ಆ್ಯಪ್ನಗರ

ಪುಸ್ತಕ ಸಂಸ್ಕೃತಿಗೆ ಕೊಡಲಿಯೇಟು

ಗ್ರಂಥಾಲಯ ಇಲಾಖೆಗೆ ಕಾಯಕಲ್ಪ ಆಗಲಿ

Vijaya Karnataka Web 24 Dec 2019, 5:00 am
ಕನ್ನಡದಲ್ಲಿಪುಸ್ತಕಗಳ ಓದು ಕ್ಷೀಣಿಸುತ್ತಿದೆ ಎಂಬ ಕೂಗು ಹೆಚ್ಚುತ್ತಿರುವ ಹೊತ್ತಿನಲ್ಲೇ, ಲೈಬ್ರರಿ ವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸುವ ಕ್ರಮಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮುಂದಾಗಿದೆ. ಪಬ್ಲಿಕ್‌ ಲೈಬ್ರರಿಗಳಿಗೆ ಪ್ರತಿವರ್ಷ ಖರೀದಿಸಲಾಗುವ ಪುಸ್ತಕಗಳಿಗೆ ನೀಡಲಾಗುವ ಅನುದಾನದಲ್ಲಿಶೇ.30ರಷ್ಟನ್ನು ಕಡಿತ ಮಾಡಲಾಗಿದೆ. ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಖರೀದಿಗೆ ಮೀಸಲಿಡುತ್ತಿದ್ದ ಅನುದಾನದಲ್ಲೂಶೇ.5ಕ್ಕೆ ಕತ್ತರಿ ಹಾಕಲಾಗಿದೆ. ಉಳಿಯುವ ಮೊತ್ತದಲ್ಲಿಹೆಚ್ಚಿನ ಹಣ ಗ್ರಂಥಾಲಯ ನಿರ್ವಹಣೆ ಹಾಗೂ ಮೂಲಸೌಕರ್ಯಗಳಿಗೆ ನೀಡಲಾಗಿದೆ. ವಿಚಿತ್ರವೆಂದರೆ, ಗ್ರಂಥಾಲಯಗಳ ಡಿಜಿಟಲೀಕರಣ, ಇ-ಪುಸ್ತಕಗಳ ಖರೀದಿಗೆ ಇಲಾಖೆ ಮುಂದಾಗಿದ್ದು, 10 ಕೋಟಿ ರೂ.ಗಳನ್ನು ಇದಕ್ಕಾಗಿ ಮೀಸಲಿಟ್ಟಿದೆ. ಇದರ ಸಾಧಕ ಬಾಧಕಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕಿದೆ.
Vijaya Karnataka Web edit


ಪುಸ್ತಕಗಳು ತಲೆಮಾರಿನಿಂದ ತಲೆಮಾರಿಗೆ ಜ್ಞಾನದ ಕೊಂಡಿಗಳಾಗಿವೆ. ಎಲ್ಲರೂ ಎಲ್ಲಪುಸ್ತಕಗಳನ್ನು ಕೊಳ್ಳಲು ಸಾಧ್ಯವಿಲ್ಲ. ಹಲವು ಅಮೂಲ್ಯ ಹೊತ್ತಗೆಗಳು ಆರ್ಥಿಕವಾಗಿಯೂ ಬೆಲೆ ಬಾಳುವಂಥದ್ದಾಗಿದ್ದು, ಪರಿಶೀಲನೆಗಷ್ಟೇ ಲಭ್ಯ. ಆದರೆ ಜ್ಞಾನವು ಎಲ್ಲರಿಗೂ ಮುಕ್ತ ಹಾಗೂ ಲಭ್ಯವಾಗಿರಬೇಕು ಎಂಬ ಆಶಯದಿಂದ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ ರೂಪುಗೊಂಡಿದೆ. ಅನೇಕ ತಲೆಮಾರುಗಳೇ ಈ ವ್ಯವಸ್ಥೆಯ ಲಾಭವನ್ನು ಪಡೆದಿವೆ; ಈಗಲೂ ಪಡೆಯುತ್ತಿವೆ. ಕನ್ನಡದಲ್ಲಿಪ್ರತಿವರ್ಷ ಸುಮಾರು 6000-7000 ಪುಸ್ತಕಗಳು ಬಿಡುಗಡೆಯಾಗುತ್ತವೆ. ಅದರಲ್ಲಿಮುಖ್ಯವೆನಿಸಿದವನ್ನು ಆಯ್ಕೆ ಮಾಡಿ ಗ್ರಂಥಾಲಯ ಇಲಾಖೆ ಖರೀದಿಸುತ್ತದೆ. ಈ ಖರೀದಿಯಲ್ಲೂಸಾಕಷ್ಟು ಅವ್ಯವಹಾರದ ವಾಸನೆ ಇದೆ. ಇದಕ್ಕೊಂದು ಪಾರದರ್ಶಕ ವ್ಯವಸ್ಥೆಯೇ ಇಲ್ಲ. ಖರೀದಿ ಪಟ್ಟಿಯನ್ನು ನೋಡಿದರೆ ಮಾರುಕಟ್ಟೆಯಲ್ಲಿಕಾಣಿಸದ, ಯಾರೂ ಹೆಸರೇ ಕೇಳಿರದ ಲೇಖಕರು ಹಾಗೂ ಪುಸ್ತಕಗಳು ತುಂಬಿರುವುದುಂಟು. ಇಂಥ ಪುಸ್ತಕಗಳು ಯಾರಿಂದಲಾದರೂ ಓದಲ್ಪಡುತ್ತವೆ ಎಂಬುದೇ ಅನುಮಾನ. ಕೆಲವು ಅಮೂಲ್ಯ ಪುಸ್ತಕಗಳು ಖರೀದಿಯೇ ಆಗುವುದಿಲ್ಲ. ಅನೇಕ ಪ್ರಬುದ್ಧ ಪ್ರಕಾಶಕರು ಈ ಅವ್ಯವಹಾರಕ್ಕೆ ಹೇಸಿ ಇದರಿಂದ ದೂರವೇ ನಿಂತಿದ್ದಾರೆ.

ಡಿಜಿಟಲೀಕರಣ ಹಾಗೂ ಇ-ಬುಕ್‌ಗಳ ಖರೀದಿಗೆ ಹೆಚ್ಚಿನ ಹಣ ಮೀಸಲಿಡುತ್ತಿರುವುದು ಸದ್ಯಕ್ಕೆ ಅವ್ಯಾವಹಾರಿಕ, ಅಪ್ರಾಯೋಗಿಕ. ಕನ್ನಡದಲ್ಲಿಇ-ಬುಕ್‌ಗಳು ಎಷ್ಟಿವೆ? ಕೆಲವರು ಕನ್ನಡದಲ್ಲಿಇ-ಪುಸ್ತಕಗಳ ಮಾರುಕಟ್ಟೆ ಸೃಷ್ಟಿಗೆ ಪ್ರಯತ್ನಿಸಿ ಕೈಸೋತಿದ್ದಾರೆ. ಇಂಥ ಸನ್ನಿವೇಶದಲ್ಲಿಇ-ಬುಕ್‌ಗಳನ್ನು ಎಲ್ಲಿಂದ ಖರೀದಿಸುತ್ತಾರೆ? ಅಸ್ತಿತ್ವದಲ್ಲೇ ಇಲ್ಲದ ವಸ್ತುವೊಂದನ್ನು ಇದೆಯೆಂದು ಕಣ್ಕಟ್ಟು ಮಾಡಿ ಖರೀದಿಸಿದ ನಾಟಕ ಮಾಡಿದರೆ ಯಾರಿಗೆ ಲಾಭ? ಇರುವ ಮೂರ್ನಾಲ್ಕು ಇ-ಪುಸ್ತಕಗಳ ಖರೀದಿಗೆ ಕೋಟ್ಯಂತರ ರೂ. ಅನುದಾನ ಬೇಕೆ? ಹೋಗಲಿ, ಇ-ಬುಕ್‌ಗಳನ್ನು ಓದುಗರಿಗೆ ಹಂಚುವ, ಹಿಂಪಡೆಯುವ ವ್ಯವಸ್ಥೆ ಹೇಗೆ? ಅದಕ್ಕೆ ಸಾಕಾದಷ್ಟು ಮೂಲಸೌಕರ್ಯಗಳು ಇಲಾಖೆಯಲ್ಲಿವೆಯೇ? ಸಿಬ್ಬಂದಿಗಳಿಗೆ ಈ ಆಧುನಿಕ ವ್ಯವಸ್ಥೆಯ ತರಬೇತಿ ಇದೆಯೇ? ಈಗಿನ್ನೂ ಅಮೂಲ್ಯ ಗ್ರಂಥಗಳ ಡಿಜಿಟಲೀಕರಣದ ವ್ಯವಸ್ಥೆ ಆರಂಭವಾಗಿದೆ. ಭವಿಷ್ಯದ ಓದುವಿಕೆಯ ಕ್ಷೇತ್ರವು ಡಿಜಿಟಲ್‌ ಆಗಿರುತ್ತದೆ ಎಂಬುದರಲ್ಲಿಅನುಮಾನವಿಲ್ಲ. ಅದಕ್ಕಾಗಿ ಸಿದ್ಧತೆಗಳೂ ಆಗಬೇಕು. ಆದರೆ ಆ ಕಾಲವಿನ್ನೂ ದೂರವಿದೆ. ಕನ್ನಡದ ಮಾತ್ರವಲ್ಲ, ಇಂಗ್ಲಿಷ್‌ ಓದುಗರೂ ಕೂಡ ಇ-ಬುಕ್‌ಗಳನ್ನು ಓದುವುದಕ್ಕಿಂತಲೂ ಹಾರ್ಡ್‌ ಕಾಪಿಗಳನ್ನು ಓದುವುದನ್ನೇ ಇಷ್ಟಪಡುತ್ತಾರೆ. ಡಿಜಿಟಲ್‌ ವ್ಯವಸ್ಥೆಯೇ ಸ್ವಯಂಪೂರ್ಣವಲ್ಲ.

ಇನ್ನೂ ಸ್ಮಾರ್ಟ್‌ಫೋನ್‌ ಹೊಂದಿಲ್ಲದ ಆರ್ಥಿಕ ಅಶಕ್ತರು, ಡಿಜಿಟಲ್‌ ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಧ್ಯವಿಲ್ಲದ ವಯಸ್ಕರು ಮೊದಲಿನ ವ್ಯವಸ್ಥೆಯಲ್ಲೇ ಉಳಿಯುತ್ತಾರೆ. ಮುದ್ರಿತ ಪುಸ್ತಕಗಳನ್ನು ಕೊಂಡುಕೊಳ್ಳುವುದನ್ನು ಕಡಿಮೆ ಮಾಡುವುದರಿಂದ ಇವರನ್ನು ಓದುವಿಕೆಯ ಸಾಧ್ಯತೆಗಳಿಂದ ವಂಚಿಸಿದಂತಾಗುತ್ತದೆ. ಹಾಗೆಯೇ ಕನ್ನಡದಲ್ಲಿದೊಡ್ಡದೊಂದು ಪುಸ್ತಕ ಸಂಸ್ಕೃತಿ ಬೆಳೆದು ಬಂದಿದ್ದರೆ ಅದಕ್ಕೆ ಪ್ರಕಾಶಕರ ಕೊಡುಗೆಯೂ ದೊಡ್ಡದೇ. ಮುದ್ರಿತ ಪುಸ್ತಕಗಳ ಖರೀದಿ ನಿಲ್ಲಿಸಿದರೆ ಇವರ ಬೆನ್ನೆಲುಬೇ ಮುರಿದ ಹಾಗೆ. ಸದ್ಯಕ್ಕೆ ಗ್ರಂಥಾಲಯ ವ್ಯವಸ್ಥೆಗೆ ಕಾಯಕಲ್ಪ ಆಗಬೇಕು. ಪ್ರಕಾಶಕರ ಹಾಗೂ ಓದುಗರ ಹಿತ ಕಾಪಾಡಿಕೊಳ್ಳುವಂತೆ ಅನುದಾನ ಮರುಹಂಚಿಕೆ, ಡಿಜಿಟಲೀಕರಣ, ಪುಸ್ತಕ ಖರೀದಿಯಲ್ಲಿಪಾರದರ್ಶಕತೆಗಳು ಮೂಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ