ಆ್ಯಪ್ನಗರ

ಜೆಟ್‌ ಏರ್‌ವೇಸ್‌ ಉಳಿಯಲಿ

ವಾಯುಯಾನ ಕ್ಷೇತ್ರ ಉಳಿವಿಗೆ ಸರಕಾರ ಮಧ್ಯಪ್ರವೇಶ ಅಗತ್ಯ

Vijaya Karnataka Web 18 Apr 2019, 5:00 am
ಭಾರತದಲ್ಲಿ ಅತಿ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಖಾಸಗಿ ವಾಯುಯಾನ ಸಂಸ್ಥೆ ಜೆಟ್‌ ಏರ್‌ವೇಸ್‌, ತನ್ನ ಎಲ್ಲ ಹಾರಾಟಗಳನ್ನು ರದ್ದುಪಡಿಸಿ, ವಿಮಾನಗಳನ್ನು ಬುಧವಾರ ನೆಲಕ್ಕಿಳಿಸಿದೆ. ವಿಮಾನ ಹಾರಾಟ ನಡೆಸಲು ಅಗತ್ಯವಾಗಿರುವ ಇಂಧನದ ಹಣವನ್ನೂ ಭರಿಸಲು ಶಕ್ತಿಯಿಲ್ಲದ ಕಾರಣ ಈ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಸುಮಾರು 7 ಸಾವಿರ ಕೋಟಿ ರೂ. ನಷ್ಟದ ಸುಳಿಯಲ್ಲಿರುವ ಜೆಟ್‌ ಏರ್‌ವೇಸ್‌ ಸಂಸ್ಥೆಯನ್ನು ಕೊಳ್ಳಲು ಯಾವುದೇ ದೊಡ್ಡ ಸಂಸ್ಥೆ ಮುಂದೆ ಬಂದಿಲ್ಲ; ಜೆಟ್‌ನ ಷೇರುಗಳಲ್ಲಿ ಪ್ರಧಾನ ಭಾಗವನ್ನು ಹೊಂದಿರುವ ಎತಿಹಾದ್‌ ಏರ್‌ವೇಸ್‌ ಕೂಡ ನಷ್ಟವನ್ನು ಭರಿಸಲಾಗದ ಸ್ಥಿತಿಯಲ್ಲಿದೆ; 983 ಕೋಟಿ ರೂ. ತುರ್ತು ಮಧ್ಯಂತರ ನಿಧಿ ನೀಡಬೇಕು ಎಂಬ ಬೇಡಿಕೆಯನ್ನು ಕೂಡ ಸಾಲ ನೀಡಿರುವ ಬ್ಯಾಂಕ್‌ಗಳು ಪುರಸ್ಕರಿಸಿಲ್ಲ; ಇವೆಲ್ಲದರಿಂದ ಜೆಟ್‌ ಹಾರಾಟ ನಿಲ್ಲಿಸಬೇಕಾಗಿ ಬಂದಿದೆ.
Vijaya Karnataka Web edit


1996ರಲ್ಲಿ ಸ್ಥಾಪನೆಯಾದ ಜೆಟ್‌ ಏರ್‌ವೇಸ್‌, 23 ವರ್ಷ ಕಾಲ ದೇಶದ ಆಂತರಿಕ ಹಾಗೂ ಅಂತಾರಾಷ್ಟ್ರೀಯ ವಿಮಾನ ಹಾರಾಟಗಳನ್ನು ನಡೆಸಿದೆ. 2007ರಲ್ಲಿ ಏರ್‌ ಸಹಾರಾ ಸಂಸ್ಥೆಯನ್ನು ಖರೀದಿಸಿದ್ದ ಜೆಟ್‌, 2010ರ ವೇಳೆಗೆ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಎನಿಸಿಕೊಂಡಿತ್ತು. 2013ರಲ್ಲಿ ಒಮ್ಮೆ ಆರ್ಥಿಕ ಸಮಸ್ಯೆ ಕಾಡಿದಾಗ, ಅಬುಧಾಬಿಯ ಎತಿಹಾದ್‌ ಏರ್‌ವೇಸ್‌, ಜೆಟ್‌ನ 24% ಷೇರುಗಳನ್ನು ಖರೀದಿಸಿತ್ತು. ಬಳಿಕ ವಿಮಾನಯಾನ ಉದ್ಯಮದ ಬಿಕ್ಕಟ್ಟುಗಳು ಒಂದೊಂದಾಗಿ ಸಂಸ್ಥೆಯನ್ನು ಕಾಡತೊಡಗಿದ್ದವು. ಅಗ್ಗದ ದರದಲ್ಲಿ ವಿಮಾನಯಾನ ಸೌಲಭ್ಯ ಒದಗಿಸುವ ಹಲವಾರು ಸಣ್ಣ, ಸ್ಥಳೀಯ ವಿಮಾನಯಾನ ಸಂಸ್ಥೆಗಳು ಹುಟ್ಟಿಕೊಂಡು ಜೆಟ್‌ಗೆ ಪ್ರಬಲ ಪ್ರತಿಸ್ಪರ್ಧೆ ನೀಡಿದವು. ನಿಗದಿತ ಶುಲ್ಕದಲ್ಲಿ ಮೇಲ್ವರ್ಗ ಹಾಗೂ ಮೇಲ್ಮಧ್ಯಮ ವರ್ಗದವರನ್ನು ಗಮನದಲ್ಲಿರಿಸಿಕೊಂಡು ಸೇವೆ ನೀಡುತ್ತಿದ್ದ ಜೆಟ್‌ ತನ್ನ ಉದ್ಯಮ ವಿನ್ಯಾಸವನ್ನೆ ಬದಲಾಯಿಸಿಕೊಳ್ಳಬೇಕಾಯಿತು. ಜೆಟ್‌ನ ಪ್ರಯಾಣಿಕ ವರ್ಗ ಕುಸಿಯತೊಡಗಿದ್ದರಿಂದ ಅದು ತನ್ನ ಟಿಕೆಟ್‌ ದರಗಳನ್ನು ತಗ್ಗಿಸಿ ಪೈಪೋಟಿಗೆ ಇಳಿಯಬೇಕಾಯಿತು. ಆದರೆ ಜೆಟ್‌ನ ಪ್ರಯಾಣಿಕರು ಗುಣಮಟ್ಟದ ಸೇವೆಯನ್ನು ಬಯಸುವವರಾಗಿದ್ದು, ಅಗ್ಗದ ದರದಲ್ಲಿ ಅದನ್ನು ಒದಗಿಸುವುದು ಸಾಧ್ಯವಾಗಲಿಲ್ಲ. ನಿರ್ವಹಣೆ ವೆಚ್ಚ ಹೆಚ್ಚಿತು. ಖರ್ಚಿಗೂ ಆದಾಯಕ್ಕೂ ತಾಳೆಯಾಗಲಿಲ್ಲ. ವೇತನ ಸಿಗದೆ ಪೈಲಟ್‌ಗಳು ಮುಷ್ಕರ ಹೂಡಿದ್ದಾರೆ.

ಇದು ಜೆಟ್‌ ಒಂದರ ಸಮಸ್ಯೆಯಲ್ಲ. ಭಾರತೀಯ ವಾಯುಯಾನ ವಲಯವೇ ಒಂದು ಬಿಕ್ಕಟ್ಟಿನಲ್ಲಿದೆ. ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ಆಗುವ ಏರಿಳಿತಗಳಿಂದಾಗಿ ವಾಯುಯಾನ ವಲಯ ಏರುಪೇರು ಕಾಣುತ್ತಲೇ ಇರುತ್ತದೆ. ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಎಷ್ಟು ನಷ್ಟದ ಸುಳಿಯಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಸರಕಾರಿ ನೆರವಿನಿಂದ ಅದು ನಡೆಯುತ್ತಿದೆ ಅಷ್ಟೆ. ಇದರ ಭಾರಿ ನಿರ್ವಹಣಾ ವೆಚ್ಚ, ಅಗಾಧ ಸಿಬ್ಬಂದಿ ಗಾತ್ರದಿಂದಾಗಿ ಇದನ್ನು ಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಭಾರಿ ಪೈಪೋಟಿಯ ಪರಿಣಾಮ, ಕಿಂಗ್‌ಫಿಷರ್‌ನಂಥ ಕೆಲವು ಸಂಸ್ಥೆಗಳು ಮುಚ್ಚಿಯೇ ಹೋಗಿವೆ. ಪ್ರಸ್ತುತ, ಜೆಟ್‌ ವಿಮಾನಗಳು ನಿಂತಿರುವುದರಿಂದ, ಇತರ ವಿಮಾನ ಸಂಸ್ಥೆಗಳಿಗೆ ಪ್ರಯಾಣಿಕರ ಒತ್ತಡ ಹೆಚ್ಚಿದ್ದು, ಟಿಕೆಟ್‌ ದರಗಳು ಕೂಡ ಮಿತಿಮೀರಿ ಏರಿಕೆ ಕಾಣುತ್ತಿವೆ. ಇದರಿಂದ ಮಧ್ಯಮವರ್ಗ ವಿಮಾನ ಹಾರಾಟಕ್ಕೆ ಹಿಂಜರಿಯುತ್ತಿರುವುದರಿಂದ, ಇತರ ಸಂಸ್ಥೆಗಳೂ ಆದಾಯ ಕುಸಿತ, ನಷ್ಟ ಹೆಚ್ಚಳದ ಭೀತಿಯಲ್ಲಿವೆ. ಇದು ವಾಯುಯಾನ ಕ್ಷೇತ್ರಕ್ಕೇ ಒದಗಿದ ಸಂಕಟ.

ಇಂಥ ಸ್ಥಿತಿಯಲ್ಲಿ ಸಮತೋಲನ ಸಾಧಿಸಿ, ವಾಯುಯಾನ ಕ್ಷೇತ್ರವನ್ನು ಸಂಕಟದಿಂದ ಪಾರು ಮಾಡಬೇಕಾದರೆ ಸರಕಾರ ಮಧ್ಯಪ್ರವೇಶ ಮಾಡಬೇಕಿದೆ. ಜೆಟ್‌ ಸಂಸ್ಥೆಯ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು; ಟರ್ಬೈನ್‌ ಇಂಧನದ ಮೇಲೆ ವಿಧಿಸಿರುವ ತೆರಿಗೆಯನ್ನು ಕಡಿಮೆ ಮಾಡಬೇಕು; ಅಗ್ಗದ ವಾಯುಯಾನ ಒದಗಿಸುವ ಸಂಸ್ಥೆಗಳ ವಿಮಾನಗಳಿಗೆ ವಿಧಿಸಿರುವ ಲ್ಯಾಂಡಿಂಗ್‌ ಶುಲ್ಕ, ಪಾರ್ಕಿಂಗ್‌ ಶುಲ್ಕ ಮುಂತಾದ ಶುಲ್ಕಗಳಲ್ಲಿ ಕಡಿತ ಮಾಡಬೇಕು. ಸರಕಾರದ ಮಧ್ಯಪ್ರವೇಶದಿಂದ ಈ ವ್ಯವಸ್ಥೆಯಲ್ಲಿ ಮಾರ್ಪಾಡು ಸಾಧ್ಯ ಎಂಬುದು ತಜ್ಞರ ಅಭಿಪ್ರಾಯ. ಇದನ್ನು ಸರಕಾರ ಮನಗಾಣಲಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ