ಆ್ಯಪ್ನಗರ

ಭದ್ರತೆಗಾಗಿ ಛಿದ್ರಿಸುವ ಶಕ್ತಿ

ಅಂತರಿಕ್ಷದಲ್ಲಿ ಭಾರತದ ಶ್ಲಾಘನಾರ್ಹ ಪಾರಮ್ಯ

Vijaya Karnataka 28 Mar 2019, 5:00 am
ಭಾರತವೀಗ ಅತ್ಯುನ್ನತ ಬಾಹ್ಯಾಕಾಶ ಸಾಮರ್ಥ್ಯ‌ದ ರಾಷ್ಟ್ರಗಳ ಸಾಲಿಗೆ ಸೇರಿದೆ. ಉಪಗ್ರಹಗಳನ್ನು ನಾಶಪಡಿಸಬಲ್ಲ ತನ್ನ ಸಾಮರ್ಥ್ಯ‌ವನ್ನು ಬುಧವಾರ ಪ್ರದರ್ಶಿಸುವ ಮೂಲಕ, ಇಂಥ ಶಕ್ತಿ ಹೊಂದಿರುವ ದೇಶಗಳ ಸಾಲಿನಲ್ಲಿ ನಾಲ್ಕನೆಯದಾಗಿ ಸೇರಿಕೊಂಡಿದೆ. ಈ ಯೋಜನೆಗೆ 'ಮಿಷನ್‌ ಶಕ್ತಿ' ಎಂದು ಹೆಸರಿಟ್ಟಿರುವುದು ಅರ್ಥಪೂರ್ಣ. ಭಾರತವೀಗ ಕೆಡವಿದ್ದು ತನ್ನದೇ ಉಪಗ್ರಹವನ್ನಾದರೂ ಅದು ಇನ್ಯಾವುದೇ ದೇಶದ ಉಪಗ್ರಹವನ್ನಾದರೂ ಕೆಡವುವ ಸಾಮರ್ಥ್ಯ‌ವನ್ನು ಗಳಿಸಿಕೊಂಡಿದೆ ಎಂದು ಅಂತಾರಾಷ್ಟ್ರೀಯ ವಲಯಕ್ಕೆ ಅರ್ಥ ಮಾಡಿಸಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಬಾಹ್ಯಾಕಾಶ ಅಧ್ಯಯನ ಹಾಗೂ ಸಂಶೋಧನೆಯ ಸಂಪೂರ್ಣ ಉಪಯೋಗವನ್ನು ದೇಶ ಪಡೆದುಕೊಂಡಿದೆ. ಬಾಹ್ಯಾಕಾಶ ಭವಿಷ್ಯದ ಕ್ಷೇತ್ರ ಎಂಬುದನ್ನು ಅರ್ಥ ಮಾಡಿಕೊಂಡಿರುವ ನಮ್ಮ ಆಡಳಿತ, ಆ ವಲಯದ ಸಂಸ್ಥೆಗಳಿಗೆ ನೀಡಿರುವ ಮುಕ್ತ ಹಸ್ತದಿಂದ ಇಂಥ ಸಾಧನೆಯನ್ನು ಮಾಡುವುದು ಸಾಧ್ಯವಾಗಿದೆ.
Vijaya Karnataka Web edit1


ಉಪಗ್ರಹವನ್ನು ಛಿದ್ರಗೊಳಿಸುವ ಶಕ್ತಿಯನ್ನು ಸದ್ಯ ಹೊಂದಿರುವ ನಾಲ್ಕೇ ದೇಶಗಳಲ್ಲಿ ಭಾರತ ಒಂದು; ಇದು ಸಣ್ಣ ವಿಚಾರವೇನೂ ಅಲ್ಲ. ಇಸ್ರೇಲ್‌, ಫ್ರಾನ್ಸ್‌ನಂಥ ಬಲಿಷ್ಠ ದೇಶಗಳೇ ಇನ್ನೂ ಆ ವಿಚಾರದಲ್ಲಿ ಆಸಕ್ತಿ ವಹಿಸಿಲ್ಲ. ಈ ಶಕ್ತಿಯ ಮೂಲಕ, ಭಾರತ ಇನ್ಯಾವುದೇ ದೇಶದ ಉಪಗ್ರಹ ತನ್ನ ವಿರುದ್ಧ ಗೂಢಚಾರಿಕೆ ನಡೆಸುತ್ತಿದೆ ಎಂದಾದರೆ ಅದರ ವಿರುದ್ಧ ಎಚ್ಚರಿಕೆ ನೀಡುವ ಸಾಮರ್ಥ್ಯ‌ವನ್ನು ಹೊಂದಿದಂತಾಗಿದೆ. ಅಕ್ಕಪಕ್ಕದಲ್ಲಿ ಪಾಕಿಸ್ತಾನ ಮತ್ತು ಚೀನಾಗಳಂಥ ಹಿತಶತ್ರುಗಳನ್ನಿಟ್ಟುಕೊಂಡಿರುವ ಭಾರತಕ್ಕೆ ಇದು ಅಗತ್ಯವಾದದ್ದು. ಆದ್ದರಿಂದ ಇದು ದೇಶವೊಂದರ ಸಣ್ಣ ಆಂತರಿಕ ಪ್ರಗತಿಯ ವಿಚಾರವಾಗಿರದೆ, ಅಂತಾರಾಷ್ಟ್ರೀಯ ವಲಯದಲ್ಲಿ ಸುದ್ದಿ ಮಾಡುವ, ಭಾರತದ ಸ್ಥಾನಮಾನವನ್ನು ಗಗನದೆತ್ತರಕ್ಕೆ ಏರಿಸುವ ಸಾಧನೆಯಾಗಿದೆ. ಹೀಗಾಗಿಯೇ ಸ್ವತಃ ಪ್ರಧಾನ ಮಂತ್ರಿಗಳು ಇದನ್ನು ಉದ್ಘೋಷಿಸಿದ್ದಾರೆ. ಜತೆಗೆ, ಬಾಹ್ಯಾಕಾಶವನ್ನು ಶಾಂತಿಯುತ ಉದ್ದೇಶಗಳಿಗಾಗಿ ಬಳಕೆ ಮಾಡುವ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರಲ್ಲದೆ, ಬಾಹ್ಯಾಕಾಶ ಶಸ್ತ್ರಾಸ್ತ್ರ ರೇಸ್‌ ಅನ್ನು ದೇಶ ಪ್ರವೇಶಿಸುವುದಿಲ್ಲ ಎಂದೂ ಸಾರಿದ್ದಾರೆ. ಜಗತ್ತಿನ ಮುಂದೆ ಭಾರತದ ಈ ನಿಲುವನ್ನು ಸ್ಪಷ್ಟಪಡಿಸಬೇಕಾದ ಅಗತ್ಯವಿತ್ತು.

ಇಸ್ರೋ ಹಾಗೂ ಡಿಆರ್‌ಡಿಒದ ಇಬ್ಬರು ಪ್ರಮುಖ ಮಾಜಿ ವಿಜ್ಞಾನಿಗಳು, ಹಲವಾರು ವರ್ಷಗಳಷ್ಟು ಹಿಂದೆಯೇ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದ್ದರೂ ಅದನ್ನು ಪ್ರಯೋಗಕ್ಕೊಡ್ಡಲು ಹಿಂದಿನ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಿರಲಿಲ್ಲ ಎಂದಿದ್ದಾರೆ. ಇದು ನಮ್ಮ ಸಾಮರ್ಥ್ಯ‌ದ ಇನ್ನೊಂದು ಮುಖವನ್ನೂ ಒರೆಗೆ ಹಚ್ಚುತ್ತದೆ. ರಾಜಕೀಯ ಇಚ್ಛಾಶಕ್ತಿ ಹಾಗೂ ದಿಟ್ಟತನಗಳಿದ್ದಾಗ ಇಂಥ ಸಾಧನೆಗಳನ್ನು ಪ್ರದರ್ಶಿಸಿ ಸಂಭ್ರಮಿಸುವುದು ಸಾಧ್ಯವಾಗುತ್ತದೆ. ಇಂದು ಅಂತಾರಾಷ್ಟ್ರೀಯ ವಲಯ ಹೇಗಿದೆ ಎಂದರೆ, ದುರ್ಬಲರು ಸಾರುವ ಶಾಂತಿಮಂತ್ರವನ್ನು ಯಾರೂ ಗೌರವಿಸುವುದಿಲ್ಲ. ಆದರೆ, ಶಾಂತಿಯನ್ನು ಪ್ರತಿಪಾದಿಸುವಾತ ಶಕ್ತಿವಂತನೂ ಆಗಿದ್ದರೆ ಆ ಮಾತಿನ ಬೆಲೆಯೇ ಬೇರೆ. ಬಲಿಷ್ಠನು ವಿನಯವಂತನೂ ಆಗಿದ್ದರೆ ಒಳ್ಳೆಯದು. ಭಾರತ ಹೀಗೆ ಬಲಿಷ್ಠತೆ ಹಾಗೂ ವಿವೇಕ- ಎರಡನ್ನೂ ರೂಢಿಸಿಕೊಂಡ ಆಧುನಿಕ ದೇಶವಾಗಿದೆ. ತಾನು ಅಣ್ವಸ್ತ್ರ ಬಲಿಷ್ಠ ರಾಷ್ಟ್ರವಾಗಿದ್ದರೂ ಅದನ್ನು ಮೊದಲು ಪ್ರಯೋಗಿಸುವುದಿಲ್ಲ ಎಂಬ ಭಾರತದ ನಿಲುವೇ ಅದಕ್ಕೆ ಸಾಕ್ಷಿ. ವ್ಯೂಹಾತ್ಮಕ, ರಕ್ಷಣಾತ್ಮಕ ಶಕ್ತಿಗಳಿಂದ ಸನ್ನದ್ಧವಾದ ಇಂಥ ರಾಷ್ಟ್ರವನ್ನು ಕೆಣಕುವ ಅವಿವೇಕವನ್ನು ಯಾರೂ ತೋರಲಾರರು.

ನಾವು ಗಳಿಸಿಕೊಂಡಿರುವ ಶಕ್ತಿ ಆಕ್ರಮಣಕಾರಿಯಾಗಲು ಸಾಧ್ಯವಿದ್ದರೂ ರಕ್ಷಣಾತ್ಮಕ. ನಾವು ಗಳಿಸಿಕೊಂಡಿರುವ ಜ್ಞಾನ ಹಾಗೂ ತಂತ್ರಜ್ಞಾನ ಸಂಪೂರ್ಣ ಸ್ವದೇಶಿ. ನಮ್ಮ ವಿಜ್ಞಾನಿಗಳು ಅಸಾಧ್ಯವಾದುದನ್ನೂ ಸಾಧಿಸಬಲ್ಲ ತೀಕ್ಷ್ಣಮತಿಗಳು. ಇದೆಲ್ಲ ನಮ್ಮ ಹೆಗ್ಗಳಿಕೆ. ಆದ್ದರಿಂದ ಇದು ನಮ್ಮ ಶಕ್ತಿ ಸಾಮರ್ಥ್ಯ‌ಗಳನ್ನು ಸಂಭ್ರಮಿಸುವ ಸಮಯ. ಇದನ್ನು ಸಾಧಿಸಿದ ವಿಜ್ಞಾನಿಗಳು, ರಕ್ಷಣಾ ವಲಯದ ಸಂಸ್ಥೆಗಳು, ಆಡಳಿತಗಾರರು ಅಭಿನಂದನಾರ್ಹರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ