ಆ್ಯಪ್ನಗರ

ಎನ್‌ಐಗೆ ಹೆಚ್ಚಿನ ಬಲ

ಭಯೋತ್ಪಾದನೆ ತಡೆಗೆ ಕಠಿಣ ಕ್ರಮ ಬೇಕು

Vijaya Karnataka Web 16 Jul 2019, 5:00 am
ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ವನ್ನು ಬಲಪಡಿಸುವ 'ರಾಷ್ಟ್ರೀಯ ತನಿಖಾ ದಳ (ತಿದ್ದುಪಡಿ) ವಿಧೇಯಕ-2019'ನ್ನು ಕೇಂದ್ರ ಸರಕಾರ ಲೋಕಸಭೆಯಲ್ಲಿ ಸೋಮವಾರ ಮಂಡಿಸಿದ್ದು, ಅನುಮೋದನೆ ಪಡೆದುಕೊಂಡಿದೆ. ಭಯೋತ್ಪಾದನೆಯ ವಿರುದ್ಧ ದೇಶದ ಹೋರಾಟವನ್ನು ಇನ್ನಷ್ಟು ಕಠಿಣಗೊಳಿಸುವುದೇ ಈ ಕಾಯಿದೆಯ ಉದ್ದೇಶ. ಈ ಸಂದರ್ಭದಲ್ಲಿ ಭಯೋತ್ಪಾದನೆ ವಿರುದ್ಧ ಸರಕಾರದ ಶೂನ್ಯ ಸಹನೆ ನೀತಿಯನ್ನು ಪುನರುಚ್ಚರಿಸಿದ ಗೃಹ ಸಚಿವ ಅಮಿತ್‌ ಶಾ, ''ಉಗ್ರವಾದ ಉಗ್ರವಾದವೇ. ಅದಕ್ಕೆ ಎಡ ಅಥವಾ ಬಲ ಎಂಬ ಹಣೆಪಟ್ಟಿ ಕಟ್ಟಲಾಗದು,'' ಎಂದು ಹೇಳಿದ್ದಾರೆ. ''ಕೇಂದ್ರ ಸರಕಾರ ರಾಜಕೀಯ ದ್ವೇಷ ಸಾಧನೆಗೆ ಎನ್‌ಐಎನ್ನು ದಾಳವಾಗಿ ಬಳಸಿಕೊಳ್ಳಲಿದೆ. ಭಾರತವನ್ನು 'ಪೊಲೀಸ್‌ ಸ್ಟೇಟ್‌' ಆಗಿಸಲು ಪ್ರಯತ್ನಿಸುತ್ತಿದೆ,'' ಎಂಬ ಪ್ರತಿಪಕ್ಷಗಳ ವಾದವನ್ನು ಅವರು ತಳ್ಳಿಹಾಕಿದ್ದು, ''ರಾಷ್ಟ್ರೀಯ ಹಿತಾಸಕ್ತಿಯೇ ನಮ್ಮ ಆದ್ಯತೆ,'' ಎಂದು ಸಾರಿದ್ದಾರೆ.
Vijaya Karnataka Web edit


ಜಾರಿಯಾಗಲಿರುವ ಹೊಸ ಕಾಯಿದೆಯಲ್ಲಿ ಎನ್‌ಐಎ ವ್ಯಾಪ್ತಿಗೆ ಇನ್ನಷ್ಟು ವಿಶೇಷಾಧಿಕಾರಗಳನ್ನು ಸೇರಿಸಲಾಗಿದೆ. ಭಾರತದ ಭದ್ರತೆಗೆ ಸಂಬಂಧಿಸಿದ ದೇಶ-ವಿದೇಶಗಳಲ್ಲಿನ ಭಯೋತ್ಪಾದನಾ ಪ್ರಕರಣಗಳ ವಿಚಾರಣೆಗೆ ಎನ್‌ಐಎಗೆ ಅಧಿಕಾರ ನೀಡಲಾಗಿದೆ. ಪ್ರಕರಣಗಳ ವಿಚಾರಣೆಗೆ ವಿಶೇಷ ಕೋರ್ಟ್‌ಗಳನ್ನು ಸ್ಥಾಪಿಸಲ ಅವಕಾಶ ನೀಡಲಾಗಿದೆ. ಉಗ್ರರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಯನ್ನೂ 'ಭಯೋತ್ಪಾದಕ' ಎಂದು ವಿಚಾರಣೆ ನಡೆಸಲು ಅನುಕೂಲ ಕಲ್ಪಿಸಲಾಗಿದೆ. ಸೈಬರ್‌ ಅಪರಾಧ, ಮಾನವ ಕಳ್ಳಸಾಗಣೆ, ನಕಲಿ ನೋಟು ಮುದ್ರಣ, ನಿಷೇಧಿತ ಶಸ್ತ್ರಾಸ್ತ್ರಗಳ ಉತ್ಪಾದನೆ ಹಾಗೂ ಮಾರಾಟ ಪ್ರಕರಣಗಳ ತನಿಖೆ ನಡೆಸುವ ಅಧಿಕಾರಗಳನ್ನು ಹೆಚ್ಚಿನದಾಗಿ ಕಲ್ಪಿಸಲಾಗಿದೆ.

2008ರಲ್ಲಿ ಮುಂಬಯಿ ಮೇಲೆ ನಡೆದ, 166 ಜನರನ್ನು ಬಲಿಪಡೆದ ಪಾಕಿಸ್ತಾನಿ ಉಗ್ರರ ದಾಳಿಯ ನಂತರ, ಭಯೋತ್ಪಾದನೆ ಚಟುವಟಿಕೆಗಳ ಪ್ರತ್ಯೇಕ ತನಿಖೆ, ವಿಚಾರಣೆ ನಡೆಸುವ ಅಗತ್ಯವನ್ನು ಕಂಡ ಕೇಂದ್ರ ಸರಕಾರ 2009ರಲ್ಲಿ ಎನ್‌ಐಎಯನ್ನು ಅಸ್ತಿತ್ವಕ್ಕೆ ತಂದಿತ್ತು. ಅಲ್ಲಿಂದ ಇಲ್ಲಿವರೆಗೆ ಎನ್‌ಐಎ 272 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಅದರಲ್ಲಿ 199 ಕೇಸುಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ; 51 ಪ್ರಕರಣಗಳಲ್ಲಿ ತೀರ್ಪು ಬಂದಿದೆ ಹಾಗೂ 46 ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಜಾರಿಯಾಗಿದೆ. ಇಷ್ಟಿದ್ದರೂ, ಎನ್‌ಐಎ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅನೇಕ ಅರ್ಜಿಗಳು ನ್ಯಾಯಾಲಯದಲ್ಲಿವೆ.

ಉಗ್ರವಾದ ಭಾರತವೂ ಸೇರಿದಂತೆ ಹಲವು ದೇಶಗಳನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆ. ಇದನ್ನು ಬೇರುಮಟ್ಟದಿಂದ ನಾಶಮಾಡಲು ಕಠಿಣ ಕಾನೂನಿನ ಅಗತ್ಯವಿದೆ. ಈ ಉದ್ದೇಶದಿಂದಲೇ 2002ರಲ್ಲಿ ಕೇಂದ್ರದಲ್ಲಿದ್ದ ಎನ್‌ಡಿಎ ಸರಕಾರ ಪೋಟಾ(ಉಗ್ರವಾದ ತಡೆ) ಕಾಯಿದೆಯನ್ನು ಜಾರಿಗೆ ತಂದಿತ್ತು. ಇದಕ್ಕೂ ಮೊದಲು ಟಾಡಾ ಕಾಯಿದೆ ಜಾರಿಯಲ್ಲಿತ್ತು. ಪೋಟಾ ಕಾಯಿದೆಯಡಿ ಉಗ್ರ ಚಟುವಟಿಕೆಗಳಿಗಾಗಿ 32 ಸಂಘಟನೆಗಳನ್ನು ನಿಷೇಧಿಸಲಾಗಿತ್ತು. ಆದರೆ 2004ರಲ್ಲಿ ಯುಪಿಎ ಸರಕಾರ ಪೋಟಾ ಕಾಯಿದೆಯನ್ನು ರದ್ದುಗೊಳಿಸಿತು. ಇದು, ಭಯೋತ್ಪಾದನೆ ನಿಗ್ರಹದಲ್ಲಿ ಒಂದು ಹೆಜ್ಜೆ ಮುಂದಿಟ್ಟು, ಹಿಂದಕ್ಕಿಟ್ಟಂತೆ ಆಗಿತ್ತು. 9/11 ಭಯೋತ್ಪಾದಕ ದಾಳಿಯ ಬಳಿಕ ತನ್ನ ಮೇಲೆ ಇನ್ನೊಂದು ಉಗ್ರ ದಾಳಿ ನಡೆಯಲು ಅಮೆರಿಕ ಬಿಟ್ಟಿಲ್ಲ. ಅದಕ್ಕೆ ಕಾರಣ ಆ ದೇಶ ಎಲ್ಲ ರೀತಿಗಳಲ್ಲೂ ಭಯೋತ್ಪಾದಕ ಚಟುವಟಿಕೆ ನಿಗ್ರಹವನ್ನು ಕಣ್ಣಲ್ಲಿ ಕಣ್ಣಿಟ್ಟು ನಡೆಸುತ್ತಿರುವುದು. ಆದರೆ ಭಾರತದಲ್ಲಿ ಆತಂಕವಾದಿಗಳ ದಾಳಿ ಪದೇ ಪದೆ ನಡೆಯುತ್ತಿದ್ದು, ಕಳೆದ ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ದಾಳಿ ಇದಕ್ಕೊಂದು ನಿದರ್ಶನ. ಸಂಘಟಿತ ಭಯೋತ್ಪಾದಕ ಚಟುವಟಿಕೆಯನ್ನು ಮಟ್ಟ ಹಾಕಲು ರಾಷ್ಟ್ರೀಯ ನೆಲೆಯನ್ನು ಹೊಂದಿರುವ ತನಿಖಾ ಸಂಸ್ಥೆ ಹಾಗೂ ಕಾಯಿದೆಯ ಅಗತ್ಯವಿದೆ; ಎನ್‌ಐಎ ಅಂಥದೊಂದು ತನಿಖಾ ಸಂಸ್ಥೆ ಹಾಗೂ ಅದು ರಾಜ್ಯ ಸರಕಾರಗಳ ಅನುಮತಿಯಿಲ್ಲದೆ ತನಿಖೆಯನ್ನು ಆ ಪ್ರಾಂತ್ಯಗಳಲ್ಲಿ ವಿಸ್ತರಿಸುವ ಅಧಿಕಾರ ಹೊಂದಿದೆ. ಉಗ್ರರು ತಮ್ಮ ಅಕೃತ್ಯಗಳಿಗೆ ಹೊಸ ವಿಧಾನಗಳನ್ನು ಹಾಗೂ ಸಂಗಾತಿಗಳನ್ನು ಹುಡುಕಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ನಮ್ಮ ತನಿಖಾ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಕಾಯಿದೆಯನ್ನು ವಿರೋಧಿಸುತ್ತಿರುವವರು ಇದನ್ನು ಮನಗಾಣಬೇಕು.ಕೇಂದ್ರ ಸರಕಾರ ಇಟ್ಟ ಹೆಜ್ಜೆ ಹಿಂದಕ್ಕಿಡಬಾರದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ