ಆ್ಯಪ್ನಗರ

ಸಾಮಾಜಿಕ ತಾಣಗಳ ನಿಗಾ

ಸರಕಾರಕ್ಕಿಂತಲೂ ಸ್ವನಿಯಂತ್ರಣ ಪರಿಣಾಮಕಾರಿ

Vijaya Karnataka Web 14 Feb 2019, 5:00 am
ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್‌, ಫೇಸ್‌ಬುಕ್‌ ಹಾಗೂ ಸಂದೇಶವಾಹಕ ಆ್ಯಪ್‌ ವಾಟ್ಸ್ಯಾಪ್‌ಗಳ ಮೇಲೆ ಒಂದು ಬಗೆಯ ನಿಯಂತ್ರಣವನ್ನು ಸಾಧಿಸಲು ಕೇಂದ್ರ ಸರಕಾರ ಮುಂದಾಗಿದೆ. ಟ್ವಿಟ್ಟರ್‌ ಕಂಪನಿಯ ಸಿಇಒ ಜ್ಯಾಕ್‌ ಡೋರ್ಸೇ ಅವರನ್ನು ಮಾಹಿತಿ ತಂತ್ರಜ್ಞಾನ ಇಲಾಖೆಯ ಸಂಸದೀಯ ಸಮಿತಿಯ ಮುಂದೆ ಹಾಜರಾಗಲು ಹೇಳಲಾಗಿದ್ದು, ಜಾಲತಾಣದಲ್ಲಿ ದೇಶದ ನಾಗರಿಕರ ಹಕ್ಕುಗಳ ರಕ್ಷಣೆ, ಸುರಕ್ಷತೆಗಾಗಿ ಕಂಪನಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲು ತಿಳಿಸಲಾಗಿದೆ. ಇನ್ನೊಂದೆಡೆ, ಫೇಸ್‌ಬುಕ್‌ ಮತ್ತು ವಾಟ್ಸ್ಯಾಪ್‌ ಮೂಲಕ ಹಿಂಸಾಚಾರ ಹಾಗೂ ಮಕ್ಕಳ ಪೋರ್ನೋಗ್ರಫಿಗೆ ಪೂರಕವಾದ ಕಂಟೆಂಟ್‌ ರವಾನೆ ಹೆಚ್ಚುತ್ತಿದ್ದು, ಇವುಗಳನ್ನು ಹತ್ತಿಕ್ಕಲು ಕ್ರಮಗಳನ್ನು ಕೈಗೊಳ್ಳುವಂತೆ ಐಟಿ ಇಲಾಖೆ ಆಯಾ ಕಂಪನಿಗಳಿಗೆ ಸೂಚಿಸಿದೆ. ಈ ಸೂಚನೆಗೆ ಕಂಪನಿಗಳ ಕಡೆಯಿಂದ ಹೆಚ್ಚಿನ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂಬುದು ಇಲಾಖೆಯ ಆಕ್ರೋಶಕ್ಕೆ ಕಾರಣವಾಗಿದೆ.
Vijaya Karnataka Web edit


ಸರಕಾರದ ಕಾಳಜಿ ಸಕಾರಣವಾಗಿಯೇ ಇದೆ. ವಾಟ್ಸ್ಯಾಪ್‌ ಮೂಲಕ ಹಬ್ಬಿದ ಸಂದೇಶಗಳು, ಮಕ್ಕಳ ಕಳ್ಳರೆಂದು ಭಾವಿಸಿ ಜನತೆಯ ಆಕ್ರೋಶ ಹಾಗೂ ಹಲವರ ಹತ್ಯೆಗೆ ಕಾರಣವಾದುದು ನಿಜ. ಹಿಂಸಾಚಾರ, ಕೋಮುಗಲಭೆ ಮುಂತಾದ ಸಂದರ್ಭಗಳಲ್ಲಿ ಜನತೆಯ ಮನಸ್ಸನ್ನು ಸುಳ್ಳು ಸುದ್ದಿಗಳ ಮೂಲಕ ಇನ್ನಷ್ಟು ಪ್ರಚೋದಿಸಲು ಈ ಮಾಧ್ಯಮಗಳು ಕಾರಣವಾದುದೂ ಅಷ್ಟೇ ನಿಜ. ಆದ್ದರಿಂದ ಸಮಾಜದ ಆರೋಗ್ಯಕರ ಸ್ವರೂಪವನ್ನು ಹಾಗೆಯೇ ಕಾಪಾಡುವಲ್ಲಿ, ಪ್ರಜೆಗಳ ಹಕ್ಕುಗಳ ರಕ್ಷಣೆ ಮಾಡುವಲ್ಲಿ ಈ ಮಾಧ್ಯಮಗಳಿಗೆ ಅವುಗಳದೇ ಆದ ಜವಾಬ್ದಾರಿ ಇರಬೇಕು. ಪತ್ರಿಕೆಗಳು, ಟಿವಿ, ರೇಡಿಯೋ ಮುಂತಾದ ಮಾಧ್ಯಮಗಳು ಈಗಲೂ ಈ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿವೆ. ಒಂದು ದಶಕದಿಂದೀಚೆಗೆ ಬಂದ ಆಧುನಿಕ ಇಂಟರ್‌ನೆಟ್‌ನ ಮುಕ್ತ ಮಾಧ್ಯಮಗಳಲ್ಲಿ ಮಾತ್ರ ಇವುಗಳನ್ನು ನಿಯಂತ್ರಿಸಲು ಯಾವುದೇ ವಿಧಾನ, ಸ್ವರೂಪ, ಪಾಲಿಸಿ ಇಲ್ಲದಂತಾಗಿದೆ. ತಂತ್ರಜ್ಞಾನ, ತಲೆಮಾರು ಹಾಗೂ ಅದರ ಅಭಿವ್ಯಕ್ತಿ ಸ್ವರೂಪ ಬದಲಾದಂತೆ ಕಾಯಿದೆಗಳೂ ಬದಲಾಗಬೇಕಾದ ಅನಿವಾರ್ಯತೆಯನ್ನು ನಮ್ಮ ಸರಕಾರಗಳು ಮನಗಾಣಬಹುದು. ಈಗಲಾದರೂ ಇವುಗಳನ್ನು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಒಂದು ಸಮಗ್ರ ಕಾಯಿದೆ ರೂಪುಗೊಳ್ಳಬೇಕು; ಅಥವಾ ಐಟಿ ಕಾಯಿದೆಯಲ್ಲಿ ಕಾಲಕ್ಕನುಗುಣವಾದ ಪರಿಷ್ಕರಣೆಯಾಗಬೇಕು.

ಆದರೆ ಸರಕಾರ ಪೂರ್ತಿಯಾಗಿ ಈ ಜಾಲತಾಣಗಳ ಮೇಲೆ ನಿಗಾ ಇಡುವುದು ಸಾಧ್ಯವಿಲ್ಲ. ಗ್ರಾಹಕರು ಕೂಡ ತಮ್ಮ ಖಾಸಗಿತನವನ್ನು ರಕ್ಷಿಸುವ ವಚನ ಪಡೆದೇ ಆಯಾ ಮಾಧ್ಯಮಗಳ ಸದಸ್ಯತ್ವ ಹೊಂದಿರುತ್ತಾರೆ. ಅದನ್ನು ಬಿಟ್ಟುಕೊಡುವುದು ಜನತೆಯ ಖಾಸಗಿತನದ ಉಲ್ಲಂಘನೆಯಾಗುತ್ತದೆ. ''ತಾನು ದೇಶ ಬಿಟ್ಟುಹೋಗಲು ಸಿದ್ಧ, ಆದರೆ ಗ್ರಾಹಕರ ಖಾಸಗಿ ಮಾಹಿತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ,'' ಎಂದು ಫೇಸ್‌ಬುಕ್‌ ಹೇಳಿದೆ. ಹೀಗಾಗಿ, ಈ ನಿಟ್ಟಿನಲ್ಲಿ ಸರಕಾರ ಹಾಗೂ ಕಂಪನಿಗಳು ತಮ್ಮ ನಡುವೆ ಘರ್ಷಣೆಯಿಲ್ಲದ ಸುವರ್ಣ ಸೂತ್ರವೊಂದನ್ನು ಕಂಡುಕೊಳ್ಳುವುದು ಅಗತ್ಯವಾಗಿದೆ. ಅಪರಾಧ ತನಿಖೆಗೆ ಸಂಬಂಧಿಸಿ ಕಂಪನಿಗಳು ಸರಕಾರಕ್ಕೆ ಸಹಕರಿಸುವುದು, ಗ್ರಾಹಕರ ಹಕ್ಕುಗಳನ್ನು ಸರಕಾರವೂ ಗೌರವಿಸುವುದು ಸಾಧ್ಯವಾಗಬೇಕು.

ಕೆಲವೊಮ್ಮೆ ಕೆಡುಕು ಹಬ್ಬಲು ಈ ಮಾಧ್ಯಮಗಳು ವಾಹಕಗಳಾಗಿ ಕಾರ್ಯ ನಿರ್ವಹಿಸಿವೆಯೇ ಹೊರತು ಅವೇ ಕೆಡುಕಲ್ಲ. ನಕಲಿ ಖಾತೆಗಳು, ಸಾಮೂಹಿಕ ಸಂದೇಶಗಳನ್ನು ಮಟ್ಟಹಾಕಲು ತಾವು ಸಾಕಷ್ಟು ಕ್ರಮ ತೆಗೆದುಕೊಂಡಿದ್ದೇವೆ ಎಂದು ಟ್ವಿಟ್ಟರ್‌, ವಾಟ್ಸ್ಯಾಪ್‌ ತಿಳಿಸಿವೆ. ಕೋಟ್ಯಂತರ ಜನ ಬಳಸುತ್ತಿರುವ ಈ ಮಾಧ್ಯಮಗಳ ಮೇಲೆ ಪೂರ್ತಿ ನಿಯಂತ್ರಣ ಸ್ಥಾಪಿಸುವುದು, ನಿಗಾ ಇಡುವುದು ಅಸಾಧ್ಯ. ಈ ಮಾಧ್ಯಮಗಳಿಂದ ಒಂದು ಬಗೆಯ ಜನಸಂಪರ್ಕ ಹಾಗೂ ವೈಚಾರಿಕ ಕ್ರಾಂತಿಯೇ ದೇಶದಲ್ಲಿ ಸಾಧ್ಯವಾಗಿದೆ; ಅದು ಗೌರವಕ್ಕೆ ಅರ್ಹ ವಿಷಯ. ಈ ಮಾಧ್ಯಮಗಳನ್ನು ಜವಾಬ್ದಾರಿಯಿಂದ ಬಳಸುವ ಹೊಣೆಗಾರಿಕೆಯನ್ನು ಎಲ್ಲರೂ ಪ್ರದರ್ಶಿಸುವುದು, ಸ್ವನಿಯಂತ್ರಣ, ಹೊಣೆಗಾರಿಕೆಯಿಲ್ಲದ ಸಂದೇಶಗಳನ್ನು ಮೊಳಕೆಯಲ್ಲೇ ಚಿವುಟುವ ಎಚ್ಚರ ಇವುಗಳೇ ಹೆಚ್ಚು ಪರಿಣಾಮಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ