ಆ್ಯಪ್ನಗರ

ಆರ್ಥಿಕ ವಂಚನೆ ತಡೆಗೆ ಸೂತ್ರ

ಬಿಗಿ ಕ್ರಮಗಳಿಂದ ಕಾಳಧನ ವ್ಯವಹಾರವನ್ನು ಮಣಿಸಬಹುದು

Vijaya Karnataka Web 18 Jun 2019, 5:00 am
ಭಾರತದಲ್ಲಿ ತೆರಿಗೆ ವಂಚಿಸಲು ಯತ್ನಿಸುವವರ ಸಂಖ್ಯೆ ಅಧಿಕ; ಆರ್ಥಿಕ ಸುಶಿಕ್ಷಿತತೆ ನಮ್ಮಲ್ಲಿ ಇಲ್ಲದಿರುವುದೇ ಇದಕ್ಕೆ ಕಾರಣ. ತೆರಿಗೆ ವಂಚನೆ, ಕಾಳಧನದ ವಹಿವಾಟನ್ನು ತಡೆಗಟ್ಟಲು ಕೇಂದ್ರ ಸರಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ; ಈ ಕ್ರಮಗಳ ಸರಣಿಯಲ್ಲಿ 'ನೇರ ತೆರಿಗೆ ಕಾನೂನುಗಳ ಅಡಿಯಲ್ಲಿ ಬರುವ ಅಪರಾಧಗಳ ಇತ್ಯರ್ಥ' ಮಾರ್ಗಸೂಚಿಯೂ ಒಂದು. ಇದು ಜೂ.17ರಿಂದ ಜಾರಿಯಾಗಿದೆ. ವಿದೇಶಿ ಬ್ಯಾಂಕ್‌ ಖಾತೆಗಳಲ್ಲಿ ಕಪ್ಪುಹಣ ಹೂಡಿಕೆ ಮಾಡಿರುವವರು, ಬೇನಾಮಿ ವರ್ಗಾವಣೆ ಮಾಡುವವರು, ನಕಲಿ ಕಂಪನಿಗಳನ್ನು ನಡೆಸುತ್ತಿರುವರು ಇನ್ನು ಮುಂದೆ ಕೇವಲ ದಂಡ ಕಟ್ಟಿ ವಿಚಾರಣೆಯಿಂದ ತಪ್ಪಿಸಿಕೊಳ್ಳದಂತೆ ಸರಕಾರ ಇದರಲ್ಲಿ ನಿಯಮಾವಳಿಗಳನ್ನು ಬಿಗಿಗೊಳಿಸಿದೆ. ಹೊಸ ಮಾರ್ಗದರ್ಶಿಯ ಪ್ರಕಾರ ವಿದೇಶಿ ಬ್ಯಾಂಕ್‌ ಖಾತೆಗಳಲ್ಲಿ ಅಕ್ರಮ ಸಂಪತ್ತು ಮತ್ತು ಆಸ್ತಿ ಹೊಂದಿರುವವರು, ಬೇನಾಮಿ ವರ್ಗಾವಣೆ ಕೇಸ್‌ಗಳ ಆರೋಪಿಗಳು ದಂಡ ಕಟ್ಟಿ ವಿಚಾರಣೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. ನಕಲಿ ಕಂಪನಿ, ಬೋಗಸ್‌ ಇನ್‌ವಾಯ್ಸ್‌ ಇತ್ಯಾದಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲೂ ವಿಚಾರಣೆ ಎದುರಿಸಲೇಬೇಕು. ಸಾವಿರಾರು ಮಂದಿ ಇಂಥ ಪ್ರಕರಣಗಳ ಅಡಿಯಲ್ಲಿ ದಂಡ ಕಟ್ಟಿ ಪಾರಾಗುತ್ತಿರುವುದು ಕಂಡು ಬಂದಿರುವುದರಿಂದ, ನಿಯಮಾವಳಿಯನ್ನು ಬಿಗಿಗೊಳಿಸಲಾಗಿದೆ. ಇದರ ಪ್ರಕಾರ, ಸಾಮಾನ್ಯ ತೆರಿಗೆದಾರರು ಟಿಡಿಎಸ್‌ ಪಾವತಿಸದಿರುವುದು, ಐಟಿಆರ್‌ ಸಲ್ಲಿಸದಿರುವುದನ್ನೂ ಗಂಭೀರವಾಗಿಯೇ ಪರಿಗಣಿಸಲು ತೆರಿಗೆ ಇಲಾಖೆ ಸಜ್ಜಾಗಿದೆ. ಇದರಿಂದ, ತೆರಿಗೆದಾರರು ತಮ್ಮ ತೆರಿಗೆ ದಾಖಲೆಗಳನ್ನು ಹೆಚ್ಚು ಎಚ್ಚರಿಕೆಯಿಂದ ಸಮಯಕ್ಕೆ ಸರಿಯಾಗಿ ಸಲ್ಲಿಸುವ ತೆರಿಗೆಯ ಶಿಸ್ತನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದೆ.
Vijaya Karnataka Web edit


ಬೇನಾಮಿ ವಹಿವಾಟುಗಳು ಮತ್ತು ತೆರಿಗೆ ವಂಚನೆಯಿಂದ ಸರಕಾರದ ಬೊಕ್ಕಸಕ್ಕೆ ಆಗುತ್ತಿರುವ ಹಾನಿ ಅಪಾರ; ಅದನ್ನು ತಡೆಗಟ್ಟುವುದು ಯಾವತ್ತೂ ತೆರಿಗೆ ಇಲಾಖೆಗೆ ತಲೆನೋವಿನ ವಿಚಾರವೇ. ಅದಕ್ಕೆ ಸಾಕಷ್ಟು ಕ್ರಮಗಳನ್ನು ಅದು ಕೈಗೊಂಡಿದೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರಕಾರವೇ ಮುಂದೆ ನಿಂತು ಹಲವು ಕ್ರಾಂತಿಕಾರಕ ಕ್ರಮಗಳ ಮೂಲಕ ದೇಶದಲ್ಲೊಂದು ವಿತ್ತೀಯ ಶಿಸ್ತನ್ನು ರೂಢಿಸಲು ಪ್ರಯತ್ನಿಸಿತು. 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣದಿಂದ ದೊಡ್ಡ ಮುಖಬೆಲೆಯ ಹಣಗಳಲ್ಲಿ ನಿಕ್ಷೇಪವಾಗುತ್ತಿದ್ದ ಕಪ್ಪು ಹಣ ದೇಶದ ಆರ್ಥಿಕ ಮುಖ್ಯವಾಹಿನಿಯನ್ನು ಸೇರಿತು. ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದಾಗಿ ಹಲವು ಕಡೆಗಳ ತೆರಿಗೆ ಕಿರಿಕಿರಿ ತಪ್ಪಿ ಒಂದೇ ಕಡೆ ಸಲ್ಲಿಸುವ ಸುಗಮ ಸೌಲಭ್ಯ ಜಾರಿಯಾಯಿತು. ದಿವಾಳಿ ಕಾಯ್ದೆಯ ಕಟ್ಟುನಿಟ್ಟು ಅನುಷ್ಠಾನ ಹಾಗೂ ಸುಸ್ತಿ ಸಾಲಗಳ ಪಾವತಿಗೆ ಬಿಗಿ ಕ್ರಮಗಳಿಂದಾಗಿ ದೇಶದ ಆರ್ಥಿಕತೆಯ ಬೆನ್ನೆಲುಬೇ ಆಗಿರುವ ಬ್ಯಾಂಕಿಂಗ್‌ ವಲಯದ ಸುಸ್ಥಿರತೆಗೆ ನಾಂದಿ ಹಾಡಲಾಯಿತು. ಎಲ್ಲ ಹಂತಗಳಲ್ಲಿ ಡಿಜಿಟಲೀಕರಣ ಹಾಗೂ ನೇರ ಫಲಾನುಭವಿ ಸ್ಕೀಮುಗಳಿಂದಾಗಿ, ಮಧ್ಯವರ್ತಿಗಳ ಹಾವಳಿಯಿಂದ ಆಗುತ್ತಿದ್ದ ವಂಚನೆಯನ್ನು ತಡೆಗಟ್ಟಲಾಯಿತು. ಮೇಲೆ ಹೆಸರಿಸಿದ ಹಾಗೂ ಇನ್ನೂ ಹಲವು ಕ್ರಮಗಳ ಫಲಶ್ರುತಿ ನಮ್ಮ ಕಣ್ಣ ಮುಂದೆಯೇ ಇದೆ. ಇವೆಲ್ಲದರಿಂದಾಗಿ ವಿತ್ತೀಯ ವಹಿವಾಟಿನಲ್ಲಿ ಉಂಟಾಗಿರುವ ಒಂದು ಬಗೆಯ ಪಾರದರ್ಶಕತೆಯನ್ನು ಗಮನಿಸಬಹುದು.

ಈ ಎಲ್ಲ ಕ್ರಮಗಳ ಹೊರತಾಗಿಯೂ ತೆರಿಗೆ ವಂಚನೆಗಳು ಮುಂದುವರಿಯಬಹುದು ಹಾಗೂ ಅದನ್ನು ತಡೆಗಟ್ಟಲು ಮತ್ತಷ್ಟು ಕ್ರಮಗಳನ್ನು ನಿರಂತರವಾಗಿ, ದೃಢವಾಗಿ ರೂಢಿಸುವುದು ಅಗತ್ಯವಾಗುತ್ತದೆ. ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕತೆಯಾಗುವತ್ತ ಹೆಜ್ಜೆಯಿಡುತ್ತಿರುವ ಭಾರತದ ಆರ್ಥಿಕತೆಯ ಮೊತ್ತ 1.83 ಕೋಟಿ ಕೋಟಿ ರೂ.ಗಳಷ್ಟು ಅಗಾಧವಾಗಿದ್ದು, ಮುಂದಿನ ವರ್ಷಗಳಲ್ಲಿ ಬೆಳೆಯುತ್ತಲೇ ಹೋಗಲಿದೆ. ಇಂಥ ಅಗಾಧ ಆರ್ಥಿಕತೆಯು ತನ್ನನ್ನು ಸುಸ್ಥಿರವಾಗಿಟ್ಟುಕೊಳ್ಳುವ, ವಂಚನೆಗಳನ್ನು ಮೊಳಕೆಯಲ್ಲೇ ಚಿವುಟಿಹಾಕುವ ಹಾಗೂ ಪಾರದರ್ಶಕ- ಪ್ರಾಮಾಣಿಕ ತೆರಿಗೆದಾರರ ಪ್ರಜಾಸಮೂಹವನ್ನು ಕಟ್ಟುವ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿವೆ. ಆ ನಿಟ್ಟಿನಲ್ಲಿ ಇದು ಹಾಗೂ ಇಂಥ ಇನ್ನಷ್ಟು ಕ್ರಮಗಳು ಸ್ವಾಗತಾರ್ಹ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ