ಆ್ಯಪ್ನಗರ

ಸಿಖ್‌ ಹತ್ಯೆಗೆ ಇನ್ನಾದರೂ ಕಾಂಗ್ರೆಸ್‌ ವರಿಷ್ಠರು ವಿಷಾದಪಡಲಿ

ಸಿಖ್‌ ಹತ್ಯಾಕಾಂಡದ ಆರೋಪಿ, ಕಾಂಗ್ರೆಸ್‌ ಮುಖಂಡ ಸಜ್ಜನ್‌ಕುಮಾರ್‌ಗೆ ದಿಲ್ಲಿ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ. ಕ್ಷಮೆಯಾಚಿಸುವ, ಆರೋಪಿಗಳನ್ನು ದೂರವಿಡುವ ವಿವೇಕ ಸಂಬಂಧಿಸಿದವರಲ್ಲಿ ಇನ್ನೂ ಮೂಡದೆ ಇರುವುದು ಇನ್ನೊಂದು ವಿಪರ್ಯಾಸ.

Vijaya Karnataka Web 19 Dec 2018, 5:00 am
1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಗೆ ಪ್ರತೀಕಾರವಾಗಿ ನಡೆದ ಸಿಖ್‌ ಹತ್ಯಾಕಾಂಡದ ಆರೋಪಿ, ಕಾಂಗ್ರೆಸ್‌ ಮುಖಂಡ ಸಜ್ಜನ್‌ಕುಮಾರ್‌ಗೆ ದಿಲ್ಲಿ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ. 34 ವರ್ಷಗಳ ಸತತ ಕಾನೂನು ಹೋರಾಟದ ಬಳಿಕ, ಬದುಕುಳಿದ ಸಂತ್ರಸ್ತರಿಗೆ ನ್ಯಾಯ ದೊರೆತಿದೆ. ಆಡಳಿತ ಯಂತ್ರದ ಬೆಂಬಲದಿಂದ ಹಾಡಹಗಲೇ ನಡೆದ ಹತ್ಯಾಕಾಂಡದ ಅಪರಾಧಿಗಳಿಗೆ ಶಿಕ್ಷೆಯಾಗಲು ಮೂರು ದಶಕ ಕಾಯಬೇಕಾಗಿ ಬಂದದ್ದೊಂದು ವಿಪರ್ಯಾಸ. ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸುವ, ಆರೋಪಿಗಳನ್ನು ದೂರವಿಡುವ ವಿವೇಕ ಸಂಬಂಧಿಸಿದವರಲ್ಲಿ ಇನ್ನೂ ಮೂಡದೆ ಇರುವುದು ಇನ್ನೊಂದು ವಿಪರ್ಯಾಸ.
Vijaya Karnataka Web edit


ಸಿಖ್‌ವಿರೋಧಿ ದಂಗೆಗಳು ನಡೆದದ್ದು ದೇಶದ ಹೃದಯಭಾಗವಾದ ದಿಲ್ಲಿಯಲ್ಲೇ. ಸಂಸತ್‌ಭವನದ ಹತ್ತಿರವೇ ಕೆಲವು ಹತ್ಯೆಗಳು ನಡೆದಿದ್ದು, ಅದಕ್ಕೆ ಆಗಿನ ಕೆಲವು ಸಂಸತ್‌ ಸದಸ್ಯರು ಕೂಡ ನೇತೃತ್ವ ವಹಿಸಿದ್ದರು. ಪೊಲೀಸರು ದಂಗೆಕೋರರಿಗೆ ರಕ್ಷಣೆ ನೀಡಿದರೇ ವಿನಃ ಸಂತ್ರಸ್ತರ ನೆರವಿಗೆ ಧಾವಿಸಲಿಲ್ಲ. ಆಗಿನ ಪ್ರತ್ಯಕ್ಷದರ್ಶಿಗಳು ನೀಡಿರುವ ವಿವರಗಳ ಪ್ರಕಾರ, ಗಂಡಸರನ್ನು ಹೊರಗೆಳೆದು ಜೀವಂತ ಸುಡಲಾಯಿತು ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಯಿತು. ಸಾಕ್ಷಿಗಳನ್ನು ಕಲೆಹಾಕಿ, ಅಪರಾಧಿಗಳ ತನಿಖೆ ನಡೆಸಲೆಂದೇ ನಾನಾವತಿ ಆಯೋಗ, ಜಗನ್ನಾಥ್‌ ಮಿಶ್ರಾ ಸಮಿತಿ ಸೇರಿದಂತೆ ಹತ್ತು ಆಯೋಗಗಳು ನೇಮಕಗೊಂಡವು. ಪ್ರಭಾವಿ ಮುಖಂಡರಾದ ಕಾಂಗ್ರೆಸ್‌ ಸಂಸದ ಜಗದೀಶ್‌ ಟೈಟ್ಲರ್‌, ಸಜ್ಜನ್‌ಕುಮಾರ್‌, ಕಮಲ್‌ನಾಥ್‌ ಸೇರಿದಂತೆ ಸಮಿತಿಗಳು ಹೆಸರಿಸಿದ ಯಾರ ಮೇಲೂ ತನಿಖಾ ಪ್ರಕ್ರಿಯೆ ನಡೆಯಲಿಲ್ಲ; ಎಂದರೆ ಈ ಹತ್ಯಾಕಾಂಡದ ಹಿಂದಿದ್ದ ಅಧಿಕಾರಸ್ಥರ ಹಿಡಿತ ಹಾಗೂ ಹಿತಾಸಕ್ತಿಯನ್ನು ಊಹಿಸಬಹುದು. 2018ರಲ್ಲಿ ಪ್ರಕರಣದ ವಿಶೇಷ ತನಿಖಾ ತಂಡವನ್ನು ರಚಿಸಲು ಸುಪ್ರೀಂ ಕೋರ್ಟ್‌ ತಾಕೀತು ಮಾಡುವವರೆಗೂ ಅಪರಾಧಿಗಳು ಹಾಯಾಗಿ ಓಡಾಡುತ್ತಿದ್ದರು. ಸಿಟ್‌ ರಚನೆಯ ಬಳಿಕವೇ ತನಿಖೆ ಹಾಗೂ ವಿಚಾರಣೆ ಸಾಧ್ಯವಾಗಿ, ಒಬ್ಬಾತನಿಗೆ ಗಲ್ಲು ಶಿಕ್ಷೆಯೂ ಆಗಿದೆ. ಹಾಗಿದ್ದರೆ ಇಷ್ಟು ವರ್ಷ ಕಾಲ ಇವರನ್ನು ರಕ್ಷಿಸಿದವರು ಯಾರು?

ಇಂಥ ಹೀನ ಕೃತ್ಯಗಳನ್ನು ಮಾಡಿದವರು ಶಿಕ್ಷೆಗೊಳಗಾಗಬೇಕಾದುದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಜನ ನಂಬಿಕೆ ಕಳೆದುಕೊಳ್ಳದಿರಲು ಅಗತ್ಯ. ಹಾಗೆಯೇ ಅವರನ್ನು ಅಧಿಕಾರಸ್ಥರು ದೂರವಿಡಬೇಕಾದುದೂ ಅತ್ಯಗತ್ಯ. ಆದರೆ ಇಷ್ಟು ವರ್ಷಗಳಲ್ಲಿ, ಕಾಂಗ್ರೆಸ್‌ ವರಿಷ್ಠರು ತಪ್ಪಿತಸ್ಥರನ್ನು ಮುದ್ದು ಮಾಡುತ್ತಲೇ ಬಂದಿದ್ದಾರೆ. ಟೈಟ್ಲರ್‌ ಮುಂತಾದವರಿಗೆ ಸತತವಾಗಿ ಪ್ರಮುಖ ಹುದ್ದೆಗಳು ಸಿಗುತ್ತಲೇ ಇದ್ದವು. 2014ರಲ್ಲಿ ಇವರನ್ನು ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲಿಸಲು ಪಕ್ಷ ಮುಂದಾಗಿದ್ದರೂ, ಜನಾಕ್ರೋಶದ ಪರಿಣಾಮವಾಗಿಯಷ್ಟೇ ಆರೋಪಿಗಳಿಗೆ ಟಿಕೆಟ್‌ ತಪ್ಪಿತು. ಈಗಲೂ, ಇನ್ನೊಬ್ಬ ಆರೋಪಿ ಕಮಲ್‌ನಾಥ್‌ರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ ಮುಖ್ಯಸ್ಥರು ಆರಿಸಿದ್ದಾರೆ. ಕಾಂಗ್ರೆಸ್‌ ಮುಖಂಡರು, ದೊಡ್ಡ ಪದವಿಗಳಲ್ಲಿರುವ ಆರೋಪಿಗಳ ರಾಜೀನಾಮೆ ಪಡೆದು, ಆಗಿಹೋದ ಹಿಂಸಾಚಾರದ ಹೊಣೆಯನ್ನು ಹೊತ್ತುಕೊಂಡು, ದೇಶದ ಕ್ಷಮೆ ಯಾಚಿಸುವುದು ಅಗತ್ಯ. ಈ ಹಿಂದೆ ದೊಡ್ಡ ದುರಂತಗಳು ನಡೆದಾಗಲೆಲ್ಲ, ಅದಕ್ಕೆ ಕಾರಣರಾದವರ ಉತ್ತರಾಧಿಕಾರಿಗಳು ಮುಂದೆ ಕ್ಷಮೆ ಯಾಚಿಸಿದ್ದು ಇದೆ. ಕನಿಷ್ಠ ಪಶ್ಚಾತ್ತಾಪ, ವಿಷಾದವನ್ನಾದರೂ ವ್ಯಕ್ತಪಡಿಸಬೇಕಾಗುತ್ತದೆ. ಆದರೆ ಕಾಂಗ್ರೆಸ್‌ ಅಧ್ಯಕ್ಷರು ಅದನ್ನೂ ಮಾಡದೆ, ''ಕಾಂಗ್ರೆಸ್‌ ಮುಖಂಡರ ಪಾತ್ರ ಇದರಲ್ಲಿ ಇಲ್ಲ,'' ಎಂದು ವಾದಿಸುತ್ತ ಬಂದಿದ್ದಾರೆ. ಸಜ್ಜನ್‌ಕುಮಾರ್‌ ಶಿಕ್ಷೆಯಾದುದರ ಕುರಿತೂ ಚಕಾರ ಎತ್ತಿಲ್ಲ. ಇದು ಕೋಟ್ಯಂತರ ಕಣ್ಣುಗಳ ಮುಂದೆಯೇ ನಡೆಸುತ್ತಿರುವ ಮೊಂಡುತನ.

ಇಷ್ಟು ವರ್ಷಗಳಾದ ಬಳಿಕವಾದರೂ ಅಪರಾಧಿಗಳಿಗೆ ಶಿಕ್ಷೆಯಾದುದು ನಮ್ಮ ನ್ಯಾಯವ್ಯವಸ್ಥೆಯ ಸರಿಯಾದ ದಾರಿಯಲ್ಲಿದೆ ಎಂಬುದರ ನಿದರ್ಶನ; ಆದರೆ ವಿಳಂಬನ್ಯಾಯ, ನ್ಯಾಯವನ್ನೇ ನಿರಾಕರಿಸಿದಂತೆ. ಈ ಹತ್ಯಾಕಾಂಡದ ನೋವಿನ ಗಡ್ಡೆಯನ್ನು ಎದೆಯಲ್ಲಿಟ್ಟುಕೊಂಡು ನಮ್ಮ ಭವಿಷ್ಯದ ಜನಾಂಗ ನರಳಬಾರದು. ಅದಕ್ಕಾಗಿ ಇನ್ನಷ್ಟು ಶೀಘ್ರವಾಗಿ ವಿಚಾರಣೆ ಹಾಗೂ ನ್ಯಾಯ, ಜತೆಗೆ ಸಂಬಂಧಪಟ್ಟವರಿಂದ ಪಶ್ಚಾತ್ತಾಪದ ಮೂಲಕ ದೇಶದೆದುರು ಆತ್ಮಶುದ್ಧಿ ಮತ್ತು ಕಠಿಣ ಕ್ರಮ- ಇವೆರಡೂ ಆಗಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ