ಆ್ಯಪ್ನಗರ

ಪಕ್ಕದ ದೇಶಗಳ ಸ್ನೇಹವರ್ಧನೆ

ಭರವಸೆ ಮೂಡಿಸಿದ ಪ್ರಧಾನಿ ಮಾಲ್ದೀವ್ಸ್‌, ಶ್ರೀಲಂಕಾ ಭೇಟಿ

Vijaya Karnataka Web 10 Jun 2019, 5:00 am
ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಕದ ದೇಶಗಳಾದ ಮಾಲ್ಡೀವ್ಸ್‌ ಹಾಗೂ ಶ್ರೀಲಂಕೆಗೆ ತಮ್ಮ ಎರಡನೇ ಅವಧಿಯ ಮೊದಲ ಭೇಟಿ ನೀಡಿ, ಭಾರತದ 'ನೆರೆಹೊರೆಯೇ ಮೊದಲು' ನೀತಿಯನ್ನು ಪ್ರತಿಪಾದಿಸಿದ್ದಾರೆ. ಐಎಸ್‌ ಉಗ್ರರಿಂದ ದಾಳಿಗೊಳಗಾದ ಶ್ರೀಲಂಕೆಯ ಚರ್ಚ್‌ಗೆ ಅವರು ಭೇಟಿ ನೀಡಿರುವುದು, 'ಸಂಕಷ್ಟದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ' ಎಂಬ ಸಂದೇಶವನ್ನು ರವಾನಿಸಿದಂತಾಗಿದೆ. ಭಯೋತ್ಪಾದನೆ ವಿರುದ್ಧ ಶ್ರೀಲಂಕಾದ ಹೋರಾಟಕ್ಕೆ ಭಾರತ ಸಂಪೂರ್ಣ ಸಹಕಾರ, ಬೆಂಬಲ ನೀಡಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ. ಇನ್ನು ಪುಟ್ಟ ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್‌ಗೆ ಅವರು ನೀಡಿದ ಭೇಟಿಯಿಂದ, ಉಭಯ ದೇಶಗಳ ನಡುವೆ ಮೈತ್ರಿ-ಸಹಕಾರ ವೃದ್ಧಿಯ ವಿಶ್ವಾಸ ಮೈದೋರಿದೆ. ಭಾರತದಿಂದ ಮಾಲ್ಡೀವ್ಸ್‌ಗೆ ನೌಕಾಸಾರಿಗೆ, ಪ್ರವಾಸೋದ್ಯಮ ವೃದ್ಧಿ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ; ಜತೆಗೆ, ಮಾಲ್ದೀವ್ಸ್‌ನಲ್ಲಿ ಭಾರತದಿಂದ ನಿರ್ಮಿಸಲಾದ ಕರಾವಳಿ ನಿಗಾ ರೇಡಾರ್‌ ವ್ಯವಸ್ಥೆಯನ್ನೂ ಮೋದಿ ಉದ್ಘಾಟಿಸಿದ್ದಾರೆ. ಎರಡೂ ದೇಶಗಳ ಜಂಟಿ ಮಿಲಿಟರಿ ತರಬೇತಿ ಕಾರ್ಯಕ್ರಮವನ್ನೂ ಉದ್ಘಾಟಿಸಲಾಗಿದೆ. ಇವುಗಳು ಮಹತ್ವದ ಅಂತಾರಾಷ್ಟ್ರೀಯ ಬೆಳವಣಿಗೆಗಳಾಗಿವೆ.
Vijaya Karnataka Web m s


ಈ ಎರಡೂ ದೇಶಗಳು, ತಮ್ಮ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ, ಚೀನಾ ಪರ ಒಲವು ಹೊಂದಿದ್ದವು ಎಂಬುದನ್ನು ಗಮನಿಸಬಹುದು. ಶ್ರೀಲಂಕಾದಲ್ಲಿ ಮಹಿಂದ ರಾಜಪಕ್ಷ ಅಧ್ಯಕ್ಷಾವಧಿಯಲ್ಲಿ, ಅಲ್ಲಿನ ಹಂಬನ್‌ತೊಟ ಬಂದರನ್ನು ಚೀನಾಕ್ಕೆ ರಕ್ಷಣಾ ನೆಲೆ ಅಭಿವೃದ್ಧಿಗೆ ನೀಡಲಾಗಿತ್ತು. ಮಾಲ್ದೀವ್ಸ್‌ನ ಹಿಂದಿನ ಅಧ್ಯಕ್ಷ ಅಬ್ದುಲ್ಲಾ ಯಾಮೀನ್‌ ಅವರು, ಭಾರತೀಯ ನೌಕರರಿಗೆ ವೀಸಾ ನಿರ್ಬಂಧಿಸಿ, ಚೀನಾದ ಜತೆ ಬಾಂಧವ್ಯ ವೃದ್ಧಿಸಿಕೊಂಡಿದ್ದರು. ಚೀನಾ ದೇಶ, ತನ್ನ ಮಹತ್ವಾಕಾಂಕ್ಷೆಯ 'ಒನ್‌ ಬೆಲ್ಟ್‌ ಒನ್‌ ರೋಡ್‌' ಯೋಜನೆಯಡಿಯಲ್ಲಿ ಈ ಎರಡೂ ದೇಶಗಳನ್ನು ಸೇರಿಸಿಕೊಂಡು, ವಾಣಿಜ್ಯ ವಹಿವಾಟಿನ ಹೆಸರಿನಲ್ಲಿ ವ್ಯೂಹಾತ್ಮಕ ಸಂಬಂಧ ವೃದ್ಧಿಸಿಕೊಳ್ಳುವ ಯತ್ನವನ್ನೇ ಮಾಡಿತ್ತು. ಚೀನಾದ ಈ ಹುನ್ನಾರವನ್ನು ಭಾರತ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ, ಈ ಎರಡೂ ದೇಶಗಳೊಂದಿಗೆ ಬಾಂಧವ್ಯವನ್ನು ವೃದ್ಧಿಸಿಕೊಂಡು, ಚೀನಾದ ಕಬಂಧಬಾಹುವಿನಿಂದ ಅವುಗಳನ್ನು ಬಿಡಿಸುವುದು ಭಾರತದ ಸುರಕ್ಷತೆಗೆ ಅಗತ್ಯವಾಗಿತ್ತು. ಮೋದಿಯವರ ಭೇಟಿ ಆ ನಿಟ್ಟಿನಲ್ಲಿ ವಿಶ್ವಾಸ ಮೂಡಿಸಿದ ಅಪೂರ್ವ ಸಾಧನೆಯಾಗಿದೆ.

ಅಕ್ಕಪಕ್ಕದ ದೇಶಗಳೊಂದಿಗೆ ಸುಮಧುರ ಬಾಂಧವ್ಯ ಕಾಪಾಡಿಕೊಳ್ಳುವುದು, ವಾಣಿಜ್ಯ ವ್ಯವಹಾರ ವರ್ಧಿಸಿಕೊಳ್ಳುವುದು ನಮ್ಮ ಬೆಳವಣಿಗೆಗೂ ನೆಮ್ಮದಿಗೂ ಎಷ್ಟು ಅಗತ್ಯ ಎನ್ನುವುದನ್ನು ಮತ್ತೆ ವಿವರಿಸಬೇಕಿಲ್ಲ. ಮೋದಿಯವರ ನಡೆ ಆ ದಿಕ್ಕಿನಲ್ಲಿ ಸ್ಪಷ್ಟವಾಗಿಯೇ ಇದೆ. ಅಕ್ಕಪಕ್ಕದ ದೇಶಗಳಿಗೆ ಮೊದಲ ಆದ್ಯತೆ ನೀಡುವ 'ನೇಬರ್‌ಹುಡ್‌ ಫಸ್ಟ್‌' ನೀತಿ ಹಾಗೂ ವ್ಯೂಹಾತ್ಮಕ ಸಂಬಂಧ ಬೆಸೆಯುವ 'ಸಾಗರ್‌'(ಈ ಪ್ರಾಂತ್ಯದ ಎಲ್ಲ ದೇಶಗಳಿಗೆ ಭದ್ರತೆ ಹಾಗೂ ಬೆಳವಣಿಗೆ) ತತ್ವಗಳಿಗೆ ಬದ್ಧರಾಗಿ ಅವರ ವಿದೇಶಾಂಗ ತಂಡ ನಡೆದುಕೊಳ್ಳುತ್ತಿದೆ. ಚೀನಾದ ಸಾಲದ ಹೊರೆಯಿಂದ ತತ್ತರಿಸಿರುವ ಶ್ರೀಲಂಕಾ ಹಾಗೂ ಮಾಲ್ದೀವ್ಸ್‌ಗಳ ನಾನಾ ಯೋಜನೆಗಳಿಗೆ ಅಪಾರ ಧನಸಹಾಯವನ್ನೂ ಭಾರತ ಘೋಷಿಸಿದ್ದು, ಚೀನಾದ ತೆಕ್ಕೆಯಿಂದ ಅವುಗಳನ್ನು ಬಿಡಿಸುವತ್ತ ಮೊದಲ ನಡೆ. ಉಭಯ ದೇಶಗಳ ಮುಖಂಡರು ಭಾರತದ ಜೊತೆಗೆ ಹೆಚ್ಚಿನ ವಿಶ್ವಾಸದಿಂದ ನಡೆದುಕೊಳ್ಳುತ್ತಿರುವುದು ಈ ನೀತಿಯ ಫಲಪ್ರದತೆಯ ದ್ಯೋತಕ. ಹಾಗೆಯೇ ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನದ ಪ್ರಚೋದನೆಯಿಂದ ಹಬ್ಬುತ್ತಿರುವ ಇಸ್ಲಾಮಿಕ್‌ ಉಗ್ರರ ವಿಸ್ತರಣೆಯನ್ನು ತಡೆಯಲು ಕೂಡ ಈ ಪ್ರಾಂತ್ಯದ ಎಲ್ಲ ದೇಶಗಳ ಗೂಢಚರ ವ್ಯವಸ್ಥೆಯ ಸಂಪರ್ಕಜಾಲ ಅಗತ್ಯವಾಗಿದೆ.

ಒಂದೆಡೆ ತೈಲ ಹಾಗೂ ರಕ್ಷಣಾ ಒಪ್ಪಂದಗಳ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳು ಜಟಿಲವಾಗುತ್ತಿವೆ; ಪಕ್ಕದಲ್ಲೇ ಪಾಕಿಸ್ತಾನದಂಥ ಶತ್ರು ಹಾಗೂ ಚೀನಾದಂಥ ಹಿತಶತ್ರು ದೇಶಗಳೂ ಇವೆ; ಅಂಥ ಸನ್ನಿವೇಶದಲ್ಲಿ ಅಕ್ಕಪಕ್ಕದಲ್ಲಿ ಒಳ್ಳೆಯ ಮಿತ್ರ ರಾಷ್ಟ್ರಗಳನ್ನು ಹೊಂದಿರುವುದು ಶ್ರೇಯಸ್ಕರ. ಆ ದಿಕ್ಕಿನಲ್ಲಿ ನಮ್ಮ ಹೆಜ್ಜೆಗಳು ಸ್ಪಷ್ಟವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ