ಆ್ಯಪ್ನಗರ

ವಿಶ್ವಸಂಸ್ಥೆಯ ವರದಿಯಲ್ಲಿ ಹುರುಳಿಲ್ಲ

ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಮಿಥ್ಯೆ

Vijaya Karnataka Web 9 Jul 2019, 5:00 am
ಜಮ್ಮು- ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಸ್ಥಿತಿಗತಿಯ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ನೀಡಿದ ವರದಿ ಈಗ ವಿವಾದಕ್ಕೆ ತುತ್ತಾಗಿದೆ. ''ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಪ್ರಕರಣಗಳು ನಡೆಯುತ್ತಿವೆ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲ. ಭದ್ರತಾ ಪಡೆಗಳಿಂದ ಮಿತಿ ಮೀರಿದ ಬಲಪ್ರದರ್ಶನ, ಚಿತ್ರಹಿಂಸೆ, ಬಂಧನ, ಇಂಟರ್‌ನೆಟ್‌ ನಿರ್ಬಂಧ ಇತ್ಯಾದಿಗಳು ನಡೆಯುತ್ತಿರುವುದು ಕಂಡುಬಂದಿದೆ.'' ಎಂದು ಆಯೋಗ ಹೇಳಿದೆ. ''ಅಂತಾರಾಷ್ಟ್ರೀಯ ಕಾನೂನುಗಳ ಅಡಿ ಕಾಶ್ಮೀರದ ಜನತೆಗೆ ತಮ್ಮ ನಿರ್ಧಾರವನ್ನು ಕೈಗೊಳ್ಳುವ ಅವಕಾಶವನ್ನು ನೀಡಬೇಕು,'' ಎಂದೂ ಈ ವರದಿಯಲ್ಲಿ ಪ್ರತಿಪಾದಿಸಿದೆ. ಭಾರತ ತಕ್ಷಣವೇ ಇದಕ್ಕೆ ಉಗ್ರವಾಗಿ ಪ್ರತಿಕ್ರಿಯಿಸಿದ್ದು, ಇದು ಅಂತಾರಾಷ್ಟ್ರೀಯ ವಲಯವನ್ನು ದಾರಿ ತಪ್ಪಿಸುವ ಹುನ್ನಾರ ಎಂದಿದೆ. ''ಈ ವರದಿ ತಪ್ಪು ಕಲ್ಪನೆ ಹಾಗೂ ಅಪಪ್ರಚೋದನೆಗಳಿಂದ ಸೃಷ್ಟಿಯಾಗಿದೆ; ಪಾಕಿಸ್ತಾನದ ಪ್ರಚೋದನೆಯಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯನ್ನು ಸಿಂಧು ಎಂದು ಸಮರ್ಥಿಸುವ ಪ್ರಯತ್ನವಾಗಿದೆ. ಗಡಿಯಾಚೆಗಿನ ಆತಂಕವಾದದಿಂದ ಕಾಶ್ಮೀರದಲ್ಲಿ ಆಗುತ್ತಿರುವ ಜೀವಹಾನಿಯನ್ನು ಅದು ಲೆಕ್ಕಕ್ಕೇ ತೆಗೆದುಕೊಂಡಿಲ್ಲ,'' ಎಂದು ಭಾರತದ ರಾಜತಾಂತ್ರಿಕ ತಂಡ ತಮ್ಮ ಪ್ರತಿರೋಧವನ್ನು ದಾಖಲಿಸಿದೆ. ಇದು ನಮ್ಮ ದೇಶದ ಸಕಾಲಿಕ ಪ್ರತ್ಯುತ್ತರ.
Vijaya Karnataka Web edit1


ಮಾನವ ಹಕ್ಕುಗಳ ಆಯೋಗದ ಈ ವರದಿ ತಪ್ಪು ಅಭಿಪ್ರಾಯಗಳಿಂದ ಕೂಡಿರುವುದು ಮೇಲ್ನೋಟಕ್ಕೇ ಕಂಡುಬರುತ್ತದೆ. ಇದರಲ್ಲಿ ಭಯೋತ್ಪಾದಕರಿಂದ ಕಾಶ್ಮೀರದ ಜನಜೀವನ, ದೇಶದ ಒಕ್ಕೂಟ ವ್ಯವಸ್ಥೆ ಇತ್ಯಾದಿಗಳ ಮೇಲೆ ಆಗುತ್ತಿರುವ ಹಾನಿಯ ಬಗ್ಗೆ ಯಾವ ಉಲ್ಲೇಖವೂ ಇಲ್ಲ. ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಮಾತಾಡಿರುವ ವರದಿ, ಕಾಶ್ಮೀರದಲ್ಲಿ ಅಲ್ಪಸಂಖ್ಯಾತರಾಗಿರುವ ಪಂಡಿತ ಸಮುದಾಯದ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯದ ಬಗ್ಗೆ ಜಾಣ ಮೌನ ತಾಳಿದೆ. ಭಾರತದಿಂದ ಕಾಶ್ಮೀರ ಪ್ರತ್ಯೇಕವಾಗಬೇಕು ಎಂದು ಸಾರುವ ಪ್ರತ್ಯೇಕತಾವಾದಿಗಳು ಕಾಶ್ಮೀರದಲ್ಲಿ ಸಾಕಷ್ಟು ಮಂದಿ ಇದ್ದಾರೆ; ಇಂಥವರ ರಕ್ಷಣೆಯನ್ನೂ ಭಾರತ ಸರಕಾರವೇ ಎಷ್ಟೋ ದಶಕಗಳಿಂದ ಮಾಡುತ್ತ, ಇವರಿಗೆ ಬಿಗಿ ಭದ್ರತೆಯ ವ್ಯವಸ್ಥೆಯನ್ನು ಕಲ್ಪಿಸಿಕೊಂಡು ಬಂದಿತ್ತು. ಬಂಧಿತರಾದ ಉಗ್ರರಿಗೆ ದೇಶದ ನ್ಯಾಯಾಂಗ ಪದ್ಧತಿಗನುಗುಣವಾಗಿಯೇ ಸೂಕ್ತ ತನಿಖೆ, ವಿಚಾರಣೆ ಮತ್ತು ಶಿಕ್ಷೆ ರೂಢಿಯಲ್ಲಿದೆ. ಭಾರತದ ಮಿಲಿಟರಿ ಹಾಗೂ ಪೊಲೀಸರು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಲು ನಡೆಸುತ್ತಿರುವ ಭಗೀರಥ ಪ್ರಯತ್ನವೂ ಇವರ ಕಣ್ಣಿಗೆ ಬಿದ್ದಿಲ್ಲ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಲ್ಲಿನ ಸರಕಾರದ ಚಿತಾವಣೆಯಿಂದಲೇ ಅಲ್ಲಿನ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ಧರ್ಮದ್ರೋಹ ಕಾಯಿದೆಗಳ ಹೇರುವಿಕೆ, ವಿಚಾರಣೆಯಿಲ್ಲದೆ ಶಿಕ್ಷೆಗಳೆಲ್ಲ ನಡೆಯುತ್ತಿವೆ. ಇಂಥ ಪಾಕಿಸ್ತಾನವನ್ನೂ ನಮ್ಮ ಕಾಶ್ಮೀರವನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ತರವಲ್ಲ.

ಜಮ್ಮು-ಕಾಶ್ಮೀರದಲ್ಲಿ ಮೊದಲಿನಿಂದಲೂ ಪ್ರವಾಸೋದ್ಯಮದ ಮೇಲೆ ತನ್ನ ಬದುಕನ್ನು ಕಟ್ಟಿಕೊಂಡ ರಾಜ್ಯ. ಕೃಷಿಯಿಂದ ಇಲ್ಲಿ ದೊರೆಯುವ ಆದಾಯ ಅತ್ಯಲ್ಪ. ದೊಡ್ಡ ಕೈಗಾರಿಕೆಗಳಿಗಂತೂ ಇಲ್ಲಿಗೆ ಪ್ರವೇಶವೇ ಇಲ್ಲ. ಸಂವಿಧಾನದ 370ನೇ ವಿಧಿ ಹಾಗೂ 35ಎ ವಿಧಿಗಳಿಂದಾಗಿ, ಕಾಶ್ಮೀರ ದೇಶದೊಳಗಿದ್ದೂ ಸ್ವಾಯತ್ತತೆಯನ್ನು ಅನುಭವಿಸುತ್ತಿದೆ. ಇಲ್ಲಿ ದೇಶದ ಇತರೆಡೆಯ ಪ್ರಜೆಗಳು ಭೂಮಿ ಕೊಳ್ಳುವಂತಿಲ್ಲ. ಇಲ್ಲಿಂದ ಮದುವೆಯಾಗಿ ಬೇರೆ ರಾಜ್ಯಗಳಿಗೆ ಹೋದ ಹೆಣ್ಣುಮಕ್ಕಳಿಗೆ ಇಲ್ಲಿನ ಭೂಮಿ ಹಕ್ಕೂ ದೊರೆಯುವುದಿಲ್ಲ. ಜಗತ್ತಿನಲ್ಲೇ ಒಂದು ದೇಶದೊಳಗೆ ಪ್ರತ್ಯೇಕ ಸಂವಿಧಾನ ಹೊಂದಿದ ರಾಜ್ಯವಿದ್ದರೆ ಅದು ಕಾಶ್ಮೀರ ಮಾತ್ರ. ಉದ್ಯಮಗಳು ನೆಲೆಯೂರಲು ತಕ್ಕ ವಾತಾವರಣವನ್ನು ಸೃಷ್ಟಿಸಲೂ ಇಲ್ಲಿನ ಮತಾಂಧ ಉಗ್ರರು ಬಿಡುತ್ತಿಲ್ಲ. ಒಂದು ಲೆಕ್ಕಾಚಾರದ ಪ್ರಕಾರ, ದೇಶದ ಜನಸಂಖೆæ್ಯಯಲ್ಲಿ ಕಾಶ್ಮೀರದ ಪಾಲು ಶೇ.1 ಮಾತ್ರ; ಆದರೆ ಕೇಂದ್ರ ಇಲ್ಲಿಗೆ ನೀಡುವ ಅನುದಾನದ ಪ್ರಮಾಣ ಶೇ.10ರಷ್ಟು. ಇತ್ತೀಚೆಗೆ, ಮೂಲಸೌಕರ್ಯಗಳಿಗಾಗಿ ದೊಡ್ಡ ಪ್ರಮಾಣದ ಅನುದಾನವನ್ನು ನೀಡಲಾಗಿದೆ. ಇವನ್ನೆಲ್ಲ ಪರಿಗಣಿಸದೆ ಮಾನವ ಹಕ್ಕುಗಳ ಉಲ್ಲಂಘನೆಯ ಮಾತಾಡುವುದು ವ್ಯರ್ಥಾಲಾಪ. ಇಂಥ ಹುನ್ನಾರಗಳಿಗೆ ಭಾರತ ಮಣಿಯದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ