ಆ್ಯಪ್ನಗರ

ಖಲಿಸ್ತಾನ ಉಗ್ರನ ಜತೆ ಸಿಧು ನಂಟು ಪ್ರಶ್ನಾರ್ಹ

ಪಂಜಾಬ್‌ ಸರಕಾರದ ಸಚಿವ ನವಜೋತ್‌ ಸಿಂಗ್‌ ಸಿಧು ಅವರ ವರ್ತನೆ ಟೀಕೆಗೆ ಕಾರಣವಾಗಿದೆ...

Vijaya Karnataka Web 30 Nov 2018, 5:00 am
ಪಂಜಾಬ್‌ ಸರಕಾರದ ಸಚಿವ ನವಜೋತ್‌ ಸಿಂಗ್‌ ಸಿಧು ಅವರ ವರ್ತನೆ ಟೀಕೆಗೆ ಕಾರಣವಾಗಿದೆ. ಈ ಬಾರಿ ಅವರ ನಡತೆಯಲ್ಲಿ ದೇಶದ ಹಿತಾಸಕ್ತಿಗೆ ಧಕ್ಕೆಯಾಗುವಂಥ ಅಂಶವೂ ಸೇರಿಕೊಂಡಿರುವುದರಿಂದ, ಪ್ರಶ್ನಾರ್ಹವೆನಿಸಿದೆ. ಪಾಕಿಸ್ತಾನದಲ್ಲಿ ನಡೆದ ಕರ್ತಾರ್‌ಪುರ ಕಾರಿಡಾರ್‌ ಶಂಕುಸ್ಥಾಪನೆ ಕಾರ‍್ಯಕ್ರಮದಲ್ಲಿ ಪಾಲ್ಗೊಂಡ ಸಿಧು, ಅಲ್ಲಿ ಖಲಿಸ್ತಾನ್‌ ಭಯೋತ್ಪಾದಕ ಗೋಪಾಲ್‌ ಸಿಂಗ್‌ ಚಾವ್ಲಾ ಜತೆ ಫೋಟೊ ತೆಗೆಸಿಕೊಂಡಿದ್ದರು. ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ನೀಡಿದ ಆಹ್ವಾನವನ್ನು ಸ್ವೀಕರಿಸಿ ಕರ್ತಾರ್‌ಪುರಕ್ಕೆ ತೆರಳಿದ ಸಿಧು ನಡೆಯೂ ಟೀಕೆಗೊಳಗಾಗಿತ್ತು. ನಂತರ ಶಂಕುಸ್ಥಾಪನೆ ಕಾರ‍್ಯಕ್ರಮದಲ್ಲಿ ಸಚಿವ ಸಿಧು ಜತೆಗೆ ತೆಗೆಸಿಕೊಂಡಿರುವ ಫೋಟೊವನ್ನು ಗೋಪಾಲ್‌ ಸಿಂಗ್‌ ಚಾವ್ಲಾ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದ. ಗೋಪಾಲ್‌ ಚಾವ್ಲಾ, ಖಲಿಸ್ತಾನ ವಿಮೋಚನಾ ಹೋರಾಟದಲ್ಲಿರುವ ಪ್ರತ್ಯೇಕತಾವಾದಿಯಾಗಿದ್ದು, ಲಷ್ಕರೆ ತಯ್ಬಾದ ಮುಖ್ಯಸ್ಥ ಹಫೀಜ್‌ ಸಯೀದ್‌ ಜತೆಗೆ ಸಂಪರ್ಕ ಹೊಂದಿದ್ದಾನೆ. ಅನೇಕ ಕಾರ‍್ಯಕ್ರಮಗಳಲ್ಲಿ ಸಯೀದ್‌ ಜತೆಗೆ ವೇದಿಕೆ ಹಂಚಿಕೊಂಡಿದ್ದ. ಇತ್ತೀಚೆಗೆ ಅಮೃತಸರ ಸಮೀಪ ನಿರಂಕಾರಿ ಭವನದ ಮೇಲೆ ನಡೆದ ಗ್ರೆನೇಡ್‌ ದಾಳಿಯಲ್ಲಿ ಈತನ ಕೈವಾಡವಿದ್ದುದು ಬಯಲಿಗೆ ಬಂದಿದೆ. ಕಳೆದ ಆಗಸ್ಟ್‌ನಲ್ಲಿ ಸಿಧು, ಇಮ್ರಾನ್‌ ಖಾನ್‌ ಅವರ ಪ್ರಮಾಣ ವಚನ ಕಾರ‍್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿನ ಸೇನಾ ಮುಖ್ಯಸ್ಥ ಬಾಜ್ವಾರನ್ನು ಅಪ್ಪಿಕೊಂಡು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು.
Vijaya Karnataka Web edit


ಸಿಧು ಅವರೇನೋ ತಮ್ಮ ನಡೆಯನ್ನು 'ದೇಶಗಳ ನಡುವೆ ಸಂಬಂಧ ಬೆಸೆಯುವ ಕಾರ್ಯ' ಎಂಬಂತೆ ವ್ಯಾಖ್ಯಾನಿಸಿದ್ದಾರೆ. ಆದರೆ ಇದು ದೇಶಗಳ ನಡುವೆ ಸಂಬಂಧ ಗಟ್ಟಿಯಾಗಿಸುವುದಕ್ಕಿಂತಲೂ, ಆತ್ಮಗೌರವವನ್ನು ಬಿಟ್ಟ ನಡವಳಿಕೆಯಾಗಿಯಷ್ಟೇ ಕಾಣುತ್ತದೆ. ಪಂಜಾಬ್‌ ಸರಕಾರವೇ ಕಾರಿಡಾರ್‌ ಯೋಜನೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸದಿರುವಾಗ, ಸಚಿವ ಸ್ಥಾನದಲ್ಲಿರುವ ಸಿಧು ಹೋಗುವುದರಲ್ಲಿ ಔಚಿತ್ಯವಿಲ್ಲ. ಇಮ್ರಾನ್‌ ಖಾನ್‌ ಪ್ರಮಾಣ ವಚನಕ್ಕೆ ಅವರು ಹೋದದ್ದೇನೋ ವೈಯಕ್ತಿಕ ಮಿತ್ರತ್ವದ ನೆಲೆಯಲ್ಲಿ ಎಂದಿಟ್ಟುಕೊಂಡರೂ, ಭಾರತದ ಜೊತೆ ನಿರಂತರ ಮುಸುಕಿನೊಳಗಿನ ಯುದ್ಧ ನಡೆಸುತ್ತಿರುವ ಭಯೋತ್ಪಾದಕರನ್ನು ಪೋಷಿಸುತ್ತಿರುವ ಅಲ್ಲಿನ ಸೇನಾ ಮುಖ್ಯಸ್ಥರೊಡನೆ ಗೆಳೆತನ ಎಂಥದ್ದು? ಮತ್ತೆ ಇದೀಗ ಖಲಿಸ್ತಾನ್‌ ಉಗ್ರನ ಜತೆಗಿನ ಫೋಟೋವಂತೂ ಆಘಾತಕಾರಿ. ಭಾರತದ ಸಾರ್ವಭೌಮತೆಗೆ ಸವಾಲು ಎಸೆದಿರುವ ಪ್ರತ್ಯೇಕತಾವಾದಿಗಳ ಜೊತೆಗೆ ಮೈತ್ರಿ ಹೇಗೆ ಸಾಧ್ಯವಾಗುತ್ತದೆ? ಅದರಲ್ಲೂ ಸಿಧು ಅವರು ಜನಪ್ರತಿನಿಧಿ, ರಾಜ್ಯವೊಂದರ ಸಚಿವ. ಜವಾಬ್ದಾರಿಯುತ ಸ್ಥಾನದಲ್ಲಿರುವುದರಿಂದ ಸಿಧು ಅವರ ನಡವಳಿಕೆ ಮತ್ತಷ್ಟು ಪರಿಶೀಲನೆಗೊಳಪಡುತ್ತದೆ.

ಸಿಧು ಅವರು ಇತಿಹಾಸವನ್ನು ಒಮ್ಮೆ ಅವಲೋಕಿಸುವುದು ಒಳ್ಳೆಯದು. ಸಿಧು ಈಗ ಮೈತ್ರಿ ಹೊಂದಿರುವ ಖಲಿಸ್ತಾನ ಉಗ್ರರಿಂದಲೇ ಹಿಂದೊಮ್ಮೆ ಅವರ ಪಕ್ಷದ ಮಹಾನಾಯಕಿ, ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಕಗ್ಗೊಲೆಯಾದುದು. ಅದನ್ನು ಇಷ್ಟು ಬೇಗ ಸಿಧು ಮರೆತುಬಿಟ್ಟರೇ? ಸಿಧು ಅವರ ನಡೆಯನ್ನು ಅವರದೇ ಕಾಂಗ್ರೆಸ್‌ ಪಕ್ಷ ಹೇಗೆ ಸಮರ್ಥಿಸಿಕೊಳ್ಳುತ್ತದೋ ಗೊತ್ತಿಲ್ಲ. ಕಾಂಗ್ರೆಸ್‌ ಮುಖಂಡರು ತಮ್ಮ ಪಕ್ಷದ ಸದಸ್ಯನ ಈ ವರ್ತನೆಯನ್ನು ಖಂಡಿಸದೆ ಹೋದರೆ, ಅವರ ಮೌನ ಸಮ್ಮತಿ ಇದಕ್ಕಿದೆ ಎಂದು ಅರ್ಥವಾಗುತ್ತದೆ. ಭಾರತದಲ್ಲಿ ಆತಂಕ ಸೃಷ್ಟಿಸುವ, ಒಕ್ಕೂಟ ವ್ಯವಸ್ಥೆಯನ್ನು ಒಡೆಯುವ ಸಂಚು ಹೆಣೆಯುವವರ ಜತೆಗಿನ ಮೈತ್ರಿಯಿಂದ ಯಾವ ಲಾಭವೂ ಇಲ್ಲ. ಆದರವಿಲ್ಲದ ಕಡೆ ಹೋಗುವ, ಆತ್ಮಾಭಿಮಾನ ಬಿಟ್ಟು ವೈರಿಗಳನ್ನು ಮುದ್ದಾಡುವ ಚಾಳಿಯನ್ನು ಸಿಧು ಇನ್ನಾದರೂ ಬಿಟ್ಟು, ಹೊಣೆಯರಿತ ಜನನಾಯಕನ ಹಾಗೆ ನಡೆದುಕೊಳ್ಳಲಿ. ಕಾಂಗ್ರೆಸ್‌ ಕೂಡ ತನ್ನ ಮುಖಂಡನ ಈ ಬಗೆಯ ವರ್ತನೆಗೆ ಕಡಿವಾಣ ಹಾಕಲಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ