ಆ್ಯಪ್ನಗರ

Childrens Day: ಮುದ್ದಿನ ಮೊಗ್ಗುಗಳನ್ನು ಹೂವಾಗಿಸೋಣ

ಎಳೆವಯಸ್ಸಿನಲ್ಲಿ ಮಕ್ಕಳ ಮೇಲೆ ಈ ಪರಿ ಪಠ್ಯದ ಹೊರೆ ಬೇಕೇ ಎಂಬ ಚರ್ಚೆ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಹೊರೆ ಇಳಿಸುವ ಕೆಲಸ ಮಾತ್ರ ಆಗುತ್ತಿಲ್ಲ.

Vijaya Karnataka 14 Nov 2018, 8:03 am
ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ಕಾನೂನುಗಳು ಬಲಗೊಳ್ಳುತ್ತಿವೆ. ಆ ಬಗ್ಗೆ ಖುಷಿಪಡಲೇಬೇಕು. ಆದರೆ, ಅದರ ಜತೆ ಜತೆಗೇ ಅವರ ಪಾಲಿನ ಬೆಚ್ಚನೆಯ ಬಾಲ್ಯವನ್ನು ಕಸಿದುಕೊಳ್ಳುವ ಪ್ರಸಂಗಗಳೂ ಹೆಚ್ಚುತ್ತಿರುವುದು ಕಳವಳಕಾರಿ. ಆ ಕುರಿತು ಗಂಭೀರ ಆಲೋಚನೆಯನ್ನು ಹರಿಸಬೇಕಿದೆ.
Vijaya Karnataka Web Child.j3333


ಎಳೆವಯದಲ್ಲಿ ಮಕ್ಕಳ ಮೇಲೆ ಈ ಪರಿ ಪಠ್ಯದ ಹೊರೆ ಬೇಕೇ ಎಂಬ ಚರ್ಚೆ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಹೊರೆ ಇಳಿಸುವ ಕೆಲಸ ಮಾತ್ರ ಆಗುತ್ತಿಲ್ಲ. ಪರಿಣಾಮವಾಗಿ ಬೆಳಗಾಗಿ ಎದ್ದ ಮಕ್ಕಳು ಬೆನ್ನಿನ ಮೇಲಿನ ಹೊರೆಯ ಜತೆಗೇ, ಮನದೊಳಗೆ ಅದಕ್ಕಿಂತ ಹೆಚ್ಚಿನ ದುಗುಡದ ಹೊರೆ ಹೊತ್ತು ಭಾರವಾದ ಹೆಜ್ಜೆಗಳನ್ನು ಶಾಲೆಯತ್ತ ಇಡುತ್ತಾರೆ. ಶಾಲೆಯ ಗಂಟೆ ಬಾರಿಸುತ್ತಿದ್ದಂತೆ ಮನೆ ಕಡೆಗೂ ಮಗು ಖುಷಿಯಿಂದ ಹೆಜ್ಜೆ ಇಡುವ ಸಾಧ್ಯತೆ ಕಡಿಮೆ. ಕಾರಣ ಇಷ್ಟೆ; ಮನೆಗೆ ಬರುವ ಮಗು ಆಟೋಟಕ್ಕಿಂತಲೂ ಹ್ಚೆಚಾಗಿ ಹೋಮ್‌ ವರ್ಕಿನದ್ದೇ ಚಿಂತೆಯಲ್ಲಿರುತ್ತದೆ. ಸಾಲದ್ದಕ್ಕೆ ಪಾಲಕರು ಮನೆಪಾಠಕ್ಕೆ ನೂಕುವುದೂ ಇದೆ. ಇದು ಒಳ್ಳೆಯದಾ? ಸಂಬಂಧಪಟ್ಟವರು ಆಲೋಚಿಸಬೇಕಿದೆ.

ಇದು ಶಾಲೆಗೆ ಹೋಗುವ ಮಕ್ಕಳ ಕತೆಯಾದರೆ, ಬಾಲ್ಯವನ್ನು ಕಳೆದುಕೊಳ್ಳುವುದರ ಜತೆಗೆ, ಶಾಲಾ ಕಲಿಕೆಯಿಂದಲೂ ವಂಚಿತವಾಗುವ ಇನ್ನೊಂದು ದೊಡ್ಡ ಮಕ್ಕಳ ವರ್ಗವಿದೆ; ಇದು ವ್ಯಥೆಯ ಕತೆ. ಕಲಿಯುವ, ನಲಿಯುವ ವಯಸ್ಸಿನಲ್ಲಿ ದುಡಿಮೆಗೆ ನೂಕಲ್ಪಡುವ ವರ್ಗದ ಕರುಣಾಜನಕ ಕತೆಯಿದು. ತಂದೆ-ತಾಯಂದಿರ ಬಡತನದ ಕಾರಣಕ್ಕೋ, ಮಾಲೀಕರ ಅವಶ್ಯಕತೆಗೋ ಈ ನತದೃಷ್ಟರು ಕಳೆದುಕೊಳ್ಳುವುದು ಬಾಲ್ಯದ ಅವಕಾಶವನ್ನು ಮಾತ್ರವಲ್ಲ, ಇಡೀ ಜೀವನದ ಉತ್ತಮ ಬದುಕಿನ ಅವಕಾಶವನ್ನೇ ಕೊನೆಗೆ ಕಳೆದುಕೊಂಡುಬಿಡುತ್ತಾರೆ. ಈ ವಿಷಯದಲ್ಲಿ ಸರಕಾರದ ಇಚ್ಛಾಶಕ್ತಿ ಮತ್ತು ಆಗ್ರಹದ ಪಾತ್ರ ಬಹಳ ದೊಡ್ಡದು.

ಆಟದ ಬದಲು ಪಾಠದ ಹೊರೆ, ಬಾಲ್ಯದಲ್ಲೇ ದುಡಿಮೆಗೆ ತಮ್ಮನ್ನು ಒಡ್ಡಿಕೊಳ್ಳುವುದು ಒಂದೆಡೆಯಾದರೆ ಪಾಲಕರ ಒತ್ತಾಸೆಗೆ ಮೊಗ್ಗಿನ ಮನಸಿನ ಮಕ್ಕಳನ್ನು ತರಹೇವಾರಿ ಸ್ಪರ್ಧೆಗೆ ದೂಡಿ ಎಳೆ ಮನಸ್ಸುಗಳ ಮೇಲೆ ಮಣಭಾರವನ್ನು ಹೇರುವ ಮತ್ತೊಂದು ಅಪಾಯಕಾರಿ ಟ್ರೆಂಡು ಇತ್ತೀಚಿನದ್ದು. ಪಠ್ಯೇತರ ಸ್ಪರ್ಧೆ, ನೃತ್ಯ, ಸಂಗೀತ, ಚಿತ್ರಕಲೆಗಳಿಗೆ ಒತ್ತಾಯಪೂರ್ವಕವಾಗಿ ತಳ್ಳುವುದು ಒಂದೆಡೆಯಾದರೆ, ಕಿರುತೆರೆಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಿಗೆ ಮಕ್ಕಳನ್ನು ಅಣಿಗೊಳಿಸುವ ಧಾವಂತ ಒಂದರ್ಥದಲ್ಲಿ ಹಿಂಸಾತ್ಮಕವಾದದ್ದು. ಈ ವಿಚಾರಗಳಲ್ಲಿ ಪಾಲಕರ ಒತ್ತಾಸೆಗಿಂತಲೂ ಹೆಚ್ಚಾಗಿ ಮಕ್ಕಳ ಅಭಿಲಾಷೆ ಮೇಲಾದರೆ ಒಳಿತು. ಈ ವಿಷಯದಲ್ಲಿ ಪಾಲಕರು ಜವಾಬ್ದಾರಿಯಿಂದ ವರ್ತಿಸಬೇಕಾದ್ದು ಬಹಳ ಮುಖ್ಯವಾದದ್ದು.

ಇದೆಲ್ಲದಕ್ಕೆ ಹೊರತಾಗಿ ಮುಗ್ಧ ಮಕ್ಕಳ ಪಾಲಿಗೆ ಶಾಪವಾಗಿರುವ ಮತ್ತೊಂದು ವರ್ಗವಿದೆ. ಕಂಡಕಂಡಲ್ಲಿ ಮಕ್ಕಳನ್ನು ಲೈಂಗಿಕವಾಗಿ ಶೋಷಿಸುವ ವರ್ಗ ಇದು. ಶಾಲೆಗಳಿಂದ ಹಿಡಿದು ಇತರ ಸಾರ್ವಜನಿಕ ಪ್ರದೇಶಗಳಲ್ಲಿ ಅರಿಯದ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿ ಅರಳುವ ಹೂವುಗಳನ್ನು ಮೊಗ್ಗಿನಲ್ಲೇ ಚಿವುಟಿ ಹಾಕುವ ಕಿರಾತಕ ವರ್ಗವಿದು. ಇವರ ವಿಷಯದಲ್ಲಿ ಪಾಲಕರು ಮತ್ತು ಶಾಲೆಯ ಮಾಲೀಕರು ಹೆಚ್ಚಿನ ನಿಗಾ ಇಡುವ ತುರ್ತು ಇದೆ. ಈ ವಿಷಯದಲ್ಲಿ ಕಾನೂನು ರಚಿಸಿ ಕಟ್ಟುನಿಟ್ಟಿನ ಪಾಲನೆ ವಿಷಯದಲ್ಲಿ ಸರಕಾರಗಳು ಇನ್ನಷ್ಟು ಬಿಗಿ ನಿಲುವು ಪ್ರದರ್ಶನ ಮಾಡಬೇಕಾದ ಅವಶ್ಯಕತೆಯಿದೆ.

ಕೊನೆಯದಾಗಿ ಒಂದು ಕಿವಿಮಾತು. ತಮ್ಮ ಮಕ್ಕಳ ಭವಿಷ್ಯ ತಮಗಿಂತಲೂ ಉಜ್ವಲವಾಗಲಿ, ಚೆನ್ನಾಗಿರಲಿ ಎಂದು ಬಯಸುತ್ತಿದ್ದಾರೆ. ಮಕ್ಕಳ ಉತ್ತಮ ಕಲಿಕೆ, ಉತ್ತಮ ಡ್ರೆಸ್ಸು, ಉತ್ತಮ ಸೌಕರ್ಯಕ್ಕಾಗಿ ತಮ್ಮ ದೆಲ್ಲವನ್ನೂ ಸಮರ್ಪಿಸುತ್ತಾರೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಅದರ ಜತೆಗೇ ಮಕ್ಕಳ ಕೈಗೆ ದುಬಾರಿ ಮೊಬೈಲು, ಇತರೆ ಗ್ಯಾಜೆಟ್ಟು, ಇಂಟರ್ನೆಟ್ಟು ಸೌಕರ್ಯಗಳನ್ನು ಇಡುವ ಮೊದಲು ಅದರ ಸದ್ಬಳಕೆ ಕಡೆಗೂ, ಬೇಕು ಬೇಡಗಳ ಕಡೆಗೂ ಗಮನ ಹರಿಸಬೇಕು. ಒಟ್ಟಾರೆ ಈ ಸಂದರ್ಭದಲ್ಲಿ ಹೇಳಬೇಕಿರುವುದು ಇಷ್ಟೇ; ಮಕ್ಕಳೆಂದರೆ ಅರಳಿ, ನಳನಳಿಸಬೇಕಾದ ಮೊಗ್ಗುಗಳು. ನಮ್ಮ ಮಕ್ಕಳ ಭವಿಷ್ಯವನ್ನು ನಾವೇ ಅರಳಿಸೋಣವಲ್ಲವೇ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ