ಆ್ಯಪ್ನಗರ

ಸಂತ್ರಸ್ತರಿಗೆ ವಿದೇಶಿ ನೆರವು: ವಿವಾದ ಬೇಡ

ಕೇರಳದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ, ಪ್ರವಾಹದಿಂದ ಸುಮಾರು 400 ಜನರು ಮೃತಪಟ್ಟಿದ್ದು ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. 20 ಸಾವಿರ ಕೋಟಿ ರೂ.ನಷ್ಟು ಹಾನಿಯ ಅಂದಾಜು ಮಾಡಲಾಗಿದೆ. ರಕ್ಷಣೆ, ಪರಿಹಾರ ಕಾರ‍್ಯ ಭರದಿಂದ ಸಾಗಿದೆ.

Vijaya Karnataka Web 23 Aug 2018, 12:13 pm
ಕೇರಳದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ, ಪ್ರವಾಹದಿಂದ ಸುಮಾರು 400 ಜನರು ಮೃತಪಟ್ಟಿದ್ದು ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. 20 ಸಾವಿರ ಕೋಟಿ ರೂ.ನಷ್ಟು ಹಾನಿಯ ಅಂದಾಜು ಮಾಡಲಾಗಿದೆ. ರಕ್ಷಣೆ, ಪರಿಹಾರ ಕಾರ‍್ಯ ಭರದಿಂದ ಸಾಗಿದೆ. ತನಗೆ ತಕ್ಷಣಕ್ಕೆ 2600 ಕೋಟಿ ರೂ. ನೆರವು ನೀಡುವಂತೆ ಕೇರಳ ಸರಕಾರವು ಕೇಂದ್ರಕ್ಕೆ ಮನವಿ ಮಾಡಿದೆ. ಪ್ರಧಾನಿ ಮೋದಿ ಅವರೂ ಪ್ರವಾಹಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರಲ್ಲದೆ 600 ಕೋಟಿ ರೂ. ಒದಗಿಸುವುದಾಗಿ ತಿಳಿಸಿದ್ದಾರೆ. ಪುನರ್ವಸತಿ ಹಾಗೂ ಪುನರ್‌ ನಿರ್ಮಾಣ ಕೆಲಸ ಸುದೀರ್ಘವಾಗಿದ್ದು 10 ಸಾವಿರ ಕೋಟಿ ರೂ.ಗಿಂತ ಅಧಿಕ ಹಣ ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ಇದೇನೂ ಕಡಿಮೆ ಮೊತ್ತವಲ್ಲ. ರಾಜ್ಯ ಸರಕಾರ ನಾನಾ ಮೂಲಗಳಿಂದ ಸಂಪನ್ಮೂಲ ಕ್ರೋಡೀಕರಿಸಬೇಕಾಗುತ್ತದೆ. ಅಲ್ಲದೆ ಕೇಂದ್ರವೂ ಇನ್ನಷ್ಟು ನೆರವು ನೀಡಬಹುದು.
Vijaya Karnataka Web kerala flood


ಆದರೆ ಪ್ರವಾಹ ಸಂತ್ರಸ್ತ ಕೇರಳಕ್ಕೆ ವಿದೇಶಿ ನೆರವು ಪಡೆಯುವ ಕುರಿತಾಗಿ ಇದೀಗ ಭಾರಿ ಚರ್ಚೆ ನಡೆದಿದೆ. ವಿವಾದ ಉಂಟಾಗಿದೆ. ನಿಸರ್ಗ ಪ್ರಕೋಪಗಳ ಸಂದರ್ಭಗಳಲ್ಲಿ ಸಂತ್ರಸ್ತ ದೇಶಕ್ಕೆ ವಿದೇಶಗಳು ಸಹಾಯಹಸ್ತ ಚಾಚುವುದು ಮಾನವೀಯತೆಯ ಸಂಕೇತ. ಕೇರಳಕ್ಕೆ 700 ಕೋಟಿ ರೂ. ನೆರವು ನೀಡಲು ಸಿದ್ಧ ಎಂದು ಅರಬ್‌ ಸಂಯುಕ್ತ ಸಂಸ್ಥಾನದ (ಯುಎಇ) ರಾಜಕುಮಾರ ಹೇಳಿದ್ದಾರೆ. ಆದರೆ ಈ ಸಹಾಯವನ್ನು ಕೇಂದ್ರ ಸರಕಾರವು ಬೇಡ ಎಂದು ನಯವಾಗಿ ನಿರಾಕರಿಸಿದೆ.

ಯುಎಇ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಕೇರಳದ ಲಕ್ಷಾಂತರ ಮಂದಿ ಉದ್ಯೋಗ ಮಾಡುತ್ತಿದ್ದು ಹೀಗಾಗಿ ಕೊಲ್ಲಿಗೂ, ಕೇರಳಕ್ಕೂ ವಿಶೇಷ ನಂಟಿದೆ. ಈ ಹಿನ್ನೆಲೆಯಲ್ಲಿ ನೆರವಿಗೆ ಮುಂದಾಗಿರುವಾಗ ಬೇಡ ಎಂದಿರುವುದು ತಪ್ಪು ಎಂಬರ್ಥದಲ್ಲಿ ಅನೇಕ ರಾಜಕೀಯ ಮುಖಂಡರು ಮಾತನಾಡತೊಡಗಿದ್ದು ಇಡೀ ಪ್ರಕರಣವನ್ನು ರಾಜಕೀಯಗೊಳಿಸುವ ಯತ್ನ ನಡೆದಿದೆ. ಆದರೆ ಇದು ಅನಗತ್ಯ ವಿವಾದ. ಏಕೆಂದರೆ ಈ ರೀತಿಯ ಸಂದರ್ಭಗಳಲ್ಲಿ ಭಾರತವು 2004ರಿಂದಲೂ ವಿದೇಶಿ ನೆರವು ಪಡೆಯುತ್ತಿಲ್ಲ ಎಂಬುದು ಈ ಟೀಕಾಕಾರರನೇಕರಿಗೆ ಗೊತ್ತಿಲ್ಲ.

1993ರ ಲಾತೂರ್‌ ಭೂಕಂಪ, 2001ರ ಸೂರತ್‌ ಪ್ಲೇಗ್‌ ಸಂದರ್ಭದಲ್ಲಿ ವಿದೇಶಿ ನೇರವು ಸ್ವೀಕರಿಸಲಾಗಿತ್ತು. ಆದರೆ 2004ರಲ್ಲಿ ಭೀಕರ ಸುನಾಮಿ ಅಪ್ಪಳಿಸಿದಾಗ ದೇಶದ ಹಲವು ರಾಜ್ಯಗಳಲ್ಲಿ 12 ಸಾವಿರ ಜನರು ಮೃತಪಟ್ಟು 6 ಲಕ್ಷಕ್ಕೂ ಅಧಿಕ ಮಂದಿ ಮನೆ, ಆಸ್ತಿಪಾಸ್ತಿ ಕಳೆದುಕೊಂಡರು. ಆಗ ವಿದೇಶಗಳಿಂದ ಬಂದ ನೆರವಿನ ಪ್ರಸ್ತಾಪವನ್ನು ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ನಯವಾಗಿ ತಿರಸ್ಕರಿಸಿದ್ದರು. ''ಪರಿಸ್ಥಿತಿಯನ್ನು ನಿಭಾಯಿಸುವ ಶಕ್ತಿ, ಸಾಮರ್ಥ್ಯ‌ ನಮಗೆ ಇದೆ ಅನಿಸುತ್ತದೆ. ಅಗತ್ಯಬಿದ್ದರೆ ನೆರವು ಕೋರುತ್ತೇವೆ,'' ಎಂದು ಅವರು ಹೇಳಿದ್ದರು. ಅಷ್ಟು ಮಾತ್ರವಲ್ಲದೆ ಶ್ರೀಲಂಕಾ, ಇಂಡೊನೇಷ್ಯಾ, ಥಾಯ್ಲೆಂಡ್‌ ದೇಶಗಳಿಗೆ ಧನಸಹಾಯವನ್ನು ಭಾರತವೇ ಮಾಡಿತ್ತು. ತೀರ ಇತ್ತೀಚೆಗೆ 2013ರ ಉತ್ತರಾಖಂಡ ಹಾಗೂ 2014ರ ಕಾಶ್ಮೀರ ಪ್ರವಾಹ ಕಾಲಕ್ಕೂ ಅಮೆರಿಕ, ರಷ್ಯಾ, ಜಪಾನ್‌ ಮೊದಲಾದ ದೇಶಗಳು ನೆರವಿಗೆ ಮುಂದಾಗಿದ್ದರೂ ಭಾರತವು ಬೇಡ ಎಂದೇ ಹೇಳಿತ್ತು. ಈಗಲೂ ಕೂಡ, 2004ರಲ್ಲಿ ಮನಮೋಹನ್‌ಸಿಂಗ್‌ ಕೈಗೊಂಡ ನೀತಿರೂಪದ ನಿರ್ಧಾರವನ್ನೇ ಮೋದಿ ಅವರೂ ಅನುಸರಿಸಿದ್ದಾರೆ. ಯುಎಇ ರಾಜಕುಮಾರ ಫೋನ್‌ ಮಾಡಿದ ಸಂದರ್ಭದಲ್ಲಿ ''ನಿಮ್ಮ ಸದ್ಭಾವನೆಗೆ ಧನ್ಯವಾದ,'' ಎಂದಷ್ಟೇ ಹೇಳಿದ್ದಾರೆ.

ಕಳೆದೊಂದು ದಶಕದ ಅವಧಿಯಲ್ಲಿ ಭಾರತವು ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಿದೆ. ವಿಶ್ವದ ಆರನೇ ಬೃಹತ್‌ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಬಹಳ ವರ್ಷಗಳಿಂದ ವಿಶ್ವಬ್ಯಾಂಕ್‌, ಐಎಂಎಫ್‌ಗಳಿಂದ ಅನಗತ್ಯವಾಗಿ ಸಾಲ ಪಡೆದಿಲ್ಲ. ನಾವೀಗ ಬೇಡುವ ಸ್ಥಿತಿಯಲ್ಲಿಲ್ಲ. ಬದಲಾಗಿ ಕೊಡುವ ಸ್ಥಿತಿಯಲ್ಲಿದ್ದೇವೆ. ಹೀಗಿರುವಾಗ ಬಂದದ್ದು ಬರಲಿ ಎಂಬ ಮನೋಭಾವ ಸರಿಯಲ್ಲ. ಮನಮೋಹನ್‌ ಸಿಂಗ್‌ ಅವರ ನಿರ್ಧಾರವನ್ನು ನಾವು ಈ ನಿಟ್ಟಿನಲ್ಲಿ ನೋಡಬೇಕು. ಕೇರಳಕ್ಕೆ ನೆರವು ಪಡೆವ ವಿಚಾರವೂ ನಮ್ಮ ಒಪ್ಪಿತ, ತಾತ್ವಿಕ ನಿರ್ಧಾರದ ಭಾಗವಾಗಿದೆ ಎಂಬುದನ್ನು ಅರಿಯೋಣ. ಈ ವಿಷಯದಲ್ಲಿ ಅನಗತ್ಯವಾಗಿ ವಿವಾದ ಸೃಷ್ಟಿಸುವುದು ಬೇಡ. ಅಗತ್ಯ ಎನಿಸಿದರೆ ಕೇರಳಕ್ಕೆ ಕೆಂದ್ರವು ಇನ್ನಷ್ಟು ನೆರವು ನೀಡುತ್ತದೆ. ವಿದೇಶಿ ನೆರವು ಬೇಡ ಎಂದು ಹೇಳುವ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂಬುದೂ ಹೆಮ್ಮೆಯ ವಿಚಾರವೇ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ