ಆ್ಯಪ್ನಗರ

ತಪ್ಪಿದ ಮಾತಿಗೆ ದಂಡ ಸಂದಾಯ

ಘನತೆಗೆ ತಕ್ಕುದಲ್ಲದ ಮಾತನಾಡಿದ್ದಕ್ಕಾಗಿ ಕ್ರಿಕೆಟಿಗರಾದ ಹಾರ್ದಿಕ್‌ ಪಾಂಡ್ಯ, ಕೆ.ಎಲ್‌. ರಾಹುಲ್‌ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

Vijaya Karnataka 11 Jan 2019, 5:00 am
ಘನತೆಗೆ ತಕ್ಕುದಲ್ಲದ ಮಾತನಾಡಿದ್ದಕ್ಕಾಗಿ ಕ್ರಿಕೆಟಿಗರಾದ ಹಾರ್ದಿಕ್‌ ಪಾಂಡ್ಯ, ಕೆ.ಎಲ್‌. ರಾಹುಲ್‌ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್‌ ಜೋಹರ್‌ ನಡೆಸಿಕೊಡುವ ಟಿವಿ ರಿಯಾಲಿಟಿ ಶೋ ಒಂದರಲ್ಲಿ ಪಾಲ್ಗೊಂಡಿದ್ದ ಹಾರ್ದಿಕ್‌ ಮತ್ತು ರಾಹುಲ್‌ ಮಹಿಳೆಯರ ಕುರಿತು ಹಗುರವಾಗಿ ಮಾತನಾಡಿದ್ದು ಇದೀಗ ಗಂಭೀರ ಸ್ವರೂಪಕ್ಕೆ ತಿರುಗಿದೆ. ಹೀಗಾಗಿ ಪಾಂಡ್ಯ ಜತೆಗೆ ಟಿವಿ ಶೋನಲ್ಲಿ ಪಾಲ್ಗೊಂಡಿದ್ದ ಕೆ.ಎಲ್‌. ರಾಹುಲ್‌ ಸೇರಿ ಇಬ್ಬರಿಗೂ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದ ಬಿಸಿಸಿಐಯ ಆಡಳಿತ ಮಂಡಳಿ ಇದೀಗ ಇಬ್ಬರೂ ಆಟಗಾರರು ಎರಡು ಟೆಸ್ಟ್‌ನಲ್ಲಿ ಆಡುವುದನ್ನು ನಿಷೇಧಿಸುವ ಕಠಿಣ ಕ್ರಮಕ್ಕೆ ಮುಂದಾಗಿದೆ. ಇಲ್ಲಿ ಒಂದು ಸೂಕ್ಷ್ಮವನ್ನು ಗಮನಿಸಬೇಕು. ಸಣ್ಣವರು ತಪ್ಪು ಮಾತನಾಡಿದರೆ ಅದರ ನಕಾರಾತ್ಮಕ ಪರಿಣಾಮ ಕಡಿಮೆ. ಆದರೆ ಉನ್ನತ ಸ್ಥಾನದಲ್ಲಿರುವವರು, ಸಿನಿಮಾ, ಕ್ರಿಕೆಟ್‌ ಸೆಲೆಬ್ರಿಟಿಗಳು ತಪ್ಪು ಮಾಡಿದರೆ ಅದರ ಪರಿಣಾಮ ವ್ಯಾಪಕ. ವಿವಾದಕ್ಕೆ ಗುರಿಯಾಗಿರುವ ಕ್ರಿಕೆಟಿಗರು ಜನಪ್ರಿಯತೆಯ ಉತ್ತುಂಗದಲ್ಲಿರುವವರು. ಜನಪ್ರಿಯ ವ್ಯಕ್ತಿಗಳ ಮಾತು ಮತ್ತು ಕೃತಿಯನ್ನು ಲಕ್ಷಾಂತರ ಅಭಿಮಾನಿಗಳು ಅನುಸರಿಸುವ, ಅದೇ ಆದರ್ಶ ಎಂದು ಭಾವಿಸುವ ಅಪಾಯವಿರುತ್ತದೆ. ಆ ಹಿನ್ನೆಲೆಯಲ್ಲಿ ಕ್ರಿಕೆಟ್‌ ಮಂಡಳಿ ಯಾವುದೇ ಮುಲಾಜಿಗೆ ಒಳಗಾಗದೆ ಇವರ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗುವ ಮೂಲಕ ಕ್ರಿಕೆಟ್‌ ಮಂಡಳಿ ಜವಾಬ್ದಾರಿ ಮೆರೆದಿದೆ. ತನ್ನ ಘನತೆಯನ್ನು ಮತ್ತಷ್ಟು ಎತ್ತರಿಸಿಕೊಂಡಿದೆ. ಎಂತಹ ದೊಡ್ಡ ವ್ಯಕ್ತಿಯೇ ಇರಲಿ, ತಪ್ಪು ಮಾಡಿದಾಗ ಕಪ್ಪ ಕಟ್ಟುವುದು ಕಡ್ಡಾಯ ಎಂಬ ಆದರ್ಶದ ಸಂದೇಶವನ್ನೂ ಕ್ರಿಕೆಟ್‌ ಮಂಡಳಿ ರವಾನಿಸಿದೆ.
Vijaya Karnataka Web rahul-gandhi


ಹಾಗೆಯೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಕುರಿತು ಆಡಿದ ಮಾತು ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ರಾಜಸ್ಥಾನದ ರಾರ‍ಯಲಿಯೊಂದರಲ್ಲಿ ಭಾಷಣ ಮಾಡುವ ವೇಳೆ ರಫೇಲ್‌ ಯುದ್ಧವಿಮಾನ ಖರೀದಿ ಒಪ್ಪಂದದ ವಿಚಾರದಲ್ಲಿ ಪ್ರಧಾನಿಯನ್ನು ಟೀಕಿಸುವ ಭರದಲ್ಲಿ 'ಪ್ರಧಾನಿ ನರೇಂದ್ರ ಮೋದಿ ಓರ್ವ ಮಹಿಳೆಯ ಹಿಂದೆ ಅಡಗಿಕೊಂಡಿದ್ದಾರೆ' ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿರುವ ಅಂಶ. ರಕ್ಷಣಾ ಒಪ್ಪಂದದ ಕುರಿತು ರಾಹುಲ್‌ ಹೊಂದಿರುವ ಆಕ್ಷೇಪದ ವಿಚಾರವೇ ಬೇರೆ. ಆದರೆ ದೇಶದ ರಕ್ಷಣಾ ಸಚಿವರನ್ನು ಓರ್ವ ಯಃಕಶ್ಚಿತ್‌ ಮಹಿಳೆ ಎಂದು ಜರಿದಿದ್ದು ಮತ್ತು ದೇಶದ ಪ್ರಧಾನಿ ಮಹಿಳೆಯ ಹಿಂದೆ ಅಡಗಿದ್ದಾರೆ ಎಂದುದು ಸಾರ್ವಜನಿಕರ ಕಣ್ಣಲ್ಲಿ ಒಳ್ಳೆಯ ಪದಪ್ರಯೋಗವಲ್ಲ ಎಂಬುದು ಒಂದೆಡೆಯಾದರೆ, ಕಾಂಗ್ರೆಸ್‌ನಂತಹ ಹಿರಿಯ ರಾಜಕೀಯ ಪಕ್ಷದ ಅಧ್ಯಕ್ಷರ ಸ್ಥಾನಕ್ಕೆ ಶೋಭೆ ತರುವಂಥ ಮಾತಲ್ಲ ಎಂಬುದು ಮತ್ತೊಂದು. ದೇಶದ ಪ್ರಧಾನಿ, ರಕ್ಷಣಾ ಸಚಿವ ಸ್ಥಾನ ಇವೆಲ್ಲ ವ್ಯಕ್ತಿಯನ್ನು ಮೀರಿ ಘನತೆ ಹೊಂದಿರುವ ಹುದ್ದೆಗಳು. ಆ ಹುದ್ದೆಯಲ್ಲಿ ಇರುವ ವ್ಯಕ್ತಿ ಮುಖ್ಯವಲ್ಲ, ಆ ಸ್ಥಾನದ ಘನತೆ ಮುಖ್ಯ. ಅದರಲ್ಲೂ ರಾಹುಲ್‌ ಗಾಂಧಿ ಆ ಮಾತನ್ನು ಆಡಿರುವುದು ವಿವಾದದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈಗಿನ ಆಧುನಿಕ ಕಾಲದಲ್ಲೂ ಲಿಂಗತಾರತಮ್ಯ ಇನ್ನೂ ನಮ್ಮ ಮನಸ್ಸಿನಲ್ಲಿ ಎಷ್ಟು ಆಳಕ್ಕಿಳಿದಿದೆ ಎಂಬುದನ್ನೂ ಈ ಮಾತು ತೋರಿಸುತ್ತದೆ. ಇಂತಹ ಮಾತು ರಾಹುಲ್‌ ಗಾಂಧಿ ಅಂಥವರಿಗೆ ಹೇಗೆ ಶೋಭೆ ತರಲು ಸಾಧ್ಯ? ಕ್ರಿಕೆಟಿಗರು ತಪ್ಪು ಮಾಡಿದಾಗ ದಂಡಿಸಲು ಕ್ರಿಕೆಟ್‌ ಮಂಡಳಿಯಿದೆ. ರಾಹುಲ್‌ ಗಾಂಧಿಯವರನ್ನು ದಂಡಿಸುವವರು ಯಾರು ಎಂಬುದು ಇಲ್ಲಿ ಉದ್ಭವವಾಗುವ ಮತ್ತೊಂದು ಪ್ರಶ್ನೆ!

ಇಲ್ಲಿ ಕ್ರಿಕೆಟಿಗರು, ರಾಹುಲ್‌ ಗಾಂಧಿ ಆಡಿರುವ ಮಾತು, ವಿಧಿಸಿರುವ ದಂಡನೆ, ವ್ಯಕ್ತವಾಗುತ್ತಿರುವ ಟೀಕೆ ಇವೆಲ್ಲ ನಿಮಿತ್ತ ಮಾತ್ರ. ಆದರೆ ಅವುಗಳಿಂದ ಹೊರಡಬೇಕಿರುವ ಸಂದೇಶ ಬಹಳ ದೊಡ್ಡದು. ದೊಡ್ಡವರು ಎಚ್ಚರಿಕೆಯಿಂದ ಹೆಜ್ಜೆ ಇಟ್ಟಷ್ಟೂ ಆರೋಗ್ಯಕರ ಸಮಾಜಕ್ಕೆ ಪೂರಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ