ಆ್ಯಪ್ನಗರ

ಜೀವಜಲಕ್ಕೆ ಬೊಗಸೆಯೊಡ್ಡಿ

ದೇಶದಲ್ಲಿ ಕೆಲವೆಡೆ (ಕೊಡಗು, ಕೇರಳ) ಮಳೆಯಿಂದಾಗಿ ಉತ್ಪಾತಗಳು ಸಂಭವಿಸುತ್ತಿದ್ದರೆ, ಇನ್ನೊಂದೆಡೆ (ಉತ್ತರ ಕರ್ನಾಟಕ)ಯಲ್ಲಿ ಮಳೆಯ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದೆ.

Vijaya Karnataka 28 Aug 2018, 9:40 am
ದೇಶದಲ್ಲಿ ಕೆಲವೆಡೆ (ಕೊಡಗು, ಕೇರಳ) ಮಳೆಯಿಂದಾಗಿ ಉತ್ಪಾತಗಳು ಸಂಭವಿಸುತ್ತಿದ್ದರೆ, ಇನ್ನೊಂದೆಡೆ (ಉತ್ತರ ಕರ್ನಾಟಕ)ಯಲ್ಲಿ ಮಳೆಯ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದೆ. ಕರ್ನಾಟಕದ ದಕ್ಷಿಣ ಭಾಗ ಹಾಗೂ ಕೇರಳದಲ್ಲಿ ಅಣೆಕಟ್ಟುಗಳು ತುಂಬಿ ನೀರನ್ನು ಹೊರಬಿಡಲಾಗುತ್ತಿದ್ದರೆ, ಇನ್ನೊಂದೆಡೆ ನೀರಿಲ್ಲದೆ ಬರ ಪರಿಸ್ಥಿತಿ ತಲೆದೋರುವ ಆತಂಕ ಎದುರಾಗಿದೆ. ಇದೊಂದು ವಿರೋಧಾಭಾಸ. ಇದೇ ಸಂದರ್ಭದಲ್ಲಿ, ಇನ್ನು ಹತ್ತು ವರ್ಷದ ಬಳಿಕ ದೇಶದ ಶೇ.40 ಮಂದಿಗೆ ಕುಡಿಯಲು ನೀರೇ ಸಿಗುವುದಿಲ್ಲ ಎಂದು ಕೇಂದ್ರ ನೀತಿ ಆಯೋಗ ಭಯಾನಕ ಭವಿಷ್ಯವನ್ನು ಬಿತ್ತಿದೆ. ಆ.26ರಿಂದ 'ವಿಶ್ವ ಜಲ ಸಪ್ತಾಹ' ಆರಂಭವಾಗಿದ್ದು ವಿಶ್ವದೆಲ್ಲೆಡೆ ನೀರಿನ ಸಮರ್ಪಕ ಬಳಕೆ ಹಾಗೂ ಉಳಿಕೆಯ ಬಗ್ಗೆ ಚರ್ಚೆಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ನೀರಿನ ನಿರ್ವಹಣೆಯ ಬಗ್ಗೆ ಮಾತನಾಡಲು ಇದು ಸಕಾಲ.
Vijaya Karnataka Web uk


2030ರ ಹೊತ್ತಿಗೆ ದೇಶದ ಒಟ್ಟಾರೆ ಶೇ.40 ಜನಸಂಖ್ಯೆಗೆ ಕುಡಿಯಲು ನೀರು ಸಿಗದಾಗಲಿದೆ. 2020ರ ವೇಳೆಗೆ 21 ನಗರಗಳ ಅಂತರ್ಜಲವೇ ಬರಿದಾಗಲಿದೆ. ಇದರಿಂದ 10 ಕೋಟಿ ಜನರು ಸಂಕಷ್ಟಕ್ಕೆ ತುತ್ತಾಗಲಿದ್ದಾರೆ. ಉದ್ಯಮಗಳು, ಕೈಗಾರಿಕಾ ವಲಯದಲ್ಲಿ ಬೆಳವಣಿಗೆ ಕುಸಿತ ಕಂಡು, ಜಿಡಿಪಿ ಪಾತಾಳ ತಲುಪಬಹುದು. ಒಂದು ಲೆಕ್ಕಾಚಾರದ ಪ್ರಕಾರ ಪ್ರತಿ ವರ್ಷ ನೀರಿನ ಬವಣೆಯಿಂದ 2 ಲಕ್ಷ ಜನರು ಮೃತರಾಗುತ್ತಿದ್ದಾರೆ. ನೀತಿ ಆಯೋಗದ ಲೆಕ್ಕದಂತೆ ಜಲಸಂಪನ್ಮೂಲದ ನಿರ್ವಹಣೆಯಲ್ಲಿ ನಮ್ಮ ರಾಜ್ಯಕ್ಕೆ 4ನೇ ಸ್ಥಾನ ದೊರೆತಿದೆ. ಭಾರಿ ನೀರಾವರಿ ಯೋಜನೆಗಳ ವಿಚಾರದಲ್ಲಿ ನಮ್ಮ ರಾಜ್ಯ ಮುಂದಿರುವುದರಿಂದ ಈ ಸ್ಥಾನ. ಆದರೆ ಶುದ್ಧ ಕುಡಿಯುವ ನೀರು ಪೂರೈಕೆ, ಅಂತರ್ಜಲ ಸಂರಕ್ಷಣೆ, ಮಳೆ ನೀರು ರಕ್ಷಣೆ ವಿಚಾರದಲ್ಲಿ ನಮ್ಮ ರಾಜ್ಯ ಇನ್ನೂ ಸಾಕಷ್ಟು ಸಾಧನೆ ಮಾಡಬೇಕಾಗಿದೆ. ನಗರದಲ್ಲಿ ಶೇ.83 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ.39ರಷ್ಟು ಜನಸಂಖ್ಯೆಗೆ ನೀರು ಒದಗಿಸಲು ನಮ್ಮಿಂದ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ, ನೀರಿನ ಬಳಕೆ ನಿರ್ವಹಣೆಗಳಲ್ಲಿ ಮೊದಲ ಸ್ಥಾನದಲ್ಲಿರುವ ಗುಜರಾತ್‌ನ ಮಾದರಿಯನ್ನು ಪರಿಶೀಲಿಸುವುದು ಸೂಕ್ತವಾದೀತು.

ಗುಜರಾತ್‌ನಲ್ಲಿ ಸಮಗ್ರ ನೀರಾವರಿ ನೀತಿ ಅಳವಡಿಸಿಕೊಳ್ಳಲಾಗಿದ್ದು, ನೀರು ನಿರ್ವಹಣೆಗಾಗಿ ನಿಯಮಿಸಿದ ಸಮಿತಿಗಳು ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸುತ್ತಿವೆ. ಭಾರಿ, ಮಧ್ಯಮ ಹಾಗೂ ಕಿರು ನೀರಾವರಿಗಳನ್ನು ವ್ಯವಸ್ಥಿತವಾಗಿ ಅನುಷ್ಠಾನ ಮಾಡಲಾಗಿದೆ. ಮುಖ್ಯವಾಗಿ ಮಳೆ ನೀರಿನ ಸಂಗ್ರಹ ಹಾಗೂ ಬಳಕೆಗೆ ಪರಿಣಾಮಕಾರಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವಿಕೆಯಲ್ಲಿ ಶೇ.100ರಷ್ಟು ಯಶಸ್ವಿಯಾಗಿದೆ. ಕಲ್ಯಾಣ ರಾಜ್ಯದ ಕನಸನ್ನು ಕಾಣುತ್ತಿರುವ ನಮ್ಮ ಆಡಳಿತಗಾರರು ನೀರಿನ ವಿಚಾರದಲ್ಲಿ ಗುಜರಾತ್‌ನ ಮಾದರಿಯನ್ನು ಅನುಸರಿಸುವುದರಲ್ಲಿ ಅರ್ಥವಿದೆ.

ಮುಖ್ಯವಾಗಿ, ನೀರಿನ ಹಕ್ಕುದಾರಿಕೆ, ಬಳಕೆ, ನಿರ್ವಹಣೆ ಇತ್ಯಾದಿಗಳ ಬಗ್ಗೆ ಸಮಗ್ರ ನೀರಾವರಿ ನೀತಿಯೊಂದು ರೂಪುಗೊಳ್ಳಬೇಕು. ಪರಿಸರದ ವಿಚಾರದಲ್ಲಿ ತಜ್ಞರ ಮಾತನ್ನು ಕಡೆಗಣಿಸಿರುವ ಸರಕಾರ, ಈ ವಿಚಾರದಲ್ಲಾದರೂ ತಜ್ಞರ ಮಾತನ್ನು ಆಲಿಸಿದರೆ ಭವಿಷ್ಯದ ಜನಾಂಗ ಶುದ್ಧ ನೀರು ಕುಡಿಯುವಂತಾದೀತು. ನಗರಗಳಲ್ಲಿ ಪ್ರತೀ ಕಟ್ಟಡವೂ ಮಳೆ ನೀರು ಸಂರಕ್ಷಣೆಯನ್ನು ರೂಢಿಸಿಕೊಳ್ಳಬೇಕು ಎಂಬ ನಿರ್ದೇಶನವಿದೆ. ಆದರೆ ಇದನ್ನು ಕಟ್ಟುನಿಟ್ಟಾಗಿ ಯಾರೂ ಪಾಲಿಸುತ್ತಿಲ್ಲ. ಮಳೆ ನೀರು ಹರಿಯಬೇಕಾದ ಕಾಲುವೆಗಳಲ್ಲಿ ತ್ಯಾಜ್ಯ ನೀರು ಹರಿಯುತ್ತಿದ್ದು, ಬೆಂಗಳೂರಿನ ಮಟ್ಟಿಗೆ ಇವೆರಡಕ್ಕೂ ಯಾವುದೇ ವ್ಯತ್ಯಾಸವಿಲ್ಲದಂತಾಗಿದೆ. ಬೆಂಗಳೂರಿನ ಅಂತರ್ಜಲವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ‌ ಹೊಂದಿದ್ದ ಕೆರೆಗಳು ನಮ್ಮ ಕಣ್ಣೆದುರೇ ಸರ್ವನಾಶವಾಗುತ್ತಿದ್ದು, ಅಂತರ್ಜಲದ ನಿರ್ಮೂಲನಕ್ಕಾಗಿ ಭವಿಷ್ಯದ ತಲೆಮಾರು ನಮ್ಮನ್ನೇ ದೂಷಿಸಲಿದೆ. ನದಿಗಳನ್ನು ತಿರುಗಿಸುವಂತಹ ಪರಿಸರ ವಿನಾಶಕಾರಿ ಮೆಗಾ ಯೋಜನೆಗಳ ಬದಲಾಗಿ ಮಳೆನೀರು ಸಂಗ್ರಹ, ನೀರಿಂಗಿಸುವಿಕೆ, ಬೋರ್‌ವೆಲ್‌ ನೀರು ಮರುಪೂರಣ, ಹನಿ ನೀರಾವರಿ ಮುಂತಾದ ಸಣ್ಣ, ಪರ್ಯಾಯ ನೀರಾವರಿ ಯೋಜನೆಗಳನ್ನು ಹಮ್ಮಿಕೊಳ್ಳುವುದು; ಅವುಗಳಲ್ಲಿ ಶೇ.100ರಷ್ಟು ಪ್ರತಿಯೊಬ್ಬ ನಾಗರಿಕನ ಕಡ್ಡಾಯ ಭಾಗೀದಾರಿಕೆಯನ್ನು ಖಚಿತಪಡಿಸಿಕೊಳ್ಳುವುದು- ಇದು ಮಾತ್ರವೇ ನೀತಿ ಆಯೋಗದ ಭವಿಷ್ಯವನ್ನು ಸುಳ್ಳಾಗಿಸಲು ಸಹಕಾರಿಯಾದೀತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ