ಆ್ಯಪ್ನಗರ

ಅರ್ಹರಿಗೆ ಸಂದ ಪ್ರಶಸ್ತಿಗಳು

ಇವರ ಸಾಧನೆ ನಮಗೆ ಪ್ರೇರಣೆಯಾಗಲಿ

Vijaya Karnataka Web 27 Jan 2020, 5:00 am
ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗಳನ್ನು ಪಡೆದವರನ್ನು ನೋಡಿದರೆ, ಮನಸ್ಸಿಗೆ ತುಂಬಾ ಸಮಾಧಾನವಾಗುತ್ತದೆ. ಪ್ರಶಸ್ತಿಗಳು ಅನರ್ಹರ ಪಾಲಾಗುತ್ತಿವೆ ಎಂಬ ಕೂಗು ಸದಾ ಇರುವಂಥದೇ. ಇಂಥ ಸನ್ನಿವೇಶದಲ್ಲಿ, ಅರ್ಹರನ್ನೇ ಹುಡುಕಿ ಹುಡುಕಿ ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ. ಕೆಲವರಂತೂ ಸದಾ ಕಾಲ ತೆರೆಮರೆಯಲ್ಲೇ ಇದ್ದು, ಪ್ರಚಾರದ ಬೆಳಕಿಗೆ ತಮ್ಮನ್ನು ತೆರೆದುಕೊಳ್ಳಲು ಇಚ್ಛಿಸದೆ, ನಿಸ್ವಾರ್ಥದಿಂದ ಕೆಲಸ ಮಾಡಿದವರು. ಹಲವರು, ತಮ್ಮ ಸೇವೆಗೆ ಪ್ರಚಾರ ಪಡೆಯಬಹುದು ಎಂಬುದನ್ನೂ ತಿಳಿಯದ ಮುಗ್ಧರು. ಹೆಚ್ಚಿನವರು ಗ್ರಾಮೀಣ ಭಾರತವನ್ನು ಸಶಕ್ತಗೊಳಿಸಲು ತಮ್ಮ ಜೀವನವನ್ನು ತೇಯ್ದವರು. ಇಂಥವರ ಆಯ್ಕೆಯಿಂದ ಪದ್ಮ ಪ್ರಶಸ್ತಿಗಳು ತಮ್ಮ ಘನತೆಯನ್ನು ಎತ್ತಿ ಹಿಡಿದುಕೊಂಡಿವೆ.
Vijaya Karnataka Web edit


ಉದಾಹರಣೆಗೆ, ನಮ್ಮ ರಾಜ್ಯದಲ್ಲಿಪದ್ಮಶ್ರೀ ಪ್ರಶಸ್ತಿ ಪಡೆದ ಹರೇಕಳ ಹಾಜಬ್ಬ ಅವರನ್ನೇ ನೋಡಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿಬರಿಗಾಲಿನಲ್ಲಿನಡೆದಾಡಿ ಕಿತ್ತಳೆ-ಮೂಸಂಬಿ ಹಣ್ಣುಗಳನ್ನು ಮಾರಿ ಬಂದ ಅತ್ಯಲ್ಪ ಲಾಭಾಂಶವನ್ನು ಗಂಟು ಕಟ್ಟಿ, ತಮ್ಮ ಊರಾದ ಹರೇಕಳ ಎಂಬ ಪುಟ್ಟ ಗ್ರಾಮದಲ್ಲಿಪ್ರಾಥಮಿಕ ಶಾಲೆಯೊಂದನ್ನು ಕಟ್ಟಿದ ಧೀಮಂತ ಇವರು. ತಮಗಾಗಿ ಯಾವ ಆಸ್ತಿಯನ್ನೂ ಮಾಡಿಕೊಳ್ಳದ ಹಾಜಬ್ಬ, ತಾವು ಗಳಿಸಿದ್ದನ್ನೆಲ್ಲಶಾಲೆಗಾಗಿಯೇ ವ್ಯಯಿಸಿದ್ದಾರೆ. ಸರಕಾರಿ ಕಚೇರಿಗಳನ್ನು ಅಲೆದು, ಕಟ್ಟಡ ಕಟ್ಟಲು ಸ್ವತಃ ಬೆವರು ಹರಿಸಿದ್ದಾರೆ. ಸಾರ್ವಜನಿಕ ಸೇವೆ ಎಂಬುದು ಲಾಭದ ದಂಧೆಯಾಗಿರುವ ಸಮಯದಲ್ಲಿ, ಇಂಥವರು ಸಾರ್ವಜನಿಕ ಜೀವನದಲ್ಲಿಎಲ್ಲರಿಗೆ ಮಾದರಿಯಾಗಬೇಕಿರುವುದು ಅಗತ್ಯ. ಹಾಗೇ ಇನ್ನೊಬ್ಬರು ವೃಕ್ಷಮಾತೆ ಎನಿಸಿಕೊಂಡಿರುವ ತುಳಸಿ ಗೌಡ. ಕಾರವಾರ ಜಿಲ್ಲೆಯ ಅಂಕೋಲದ ಹಾಲಕ್ಕಿ ಸಮುದಾಯದ ತುಳಸಿ ಗೌಡ, ಮೊದಲು ಉದ್ಯೋಗವಾಗಿ ಗಿಡ ನೆಡುತ್ತ ಬಂದವರು, ಕೊನೆಗೆ ಅದನ್ನೇ ಜೀವನದ ಧ್ಯೇಯವಾಗಿ ಸ್ವೀಕರಿಸಿ, ಈ ಇಳಿವಯಸ್ಸಿನಲ್ಲೂಗಿಡ ನೆಡುತ್ತಲೇ ಇದ್ದಾರೆ; ಸಾವಿರಾರು ಗಿಡ ನೆಟ್ಟು ಅವುಗಳನ್ನು ಸಂರಕ್ಷಿಸಿದ್ದಾರೆ. ಕಾಡಿನ ಕುರಿತ ಜ್ಞಾನ ಭಂಡಾರವೇ ಆಗಿರುವ ಅವರು ಸುಮಾರು 30,000 ಸಸಿಗಳನ್ನು ನೆಟ್ಟಿರಬಹುದು ಎಂಬ ಅಂದಾಜು. ನಮ್ಮ ಅನುಕೂಲಗಳಿಗಾಗಿ ಕಾಡನ್ನು ಶೋಷಿಸುವುದನ್ನು ಕಲಿತಿರುವ ನಾವು, ತುಳಸಿ ಗೌಡರಿಂದ ಕಲಿಯಬೇಕಾದ ಜೀವನ ಪಾಠ ಬಹಳವಿದೆ. ಹಾಗೆಯೇ 'ಸುಧರ್ಮಾ' ಸಂಸ್ಕೃತ ಪತ್ರಿಕೆ ನಡೆಸುತ್ತ ಬಂದಿರುವ ಸಂಪತ್‌ಕುಮಾರ್‌-ಜಯಲಕ್ಷ್ಮೇ ದಂಪತಿ, ಮನೋವೈದ್ಯ ಶಾಸ್ತ್ರದಲ್ಲಿಸದ್ದಿಲ್ಲದೆ ಸಾಧನೆ ಮಾಡಿರುವ ಡಾ. ಗಂಗಾಧರ್‌, ಒಲಿಂಪಿಯನ್‌ ಹಾಕಿ ಆಟಗಾರ ಎಂ.ಪಿ.ಗಣೇಶ್‌ ಮುಂತಾದವರೂ ಅರ್ಹ ವ್ಯಕ್ತಿಗಳೇ.

ಹಾಗೆಯೇ ಚಂಡೀಗಢದಲ್ಲಿತಮ್ಮ ಆಸ್ತಿಯನ್ನೆಲ್ಲಮಾರಿ ಸಾವಿರಾರು ಬಡ ಮಕ್ಕಳಿಗೆ ದಿನನಿತ್ಯ ಉಚಿತ ಊಟ ಕಲ್ಪಿಸಿ ಲಂಗರ್‌ ಬಾಬಾ ಅನಿಸಿಕೊಂಡಿರುವ ಜಗದೀಶ್‌ ಲಾಲ್‌ ಅಹುಜಾ; 25 ಸಾವಿರಕ್ಕೂ ಮಿಕ್ಕಿ ಅನಾಥ ಶವಗಳ ಸಂಸ್ಕಾರ ಮಾಡಿರುವ ಉತ್ತರ ಪ್ರದೇಶದ ಸೈಕಲ್‌ ಮೆಕ್ಯಾನಿಕ್‌ ಮೊಹಮ್ಮದ್‌ ಷರೀಫ್‌, ಅಸ್ಸಾಂನ ಬರಾಕ್‌ ಕಣಿವೆಯಲ್ಲಿಕ್ಯಾನ್ಸರ್‌ನಿಂದ ಬಳಲುತ್ತಿರುವ 7 ಸಾವಿರಕ್ಕೂ ಅಧಿಕ ಮಂದಿಗೆ ಉಚಿತ ಚಿಕಿತ್ಸೆ ನೀಡಿರುವ ತಮಿಳುನಾಡಿನ ರವಿ ಕಣ್ಣನ್‌, ಪಾಶ್ರ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದರೂ 14 ಸಾವಿರಕ್ಕೂ ಅಧಿಕ ಅಂಗವಿಕಲ ಮಕ್ಕಳಿಗೆ ನೆಲೆ ಕಲ್ಪಿಸಿರುವ ತಮಿಳುನಾಡಿನ ರಾಮಕೃಷ್ಣನ್‌, ಅರುಣಾಚಲ ಪ್ರದೇಶದ ಕುಗ್ರಾಮಗಳಲ್ಲಿಗ್ರಂಥಾಲಯ ಸಂಸ್ಕೃತಿ ಬೆಳೆಸಲು ಶ್ರಮಿಸಿರುವ ಕೇರಳದ ಸತ್ಯನಾರಾಯಣ, ಉಗ್ರರ ದಾಳಿಯಲ್ಲಿಬೆನ್ನು ಮೂಳೆ ಮುರಿದುಕೊಂಡಿದ್ದರೂ ವ್ಹೀಲ್‌ಚೇರ್‌ನಲ್ಲಿಓಡಾಡುತ್ತ ಕಾಶ್ಮೀರದಲ್ಲಿಅಂಗವಿಕಲ ಮಕ್ಕಳ ಶಿಕ್ಷಣಕ್ಕೆ ದುಡಿಯುತ್ತಿರುವ ಜಾವೇದ್‌ ಅಹ್ಮದ್‌ ತಕ್‌- ಹೀಗೆ ಒಬ್ಬೊಬ್ಬರ ಆಯ್ಕೆಯೂ ಅಪರೂಪದ್ದೇ. ಸರಕಾರಗಳು ನೀಡಲಾಗದ ಸಾಂತ್ವನ ಸಮಾಧಾನಗಳನ್ನು ಇವರ ನಿಸ್ಪೃಹ ಸೇವೆಗಳು ನಮ್ಮ ಸಮಾಜಕ್ಕೆ ನೀಡಿವೆ. ಇಂಥವರ ಸಂತತಿ ಸಾವಿರವಾಗಲಿ. ಅವರ ಸೇವೆಗಳು ನಮಗೆ ಪ್ರೇರಣೆಯಾಗಲಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ