ಆ್ಯಪ್ನಗರ

ಗೋಡ್ಸೆ ವಿಜೃಂಭಣೆ ಸರಿಯಲ್ಲ

ರಾಷ್ಟ್ರಪಿತನ ಹತ್ಯೆಯ ಸಮರ್ಥನೆ ಖಂಡನೀಯ

Vijaya Karnataka 18 May 2019, 5:00 am
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥುರಾಮ್‌ ಗೋಡ್ಸೆಯನ್ನು ದೇಶಭಕ್ತ ಎಂದು ಕೊಂಡಾಡಿದ ಬಿಜೆಪಿಯ ಮೂವರು ನಾಯಕರಿಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ನೋಟೀಸ್‌ ನೀಡಿದ್ದಾರೆ. ಭೋಪಾಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಅವರು 'ಗೋಡ್ಸೆ ದೇಶಭಕ್ತ' ಎಂದು ಹೇಳಿದ್ದರು. ನಂತರ ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಮತ್ತು ಮಂಗಳೂರು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಕೂಡಾ ಗೋಡ್ಸೆಯನ್ನು ಸಮರ್ಥಿಸುವ ಟ್ವೀಟ್‌ ಮಾಡಿದ್ದರು. ''ಏಳು ದಶಕಗಳ ಬಳಿಕ ಇಂದಿನ ಪೀಳಿಗೆ ಈ ವಿಷಯವನ್ನು ಚರ್ಚಿಸುತ್ತಿರುವುದರಿಂದ ಗೋಡ್ಸೆಗೆ ಖುಷಿಯಾಗಿರಬಹುದು,'' ಎಂದು ಹೆಗಡೆ ಟ್ವೀಟ್‌ನಲ್ಲಿ ಹೇಳಿದ್ದರು. ಕಟೀಲ್‌ ''ನಾಥೂರಾಮ್‌ ಗೋಡ್ಸೆ ಕೊಂದವರ ಸಂಖ್ಯೆ ಕೇವಲ ಒಂದು, ಆದ್ದರಿಂದ ಆತ ಕ್ರೂರ ಕೊಲೆಗಾರನಲ್ಲ,'' ಎಂಬರ್ಥದ ಟ್ವೀಟ್‌ ಮಾಡಿದ್ದರು. ಮೂವರ ಈ ಮಾತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹೇಳಿಕೆಗಳಿಂದ ಪಕ್ಷ ಅಂತರ ಕಾಯ್ದುಕೊಂಡಿದ್ದು, ಗಾಂಧಿಯನ್ನು ಗೌರವಿಸುವ ಪಕ್ಷದ ಸಿದ್ಧಾಂತಕ್ಕೆ ಈ ಹೇಳಿಕೆಗಳು ವಿರುದ್ಧವಾಗಿವೆ ಎಂದು ಶಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜ್ಞಾ ಸಿಂಗ್‌ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದು ಯಾವ ಕಾರಣಕ್ಕೂ ಸಾಧ್ವಿ ಅವರ ಹೇಳಿಕೆಯನ್ನು ಕ್ಷಮಿಸಲಾಗದು ಎಂದಿದ್ದಾರೆ.
Vijaya Karnataka Web edit


ಮಹಾತ್ಮ ಗಾಂಧಿಯವರ ಚಿಂತನೆಗಳು ಹಾಗೂ ಕಾರ್ಯಗಳು ಚರ್ಚೆಯಾಗಬೇಕಾದಲ್ಲಿ, ಅವರ ಕೊಲೆಗಾರ ದೇಶಭಕ್ತನೋ ಅಲ್ಲವೋ ಎಂಬ ವಿಚಾರ ಚರ್ಚೆಯಾಗುತ್ತಿರುವುದು ವಿಪರ್ಯಾಸದ ಪರಮಾವಧಿ. ರಾಷ್ಟ್ರಪಿತನ ಹತ್ಯೆ ಮಾಡಿದವನನ್ನು ದೇಶಭಕ್ತ ಎನ್ನುವುದಂತೂ ಬೌದ್ಧಿಕ ದಾರಿದ್ರ್ಯವೇ ಸರಿ. ಹಾಗೆ ಹೇಳುವವರು ಹಾಗೂ ಅದನ್ನು ಸಮರ್ಥಿಸುವವರು ಗಾಂಧೀಜಿಯವರ ಚಿಂತನೆಗಳನ್ನು ಹತ್ಯೆ ಮಾಡಲು ಗೋಡ್ಸೆಯ ಜತೆಗೇ ಸಾಲಿನಲ್ಲಿ ನಿಂತಿದ್ದಾರೆ ಎಂದೇ ಅರ್ಥ. ಮಹಾತ್ಮರ ವಿಚಾರಗಳು ಹಾಗೂ ಅವರ ಸಾಧನೆಗಳನ್ನು ನಮ್ಮ ದೇಶ ಒಪ್ಪಿ ಗೌರವಿಸಿ, ಪ್ರೀತಿಸಿ ಅವರಿಗೆ ರಾಷ್ಟ್ರಪಿತ ಎಂಬ ಗೌರವವನ್ನು ನೀಡಿದೆ; ಈ ಮನ್ನಣೆಯ ಹಿಂದೆ ಸಂವಿಧಾನ ಕರ್ತೃಗಳೂ ಸೇರಿದಂತೆ ದೇಶದ ಕೋಟ್ಯಂತರ ಜನತೆಯ ಹೃದಯದ ಭಾವನೆಗಳಿವೆ. ಮಹಾತ್ಮರ ನಿಂದನೆ ಹಾಗೂ ಕೊಲೆಗಾರನ ವಿಜೃಂಭಣೆಯಿಂದ ಲಾಭ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಈ ನಾಯಕರು ಯಾವ ನೆಲೆಯಲ್ಲಿ ಯೋಚಿಸಿದರು? ಇದು ಗಾಂಧಿ ಕಟ್ಟಲು ಬಯಸಿದ ಸ್ವರಾಜ್ಯದ ಅಂತಃಶಕ್ತಿಯ, ಗಣರಾಜ್ಯದ ಚೈತನ್ಯವನ್ನು ಕಂಗೆಡಿಸುವ ಮಾತು. ಪ್ರಜಾಪ್ರಭುತ್ವದ ಸಭ್ಯತೆಯನ್ನು ಮೀರಿದ ಮಾತು. ಭಾರತೀಯ ಸಂಸ್ಕೃತಿಯೂ ಇಂಥ ಮಾತುಗಳನ್ನು ಸಮರ್ಥಿಸುವುದಿಲ್ಲ. ಯಾವುದೇ ಹತ್ಯೆಯ ಸಮರ್ಥನೆ, ಸಂಭ್ರಮಾಚರಣೆ ಖಂಡನೀಯ.

ಗಾಂಧಿ ಹತ್ಯೆಯ ಬಳಿಕ ವಿಚಾರಣೆಯ ಮೂಲಕ ನಿಸ್ಸಂಶಯವಾಗಿ ಅಪರಾಧ ಸಾಬೀತಾಗಿ ಗೋಡ್ಸೆಗೆ ಶಿಕ್ಷೆಯಾಗಿದೆ. ಹೀಗಾಗಿ ಇದು ನ್ಯಾಯಾಂಗ ನಿಂದನೆಯೂ ಹೌದು. ಆತನನ್ನು ದೇಶಭಕ್ತನೆನ್ನುವುದು ಇತರ ದೇಶಭಕ್ತರಿಗೂ ಅವಮಾನ ಮಾಡಿದಂತೆ. ರಾಷ್ಟ್ರಪುರುಷರ ಹತ್ಯೆಯನ್ನು ಸಮರ್ಥಿಸುವುದು ರಾಷ್ಟ್ರದ್ರೋಹದ ಕೃತ್ಯ. ಬಿಜೆಪಿ ಸಕಾಲಕ್ಕೆ ಎಚ್ಚೆತ್ತುಕೊಂಡು ಈ ಮೂವರಿಗೆ ಎಚ್ಚರಿಕೆ ನೀಡಿದೆ. ಆದರೆ ಇದು ವಿಚ್ಛಿದ್ರಕಾರಿ ಮನಸ್ಸಿನ ಕೃತ್ಯ; ಚುನಾವಣೆ ಸಂದರ್ಭದಲ್ಲಿ ಜನತೆಯ ಮನದಲ್ಲಿ ದ್ವೇಷದ- ಕೆಡುಕಿನ ಭಾವನೆ ಮೂಡುವಂತೆ ಮಾಡಿದೆ. ಹೀಗಾಗಿ, ಈ ಹರಕುಬಾಯಿ ನಾಯಕರಿಗೆ ನೋಟೀಸ್‌ ನೀಡಿದರಷ್ಟೇ ಸಾಲದು; ಅವರ ಮೇಲೆ ಪಕ್ಷ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು; ಇನ್ನು ಮುಂದೆ ಇಂಥ ಮಾತನಾಡಲು ಹೊರಡುವವರಿಗೆ ಇದು ಪಾಠವಾಗಬೇಕು.

ಸಾರ್ವಜನಿಕ ಜೀವನದಲ್ಲಿರುವವರು ಆಡುವ ಮಾತಿನ ಪರಿಶುದ್ಧತೆ, ಸಭ್ಯತೆಗಳ ಬಗ್ಗೆ ಯೋಚಿಸಲು ಇದು ಸಕಾಲ. ಈ ಮೂವರ ಪ್ರತಿಕ್ರಿಯೆಗಳಿಗೆ ಕಾರಣವಾಗಿ ನಟ ಕಮಲಹಾಸನ್‌ ನೀಡಿದ್ದ, ''ನಾಥುರಾಮ್‌ ಗೋಡ್ಸೆ ಮೊದಲ ಹಿಂದೂ ಉಗ್ರ,'' ಎಂಬ ಹೇಳಿಕೆಯೂ ಇಲ್ಲಿ ಔಚಿತ್ಯರಹಿತವಾದುದು. ಹಿಂಸೆ, ಕ್ರೌರ‍್ಯ, ಭಯೋತ್ಪಾದನೆಗಳಿಗೆ ಜಾತಿ-ಮತ ಇಲ್ಲ ಎಂಬುದು ಶತಸ್ಸಿದ್ಧ. ಆದರೆ ಹಾಗೆ ಇತರರಿಗೆ ಬೋಧಿಸಬೇಕಾದ ಸ್ಥಾನದಲ್ಲಿರುವವರೇ ಇಂಥ ಮಾತಗಳನ್ನಾಡುವುದು ಮುಂದಿನ ಅನಾಹುತಗಳಿಗೆ ಎಡೆಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಇದೊಂದು ಪಾಠವಾಗಲಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ