ಆ್ಯಪ್ನಗರ

ನಿರೀಕ್ಷೆಗಳ ಭಾರ: ಹೊಸ ಸರಕಾರದ ಮೇಲೆ ಜನರ ಚಿತ್ತ

ಮೋದಿಯವರ ಮೇಲೆ ಹೆಚ್ಚು ನಿರೀಕ್ಷೆಯಿದೆ. ಇದನ್ನು ನಿಜ ಮಾಡಬೇಕಾದ ಹೊಣೆ ಈಗ ಮೋದಿಯವರೂ ಸೇರಿದಂತೆ, ಹೊಸ ಸರಕಾರಕ್ಕೆ ಇದೆ.

Vijaya Karnataka 30 May 2019, 5:00 am
ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಇಂದು (ಮೇ 30) ಪ್ರಮಾಣ ವಚನ ಸ್ವೀಕರಿಸಲಿದ್ದು, ತನ್ಮೂಲಕ 17ನೇ ಲೋಕಸಭೆ ಕಾರ್ಯಚಟುವಟಿಕೆಗಳು ಆರಂಭವಾಗಲಿವೆ. ದೇಶದ ಮತದಾರರು ಈ ಬಾರಿ ಬಿಜೆಪಿಯನ್ನು ಅತ್ಯಧಿಕ ಬಹುಮತದಿಂದ ಚುನಾಯಿಸುವಾಗ, ಮುಂದಿನ ಪ್ರಧಾನಿ ಯಾರಾಗಬೇಕೆಂಬ ಬಗ್ಗೆ ಅವರಲ್ಲಿ ಕಿಂಚಿತ್ತೂ ಗೊಂದಲ ಇದ್ದಂತೆ ಕಾಣುವುದಿಲ್ಲ. ಪಕ್ಷದೊಳಗೂ ಈ ಬಗ್ಗೆ ಅಭಿಪ್ರಾಯ ಭೇದವಿಲ್ಲ. ಒಬ್ಬ ನಾಯಕ ಇಷ್ಟೊಂದು ಬಲಿಷ್ಠ ಜನಬೆಂಬಲ ಗಳಿಸುವುದು ಅತ್ಯಪರೂಪ. ಮೋದಿಯವರು ಮೊದಲ ಬಾರಿಗೆ ಸರಕಾರ ರಚಿಸುವ ಜನಾದೇಶ ಪಡೆದಾಗ ಪಕ್ಷ ಗಳಿಸಿದ ಸ್ಥಾನಗಳಿಗಿಂತ ಇಪ್ಪತ್ತಕ್ಕೂ ಹೆಚ್ಚು ಸ್ಥಾನಗಳನ್ನು ಈ ಬಾರಿ ಬಿಜೆಪಿ ಪಡೆದಿದೆ; ಹಾಗೂ ಹೆಚ್ಚಿನ ಕಡೆ 50%ಗೂ ಅಧಿಕ ಮತಗಳಿಕೆಯನ್ನು ಬಿಜೆಪಿ ಮಾಡಿದೆ ಎಂಬುದರ ಅರ್ಥ, ಮೊದಲ ಸಲಕ್ಕಿಂತಲೂ ಈ ಸಲ ಮೋದಿಯವರ ಮೇಲೆ ಹೆಚ್ಚು ನಿರೀಕ್ಷೆಯಿದೆ ಎಂಬುದೇ ಆಗಿದೆ. ಇದನ್ನು ನಿಜ ಮಾಡಬೇಕಾದ ಹೊಣೆ ಈಗ ಮೋದಿಯವರೂ ಸೇರಿದಂತೆ, ಹೊಸ ಸರಕಾರಕ್ಕೆ ಇದೆ.
Vijaya Karnataka Web pm1


ಸಾಮಾನ್ಯವಾಗಿ ಒಂದು ಸರಕಾರದ ಸಾಧನೆಯನ್ನು ಅಳೆಯಲು ಆರ್ಥಿಕ ಹಾಗೂ ಸಾಮಾಜಿಕ ಎಂಬ ಎರಡು ಮಾನದಂಡಗಳಿವೆ. 2014ರಲ್ಲಿ ಮೋದಿ ಸರಕಾರ ಆಡಳಿತ ವಹಿಸಿಕೊಂಡಾಗ, ದೇಶದ ಜಿಡಿಪಿ 6.4%ರ ಆಸುಪಾಸಿನಲ್ಲಿತ್ತು; ಕಳೆದು ಐದು ವರ್ಷಗಳಲ್ಲಿ ಮಧ್ಯೆ ಒಮ್ಮ 8.2% ಹಂತಕ್ಕೇರಿ, ಇದೀಗ ಅದು 7%ದ ಆಸುಪಾಸಿನಲ್ಲಿ ನಿಂತಿದೆ. ಡಿಮಾನಿಟೈಸೇಷನ್‌ನಂಥ ಕೆಲವು ಆರ್ಥಿಕ ಕ್ರಮಗಳು ಆರ್ಥಿಕತೆಯನ್ನು ಒಮ್ಮೆ ಅಲ್ಲಾಡಿಸಿದರೂ, ಜಿಎಸ್‌ಟಿಯಂಥ ಸುಧಾರಣಾ ಕ್ರಮಗಳ ಅಳವಡಿಕೆಯಿಂದ ತೆರಿಗೆ ಸಂಗ್ರಹ ಏರುಮುಖವಾಗಿದೆ. 2012ರಲ್ಲಿ 14.05ರಷ್ಟಿದ್ದ ಬಡತನ ಸೂಚ್ಯಂಕ, 2018ರಲ್ಲಿ 4.25ಕ್ಕಿಳಿದಿದೆ. ವಿಶ್ವಬ್ಯಾಂಕ್‌ನ ಉದ್ಯಮಶೀಲತೆ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕಳೆದ ಮೂರು ವರ್ಷಗಳಿಂದ ಏರುತ್ತಲೇ ಇದ್ದು, 77ಕ್ಕೆ ಬಂದು ನಿಂತಿದೆ. ಮೋದಿಯವರು ಜಾರಿ ಮಾಡಿದ ಸ್ವಚ್ಛ ಭಾರತ, ಉಜ್ವಲ, ಪಿಎಂ ಕಿಸಾನ್‌, ಮುದ್ರಾ, ಜನಧನ್‌ ಮುಂತಾದ ಕಾರ್ಯಕ್ರಮಗಳು ಸಾಕಷ್ಟು ಸಾಫಲ್ಯ ಪಡೆದಿವೆ. ಇವೆಲ್ಲ ಆರ್ಥಿಕ ಸಂಗತಿಗಳಾದರೆ, ಅಂತಾರಾಷ್ಟ್ರೀಯ ವಲಯ ಭಾರತವನ್ನು ಹೆಚ್ಚಿನ ಗೌರವದಿಂದ ನೋಡುತ್ತಿರುವುದು ಇನ್ನೊಂದು ಬಗೆಯ ಬೆಳವಣಿಗೆ. ಭಯೋತ್ಪಾದನೆಯ ವಿರುದ್ಧ ಹೋರಾಟದಲ್ಲಿ ಭಾರತದ ಧ್ವನಿಗೆ ವಿಶ್ವ ಸಮುದಾಯ ಒಕ್ಕೊರಲು ಸೇರಿಸಿದೆ; ಆಂತರಿಕವಾಗಿಯೂ ಕೂಡ, ತ್ರಿವಳಿ ತಲಾಖ್‌ ನಿಷೇಧ, ಆರ್ಥಿಕ ಹಿಂದುಳಿದವರಿಗೆ ಮೀಸಲು ವಿಸ್ತರಣೆಯಂಥ ಕ್ರಮಗಳಿಂದ ಸಾಮಾಜಿಕವಾಗಿಯೂ ಸರಕಾರ ಜನತೆಗೆ ಹೆಚ್ಚು ಹತ್ತಿರವಾಗಿದೆ. ಇವೆಲ್ಲ ಶುಭ ಸುದ್ದಿಗಳು ಹಾಗೂ ಮೋದಿ ಸರಕಾರ ನಿಟ್ಟುಸಿರು ಬಿಡುವಂಥ ಅಂಶಗಳು.

ಆದರೆ, ಭರವಸೆ ನೀಡಿಯೂ ಮೊದಲ ಅವಧಿಯಲ್ಲಿ ಪೂರೈಸದೆ ಉಳಿದುಹೋದ ಅಂಶಗಳು ಹಲವಾರಿವೆ. ವಿದೇಶದಿಂದ ಅಗಾಧ ಮೊತ್ತದ ಕಪ್ಪು ಹಣವನ್ನು ದೇಶದೊಳಗೆ ವಾಪಸ್‌ ತರುವ ವಿಚಾರವಾಗಲೀ, 2019ರೊಳಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಭರವಸೆಯಾಗಲೀ ಈಡೇರಿಲ್ಲ. ಕೃಷಿವಲಯ ಸಾಲ, ಬರ, ಬೆಲೆಕುಸಿತ ಇತ್ಯಾದಿಗಳಿಂದ ತತ್ತರಿಸುತ್ತಿದೆ; ರೈತರ ಆತ್ಮಹತ್ಯೆ ವ್ಯಾಪಕವಾಗಿದೆ. ಇನ್ನೈದು ವರ್ಷಗಳಲ್ಲಿ ಕೃಷಿರಂಗದಲ್ಲಿ ಹೊಸ ಚೈತನ್ಯ ತುಂಬುವ ಕ್ರಮಗಳನ್ನು ಕೈಗೊಳ್ಳದೆ ಹೋದರೆ ಇಡೀ ವಲಯಕ್ಕೇ ವಾಶ್ರ್ವವಾಯು ಹೊಡೆಯುವುದು ಖಚಿತ. ಹಾಗೆಯೇ ಪ್ರತಿವರ್ಷ ಲಕ್ಷಾಂತರ ಪದವೀಧರರು, ಉದ್ಯೋಗ ತರಬೇತಿ ಹೊಂದಿದ ಯುವಕರು ಉದ್ಯೋಗ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು, ಅವರಿಗೆ ತಕ್ಕ ಕೆಲಸಗಳು ಸಿಗದೆ ಇರುವುದರಿಂದ ನಿರಾಶೆಯ ಪರಿಸ್ಥಿತಿ ಹಬ್ಬಿದೆ. ಪಿಎಂ ಕಿಸಾನ್‌ ಯೋಜನೆಯು ರೈತರ ಸಮಸ್ಯೆಯನ್ನು ಪೂರ್ತಿಯಾಗಿ ಪರಿಹರಿಸಲಾರದು. ಹಾಗೇ ಈಗ ರೂಪಿಸಿರುವ ಕೌಶಲ್ಯವೃದ್ಧಿ ಯೋಜನೆಗಳು ಹಾಗೂ ಉದ್ಯಮ ಸಾಲಸೌಲಭ್ಯಗಳು ಯುವಕರಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗುತ್ತವೆ ಎಂದು ನೆಚ್ಚುವಂತಿಲ್ಲ. ಈ ಎರಡೂ ಕ್ಷೇತ್ರಗಳಲ್ಲಿ ವ್ಯಾಪಕವಾದ ಸುಧಾರಣಾ ಕ್ರಮಗಳು ಆಗಬೇಕಿದ್ದು, ಜನತೆ ಅದನ್ನು ಮೋದಿ ಸರಕಾರದಿಂದ ನಿರೀಕ್ಷಿಸುತ್ತಿದೆ. ನೂತನ ಸರಕಾರದ ನೇತಾರರು, ಆಯ್ಕೆಯಾದ ಸಂಸದರು ಜನತೆಯ ಈ ನಿರೀಕ್ಷಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಲಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ