ಆ್ಯಪ್ನಗರ

ಆದರ್ಶ ಗಣರಾಜ್ಯದ ಸಂಕಲ್ಪ

ಭಾರತ 70ನೇ ಗಣರಾಜ್ಯ ದಿನವನ್ನು ಆಚರಿಸಿಕೊಳ್ಳುತ್ತಿದೆ.

Vijaya Karnataka 26 Jan 2019, 5:00 am
ಭಾರತವಿಂದು 70ನೇ ಗಣರಾಜ್ಯ ದಿನವನ್ನು ಆಚರಿಸಿಕೊಳ್ಳುತ್ತಿದೆ. ಸಂವಿಧಾನವನ್ನು ಅಂಗೀಕರಿಸಿಕೊಂಡು, ತನ್ನನ್ನು ತಾನು ಸಾರ್ವಭೌಮ ಗಣರಾಜ್ಯ ಎಂದು ಘೋಷಿಸಿಕೊಂಡ ಆ ಸ್ವಾತಂತ್ರ್ಯೋತ್ತರದ ಎಳೆಹರೆಯದಿಂದ, 70ರ ಈ ಪ್ರೌಢವಯಸ್ಸಿನವರೆಗೆ ಭಾರತ ಯಶಸ್ವಿ ಪ್ರಜಾಸತ್ತೆಯಾಗಿ ನಡೆದುಬಂದಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿರುವ, ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿರುವ ನಮ್ಮೀ ದೇಶ, ತನ್ನ ಪಯಣದಲ್ಲಿ ದೊಡ್ಡ ಸಾಧನೆಯ ಮೈಲುಗಲ್ಲುಗಳನ್ನು ನೆಟ್ಟಿದೆ. ಯಾವುದೇ ಬಗೆಯ ಸರ್ವಾಧಿಕಾರ ನಮ್ಮ ದೇಶವನ್ನು ಆಕ್ರಮಿಸಿಲ್ಲ; ನಾವು ಅಂಗೀಕರಿಸಿರುವ ಸಮಾನತೆ- ವ್ಯಕ್ತಿಸ್ವಾತಂತ್ರ್ಯ ಹಾಗೂ ಬಹುತ್ವದ ಮೌಲ್ಯಗಳು ಸದೃಢವಾಗಿ ಉಳಿದುಕೊಂಡಿವೆ. ಸ್ವಾತಂತ್ರ್ಯದ ವೇಳೆ ಶೇ.12ರಷ್ಟಿದ್ದ ಸಾಕ್ಷರತಾ ಪ್ರಮಾಣ, ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಬೆಳವಣಿಗೆಯಿಂದಾಗಿ ಇಂದು ಶೇ.74ನ್ನು ತಲುಪಿದೆ. ನಿಯತ ಆರೋಗ್ಯ ಸೇವೆಯಿಂದಾಗಿ ಅಂದು 40 ವರ್ಷದಷ್ಟಿದ್ದ ಭಾರತೀಯರ ಸರಾಸರಿ ವಯೋಮಾನ ಇಂದು 69 ವರ್ಷ ತಲುಪಿದೆ. ಅಂದು ಮನುಷ್ಯನಿರ್ಮಿತ ಬರಗಾಲ ಹಾಗೂ ಹಸಿವಿನಿಂದ ತತ್ತರಿಸುತ್ತಿದ್ದ ದೇಶದಲ್ಲಿ ಹಸಿರುಕ್ರಾಂತಿ ಹಾಗೂ ಕ್ಷೀರಕ್ರಾಂತಿಗಳು ನಡೆದು, ಆಹಾರ ಧಾನ್ಯ ಉತ್ಪಾದನೆಯಲ್ಲಿ ಇಂದು ಸಂಪೂರ್ಣ ಸ್ವಾವಲಂಬಿ ಎನಿಸಿಕೊಂಡಿದೆ. ಭಾರತದ ದುಡಿಯುವ ಪ್ರತಿಭೆಗಳನ್ನು ಪಶ್ಚಿಮದ ಜಗತ್ತು ತೆರೆದ ತೋಳಿನಿಂದ ಸ್ವಾಗತಿಸಿದ್ದು, ಇಲ್ಲಿನ ಇಂಜಿನಿಯರ್‌ಗಳು ಹಾಗೂ ವೈದ್ಯರು ಯುರೋಪ್‌, ಅಮೆರಿಕ ಮುಂತಾದೆಡೆ ತುಂಬಿದ್ದಾರೆ. ದೇಶೀಯ ಹಿನ್ನೆಲೆಯಿಂದ ರೂಪುಗೊಂಡ ಪಂಚಾಯತ್‌ರಾಜ್‌ ಎಂಬ ಅಪೂರ್ವ ಆಡಳಿತ ವ್ಯವಸ್ಥೆಯಿಂದಾಗಿ, ಎಲ್ಲರಿಗೂ ರಾಜಕಾರಣದ ನಿಕಟ ಸಂಪರ್ಕ ಸಿಕ್ಕು, ಜಗತ್ತಿನಲ್ಲೇ ಅತ್ಯಂತ ಹೆಚ್ಚು ಜನಪ್ರತಿನಿಧಿಗಳನ್ನು ಹೊಂದಿದ ದೇಶವೆನಿಸಿದೆ. ರಕ್ಷಣಾ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿರುವ ಭಾರತ, ಇಂದು ಜಗತ್ತಿನ ಮೂರನೇ ಅತಿದೊಡ್ಡ ಸೈನ್ಯ ಹೊಂದಿದ ರಾಷ್ಟ್ರವೆನಿಸಿದೆ. ನಮ್ಮ ಹೆಮ್ಮೆಯ ವಿಜ್ಞಾನಿಗಳು ಚಂದ್ರ, ಮಂಗಳನವರೆಗೂ ಕೈಚಾಚಿದ್ದು, ಗಗನಯಾತ್ರಿಗಳನ್ನೂ ವ್ಯೋಮಕ್ಕೆ ಕಳುಹಿಸಲು ಸಜ್ಜಾಗಿದ್ದಾರೆ. 190 ದೇಶಗಳ ನಡುವೆ ವಿಶ್ವಬ್ಯಾಂಕ್‌ನ ಉದ್ಯಮಸ್ನೇಹಿ ಸೂಚ್ಯಂಕದಲ್ಲಿ ಭಾರತ 77ನೇ ಸ್ಥಾನ ಪಡೆದಿದೆ. ಎಲ್ಲರಿಗೂ ಶಿಕ್ಷಣ, ಎಲ್ಲರಿಗೂ ಬ್ಯಾಂಕ್‌ ಖಾತೆ, ಎಲ್ಲರಿಗೂ ಶೌಚಾಲಯ- ಹೀಗೆ ಎಲ್ಲರನ್ನೂ ಒಳಗೊಳ್ಳುವ ಸಾಮಾಜಿಕ ಪ್ರಕ್ರಿಯೆಯಲ್ಲಿ ಭಾರತ ಬಹುದೂರ ಸಾಗಿಬಂದಿದೆ- ಇವೇ ಮುಂತಾದ ಹೆಗ್ಗಳಿಕೆಗಳನ್ನು ಸಾಕಷ್ಟು ಪಟ್ಟಿ ಮಾಡಬಹುದು.
Vijaya Karnataka Web in


ಆದರೆ ಏಕತೆ, ಶಿಸ್ತು, ಸ್ವಚ್ಛತೆ- ಇತ್ಯಾದಿಗಳಲ್ಲಿ ನಾವು ಸಾಗಬೇಕಾದ ದಾರಿ ಇನ್ನೂ ಬಹಳಷ್ಟಿದೆ. ಒಂದಾಗಿ ಇರಬೇಕಿದ್ದ ದೇಶ ಗ್ರಾಮ ಹಾಗೂ ನಗರ ಭಾರತ ಎಂದು ಇಬ್ಭಾಗವಾಗಿದೆ. ದೊಡ್ಡ ಸಂಖ್ಯೆಯ ಗ್ರಾಮೀಣ ಜನಸಮುದಾಯ ಆರೋಗ್ಯ, ಶಿಕ್ಷಣ ಮುಂತಾದ ಎಲ್ಲ ಬಗೆಯ ಸೌಲಭ್ಯಗಳಿಂದ ವಂಚಿತವಾಗಿದೆ. ಬಡತನ ನಿರ್ಮೂಲನೆಗಾಗಿ ಎಷ್ಟೇ ಯೋಜನೆಗಳನ್ನೂ ಹಮ್ಮಿಕೊಂಡರೂ ಸದ್ಯಕ್ಕಂತೂ ಅದರ ವಿನಾಶ ಕನಸಾಗಿಯೇ ಉಳಿದುಕೊಂಡಿದೆ. ಎಲ್ಲರೂ ಸುಶಿಕ್ಷಿತರಾಗಬೇಕು ಎಂಬ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಕ್ರಮಗಳಿಂದಲೂ ಶೇ.100 ಸಾಕ್ಷರತೆ ಸಾಧ್ಯವಾಗಿಲ್ಲ. ಗಾಂಧೀಜಿಯವರು ಪರಮ ಮೌಲ್ಯವಾಗಿ ಪರಿಗಣಿಸಿದ್ದ ಶೌಚ, ಸ್ವಚ್ಛತೆಯನ್ನು ಸಾಧಿಸಲು ಸ್ವಚ್ಛಭಾರತ ಯೋಜನೆಯನ್ನು ಜಾರಿಗೆ ತರಲಾಗಿದ್ದರೂ ನಾವು ಅದರ ಪೂರ್ತಿ ಸದುಪಯೋಗ ಪಡೆದುಕೊಂಡಿಲ್ಲ. ಉದ್ಯೋಗ ಖಾತ್ರಿಗೆ ಎಷ್ಟೇ ಯೋಜನೆಗಳಿದ್ದರೂ ನಿರುದ್ಯೋಗ ಸಮಸ್ಯೆ ಕೊನೆಗಂಡಿಲ್ಲ. ಆರೋಗ್ಯ ಸೇವೆ ಎಷ್ಟೇ ಮುಂದುವರಿದಿದ್ದರೂ ಅಪೌಷ್ಟಿಕತೆಯಿಂದ ನರಳುವ ಕಂದಮ್ಮಗಳು- ಮಹಿಳೆಯರ ಬವಣೆ ಪೂರ್ತಿ ನೀಗಲು ಸಾಧ್ಯವಾಗಿಲ್ಲ. ಎಲ್ಲರೂ ಸುಖವಾಗಿರುವ ಆದರ್ಶರಾಜ್ಯ ಕನಸೇ ಇರಬಹುದು, ಆದರೆ ಅದರತ್ತಲಿನ ನಡಿಗೆಯಂತೂ ನಮಗಿಂದು ಅವಶ್ಯವಾಗಿದೆ. ರಾಜಕೀಯ ಸೇರಿದಂತೆ ಎಲ್ಲ ಕಡೆಯೂ ತಲೆತೂರಿಸುವ ಜಾತಿವೈಷಮ್ಯ, ಸಮಾಜವನ್ನು ಹದಗೆಡಿಸುವ ವರ್ಗ ಹಾಗೂ ಕೋಮುಸಂಘರ್ಷ ಇವುಗಳನ್ನು ನಿವಾರಿಸಿಕೊಂಡು ಆದರ್ಶ ಸಮಾಜದ ಕನಸನ್ನು ನನಸು ಮಾಡಿಕೊಳ್ಳುವತ್ತ ಮುನ್ನಡೆಯುವ ಸಂಕಲ್ಪವನ್ನು ನಾವಿಂದು ಮಾಡಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ