ಆ್ಯಪ್ನಗರ

ದಿಟ್ಟ ಪ್ರತ್ಯುತ್ತರವೊಂದೇ ಪರಿಹಾರ

ಪಾಕಿಸ್ತಾನ ತನ್ನ ಹೀನ ಕೃತ್ಯಗಳಿಗೆ ಕಂದಾಯ ತೆರಲೇಬೇಕು

Vijaya Karnataka Web 22 Sep 2018, 5:00 am
ಎರಡು ದಿನಗಳ ಹಿಂದೆ ಪಾಕಿಸ್ತಾನದ ಭದ್ರತಾ ಪಡೆ ಯೋಧರು ದೇಶದ ಗಡಿಯಲ್ಲಿ ಭಾರತದ ಗಡಿ ಭದ್ರತಾ ಪಡೆ ಯೋಧರೊಬ್ಬರ ಕತ್ತು ಸೀಳಿ ಕೊಂದ ಪ್ರಕರಣದ ಬರ್ಬರತೆ ಮರೆಯುವ ಮೊದಲೇ, ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಪೊಲೀಸರನ್ನು ಅವರ ಮನೆಯಿಂದ ಅಪಹರಿಸಿ ಹತ್ಯೆ ಮಾಡಲಾಗಿದೆ. ಪಾಕಿಸ್ತಾನ ಸೈನ್ಯ ಹಾಗೂ ಪಾಕ್‌ ಪ್ರೇರಿತ ಉಗ್ರರ ಈ ಪೈಶಾಚಿಕ ಕೃತ್ಯವನ್ನು ವಿರೋಧಿಸಿ, ಮಾತುಕತೆಗಾಗಿ ನಿಗದಿಪಡಿಸಲಾಗಿದ್ದ ವಿದೇಶಾಂಗ ಸಚಿವರ ಭೇಟಿಯನ್ನು ಭಾರತ ರದ್ದುಗೊಳಿಸಿದೆ. ಇದೇ ವೇಳೆಗೆ ಪಾಕಿಸ್ತಾನ, ಕಾಶ್ಮೀರದಲ್ಲಿ ಕಳೆದ ವರ್ಷ ಹತನಾಗಿದ್ದ ಭಯೋತ್ಪಾದಕ ಬುರ್ಹಾನ್‌ ವಾನಿಯನ್ನು ವೈಭವೀಕರಿಸುವ ಅಂಚೆ ಸ್ಟಾಂಪನ್ನೂ ಹೊರತಂದಿದ್ದು, ಇದಕ್ಕೂ ಭಾರತ ತನ್ನ ಪ್ರತಿರೋಧ ದಾಖಲಿಸಿದೆ.
Vijaya Karnataka Web edit


ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರಕಾರ ಆಡಳಿತಕ್ಕೆ ಬಂದ ಬಳಿಕ ಎದುರಿಸಿದ ಹಲವಾರು ಅಗ್ನಿಪರೀಕ್ಷೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದನೆಯೂ ಒಂದು. ಇಲ್ಲಿನ ಉಗ್ರವಾದವನ್ನು ಮಟ್ಟಹಾಕಲು ಮೋದಿ ಸರಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತ ಬಂದಿದೆ; ಹಾಗೆಯೇ ಪಾಕಿಸ್ತಾನದ ಜೊತೆಗೆ ಅರ್ಥಪೂರ್ಣವಾದ ಶಾಂತಿಸಂವಾದ ನಡೆಸಲೂ ಪ್ರಯತ್ನಗಳನ್ನು ಮಾಡಿದೆ. 2015ರಲ್ಲಿ ಅಲ್ಲಿನ ಪ್ರಧಾನಿ ನವಾಜ್‌ ಶರೀಫ್‌ ಆಹ್ವಾನ ಮನ್ನಿಸಿ ಮೋದಿಯವರು ಪಾಕ್‌ಗೆ ದಿಢೀರ್‌ ಭೇಟಿ ನೀಡಿದ್ದರು. ಪಾಕ್‌ ಜೊತೆಗೆ ಆತ್ಮೀಯ ಸಂಬಂಧ ಕುದುರಿಕೊಳ್ಳುವ ಸೂಚನೆಗಳು ಕಂಡಿದ್ದವು. ಆದರೆ ಪಾಕಿಸ್ತಾನ, ಭಾರತದ ಸ್ನೇಹಹಸ್ತವನ್ನು ನಿರಾಕರಿಸಿ, ತನ್ನ ಕೈಯ್ಯಾರೆ ಆ ಸಾಧ್ಯತೆಗಳನ್ನು ಹೊಸಕಿ ಹಾಕುತ್ತಿದೆ.

2009ರಲ್ಲಿ ಮುಂಬಯಿ ಮೇಲೆ ಉಗ್ರ ದಾಳಿಗಳು ನಡೆದಾಗ, ಆಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮೋದಿಯವರು ''ಕೇಂದ್ರ ಸರಕಾರ ಪಾಕಿಸ್ತಾನಕ್ಕೆ ಪ್ರೇಮಪತ್ರಗಳನ್ನು ಬರೆಯುವುದನ್ನು ನಿಲ್ಲಿಸಬೇಕು,'' ಎಂದು ಟೀಕಿಸಿದ್ದರು. ಈ ಮಾತನ್ನು ಆಚರಿಸಿ ತೋರಿಸುವ ಅವಕಾಶ ಈಗ ಮೋದಿಯವರಿಗೇ ಒದಗಿದೆ. ಹೌದು, ಇದು ಪ್ರೇಮಪತ್ರದ ಕಾಲವಲ್ಲ; ದಿಟ್ಟವಾದ ಒಂದು ಹೆಜ್ಜೆಯನ್ನು ಕೈಗೊಳ್ಳಬೇಕಾಗಿರುವ ಸಂಕಟಮಯ ಸಮಯ. ಜಮ್ಮು- ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರವಾದಕ್ಕೆ ಪಾಕಿಸ್ತಾನದ ನೆರವು ಇದೆ ಎನ್ನುವುದು ಸಾಬೀತಾದ ಸತ್ಯ. ಇದನ್ನು ಸೌಮ್ಯವಾದ ವಿಧಾನಗಳಿಂದ ಮಣಿಸಲು ಬೇಕಾದ ಪ್ರಯತ್ನಗಳನ್ನು ಕೇಂದ್ರ ಸರಕಾರ ಮಾಡಿದೆ. ಬಿಜೆಪಿ ಕಾಶ್ಮೀರದ ಪಿಡಿಪಿ ಜತೆಗೂಡಿ ಸರಕಾರ ರಚಿಸಿ, ರಾಜ್ಯದ ಹಿತವನ್ನು ಕಾಯುವ ಪ್ರಯತ್ನ ಮಾಡಿತು. ಆದರೆ ಆ ಕನಸಿಗೆ ಪೂರಕವಾಗಿ ಪಿಡಿಪಿ ಸ್ಪಂದಿಸುತ್ತಿಲ್ಲ ಎಂದು ದೂರಿ ಮೈತ್ರಿಗೆ ಎಳ್ಳುನೀರು ಬಿಟ್ಟು ರಾಷ್ಟ್ರಪತಿ ಆಡಳಿತ ವಿಧಿಸಿತು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಕಾಶ್ಮೀರದಲ್ಲಿ 25ಕ್ಕೂ ಅಧಿಕ ಭಯೋತ್ಪಾದಕ ಸಂಘಟನೆಗಳ ಪ್ರಮುಖರನ್ನು ಪೊಲೀಸರು ಹಾಗೂ ಭಾರತೀಯ ಸೇನಾಪಡೆಗಳು ಮುಗಿಸಿವೆ. ಪಾಕಿಸ್ತಾನದ ನೆಲದಿಂದ ಕಾರಾರ‍ಯಚರಿಸುತ್ತಿದ್ದ ಉಗ್ರರ ನೆಲೆಗಳನ್ನು ಸರ್ಜಿಕಲ್‌ ದಾಳಿ ಮೂಲಕ ನಾಶಗೊಳಿಸಲಾಗಿದೆ. ಆದರೆ ಉಗ್ರರು ರಕ್ತಬೀಜಾಸುರರಂತೆ ಮತ್ತೆ ಚಿಗುರುತ್ತಲೇ ಇದ್ದಾರೆ.

ಪ್ರಸ್ತುತದ ಸನ್ನಿವೇಶ ನೋಡಿದರೆ, ಭಾರತದ ಜೊತೆ ಶಾಂತಿ ಮಾತುಕತೆಗಳನ್ನು ನಡೆಸುವ ಯಾವ ಆಶಯವೂ ಪಾಕ್‌ಗೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಸಚಿವ ಮಟ್ಟದ ಮಾತುಕತೆಯನ್ನು ಭಾರತ ಬಹಿಷ್ಕರಿಸಿರುವುದು ಸ್ವಾಗತಾರ್ಹ. ಉಗ್ರರ ಹೀನಕೃತ್ಯಕ್ಕೆ ಪ್ರತ್ಯುತ್ತರವಾಗಿ, ಐವರು ಭಯೋತ್ಪಾದಕರನ್ನು ನಮ್ಮ ಸೈನಿಕರು ಹೊಡೆದುರುಳಿಸಿದ್ದಾರೆ. ಹೀಗೆ ಸೇನಾ ಕಾರಾರ‍ಯಚರಣೆ ಹಾಗೂ ರಾಜಾತಾಂತ್ರಿಕತೆ- ಈ ಎರಡೂ ವಿಧಾನಗಳಲ್ಲೂ ಭಾರತ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ. ಆದರೆ ಇದಷ್ಟೇ ಸಾಲದು. ಭಾರತೀಯ ಸೈನಿಕರ ಬಲಿದಾನಕ್ಕೆ ಅರ್ಥ ಬರಬೇಕಾದರೆ, ತಿರುಗೇಟನ್ನು ಇನ್ನೊಂದು ಹಂತಕ್ಕೆ ಒಯ್ಯುವುದು ಅನಿವಾರ್ಯ. ಪ್ರಧಾನಿ ಮೋದಿ ಅವರ ಸರಕಾರದಿಂದ ಜನತೆ ದಿಟ್ಟತನದ ಕಾರ್ಯಾಚರಣೆಯನ್ನು ನಿರೀಕ್ಷಿಸುತ್ತಾರೆ. ನಿರಂತರ ಅಸ್ಥಿರತೆಯ ಕುದಿಯ ಮೇಲೆ ಕುಳಿತಿರುವ ಜಮ್ಮು- ಕಾಶ್ಮೀರದ ಜನತೆಗೂ, ಕಾಶ್ಮೀರವನ್ನು ಭಾರತ ಅವಿಭಾಜ್ಯ ಅಂಗವೆಂದು ಯಾವತ್ತಿನಿಂದಲೂ ತಿಳಿದಿರುವ ದೇಶದ ಜನತೆಯ ಭಾವನೆಗಳಿಗೆ ನ್ಯಾಯ ಸಲ್ಲಬೇಕಾದರೆ, ಉಗ್ರರ ಮಟ್ಟಹಾಕುವಿಕೆ ಹಾಗೂ ಪಾಕಿಸ್ತಾನಕ್ಕೆ ಮರೆಯಲಾರದ ಪಾಠ ಕಲಿಸುವುದನ್ನು ಆದ್ಯತೆಯಾಗಿ ಕೇಂದ್ರ ಸರಕಾರ ಪರಿಗಣಿಸಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ