ಆ್ಯಪ್ನಗರ

ಕುಡಿಯುವ ನೀರಿಗೆ ಕೂಗು

ಬೇಸಿಗೆಯ ದುರ್ಭರ ದಿನಗಳು ಮುಂದಿವೆ

Vijaya Karnataka Web 5 Mar 2019, 5:00 am
ಉರಿಬೇಸಿಗೆ ಈಗಾಗಲೇ ಆರಂಭವಾಗಿದ್ದು, ತಾಪಮಾನ 40 ಡಿಗ್ರಿಯ ಸನಿಹ ತಲುಪಿದೆ. ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಬಿಸಿಲಿನ ಝಳದಿಂದಾಗಿ ಹೊತ್ತೇರುವ ಮೊದಲೇ ಮನೆ ಅಥವಾ ಕಚೇರಿ ಸೇರಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಈಗಲೇ ಹೀಗಿದ್ದರೆ, ಬೇಸಿಗೆಯ ಇನ್ನು ಮೂರು ತಿಂಗಳು ಹೇಗಿರಬಹುದು ಎಂಬುದನ್ನು ಊಹಿಸಬಹುದು. ಸತತ ಮೂರು ವರ್ಷಗಳಿಂದ ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಉತ್ತರ ಕರ್ನಾಟಕದಲ್ಲಿ ಈ ಸಲವೂ ಕುಡಿಯುವ ನೀರಿಗೆ ಸಮಸ್ಯೆ ತಲೆದೋರುವುದು ನಿಶ್ಚಿತ. ಕೃಷಿ ಹಾಗೂ ಕುಡಿಯುವುದಕ್ಕೆ ನೀರಿಲ್ಲದೆ ಹೋದಾಗ ಗುಳೆ ಸಮಸ್ಯೆ ಉಲ್ಬಣಿಸುತ್ತದೆ. ಉತ್ತರ ಭಾಗದ ಪರಿಸ್ಥಿತಿ ಹೀಗಾದರೆ, ರಾಜಧಾನಿ ಬೆಂಗಳೂರೇನೂ ಅದಕ್ಕಿಂತ ಭಿನ್ನವಾಗಿಲ್ಲ. ಹೊಸದಾಗಿ ಹುಟ್ಟಿಕೊಂಡಿರುವ ಬಡಾವಣೆಗಳಿಗೆ ಕಾವೇರಿ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ. ಕೆಲವೆಡೆ ಮೂರು, ನಾಲ್ಕು ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದ್ದು, ಹಲವಾರು ಬಡಾವಣೆಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ತರಿಸಬೇಕಾದ ಪರಿಸ್ಥಿತಿ ಇದೆ. ಇನ್ನು ಕೋಲಾರದಂಥ ಕೆಲವೆಡೆ ಅಂತರ್ಜಲವೇ ಲಭ್ಯವಿಲ್ಲ. ಬೆಂಗಳೂರಿನಲ್ಲಿ ಅನಧಿಕೃತ ಬೋರ್‌ವೆಲ್‌ಗಳ ಸಂಖ್ಯೆ ಹೆಚ್ಚುತ್ತಿದೆ; ಆದರೂ ನೂರಾರು ಅಡಿ ಕೊರೆಯುವ ಪರಿಸ್ಥಿತಿ ಇದೆ. ಲಭ್ಯವಿರುವ ಅಲ್ಪಸ್ವಲ್ಪ ನೀರಾದರೂ ಸರಿಯಾಗಿದೆಯೇ ಎಂದರೆ, ಅದೂ ಇಲ್ಲ. ಇತ್ತೀಚೆಗೆ ಕೇಂದ್ರ ಕುಡಿಯುವ ನೀರು ಮತ್ತು ಸ್ವಚ್ಛತಾ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಕುಡಿಯುವ ನೀರಿನಲ್ಲಿ ಅತಿ ಹೆಚ್ಚು ಫ್ಲೋರೈಡ್‌ ಅಂಶ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ನಾಲ್ಕನೇ ಸ್ಥಾನವಿದೆ. ಇದನ್ನು ಸೇವಿಸುವುದರಿಂದ ಫ್ಲೋರೋಸಿಸ್‌ ಮುಂತಾದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಈ ಎಲ್ಲವೂ ಮುಂಬರಲಿರುವ ದುರ್ಭರ ದಿನಗಳ ಕಡೆಗೆ ಹಾಗೂ ಕುಡಿಯುವ ನೀರಿನಂಥ ಮೂಲಸೌಕರ‍್ಯಗಳ ನಿಭಾವಣೆಯಲ್ಲಿ ನಮ್ಮ ಆಡಳಿತಗಳ ವೈಫಲ್ಯದ ಕಡೆಗೆ ಬೆಟ್ಟು ಮಾಡುತ್ತವೆ; ನಾವು ಈಗಲೇ ವಹಿಸಬೇಕಿರುವ ಮುಂಜಾಗರೂಕತೆ ಕ್ರಮಗಳ ಬಗ್ಗೆ ಮುನ್ಸೂಚನೆ ನೀಡುತ್ತವೆ.
Vijaya Karnataka Web edit


ಶುದ್ಧ ಕುಡಿಯುವ ನೀರಿನ ಕೊರತೆ ಪ್ರತಿವರ್ಷವೂ ರಾಜ್ಯವನ್ನು ಬೇಸಿಗೆಯಲ್ಲಿ ಕಾಡುವ ನಿರಂತರ ಸಮಸ್ಯೆಯಾಗಿದೆ. ಇದರ ಪರಿಹಾರಕ್ಕಾಗಿ ಶಾಶ್ವತ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾದುದು. ಬೆಳೆಯುತ್ತಲೇ ಇರುವ ಬೆಂಗಳೂರಿನಂಥ ದೈತ್ಯ ಜನಸಂಖ್ಯೆಯ ನಗರಕ್ಕೆ ನೀರು ಒದಗಿಸುವುದು ಕಷ್ಟಸಾಧ್ಯ; ಆದರೆ ನೀರಿನ ಲಭ್ಯತೆ, ಉಳಿತಾಯ, ಮಿತಬಳಕೆ ಮತ್ತು ಮರುಬಳಕೆಯ ಬಗ್ಗೆ ಎಚ್ಚರ ಮೂಡಿಸುವ ಕ್ರಮಗಳಾದರೂ ನಿರಂತರವಾಗಿ ನಡೆಯಬೇಕು. ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ದೊಡ್ಡ ಕಟ್ಟಡಗಳಿಗೆ ಮಳೆನೀರು ಸಂಗ್ರಹ ಕಡ್ಡಾಯವಾಗಿ ಜಾರಿಯಾದರೆ ಈ ಪ್ರಮಾಣದ ಕೊರತೆ ಕಾಡುವುದಿಲ್ಲ. ಅಂತರ್ಜಲವನ್ನು ಸಂರಕ್ಷಿಸುವ ನಿಟ್ಟಿನಿಂದ, ಬೋರ್‌ವೆಲ್‌ ಕೊರೆಯುವಿಕೆಯ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯ. ಕುಡಿಯುವ ನೀರು ಒದಗಿಸುವ ಕೆರೆ- ಬಾವಿಗಳಿಗೆ ಮಾಲಿನ್ಯಯುಕ್ತ ನೀರು ಸೇರದಂತೆ ನಿಗಾ ಇಡಬೇಕು. ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸುವ, ನೀರಿಂಗಿಸುವ ಕ್ರಮಗಳು ಹೆಚ್ಚುಹೆಚ್ಚಾಗಿ ನಡೆದು, ಇದರಲ್ಲಿ ಪ್ರತಿಯೊಬ್ಬ ಪ್ರಜೆಯೂ ಸ್ವಯಂಸ್ಫೂರ್ತಿಯಿಂದ ಪಾಲ್ಗೊಳ್ಳುವಂತಾಗಬೇಕು. ಇವೆಲ್ಲವೂ ಸ್ಥಳೀಯಾಡಳಿತ ಸಂಸ್ಥೆಗಳು, ಅಧಿಕಾರಿಗಳು ಹಾಗೂ ಜವಾಬ್ದಾರಿಯುತ ನಾಗರಿಕ ಸಕ್ರಿಯ ಭಾಗೀದಾರಿಕೆ ಇದ್ದಾಗ ಮಾತ್ರ ಸಾಧ್ಯ. ನದಿನೀರು ತಿರುಗಿಸುವಂಥ ಅಪ್ರಾಯೋಗಿಕ ಬೃಹತ್‌ ಯೋಜನೆಗಳ ಬದಲು ಹಲವಾರು ಪುಟ್ಟ ಪರ್ಯಾಯ ಕ್ರಮಗಳತ್ತ ಚಿಂತಿಸುವುದು ಸೂಕ್ತ. ವಾರ್ಷಿಕ 90 ಸೆಂ.ಮೀ.ಗಿಂತ ಹೆಚ್ಚು ಮಳೆಯಾಗದ ಇಸ್ರೇಲ್‌ ನೀರಿನ ಸದ್ಬಳಕೆಯಲ್ಲಿ ನಮಗೆ ಮಾದರಿಯಾಗಬಹುದು. ಅಲ್ಲಲ್ಲಿ ವೈಯಕ್ತಿಕ ಮಟ್ಟದಲ್ಲಿ ನೀರಿನ ಸದ್ಬಳಕೆ ಹಾಗೂ ಸ್ವಾವಲಂಬನೆಯ ಯಶಸ್ಸಿನ ಕತೆಗಳು ನಮ್ಮ ಕಿವಿಗೆ ಬೀಳುತ್ತವೆ; ಆದರೆ ಒಂದು ಸಾಮುದಾಯಿಕ ಸಂಘಟಿತ ಪ್ರಯತ್ನವಾಗಿ ಯಶಸ್ವಿಯಾದ ಉದಾಹರಣೆಗಳು ಕಡಿಮೆ. ಸರಕಾರಿ ಹಾಗೂ ಸಾಮುದಾಯಿಕ ಸಹಭಾಗಿತ್ವದಲ್ಲಿ ಇಂಥ ದೂರದರ್ಶಿ ಯೋಜನೆಗಳು ರೂಪುಗೊಂಡು ಚಾಲನೆಯಾಗಬೇಕು. ಆಗಲಷ್ಟೇ ನಮ್ಮ ನಾಡು ಕುಡಿಯುವ ನೀರಿನ ವಿಚಾರದಲ್ಲಿ ಸುಭಿಕ್ಷವಾಗಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ