ಆ್ಯಪ್ನಗರ

ಮುಷ್ಕರ ಇಲ್ಲಿಗೇ ನಿಲ್ಲಿಸಿ

ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರಕು ಸಾಗಣೆದಾರರು ನಡೆಸುತ್ತಿರುವ ಮುಷ್ಕರ ಆರನೇ ದಿನಕ್ಕೆ ಕಾಲಿಟ್ಟಿದೆ. ಲಾರಿ ಮುಷ್ಕರದ ಬಿಸಿ ಮೊದಲ ಒಂದೆರಡು ದಿನ ತಟ್ಟುವುದಿಲ್ಲ. ಆದರೆ ಐದಾರು ದಿನ ಮುಂದುವರಿದರೆ ಜನಸಾಮಾನ್ಯರಿಗೆ ಬಿಸಿ ತಟ್ಟಲಾರಂಭಿಸುತ್ತದೆ.

Vijaya Karnataka Web 25 Jul 2018, 7:53 am
ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರಕು ಸಾಗಣೆದಾರರು ನಡೆಸುತ್ತಿರುವ ಮುಷ್ಕರ ಆರನೇ ದಿನಕ್ಕೆ ಕಾಲಿಟ್ಟಿದೆ. ಲಾರಿ ಮುಷ್ಕರದ ಬಿಸಿ ಮೊದಲ ಒಂದೆರಡು ದಿನ ತಟ್ಟುವುದಿಲ್ಲ. ಆದರೆ ಐದಾರು ದಿನ ಮುಂದುವರಿದರೆ ಜನಸಾಮಾನ್ಯರಿಗೆ ಬಿಸಿ ತಟ್ಟಲಾರಂಭಿಸುತ್ತದೆ. ಈಗಲೂ ಹಾಗೇ ಆಗಿದೆ. ಅಖಿಲ ಭಾರತ ಮೋಟಾರು ಟ್ರಾನ್ಸ್‌ಪೋರ್ಟ್‌ ಕಾಂಗ್ರೆಸ್‌ ಕರೆ ನಿಡಿರುವ ಮುಷ್ಕರಕ್ಕೆ ಲಾರಿ ಚಾಲಕರು- ಮಾಲಿಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸರಕು ಸಾಗಣೆಯಲ್ಲಿ ಸಂಪೂರ್ಣ ವ್ಯತ್ಯಯ- ನಿಲುಗಡೆ ಕಂಡುಬಂದಿದೆ. ಅಗತ್ಯ ವಸ್ತುಗಳು ಮಾತ್ರ ಪೂರೈಕೆಯಾಗುತ್ತಿದ್ದು, ಆಹಾರ ಧಾನ್ಯ- ಬೇಳೆಕಾಳು ಮುಂತಾದ ವಸ್ತುಗಳ ಸಾಗಣೆ ಸಂಪೂರ್ಣ ನಿಂತಿದೆ. ಸ್ಥಳೀಯ ದಾಸ್ತಾನು ಸಂಗ್ರಹ ಮುಗಿಯುತ್ತಿದ್ದು, ಮುಷ್ಕರ ಇನ್ನಷ್ಟು ದಿನ ಮುಂದುವರಿದರೆ ಏನು ಗತಿ ಎಂಬ ಚಿಂತೆ ನಗರವಾಸಿಗಳನ್ನು ಕಾಡಲಾರಂಭಿಸಿದೆ. ಸಣ್ಣ- ಮಧ್ಯಮ ಕೈಗಾರಿಕೆಗಳಿಗೆ ಕಚ್ಚಾ ವಸ್ತು ಪೂರೈಕೆ ಕೂಡ ನಿಂತಿದ್ದು, ಉತ್ಪಾದನಾ ವಲಯದಲ್ಲೂ ಚಿಂತೆ ಮೂಡಿದೆ. ಪ್ರಯಾಣಿಕರ ವಾಹನ ಸಂಚಾರವನ್ನೂ ನಿಲ್ಲಿಸಿ ಬೆಂಬಲ ಸೂಚಿಸುವ ಕುರಿತು ಚಿಂತನೆ ನಡೆದಿದ್ದು, ಇದು ಇನ್ನೂ ಅಸಹನೀಯ ಸ್ಥಿತಿ ಸೃಷ್ಟಿಸಲಿದೆ. ಮುಷ್ಕರದಿಂದಾಗಿ ಈಗಾಗಲೇ ಸಾಕಷ್ಟು ನಷ್ಟವಾಗಿದ್ದು, ನಿತ್ಯ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುವ ಸಂಭವ ಕಂಡುಬರುತ್ತಿದೆ.
Vijaya Karnataka Web lorry


ಪ್ರಸ್ತುತ ಮುಷ್ಕರದಲ್ಲಿ ಡೀಸೆಲ್‌ ಬೆಲೆ ಕಡಿಮೆಯಾಗುವಂತೆ ಅದನ್ನು ಜಿಎಸ್‌ಟಿ ವ್ಯಾಪ್ತಿಯಲ್ಲಿ ತರಬೇಕು; ಹೆದ್ದಾರಿ ಸುಂಕವನ್ನು ಕಡಿತಗೊಳಿಸಬೇಕು; ನೇರ ತೆರಿಗೆಗಳಲ್ಲಿ ರಿಯಾಯಿತಿ ನೀಡಬೇಕು; ಎಲ್ಲ ಸರಕು ವಾಹನಗಳಿಗೆ ರಾಷ್ಟ್ರೀಯ ಪರವಾನಗಿ ನೀಡಬೇಕು ಇತ್ಯಾದಿ ಬೇಡಿಕೆಗಳನ್ನು ಮಂಡಿಸಲಾಗಿದೆ. ಸರಕು ಸಾಗಣೆದಾರರ ಮುಷ್ಕರ ವಾರ್ಷಿಕ ವಿಧಿಯಂತಾಗಿದೆ. ಕಳೆದ ತಿಂಗಳು ಕೂಡ ಕೆಲವು ಬೇಡಿಕೆಗಳನ್ನು ಮುಂದಿಟ್ಟು ಅಲ್ಪಾವಧಿ ಪ್ರತಿಭಟನೆ ನಡೆಸಲಾಗಿತ್ತು. ಲಾರಿ ಮುಷ್ಕರ ನಡೆಯುವುದು, ಬದುಕು ಹಳಿ ತಪ್ಪುವುದು, ಸರಕಾರ ಮುಷ್ಕರನಿರತರ ಬೇಡಿಕೆಗಳನ್ನು ಭಾಗಶಃ ಒಪ್ಪಿಕೊಂಡು ಅವರ ಕಣ್ಣೊರೆಸುವ ಕೆಲಸ ಮಾಡುವುದು- ಸಾಮಾನ್ಯ ಎಂಬಂತೆ ನಡೆಯುತ್ತಲೇ ಇದೆ. ಇಷ್ಟಕ್ಕಾಗಿ, ದೇಶದ ಜನತೆ ವರ್ಷಕ್ಕೊಮ್ಮೆ ಅಗತ್ಯ ಸಾಮಗ್ರಿ ಕೊರತೆ, ಅನಗತ್ಯ ಬೆಲೆ ಏರಿಕೆ, ಆತಂಕ ಹಾಗೂ ನಷ್ಟಗಳನ್ನು ಅನುಭವಿಸಬೇಕೇ ಎಂಬ ಪ್ರಶ್ನೆಗೆ ಮಾತ್ರ ಯಾರಲ್ಲೂ ಉತ್ತರವಿಲ್ಲ. ಪ್ರತಿಭಟನೆಗೆ ಶಾಂತಿಯುತವಾದ ನಾನಾ ವಿಧಾನಗಳಿವೆ. ಹಕ್ಕೊತ್ತಾಯದ ಮನವೊಲಿಸುವಿಕೆಯ ವಿಧಾನಕ್ಕೆ ಮೀರಿದುದು ಇನ್ಯಾವುದೂ ಇಲ್ಲ. ಸರಕಾರ ಹಾಗೂ ಮುಷ್ಕರನಿರತರು ಇದನ್ನು ಮನಗಂಡು, ಸೂಕ್ತ ಮಾತುಕತೆಗಳ ಮೂಲಕ ಬಿಕ್ಕಟ್ಟುಗಳನ್ನು ಪರಿಹರಿಸಿಕೊಂಡು ನಿತ್ಯದ ಬದುಕು ಹಳಿ ತಪ್ಪದಂತೆ ಮಾಡಲು ಮುಂದಾಗಬೇಕು. ನ್ಯಾಯೋಚಿತವಾದ ಬೇಡಿಕೆಗಳನ್ನು ಸರಕಾರ ಈಡೇರಿಸುವುದರಲ್ಲಿ ಅರ್ಥವಿದೆ; ಆದರೆ ಅದಕ್ಕಾಗಿ ಸರಕು ಸಾಗಣೆದಾರರು ಜನಜೀವನವನ್ನು ಬಲವಂತದ ಒತ್ತೆಯಿಟ್ಟುಕೊಳ್ಳುವುದಕ್ಕೆ ಯಾವುದೇ ಸಮರ್ಥನೆ ಇಲ್ಲ. ಇದೇ ವೇಳೆ, ಅಪಘಾತಗಳಿಗೆ ಮುಖ್ಯ ಕಾರಣವಾಗಿರುವ ಗುಂಡಿಬಿದ್ದ ರಸ್ತೆಗಳನ್ನು ಸರಿಪಡಿಸಿ, ರಸ್ತೆ ಸುರಕ್ಷತೆಯನ್ನು ಖಾತ್ರಿಪಡಿಸಿ ಎಂದು ಮುಷ್ಕರನಿರತರು ಯಾಕೆ ಸರಕಾರವನ್ನು ಒತ್ತಾಯಿಸುವುದಿಲ್ಲ? ಆಗ ಅವರ ಹಿತದ ಜತೆಗೆ ಜನಸಾಮಾನ್ಯರ ಹಿತವೂ ಮುಷ್ಕರದಲ್ಲಿ ಸೇರಿದಂತಾಗುವುದಿಲ್ಲವೇ? ಮುಷ್ಕರಗಳು ಇಂಥ ವ್ಯಾಪಕ, ಸಮಗ್ರ ಆಶಯಗಳನ್ನಿಟ್ಟುಕೊಂಡು ಪಡಿಮೂಡಬೇಕು.

ಇತ್ತೀಚೆಗೆ ಸರಕಾರಗಳು ವಾಹನ ಕಾಯಿದೆಗಳ ತಿದ್ದುಪಡಿ, ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆಗಳಿಗೆ ಮುಂದಾಗಿವೆ. ಪ್ರಯಾಣಿಕರ ಸುರಕ್ಷತೆಗಾಗಿ ಭಾರಿ ವಾಹನಗಳಿಗೆ ಸ್ಪೀಡ್‌ ಗವರ್ನರ್‌ಗಳ ಅಳವಡಿಕೆ, 20 ವರ್ಷಕ್ಕೂ ಮೀರಿದ ಭಾರಿ ವಾಹನಗಳಿಗೆ ಕಡ್ಡಾಯ ನಿವೃತ್ತಿ, ವಿಮೆ ಪ್ರೀಮಿಯಂಗಳ ಹೆಚ್ಚಳ ಮುಂತಾದ ಉಪಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿವೆ. ಇವು ದೂರದೃಷ್ಟಿಯುಳ್ಳ ಸುಧಾರಣೆಗಳು. ದೀರ್ಘಾವಧಿಯಲ್ಲಿ ಎಲ್ಲರ ಹಿತವನ್ನೂ ಕಾಪಾಡುವಂಥ ಸುಧಾರಣಾ ಕ್ರಮಗಳನ್ನು ವಿರೋಧಿಸಲು ಮುಂದಾಗುವುದು ಉಚಿತವಲ್ಲ. ಇದನ್ನು ಭಾರಿ ವಾಹನ ಚಾಲಕ ಮಾಲಿಕರೂ ಗಮನದಲ್ಲಿಟ್ಟುಕೊಳ್ಳಬೇಕು. ಹೀಗೆ ಎರಡೂ ಕಡೆಯವರೂ ಕೆಲವು ರಾಜಿಗಳ ಮೂಲಕ ಮಾತುಕತೆಗೆ ಮುಂದಾದಾಗ ಬಿಕ್ಕಟ್ಟು ನಿವಾರಣೆಯಾಗುತ್ತದೆ. ಸಂಭಾವ್ಯ ಭಾರಿ ನಷ್ಟ- ಕಷ್ಟಗಳನ್ನು ತಡೆಯಲು ಹಾಗೂ ಜನಹಿತವನ್ನು ಕಾಪಾಡಲು ಉಭಯರೂ ನಿರ್ಧರಿಸಿ, ಮುಷ್ಕರವನ್ನು ಹಿಂತೆಗೆದುಕೊಂಡು ಮಾತುಕತೆ ನಡೆಸಲಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ