ಆ್ಯಪ್ನಗರ

ಹಿಂಸೆಯಿಂದ ಬದಲಾವಣೆ ಭ್ರಮೆ

ಛತ್ತೀಸ್‌ಗಢದಲ್ಲಿ ನಕ್ಸಲ್‌ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಲೋಕಸಭೆಗೆ ಮೊದಲ ಚರಣದ ಚುನಾವಣೆ ನಡೆಯಲಿರುವ ಬಸ್ತರ್‌ ಪ್ರದೇಶದಲ್ಲಿ ಪ್ರಚಾರಕ್ಕೆ ತೆರಳಿದ್ದ ದಾಂತೆವಾಡದ ಬಿಜೆಪಿ ಶಾಸಕ ಭೀಮಾ ಮಾಂಡವಿ ಮತ್ತು ಅವರ ನಾಲ್ವರು ಸಿಬ್ಬಂದಿ ನಕ್ಸಲರು ರಸ್ತೆಯಲ್ಲಿ ಹುದುಗಿಸಿಟ್ಟಿದ್ದ ನೆಲಬಾಂಬ್‌ ಸ್ಫೋಟಕ್ಕೆ ಬಲಿಯಾಗಿದ್ದಾರೆ.

Vijaya Karnataka 10 Apr 2019, 10:33 am
ತ್ತೀಸ್‌ಗಢದಲ್ಲಿ ನಕ್ಸಲ್‌ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಲೋಕಸಭೆಗೆ ಮೊದಲ ಚರಣದ ಚುನಾವಣೆ ನಡೆಯಲಿರುವ ಬಸ್ತರ್‌ ಪ್ರದೇಶದಲ್ಲಿ ಪ್ರಚಾರಕ್ಕೆ ತೆರಳಿದ್ದ ದಾಂತೆವಾಡದ ಬಿಜೆಪಿ ಶಾಸಕ ಭೀಮಾ ಮಾಂಡವಿ ಮತ್ತು ಅವರ ನಾಲ್ವರು ಸಿಬ್ಬಂದಿ ನಕ್ಸಲರು ರಸ್ತೆಯಲ್ಲಿ ಹುದುಗಿಸಿಟ್ಟಿದ್ದ ನೆಲಬಾಂಬ್‌ ಸ್ಫೋಟಕ್ಕೆ ಬಲಿಯಾಗಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಯ ವಿರುದ್ಧ ನಕ್ಸಲರು ಎಸೆದ ಸವಾಲೆಂದೇ ಪರಿಗಣಿಸಬೇಕಿದೆ.
Vijaya Karnataka Web naxals


2013ರ ಮೇ 26ರಂದು ನಕ್ಸಲರು ನಡೆಸಿದ ದಾಳಿಯಲ್ಲಿ ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ನಂದಕುಮಾರ್‌ ಪಟೇಲ್‌, ಕೆಲ ಹಿರಿಯ ನಾಯಕರು ಹಾಗೂ ಭದ್ರತಾ ಸಿಬ್ಬಂದಿ ಸೇರಿ 25 ಮಂದಿ ಹತ್ಯೆಗೀಡಾದರು. ನಕ್ಸಲರ ಮನವೊಲಿಕೆ ಮತ್ತು ನಕ್ಸಲರ ವಿರುದ್ಧ ಜಾಗೃತಿ ಕಾರ್ಯಕ್ಕೋಸ್ಕರ 'ಸಲ್ವಾಜುಡುಂ' ಎಂಬ ಸಂಘಟನೆ ಆರಂಭಿಸಿದ್ದ ಕಾಂಗ್ರೆಸ್‌ ನಾಯಕ ಮಹೇಂದ್ರ ಕರ್ಮ ಅವರೂ ಆ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ರಾಜಕೀಯ ನಾಯಕರೇ ಗುರಿಯಾದ ಕಾರಣಕ್ಕೆ ಈ ಎರಡು ಘಟನೆಗಳು ಹೆಚ್ಚಿನ ಗಮನ ಸೆಳೆದವು. ಆದರೆ ದೇಶದಲ್ಲಿ ನಕ್ಸಲರ ದಾಳಿಯ ಕರಾಳ ಮುಖ ಅದಕ್ಕಿಂತಲೂ ಕರಾಳ. ಕೇಂದ್ರ ಗೃಹ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಇದುವರೆಗೆ ನಕ್ಸಲ್‌ ಹಿಂಸಾಚಾರಕ್ಕೆ 12500ಕ್ಕೂ ಹೆಚ್ಚು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. 2850ಕ್ಕೂ ಹೆಚ್ಚು ಪೊಲೀಸರು ಮತ್ತು ಸೇನಾ ಸಿಬ್ಬಂದಿ ಅಸು ನೀಗಿದ್ದಾರೆ. ಇದನ್ನೆಲ್ಲ ಗಮನಿಸಿದರೆ ದೇಶದಿಂದ ನಕ್ಸಲ್‌ ಹಿಂಸೆಯನ್ನು ಮೂಲೋಚ್ಛಾಟನೆ ಮಾಡುವ ಸಂಕಲ್ಪ ತೊಡಲು ಇದು ಸುಸಂದರ್ಭ.

ಯುಪಿಎ ಸರಕಾರದ ಅವಧಿಯಲ್ಲಿ ಮಹಾರಾಷ್ಟ್ರದ ಗಡಚಿರೋಳಿಯಲ್ಲಿ ನಕ್ಸಲರು ಅರೆಸೇನಾಪಡೆಯವರನ್ನು ಗುರಿಯಾಗಿಸಿ ದಾಳಿ ಮಾಡಿದಾಗ ನಕ್ಸಲ್‌ ನಿಗ್ರಹಕ್ಕೆ ಪ್ರತ್ಯೇಕ ಪರಿಣಿತ ಮಿಲಿಟರಿ ತುಕಡಿಯನ್ನು ನಿಯೋಜಿಸುವ ಘೋಷಣೆಯನ್ನು ಆಗ ಗೃಹ ಸಚಿವರಾಗಿದ್ದ ಪಿ.ಚಿದಂಬರಂ ಮಾಡಿದ್ದರು. ಆದರೆ ಅವರ ಆ ನಿರ್ಧಾರ ಕೇವಲ ಘೋಷಣೆಯಾಗಿ ಉಳಿಯಿತು. 2014ರಲ್ಲಿ ಅಧಿಕಾರಕ್ಕೆ ಬಂದ ಈಗಿನ ಎನ್‌ಡಿಎ ಸರಕಾರ ನಕ್ಸಲ್‌ ನಿಗ್ರಹ ವಿಚಾರದಲ್ಲಿ ಕಠಿಣ ಉಪಕ್ರಮ ತೆಗೆದುಕೊಂಡಿತು. ನಕ್ಸಲ್‌ಪೀಡಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮತ್ತು ಜನರ ಭದ್ರೆತೆಗೆ 'ನ್ಯಾಷನಲ್‌ ಪಾಲಿಸಿ ಮತ್ತು ಆ್ಯಕ್ಷನ್‌ ಪ್ಲಾನ್‌' ಅನ್ನು ಘೋಷಿಸಿತು. ಇದಕ್ಕೆ 11725 ಕೋಟಿ ರೂ. ಮೀಸಲಿರಿಸಿತು. ದೂರವಾಣಿ ಸಂಪರ್ಕವೇ ಇಲ್ಲದ ಕಡೆ 5000 ಮೊಬೈಲ್‌ ಟವರ್‌ ಅಳವಡಿಸಲಾಯಿತು. 358 ನಕ್ಸಲ್‌ ನಿಗ್ರಹಕ್ಕೆ 307 ವಿಶೇಷ ಪೊಲೀಸ್‌ ಠಾಣೆ ತೆರೆಯಲಾಯಿತು. ದುರ್ಗಮ ಹಳ್ಳಿಗಳಲ್ಲಿ 358 ಬ್ಯಾಂಕ್‌ ಶಾಖೆಗಳು ಆರಂಭಗೊಂಡವು; 758 ಎಟಿಎಂ ಸ್ಥಾಪಿಸಲಾಯಿತು. 1789 ಪೋಸ್ಟ್‌ ಆಫೀಸುಗಳನ್ನು ಆರಂಭಿಸಲಾಯಿತು. 100ಕ್ಕೂ ಹೆಚ್ಚು ಏಕೋಪಾಧ್ಯಾಯ ಶಾಲೆಗಳನ್ನು, ಗ್ರಾಮ ಆರೋಗ್ಯ ಪ್ರಕಲ್ಪಗಳನ್ನು ತೆರೆಯಲಾಯಿತು. ನಕ್ಸಲ್‌ ಪೀಡಿತ ದುರ್ಗಮ ಪ್ರದೇಶಗಳೆಂದು ಗುರುತಿಸಿರುವ 5312 ಕಿ.ಮೀ ರಸ್ತೆಗಳ ಪೈಕಿ 1391 ಕಿ.ಮೀ ಸರ್ವಋುತು ರಸ್ತೆ ನಿರ್ಮಾಣ ಮಾಡಲಾಯಿತು. ಇದೆಲ್ಲದರ ಪರಿಣಾಮ ಕೇವಲ ಮೂರು ವರ್ಷಗಳಲ್ಲಿ ದೇಶದಲ್ಲಿ ನಕ್ಸಲ್‌ ಪೀಡಿತ 68 ಜಿಲ್ಲೆಗಳ ಸಂಖ್ಯೆ 35ಕ್ಕೆ ಇಳಿಯಿತು. ಹಿಂದಿನ ದಿನಮಾನಕ್ಕೆ ಹೋಲಿಸಿದರೆ ಇತ್ತೀಚಿನ ಮೂರು ವರ್ಷಗಳಲ್ಲಿ ನಕ್ಸಲ್‌ ಚಟುವಟಿಕೆ ಪ್ರಮಾಣ ಶೇ.25ಕ್ಕೆ ಕುಸಿತವಾಗಿದೆ.

ಅಭಿವೃದ್ಧಿಯ ದೃಷ್ಟಿಯಿಂದ, ಸಾಮಾಜಿಕ ಆರ್ಥಿಕ ತಾರತಮ್ಯದ ದೃಷ್ಟಿಯಿಂದ ಭಾರತದಲ್ಲಿ ಕೆಲ ನ್ಯೂನತೆಗಳಿರಬಹುದು. ಆದರೆ ಬಂದೂಕು, ಬಾಂಬುಗಳನ್ನು ಹಿಡಿದು ನ್ಯಾಯ ಕೇಳುವ ಪರಿಸ್ಥಿತಿ ಖಂಡಿತವಾಗಿಯೂ ಇಲ್ಲ. ಹೀಗಾಗಿ ನಕ್ಸಲ್‌ವಾದಿಗಳ ವಿಷಯದಲ್ಲಿ ಶೂನ್ಯ ಸಹಾನುಭೂತಿ ತಾಳಿದರೆ, ಹಿಂಸೆ, ಕಾನೂನುಬಾಹೀರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಏಕಕಂಠದ ಧ್ವನಿ ಮೊಳಗಿಸಿದರೆ ಅಳಿದುಳಿದ ನಕ್ಸಲ್‌ ಪಿಡುಗನ್ನು ತೊಡೆದುಹಾಕುವುದು ಅಸಾಧ್ಯದ ಮಾತಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ