ಆ್ಯಪ್ನಗರ

ಪ್ರತಿಪಕ್ಷ ಏಕತೆ : ಬರಿ ಮಾತು, ಕತೆ

ಮಹಾಘಟಬಂಧನ್‌ ಅಂದರೆ ಮಹಾಮೈತ್ರಿಕೂಟ ಎಂಬ ಪದವು ಸುದ್ದಿ ಮಾಧ್ಯಮಗಳಲ್ಲಿ ಆಗಾಗ ಸದ್ದು ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಚುನಾವಣೆ ಸಮಯದಲ್ಲಿ ಮಹಾಮೈತ್ರಿಕೂಟದ ಮಾತು ಹೆಡೆ ಎತ್ತುತ್ತದೆ.

Vijaya Karnataka 10 Aug 2018, 7:56 am
ಮಹಾಘಟಬಂಧನ್‌ ಅಂದರೆ ಮಹಾಮೈತ್ರಿಕೂಟ ಎಂಬ ಪದವು ಸುದ್ದಿ ಮಾಧ್ಯಮಗಳಲ್ಲಿ ಆಗಾಗ ಸದ್ದು ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಚುನಾವಣೆ ಸಮಯದಲ್ಲಿ ಮಹಾಮೈತ್ರಿಕೂಟದ ಮಾತು ಹೆಡೆ ಎತ್ತುತ್ತದೆ. ಇದೀಗ ರಾಜ್ಯಸಭೆಯ ಉಪಸಭಾಪತಿ ಸ್ಥಾನದ ಚುನಾವಣೆ ಸಂದರ್ಭದಲ್ಲೂ ಈ ಕುರಿತು ಚರ್ಚೆಗಳು ನಡೆದವು. ಆದರೆ ಬಹುತೇಕ ಸಂದರ್ಭಗಳಂತೆಯೇ ಈ ಬಾರಿಯೂ ಅದು ಬರಿ ಮಾತಾಯಿತೇ ಹೊರತು ಕೃತಿಗೆ ಬರಲೇ ಇಲ್ಲ. ಇದರ ಫಲವಾಗಿ ರಾಜ್ಯಸಭೆಯಲ್ಲಿ ಬಹುಮತದ ಕೊರತೆ ಇದ್ದರೂ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ನಿರೀಕ್ಷೆಗಿಂತ ಸುಲಭವಾಗಿ ಚುನಾಯಿತರಾಗಿದ್ದಾರೆ. ಸೋಲು ಗೆಲುವು ಹೇಗೋ ಇರಲಿ. ಆದರೆ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಪ್ರಬಲ ಸ್ಪರ್ಧೆ ನೀಡಬಹುದಾದ ಸಾಧ್ಯತೆ ಇತ್ತು. ಆದರೆ ಈ ನಿಟ್ಟಿನಲ್ಲಿ ದೃಢ ಹಾಗೂ ಪ್ರಾಮಾಣಿಕ ಪ್ರಯತ್ನವೇ ನಡೆಯಲಿಲ್ಲ. ಮೊದಲು ಎನ್‌ಸಿಪಿ ಅಭ್ಯರ್ಥಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಯಿತು. ಆದರೆ ಕೊನೆಗಳಿಗೆಯಲ್ಲಿ ತನ್ನ ಅಭ್ಯರ್ಥಿಯನ್ನೇ ಕಾಂಗ್ರೆಸ್‌ ಕಣಕ್ಕಿಳಿಸಿತು. ತಾನು ನೆಚ್ಚಿಕೊಂಡಿದ್ದ ಬಿಜೆಡಿ, ಆಪ್‌, ಟಿಆರ್‌ಎಸ್‌ ಪಕ್ಷಗಳು ಬೆಂಬಲ ನೀಡದೆ ವಿಶ್ವಾಸದ್ರೋಹ ಮಾಡಿದವು ಎಂದು ಇದೀಗ ಕಾಂಗ್ರೆಸ್‌ ಅಲವತ್ತುಕೊಳ್ಳುತ್ತಿದೆ. ಆದರೆ ಅಸಲಿಗೆ ಈ ವಿಷಯದಲ್ಲಿ ತಮ್ಮನ್ನು ಔಪಚಾರಿಕವಾಗಿ ಸಂಪರ್ಕಿಸಿಯೇ ಇಲ್ಲ ಎಂಬುದು ಈ ಪಕ್ಷಗಳ ಹೇಳಿಕೆ. ಇಂಥ ಅರೆಮನಸ್ಸಿನ ಪ್ರಯತ್ನದ ಮೂಲಕ ಅದು ಮತ್ತೊಮ್ಮೆ ಒಂದು ಒಳ್ಳೆಯ ಅವಕಾಶವನ್ನು ಕಳೆದುಕೊಂಡಿದೆ.
Vijaya Karnataka Web maitri


ಒಗ್ಗಟ್ಟಿನ ವಿಚಾರದಲ್ಲಿ ಏಕೆ ಹೀಗಾಗುತ್ತಿದೆ, ಸತತ ವೈಫಲ್ಯ ಏಕಾಗುತ್ತಿದೆ ಎಂಬುದರ ಬಗ್ಗೆ ಪ್ರತಿಪಕ್ಷಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಮುಖ್ಯ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ ಗಂಭೀರ ಚಿಂತನೆ ನಡೆಸಬೇಕು. ತಾವು ಎಡುವುತ್ತಿರುವುದೆಲ್ಲಿ ಎಂಬುದರ ಕುರಿತು ಚಿಂತನೆ ನಡೆಸಬೇಕು. ಏಕೆಂದರೆ ಮಹಾಮೈತ್ರಿಕೂಟದ ಮಾತು ಕೇಳಿ ಬರುವುದು ಯಾವುದಾದರೂ ಚುನಾವಣೆ ಬಂದಾಗ ಮಾತ್ರ. ಅಂದರೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಏಕೈಕ ಉದ್ದೇಶ ಮಾತ್ರ ಇದರಲ್ಲಿ ಕಂಡುಬರುತ್ತಿದೆ. ಒಂದೆಡೆ ಬಿಜೆಪಿಯು ಸಂಘಟನಾ ಶಕ್ತಿ, ಚಾತುರ‍್ಯ ಹಾಗೂ ವ್ಯವಸ್ಥಿತ ಪ್ರಚಾರ ಕಾರ‍್ಯಗಳಿಂದಾಗಿ ಚುನಾವಣೆಯಿಂದ ಚುನಾವಣೆಗೆ ಪ್ರಬಲವಾಗತೊಡಗಿದೆ. ಒಂದರ ಮೇಲೆ ಒಂದು ರಾಜ್ಯದಲ್ಲಿ ಅಧಿಕಾರ ಗದ್ದುಗೆ ಹಿಡಿಯುತ್ತಿದೆ. ಇತ್ತ ಕಾಂಗ್ರೆಸ್‌ ಪಕ್ಷವು ಇಳಿಜಾರಿನ ಹಾದಿ ಹಿಡಿದಿದೆ. ಬಿಜೆಪಿಯಲ್ಲಿ ಬಲಿಷ್ಠವಾದ ಪಕ್ಷ ಸಂಘಟನೆಯಿದೆ. ವರ್ಚಸ್ವೀ ನಾಯಕತ್ವವಿದೆ. ಆದರೆ ಪ್ರತಿಪಕ್ಷ ಬತ್ತಳಿಕೆಯಲ್ಲಿ ಇವುಗಳಿಗೆ ಸೂಕ್ತ ಪ್ರತ್ಯಸ್ತ್ರ ಕಂಡುಬರುತ್ತಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಒಂದಾಗಿ ಬಿಜೆಪಿಯನ್ನು ಎದುರಿಸಬೇಕು ಎಂದೇನೋ ಹೇಳುತ್ತವಾದರೂ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಬಂದಾಗ ಒಬ್ಬೊಬ್ಬರದು ಒಂದೊಂದು ದಿಕ್ಕು.

ಬಿಜೆಪಿಯನ್ನು ವಿರೋಧಿಸಬೇಕು, ಅದನ್ನು ಸೋಲಿಸಬೇಕು ಎಂಬ ಈ ಸೀಮಿತ ಉದ್ದೇಶದ ಕಾರ‍್ಯಸೂಚಿಯಿಂದ ಇಂಥ ಅಪಸವ್ಯಗಳಾಗುತ್ತಿವೆ. ಆದ್ದರಿಂದ ಪ್ರತಿಪಕ್ಷಗಳು ತಮ್ಮ ಆದ್ಯತೆ, ದೃಷ್ಟಿಕೋನ, ಅಜೆಂಡಾ ಕುರಿತಂತೆ ಮರುಪರಿಶೀಲನೆ ಮಾಡಿಕೊಳ್ಳಬೇಕು. ತತ್ವ, ಸಿದ್ಧಾಂತದ ತಳಹದಿಯಲ್ಲಿ, ವಿಷಯಾಧಾರಿತವಾಗಿ ಬಿಜೆಪಿಯನ್ನು ಎದುರಿಸಲು ಅವು ಸನ್ನದ್ಧವಾಗಬೇಕು. ಸಂಸತ್ತಿನಲ್ಲಿ ಅನೇಕ ಮಹತ್ವದ ವಿಷಯಗಳು ಚರ್ಚೆಗೆ ಬರುತ್ತವೆ. ಹಲವು ಮುಖ್ಯ ವಿಧೇಯಕಗಳು ಮಂಡನೆಯಾಗುತ್ತವೆ. ಆಗೆಲ್ಲ ಅವುಗಳ ಮೇಲೆ ಆಮೂಲಾಗ್ರ ಚರ್ಚೆಯಾಗಬೇಕು. ಇದಕ್ಕೆ ಅಗತ್ಯವಾದ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಒಗ್ಗಟ್ಟನ್ನು ಸಾಧಿಸಬೇಕು. ಕೇವಲ ಆರೋಪ, ಪ್ರತ್ಯಾರೋಪದಲ್ಲಿ ಕಾಲ ವ್ಯರ್ಥ ಮಾಡುವ ಬದಲು ಸೈದ್ಧಾಂತಿಕ ಸಮರಕ್ಕೆ ಸಜ್ಜಾದರೆ, ಒಗ್ಗಟ್ಟು ಪ್ರದರ್ಶಿಸಲು ಪ್ರಯತ್ನಿಸಿದರೆ ಆಡಳಿತ ಪಕ್ಷಕ್ಕೆ ಎದುರಾಗಿ ಒಂದು ಪ್ರಬಲ ಧ್ವನಿಯಾಗಬಹುದು. ಚರ್ಚೆಯ ಮೂಲಕ ಸರಕಾರದ ನಿಲುವು, ಧೋರಣೆಗಳನ್ನು ಒರೆಗೆ ಹಚ್ಚಬಹುದು. ಆದರೆ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸದೆ ಬರಿ ಮಾತಿನ ಸಮರದಲ್ಲಿ ನಿರತವಾದರೆ ಪ್ರಯೋಜನವಾಗದು. ಕಾಂಗ್ರೆಸ್‌ ಪಕ್ಷವೇ ಈ ದಿಸೆಯಲ್ಲಿ ಮುಂದಾಳತ್ವ ವಹಿಸಬಹುದು. ಎಲ್ಲ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟು ಪ್ರದರ್ಶಿಸಿದರೆ ಅವುಗಳ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಯಾಕೆಂದರೆ ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಆಳುವ ಪಕ್ಷದಂತೆಯೇ ಬಲಿಷ್ಠ ಪ್ರತಿಪಕ್ಷ ಕೂಡ ಮುಖ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ