ಆ್ಯಪ್ನಗರ

ಮತದಾರರಿಗೆ ಕಾಂಗ್ರೆಸ್‌ ’ಪ್ರಿಯ’ವಾಗುವುದೇ?

ನಾಯಕತ್ವ ಎನ್ನುವುದು ಹೇರುವುದೂ ಅಲ್ಲ; ಉದ್ಭವಿಸುವುದೂ ಅಲ್ಲ; ಅದು ಹೋರಾಟ, ಚಿಂತನಾಶೀಲತೆ, ಜನಪರ ಕಾರ್ಯಕ್ರಮಗಳಿಂದ ರೂಪುಗೊಳ್ಳುವಂಥದ್ದು. ಈ ಸತ್ಯವನ್ನು ಅರಿಯದ ಯಾವ ಪಕ್ಷವೂ ಗೆಲುವಿನ ದಡ ಮುಟ್ಟುವುದಿಲ್ಲ.

Vijaya Karnataka 24 Jan 2019, 5:00 am
ಬಿಜೆಪಿಯನ್ನು ಮಣಿಸಲು ಮಹಾಮೈತ್ರಿಕೂಟ ರಚನೆಗೆ ಯತ್ನಿಸಿದ ಕಾಂಗ್ರೆಸ್‌ ಅದರಲ್ಲಿ ನಿರೀಕ್ಷಿತ ಯಶಸ್ಸು ಕಾಣದೆ ಇದೀಗ ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸಲು ಮುಂದಾಗಿದೆ. ಚುನಾವಣೆ ರಾಜಕಾರಣದಲ್ಲಿ 'ಅತಿಥಿ' ಯಂತಿದ್ದ ಪ್ರಿಯಾಂಕಾ ವಾದ್ರಾ ಅವರಿಗೆ ಉತ್ತರಪ್ರದೇಶದ ಪೂರ್ವ ವಲಯದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿ ಅವರನ್ನು ಸಕ್ರಿಯ ರಾಜಕೀಯಕ್ಕೆ ಎಳೆದು ತಂದಿದೆ. 80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಿಕ್ಕಿದ್ದು ಕೇವಲ 2 ಸ್ಥಾನಮಾತ್ರ. ಪ್ರಿಯಾಂಕಾ ಅವರು 40 ಲೋಕಸಭಾ ಸ್ಥಾನಗಳ ಉಸ್ತುವಾರಿ ವಹಿಸಲಿದ್ದಾರೆ. ಇಂದಿರಾ ಗಾಂಧಿ ಅವರ 2.0 ರಂತೆ ಕಾಣುವ ಗಾಂಧಿ ವಂಶದ ಈ ಕುಡಿಯಿಂದ ಕಾಂಗ್ರೆಸ್‌ಗೆ ಏನಿಲ್ಲವೆಂದರೂ 30 ಸ್ಥಾನಗಳು ಗಟ್ಟಿ ಎಂದು ಆ ಪಕ್ಷದ ನಾಯಕರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. 30 ವರ್ಷಗಳ ಹಿಂದೆ ಉತ್ತರಪ್ರದೇಶ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು ನಿಜ. ಆನಂತರ ಈ ರಾಜ್ಯದ 'ರಾಜಕೀಯ ಭೂಗೋಳ' ಬದಲಾಗಿದೆ. ಸಾಮಾಜಿಕ ಸಮೀಕರಣಗಳು ಗುರುತು ಸಿಗದಷ್ಟು ರೂಪಾಂತರಗೊಂಡಿದೆ. ಪ್ರಸ್ತುತ ಕಳೆದ ಬಾರಿ 71 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಒಂದೆಡೆಯಾದರೆ ತಮ್ಮ ಹಗೆ ಮರೆತು ಎಸ್‌ಪಿ ಮತ್ತು ಬಿಎಸ್‌ಪಿ ದೋಸ್ತಿ ಮಾಡಿಕೊಂಡಿವೆ. ಈ ಶಕ್ತಿಗಳ ನಡುವೆ ಕಾಂಗ್ರೆಸ್‌ ತುಂಬ ಬಲಹೀನವಾಗಿ ಕಾಣಿಸುತ್ತಿದೆ. ಈ ಲೆಕ್ಕಾಚಾರವನ್ನು ಪ್ರಿಯಾಂಕಾ ಬದಲಿಸಬಲ್ಲರು ಎಂದು ಕಾಂಗ್ರೆಸ್‌ ದೃಢವಾಗಿ ನಂಬಿದೆ.
Vijaya Karnataka Web priyanka vadra

ಹಾಗೆ ನೋಡಿದರೆ ಗಾಂಧಿ ಕುಟುಂಬದ ಬಗ್ಗೆ ಮತದಾರರು ಭ್ರಮ ನಿರಸನಗೊಂಡಿದ್ದಾರೆ.ರಾಯ್‌ಬರೇಲಿ ಮತ್ತು ಅಮೇಠಿ ಕ್ಷೇತ್ರಗಳಲ್ಲಿ ಸೋನಿಯಾ ಮತ್ತು ರಾಹುಲ್‌ ಜನಪ್ರಿಯತೆ ಕುಗ್ಗುತ್ತಿದೆ ಎಂಬುದಕ್ಕೆ ಇವರು ಗಳಿಸಿರುವ ಮತಪ್ರಮಾಣವನ್ನು ನೋಡಿದರೆ ಗೊತ್ತಾಗುತ್ತದೆ. ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಹತ್ತಾರು ಕಡೆ ಪ್ರಚಾರ ಸಭೆಗಳನ್ನು ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪರಾಭವಗೊಂಡ ನಂತರ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಪುನರುಜ್ಜೀವನಗೊಳ್ಳಲು ಯಾವುದಾದರೂ ಹೊಸ ಕಾರ್ಯಸೂಚಿಯನ್ನು ಹೊಂದಿತ್ತೇ ಎಂಬುದಕ್ಕೆ ಕಿಂಚಿತ್ತೂ ನಿದರ್ಶನವಿಲ್ಲ. ಚುನಾವಣೆ ಬರುವ ತನಕ ಜಡವಾಗಿದ್ದು ಈಗ ಏಕಾಏಕಿ ಭಾರಿ ಚುರುಕುತನ ಪ್ರದರ್ಶಿಸುವುದರಿಂದ ಮತದಾರರಿಗೆ ತಲುಪುವ ಘನ ಸಂದೇಶವಾದರೂ ಏನು? ಪ್ರಿಯಾಂಕಾ ಜಾದೂ ಮಾಡಲು ಸಾಧ್ಯವೇ? ವಾಸ್ತವವಾಗಿ ಅವರಿಗೆ ಇರುವ ಶಕ್ತಿಯಾದರೂ ಏನು ಎನ್ನುವ ಪ್ರಶ್ನೆಗಳು ಮೂಡುತ್ತವೆ. ರಾಹುಲ್‌ಗಿಂತ ಜನರ ಜತೆ ಪ್ರಿಯಾಂಕಾ ಹೆಚ್ಚು ಬೆರೆಯುತ್ತಾರೆ ಎಂಬುದು ನಿಜ. ಪರಿಣಾಮಕಾರಿ ಸಂವಹನವನ್ನೂ ಮಾಡಬಲ್ಲರು. ನಾಯಕತ್ವ ಗುಣದಲ್ಲಿ ರಾಹುಲ್‌ಗಿಂತ ಮುಂದೆ ಇದ್ದಾರೆ ಎನ್ನುವುದನ್ನು ಅಲ್ಲಗಳೆಯಲಾಗದು. ಆದರೆ ಪ್ರಿಯಾಂಕಾಗೆ ಇಂಥ ಅನುಕೂಲಗಳ ನಡುವೆ ಕೆಲವೊಂದು ತೊಡಕುಗಳೂ ಇವೆ. ಕುಟುಂಬ ರಾಜಕಾರಣವನ್ನು ವಿರೋಧಿಸುವ ದೊಡ್ಡ ಜನವರ್ಗವೇ ಇದೆ. ಯಾವುದೇ ಜನಪರ ಹೋರಾಟದ ಹಿನ್ನೆಲೆ ಇಲ್ಲದೆ ವಂಶದ ಬಲದಿಂದ ದಿಢೀರ್‌ ಉದ್ಭವಿಸುವ ಇಂಥ ರಾಜಕಾರಣಿಗಳ ಬಗ್ಗೆ ಜನರು ಉತ್ಸುಕವಾಗಿಲ್ಲ. ಇದಲ್ಲದೆ ಪ್ರಿಯಾಂಕಾ ಅವರ ಪತಿ ರಾಬರ್ಟ್‌ ವಾದ್ರಾ ಹಲವು ಹಗರಣಗಳಿಗೆ ಸಿಲುಕಿಕೊಂಡಿದ್ದಾರೆ. ಇದು ಹಲವು ಕೋರ್ಟ್‌ಗಳಲ್ಲಿ ವಿಚಾರಣೆ ಹಂತದಲ್ಲಿದೆ. ಆದರೆ ಜನತೆ ಈ ಆರೋಪಗಳ ಹಿನ್ನೆಲೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಆ ವ್ಯಕ್ತಿಯನ್ನು ಚಿತ್ರಿಸಿಕೊಂಡಿರುತ್ತಾರೆ. ಇದನ್ನು ಬದಲಿಸುವ ಸವಾಲು ಪ್ರಿಯಾಂಕಾ ಅವರ ಮೇಲಿದೆ. ಇದೇನು ಕಡಿಮೆ ಸವಾಲು ಅಲ್ಲ. ನಾಯಕತ್ವ ಎನ್ನುವುದು ಹೇರುವುದೂ ಅಲ್ಲ; ಉದ್ಭವಿಸುವುದೂ ಅಲ್ಲ; ಅದು ಹೋರಾಟ, ಚಿಂತನಾಶೀಲತೆ, ಜನಪರ ಕಾರ್ಯಕ್ರಮಗಳಿಂದ ರೂಪುಗೊಳ್ಳುವಂಥದ್ದು. ಈ ಸತ್ಯವನ್ನು ಅರಿಯದ ಯಾವ ಪಕ್ಷವೂ ಗೆಲುವಿನ ದಡ ಮುಟ್ಟುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ