ಆ್ಯಪ್ನಗರ

ಇಂದಿರಾ ಕ್ಯಾಂಟೀನ್‌: ಅಸಡ್ಡೆ ಬೇಡ

ಈ ಕ್ಯಾಂಟೀನ್‌ ಹೊರನೋಟಕ್ಕೆ ಆಕರ್ಷಕವಾಗಿ ಕಂಡರೂ ಇಲ್ಲಿ ನೀಡುತ್ತಿರುವ ಊಟ, ತಿಂಡಿಯ ಗುಣಮಟ್ಟ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಹೊತ್ತಿಗೆ ಸರಿಯಾಗಿ ಆಹಾರ ಪೂರೈಕೆಯಾಗುತ್ತಿಲ್ಲ. ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುವ ಗುತ್ತಿಗೆದಾರರು ತೂಕದಲ್ಲಿ ಮೋಸ ಮಾಡುತ್ತಿದ್ದಾರೆ ಎಂಬ ದೂರುಗಳಿವೆ. ಈ ಕುರಿತು ವಿಕ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಈ ಅಂಶಗಳು ಸಂಶಯಕ್ಕೆಡೆ ಇಲ್ಲದಂತೆ ಸಾಬೀತಾಗಿದೆ

Vijaya Karnataka Web 20 Nov 2017, 5:04 am

ಜನಪ್ರಿಯ ಯೋಜನೆಗಳನ್ನು ಪ್ರಕಟಿಸುವುದು ಸುಲಭ. ಆದರೆ ಅವುಗಳನ್ನು ಘೋಷಿತ ಉದ್ದೇಶಗಳಿಗೆ ತಕ್ಕಂತೆ ನಿರಂತರವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ತುಂಬ ಕಷ್ಟ. ಆಗಸ್ಟ್‌ 16ರಂದು ಬೆಂಗಳೂರಿನಲ್ಲಿ ಬಡವರಿಗೆ ರಿಯಾಯಿತಿ ದರದಲ್ಲಿ ತಿಂಡಿ ಮತ್ತು ಊಟವನ್ನು ಒದಗಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್‌ ಚಾಲನೆ ನೀಡಲಾಯಿತು. ರಾಜ್ಯ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಭಾರಿ ಪ್ರಚಾರದಿಂದ ಆರಂಭವಾಯಿತು. ಅನ್ನಭಾಗ್ಯದ ವಿಸ್ತರಣೆಯಂತಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಈಗಾಗಲೇ ಒಂದು ಕೋಟಿಗೂ ಹೆಚ್ಚು ಜನ ಆಹಾರ ಸೇವಿಸಿದ್ದಾರೆ. ಈ ಯಶಸ್ಸಿನಿಂದ ಉತ್ತೇಜಿತಗೊಂಡಿರುವ ಸರಕಾರ ರಾಜ್ಯದ ಪ್ರತಿಯೊಂದು ತಾಲೂಕಿನಲ್ಲೂ ಇಂದಿರಾ ಕ್ಯಾಂಟೀನ್‌ ತೆರೆಯುವುದಾಗಿ ಘೋಷಿಸಿದೆ. ಆದರೆ ಈ ಕ್ಯಾಂಟೀನ್‌ ಹೊರನೋಟಕ್ಕೆ ಆಕರ್ಷಕವಾಗಿ ಕಂಡರೂ ಇಲ್ಲಿ ನೀಡುತ್ತಿರುವ ಊಟ, ತಿಂಡಿಯ ಗುಣಮಟ್ಟ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಹೊತ್ತಿಗೆ ಸರಿಯಾಗಿ ಆಹಾರ ಪೂರೈಕೆಯಾಗುತ್ತಿಲ್ಲ. ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುವ ಗುತ್ತಿಗೆದಾರರು ತೂಕದಲ್ಲಿ ಮೋಸ ಮಾಡುತ್ತಿದ್ದಾರೆ ಎಂಬ ದೂರುಗಳಿವೆ. ಈ ಕುರಿತು ವಿಕ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಈ ಅಂಶಗಳು ಸಂಶಯಕ್ಕೆಡೆ ಇಲ್ಲದಂತೆ ಸಾಬೀತಾಗಿದೆ.

Vijaya Karnataka Web indira canteen apathy
ಇಂದಿರಾ ಕ್ಯಾಂಟೀನ್‌: ಅಸಡ್ಡೆ ಬೇಡ

ತಿಂಡಿಗೆ ಐದು ರೂ. ಹಾಗೂ ಊಟಕ್ಕೆ ಹತ್ತು ರೂ, ನಿಗದಿಪಡಿಸಿದಾಗ, ಅವು ಇಂತಿಷ್ಟೇ ಪ್ರಮಾಣದಲ್ಲಿರಬೇಕು ಎಂದು ಸೂಚಿಸಲಾಗಿತ್ತು ಆದರೆ ಈಗ ಕೊಡುತ್ತಿರುವ ಆಹಾರದಲ್ಲಿ 100-150 ಗ್ರಾಂ ಕಡಿಮೆ ನೀಡಲಾಗುತ್ತಿದೆ. ಈ ಮೋಸದ ವ್ಯವಹಾರದಲ್ಲಿ ಗುತ್ತಿಗೆದಾರರು ಸರಕಾರ ಮತ್ತು ಗ್ರಾಹಕರಿಗೆ ವಂಚಿಸಿದ್ದಾರೆ ಎಂಬುದು ಸ್ಪಷ್ಟ. ಗುತ್ತಿಗೆದಾರರೇನು ಇಂದಿರಾ ಕ್ಯಾಂಟೀನ್‌ ಆಹಾರ ಪೂರೈಸುತ್ತಿರುವುದು ಪುಣ್ಯ ಸಂಪಾದನೆಗೇನೂ ಅಲ್ಲ; ಮೂರು ಹೊತ್ತಿನ ಊಟ ತಿಂಡಿಗೆ ಸರಕಾರ 32 ರೂ. ನೀಡಿದರೆ, ಗ್ರಾಹಕರಿಂದ ಗುತ್ತಿಗೆ ಸಂಸ್ಥೆಗಳು 25 ರೂ ಸಂಗ್ರಹಿಸುತ್ತವೆ. ಒಟ್ಟು 57 ರೂ. ಕಡಿಮೆ ಮೊತ್ತವೇನೂ ಅಲ್ಲ.

ಯೋಗ್ಯ ಮೇಲ್ವಿಚಾರಣೆಯ ಕೊರತೆಯೇ ಇಂಥ ಅಕ್ರಮ ಮತ್ತು ಅವ್ಯವಸ್ಥೆಗಳಿಗೆ ಕಾರಣ. ಇಂದಿರಾ ಕ್ಯಾಂಟೀನ್‌ ಅಡುಗೆ ಮನೆಗಳ ನಿರ್ವಹಣೆ, ಮೇಲ್ವಿಚಾರಣೆ, ಗುಣಮಟ್ಟದ ಪರಿಶೀಲನೆಗಾಗಿ ನಿವೃತ್ತ ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತದೆ. ಹಾಗೂ ಬಿಬಿಎಂಪಿ ಅಧಿಕಾರಿಗಳು ಖುದ್ದು ಹಾಜರಿದ್ದು ಎಲ್ಲವನ್ನೂ ಪರಿಶೀಲಿಸಬೇಕು ಎನ್ನುವ ನಿಯಮವಿದ್ದರೂ ಇದು ಪಾಲನೆಯಾಗಿಲ್ಲ. ಕೇವಲ 5 ರೂ.ಗೆ ತಿಂಡಿ ಸಿಗುತ್ತದೆ ಎಂಬ ಕಾರಣಕ್ಕೆ ಕ್ಯಾಂಟೀನ್‌ಗಳ ಮೌಲ್ಯವನ್ನು ಅಪಮೌಲ್ಯಗೊಳಿಸಬಾರದು. ಬಡವರನ್ನು ಅಸಡ್ಡೆಯಿಂದ ಕಾಣಬಾರದು. ಇದಕ್ಕೊಂದು ಗೌರವ ಮತ್ತು ಘನತೆ ಇದ್ದೇ ಇದೆ. ಇದನ್ನು ರಾಜ್ಯಾದ್ಯಂತ ವಿಸ್ತರಿಸುವ ಗುರಿ ಇಟ್ಟಿಕೊಂಡಿರುವ ಸರಕಾರ, ಈಗ ಕಂಡುಬರುತ್ತಿರುವ ಲೋಪಗಳನ್ನು ತಕ್ಷಣ ಸರಿಪಡಿಸಬೇಕು.
ಇದೊಂದು ತಾತ್ಕಾಲಿಕ ಕ್ರಮವಾಗದೆ ಅದು ಸಾಂಸ್ಥಿಕ ರೂಪವನ್ನು ಪಡೆಯಬೇಕು. ಇದು ಹೇಗಿರಬೇಕು ಎಂಬುದರ ನೀಲ ನಕಾಶೆ ಸರಕಾರದ ಬಳಿ ಇದ್ದೇ ಇದೆ. ಇಲ್ಲದೇ ಇರುವುದು ಅದರ ಜಾರಿ ಅಷ್ಟೆ. ಇದರ ಮೇಲ್ವಿಚಾರಣೆ ನಡೆಸುವ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಬೇಕು. ಕರ್ತವ್ಯ ಲೋಪವನ್ನು ಗಂಭೀರವಾಗಿ ಪರಿಗಣಿಸಬೇಕು. ಅಕ್ರಮವೆಸಗುವ ಗುತ್ತಿಗೆದಾರರ ಗುತ್ತಿಗೆಯನ್ನು ರದ್ದುಪಡಿಸಬೇಕು. ನಿರಂತರ ನಿಗಾ, ಮೌಲ್ಯಮಾಪನ ಮತ್ತು ಕುಂದುಕೊರತೆಗಳನ್ನು ಸರಿಪಡಿಸುವ ಮನೋಸ್ಥಿತಿಯಿದ್ದಾಗ ಮಾತ್ರ ಇಂಥ ಯೋಜನೆಗಳು ಯಶಸ್ವಿಯಾಗುತ್ತವೆ ಎಂಬುದನ್ನು ಮರೆಯಬಾರದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ