ ಹಣ ಚೆಲ್ಲಿ ಆರಿಸಿ ಬರುವವನು ಮತ್ತೆ ಅದನ್ನು ಗಳಿಸುವುದಕ್ಕಾಗಿ ಅದೇ ಪ್ರಜೆಗಳನ್ನೇ ಸುಲಿಯುವುದಕ್ಕೆ ಮುಂದಾಗುತ್ತಾನೆ. ಚುನಾವಣೆಯಲ್ಲಿ ಹಣ ಪಡೆದವರೇ ಮುಂದೆ ಇದಕ್ಕೆ ಕಂದಾಯವನ್ನೂ ಬೇರೊಂದು ರೀತಿಯಲ್ಲಿ ಕಟ್ಟಬೇಕಾಗುತ್ತದೆ. ಮುಕ್ತ, ಪಾರದರ್ಶಕ ಚುನಾವಣೆ ನಡೆಯುವುದಕ್ಕೆ ಆಯೋಗದ ಜತೆಗೆ ಅಭ್ಯರ್ಥಿಗಳು, ಮತದಾರರು ಸಹಕರಿಸುವುದು ಅಗತ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ