ಆ್ಯಪ್ನಗರ

ಸಿಧು ಪಾಕ್‌ಗೆ ಹೋಗಿದ್ದು ಸರೀನಾ?

ಬಹುಮುಖ ಪ್ರತಿಭೆಯ ಜತೆ ವಿವಾದವನ್ನು ಸದಾ ಮೈಮೇಲೆ ಎಳೆದುಕೊಳ್ಳುವ ಸ್ವಭಾವದ ನವಜ್ಯೋತ್‌ಸಿಂಗ್‌ ಸಿಧು ಮತ್ತೊಂದು ದೊಡ್ಡ ವಿವಾದಕ್ಕೆ ಗುರಿಯಾಗಿದ್ದಾರೆ.

Vijaya Karnataka 21 Aug 2018, 8:02 am
ಬಹುಮುಖ ಪ್ರತಿಭೆಯ ಜತೆ ವಿವಾದವನ್ನು ಸದಾ ಮೈಮೇಲೆ ಎಳೆದುಕೊಳ್ಳುವ ಸ್ವಭಾವದ ನವಜ್ಯೋತ್‌ಸಿಂಗ್‌ ಸಿಧು ಮತ್ತೊಂದು ದೊಡ್ಡ ವಿವಾದಕ್ಕೆ ಗುರಿಯಾಗಿದ್ದಾರೆ. ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ಆ ಕಾರ‍್ಯಕ್ರಮದಲ್ಲಿ ಇನ್ನಷ್ಟು ಎಡವಟ್ಟು ಮತ್ತು ಮುಜುಗರದ ಸನ್ನಿವೇಶ ಸೃಷ್ಟಿಸಿದ್ದಾರೆ. ತಮ್ಮನ್ನು ಬರಮಾಡಿಕೊಂಡ ಪಾಕಿಸ್ತಾನದ ಸೇನಾಪಡೆ ಮುಖ್ಯಸ್ಥ ಜ.ಕಮರ್‌ ಜಾವೇದ್‌ ಬಾಜ್ವಾ ಅವರನ್ನು ಸಿಧು ಆಲಿಂಗಿಸಿಕೊಂಡರು. ಮಾತ್ರವಲ್ಲ ಸಮಾರಂಭದಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರದ ಅಧ್ಯಕ್ಷ ಮಸೂದ್‌ ಖಾನ್‌ ಅವರ ಪಕ್ಕದಲ್ಲಿ ಕುಳಿತಿದ್ದರು ಎಂಬ ಸಂಗತಿಗಳು ಈಗ ಚರ್ಚೆ ಮತ್ತು ಟೀಕೆಗೆ ಗ್ರಾಸವಾಗಿದೆ. ಮೊತ್ತಮೊದಲನೆಯದಾಗಿ ಸಿಧು ಆ ಕಾರ‍್ಯಕ್ರಮಕ್ಕೆ ಹೋಗಿದ್ದೇ ಸರಿಯಲ್ಲ ಎಂಬುದು ಸಾರ್ವತ್ರಿಕ ಅಭಿಪ್ರಾಯ. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ಎಲ್ಲ ಸಾರ್ಕ್‌ ದೇಶಗಳ ಮುಖ್ಯಸ್ಥರು ಭಾರತ ಸರಕಾರದ ಆಹ್ವಾನದ ಮೇಲೆ ಭಾಗವಹಿಸಿದ್ದರು. ಸಿಧು ಅವರೂ ಹಾಗೆ ಅಧಿಕೃತ ಆಮಂತ್ರಣದ ಮೇಲೆ ಭಾರತ ಸರಕಾರದ ಪ್ರತಿನಿಧಿಯಾಗಿ ಹೋಗಿದ್ದಿದ್ದರೆ ಬೇರೆ ವಿಷಯ. ತಾವು ವೈಯಕ್ತಿಕ ಆಹ್ವಾನದ ಮೇರೆಗೆ ಹೋಗಿದ್ದಾಗಿ ಸಿಧು ಹೇಳುತ್ತಾರೆ. ಹಾಗೆಂದು ಸಿಧು ಕೇವಲ ಒಬ್ಬ ಖಾಸಗಿ ವ್ಯಕ್ತಿ ಅಲ್ಲ. ಅವರು ಮಾಜಿ ಸಂಸದ, ಹಾಲಿ ಶಾಸಕ ಮತ್ತು ಪಂಜಾಬ್‌ ರಾಜ್ಯದ ಸಚಿವ. ಇದನ್ನವರು ಅರಿಯಬೇಕಿತ್ತು. ಇಮ್ರಾನ್‌ಖಾನ್‌ ಜತೆಗೆ ಸಿಧು ಕ್ರಿಕೆಟ್‌ ಆಡಿದ ಆ ಸಲಿಗೆ, ಸೌಹಾರ್ದದ ಮೇಲೆ ತೆರಳಿದ್ದಾಗಿ ಹೇಳುವಂತೆಯೂ ಇಲ್ಲ. ಏಕೆಂದರೆ ಇದೀಗ ಇಮ್ರಾನ್‌ ಕ್ರಿಕೆಟರ್‌ ಅಲ್ಲ. ಬದಲಾಗಿ ನಮ್ಮ ಬದ್ಧ ವೈರಿ ರಾಷ್ಟ್ರದ ಪ್ರಧಾನಿ. ಇಮ್ರಾನ್‌ ತಮ್ಮ ಇನ್ನಿತರ ಓರಗೆಯ ಕ್ರಿಕೆಟಿಗರಾದ ಸುನೀಲ್‌ ಗವಾಸ್ಕರ್‌ ಮತ್ತು ಕಪಿಲ್‌ದೇವ್‌ ಮತ್ತಿತರರಿಗೂ ಆಮಂತ್ರಣ ಕಳಿಸಿದ್ದರು. ಆದರೆ ಅವರಾರೂ ಭಾಗವಹಿಸಲಿಲ್ಲ.
Vijaya Karnataka Web singh


ಇಲ್ಲಿ ಭಾರತ- ಪಾಕ್‌ ಸಂಬಂಧದ ಪ್ರಶ್ನೆ ಅಡಗಿದೆ. ನಮ್ಮಿಬ್ಬರ ನಡುವಿನದು ಎಣ್ಣೆ ಸೀಗೆ ಸಂಬಂಧವೇ. ಅದರಲ್ಲೂ ವಿಶೇಷವಾಗಿ ಸಿಧು ತವರಾದ ಪಂಜಾಬ್‌ ರಾಜ್ಯವು ಪಾಕ್‌ನೊಡನೆ ಗಡಿ ಹಂಚಿಕೊಂಡಿದೆ. ಖಾಲಿಸ್ತಾನ್‌ ಚಳವಳಿ ಕಾಲಕ್ಕೆ ಪಾಕಿಸ್ತಾನದಿಂದ ಪ್ರತ್ಯೇಕತಾವಾದಿಗಳಿಗೆ ಸಾಕಷ್ಟು ನೆರವು, ಕುಮ್ಮಕ್ಕು ದೊರೆತಿರುವುದು ಬಹಿರಂಗ ಸತ್ಯ. ಆ ಸಂದರ್ಭದಲ್ಲಿ ಪಂಜಾಬ್‌ ಸಾಕಷ್ಟು ಕಷ್ಟ ನಷ್ಟ ಅನುಭವಿಸಿದೆ. ಗಡಿಯಾಚೆಯ ಭಯೋತ್ಪಾದನೆ ಹಾಗೂ ಚಕಮಕಿಯಲ್ಲಿ ಸಿಖ್‌ ರೆಜಿಮೆಂಟಿನ ಅನೇಕ ಯೋಧರು ಬಲಿಯಾಗಿದ್ದಾರೆ. ಇದೆಲ್ಲ ಗೊತ್ತಿದ್ದೂ ಈ ಕಾರ‍್ಯಕ್ರಮಕ್ಕೆ ಹೋಗುವ ಮೂಲಕ ದೇಶದ ಗೌರವ ಮುಕ್ಕಾಗುವಂತೆ ಮಾಡಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿ ಅವರ ನಿಧನದ ಶೋಕದಲ್ಲಿ ಇಡೀ ದೇಶವಿತ್ತು. ಸಿಧು ವಿರುದ್ಧ ಟೀಕೆಗೆ ಈ ಕಾರಣವೂ ಸೇರಿಕೊಂಡಿದೆ. ಬಿಜೆಪಿಯಂತೂ ಇದು ಮಾನಗೇಡಿ ವರ್ತನೆ ಎಂದಿದೆ. ಖುದ್ದು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರೂ ಸಿಧು ಕ್ರಮವನ್ನು ಖಂಡಿಸಿದ್ದಾರೆ. ''ಪ್ರತಿದಿನ ಗಡಿಯಲ್ಲಿ ನಮ್ಮ ಯೋಧರು ಹುತಾತ್ಮರಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಿಧು ಕಾರ‍್ಯಕ್ರಮಕ್ಕೆ ಹೋಗಿದ್ದು ಸರ್ವಥಾ ಸರಿಯಲ್ಲ ,'' ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಕ್ರಿಕೆಟ್‌ ಮಾತ್ರವಲ್ಲದೆ ರಾಜಕೀಯ, ಟಿವಿ ಶೋಗಳಲ್ಲೂ ಜನಪ್ರಿಯರಾಗಿರುವ ಬಹುಮುಖ ವ್ಯಕ್ತಿತ್ವದ ಸಿಧು ಅದರ ಜತೆಗೇ ಸದಾ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಮೂಲಕ ಅಷ್ಟೇ ಕುಖ್ಯಾತಿಯನ್ನೂ ಗಳಿಸಿದ್ದಾರೆ. ಆದರೆ ಈಗ ಸುತ್ತಿಕೊಂಡಿರುವ ವಿವಾದ ಅವರ ವ್ಯಕ್ತಿತ್ವಕ್ಕೆ ಹೆಚ್ಚು ಹಾನಿ ಉಂಟುಮಾಡುವಂಥದ್ದು. ಜತೆಗೆ ಅತಿ ಸೂಕ್ಷ್ಮ ವಿಷಯವಾಗಿರುವುದರಿಂದ ಅವರು ವಿವೇಕದಿಂದ ವರ್ತಿಸಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ. ತಮ್ಮ ಈ ನಡೆಗೆ ವಿಷಾದವನ್ನಾದರೂ ವ್ಯಕ್ತಪಡಿಸಿ ಪರಿಸ್ಥಿತಿ ತಿಳಿಗೊಳಿಸುವ ಕೆಲಸವನ್ನಾದರೂ ಮಾಡಲಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ