ಆ್ಯಪ್ನಗರ

ಆರ್ಥಿಕ ಸುಧಾರಣೆ ಕಟ್ಟುನಿಟ್ಟು

ದೇಶದ ಆರ್ಥಿಕಾಭಿವೃದ್ಧಿಗೆ ವೇಗ ನೀಡಲು, ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮತ್ತು ಆಂತರಿಕ ಸುರಕ್ಷೆಯನ್ನು ಮತ್ತಷ್ಟು ಖಚಿತಡಿಸಲು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಮಿತಿ ರಚನೆಗೆ ಮುಂದಾಗಿದ್ದಾರೆ.

Vijaya Karnataka 6 Jun 2019, 5:00 am
ದೇಶದ ಆರ್ಥಿಕಾಭಿವೃದ್ಧಿಗೆ ವೇಗ ನೀಡಲು, ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮತ್ತು ಆಂತರಿಕ ಸುರಕ್ಷೆಯನ್ನು ಮತ್ತಷ್ಟು ಖಚಿತಡಿಸಲು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಮಿತಿ ರಚನೆಗೆ ಮುಂದಾಗಿದ್ದಾರೆ. ಈ ಮೂಲಕ ಅವರು ತ್ವರಿತ ಆರ್ಥಿಕ ಸುಧಾರಣೆಗಳತ್ತ ದೃಷ್ಟಿ ನೆಟ್ಟಿದ್ದಾರುವುದು ಸ್ಪಷ್ಟವಾಗುತ್ತಿದೆ. ಈ ಹಿಂದಿನ ಅವಧಿಯಿಂದ ಇಲ್ಲಿಯವರೆಗೆ ಮೋದಿ ಸರಕಾರದ ಮೇಲಿರುವ ದೊಡ್ಡ ಅಪವಾದ ಎಂದರೆ, ಆರ್ಥಿಕಾಭಿವೃದ್ಧಿಯ ಹಿನ್ನಡೆ ಮತ್ತು ನಿರುದ್ಯೋಗ ಪ್ರಮಾಣದಲ್ಲಿ ಹೆಚ್ಚಳ. ಈ ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಈಗ ಕೈಗೊಂಡಿರುವ ನಿರ್ಧಾರ ಸಕಾಲಿಕವಾಗಿದೆ.
Vijaya Karnataka Web Modi


ಆಡಳಿತದ ದಕ್ಷತೆ ಹೆಚ್ಚಿಸುವಲ್ಲಿ ಮತ್ತು ಪ್ರಮುಖ ನೀತಿ ನಿರೂಪಣೆಯಲ್ಲಿ ಉನ್ನತಾಧಿಕಾರ ಹೊಂದಿರುವ ಸಚಿವರ ಸಮಿತಿಯ ಪಾತ್ರ ಪ್ರಮುಖವಾದದ್ದು. ಇದುವರೆಗೆ ರಕ್ಷ ಣೆ, ಆಂತರಿಕ ಭದ್ರತೆ, ಸಂಸದೀಯ ವ್ಯವಹಾರ ಇನ್ನಿತರ ವಿಷಯಗಳಿಗೆ ಅನೇಕ ಬಾರಿ ಸಂಪುಟ ಉಪ ಸಮಿತಿ ರಚನೆ ಮಾಡುವ ಪರಿಪಾಠವಿದೆ. ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಸಂಪುಟ ಉಪಸಮಿತಿ ರಚನೆಯಾಗುತ್ತಿರುವುದು ಇದೇ ಮೊದಲು. ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ), ನೋಟು ರದ್ದತಿಯಂಥ ಕ್ರಮಗಳು ದೇಶದ ಕೃಷಿ ವಲಯ, ಕೈಗಾರಿಕೆ, ವ್ಯಾಪಾರ, ಉದ್ಯೋಗಳ ಮೇಲೆ ಪರಿಣಾಮ ಬೀರಿದ್ದು, ಈ ವಲಯಗಳು ಮುಗ್ಗಟ್ಟು ಎದುರಿಸುತ್ತಿವೆ, ಈ ಕಾರಣದಿಂದಾಗಿಯೇ ದೇಶದ ಆರ್ಥಿಕ ಬೆಳವಣಿಗೆ ಹಿನ್ನಡೆ ಅನುಭವಿಸುತ್ತಿದೆ ಎಂದು ಪ್ರಧಾನಿ ಮೋದಿ ನೀತಿಗಳನ್ನು ಟೀಕಿಸುವ ಅರ್ಥ ಶಾಸ್ತ್ರಜ್ಞರು ಹೇಳುತ್ತಾರೆ. ಮತ್ತೊಂದೆಡೆ, ಈವರೆಗಿನ ಆರ್ಥಿಕಾಭಿವೃದ್ಧಿ ಸೂಚ್ಯಂಕಗಳು ವಾಸ್ತವಿಕ ನೆಲೆಗಟ್ಟನ್ನು ಹೊಂದಿರಲಿಲ್ಲ. ಮೋದಿ ಕೈಗೊಂಡ ನಿರ್ಧಾರಗಳಿಂದ ನಿಜವಾದ ಆರ್ಥಿಕಾಭಿವೃದ್ಧಿ ಯನ್ನು ಮುಂದಿನ ದಿನಗಳಲ್ಲಿ ಕಾಣಬಹುದಾಗಿದೆ. ತಾತ್ಕಾಲಿಕವಾಗಿ ನಮಗೆ ಹಿನ್ನಡೆ ಎನಿಸಿದರೂ ದೀರ್ಘಾವಧಿಯಲ್ಲಿ ಸದೃಢ ಆರ್ಥಿಕಾಭಿವೃದ್ಧಿಗೆ ಎಡೆ ಮಾಡಿಕೊಡಲಿದೆ ಎಂದು ಮೋದಿ ನಿರ್ಧಾರಗಳನ್ನು ಬೆಂಬಲಿಸುವ ಆರ್ಥಿಕ ತಜ್ಞರು ಹೇಳುತ್ತಾರೆ.

ಈ ಪರ ವಿರೋಧದ ಚರ್ಚೆಯ ನಡುವೆಯೇ ಮೋದಿ ಅವರು ತಮ್ಮ ಎರಡನೇ ಅವಧಿಯ ಮೊದಲ ಸಂಪುಟ ಸಭೆಯಲ್ಲಿ 6000 ರೂ. ನೇರ ನಗದು ಸಂದಾಯ ಮಾಡುವ ಪಿಎಂ ರೈತ ಸಮ್ಮಾನ್‌ ಯೋಜನೆಯನ್ನು ಎಲ್ಲ ರೈತರಿಗೆ ವಿಸ್ತರಣೆ ಮಾಡುವ ಹಾಗೂ 60 ವರ್ಷ ಮೇಲ್ಪಟ್ಟ ಎಲ್ಲ ರೈತರಿಗೆ 3000 ರೂ. ಪಿಂಚಣಿ ನೀಡುವ ಪ್ರಮುಖ ನಿರ್ಧಾರ ಪ್ರಕಟಿಸಿದರು. ಈ ಘೋಷಣೆಯ ಉದ್ದೇಶ ನೋಟು ರದ್ದತಿ ಕ್ರಮದಿಂದುಂಟಾದ ನಗದು ಕೊರತೆಯನ್ನು ನೀಗಿ ಕಾನೂನು ರೀತ್ಯ ನಗದು ಹರಿವನ್ನು ಹೆಚ್ಚಿಸುವುದು ಮತ್ತು ಅಸಂಘಟಿತ ವಲಯದಲ್ಲಿನ ನಿರುದ್ಯೋಗ ಪ್ರಮಾಣವನ್ನು ತಗ್ಗಿಸುವುದೇ ಆಗಿದೆ ಎಂದು ಆರ್ಥಿಕ ತಜ್ಞರು ವಿಷ್ಲೇಷಣೆ ಮಾಡುತ್ತಿದ್ದಾರೆ.

ಈಗ ಆರ್ಥಿಕತೆಗೆ ಉತ್ತೇಜನ ಕೊಡಲು ಮತ್ತು ಮತ್ತು ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಪುಟ ಉಪ ಸಮಿತಿ ರಚನೆ ಮಾಡಿರುವುದು ಈ ಅಭಿಪ್ರಾಯಕ್ಕೆ ಪೂರಕವಾಗಿದೆ. ಆರ್ಥಿಕತೆ ಮತ್ತು ಉದ್ಯೋಗ ಕ್ಷೇತ್ರವನ್ನು ಕೇಂದ್ರೀಕರಿಸಿ ಮೋದಿ ಸರಕಾರ ಮುಂದಡಿ ಇಡುತ್ತಿರುವ ಸಂದರ್ಭದಲ್ಲೇ ವಿಶ್ವಬ್ಯಾಂಕ್‌ ಮತ್ತು ಗೋಲ್ಡ್‌ಮನ್‌ ಸ್ಯಾಚ್‌ ವರದಿಗಳು ಹೊರ ಬಂದಿದ್ದು, ಮುಂಬರುವ ಎರಡು ಮೂರು ವರ್ಷಗಳಲ್ಲಿ ಭಾರತದ ಆರ್ಥಿಕಾಭಿವೃದ್ಧಿ ಶೇ.7.5ಕ್ಕೆ ತಲುಪಲಿದೆ ಎಂದಿರುವುದು ಹೊಸ ಭರವಸೆ ತಂದಿದೆ. ಒಟ್ಟಿನಲ್ಲಿ ಆರ್ಥಿಕ ಬೆಳವಣಿಗೆ ವೇಗ ಪಡೆದುಕೊಳ್ಳುವ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಹೊಸ ಭರವಸೆ ಹುಟ್ಟಿಕೊಳ್ಳುತ್ತಿದೆ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ