ಆ್ಯಪ್ನಗರ

ಉಗ್ರರನ್ನು ಮಟ್ಟ ಹಾಕಿ

ಭದ್ರತೆ ಮತ್ತು ಪೌರಪ್ರಜ್ಞೆಗಳು ಹೆಚ್ಚಲಿ

Vijaya Karnataka Web 18 Jan 2020, 5:00 am
ಕರ್ನಾಟಕದಲ್ಲಿಭಯೋತ್ಪಾದಕರ ಜಾಲದ ಕುರಿತು ಹೆಚ್ಚು ಹೆಚ್ಚು ವಿವರಗಳು ಬಯಲಾಗುತ್ತಿದ್ದು, ಆತಂಕ ಉಂಟುಮಾಡುವಂತಿದೆ. ವಾರದ ಹಿಂದೆ ಗುಂಡ್ಲುಪೇಟೆಯಲ್ಲಿಶಂಕಿತ ಜಿಹಾದಿ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿಒಬ್ಬ ಮೌಲ್ವಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು. ಇತ್ತೀಚೆಗೆ ರಾಮನಗರ ಸುತ್ತಮುತ್ತ ಭಯೋತ್ಪಾದಕರ ನಿವಾಸ ಹಾಗೂ ಬಾಂಬ್‌ ತಯಾರಿಕೆ ಕಾರ್ಯಾಗಾರಗಳಿರುವುದು ಪತ್ತೆಯಾಗಿತ್ತು. ಕಳೆದ ವರ್ಷದ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿಉಗ್ರರು ಬೆಂಗಳೂರಿನಲ್ಲಿಸೇರಿ ಹಲವು ಸುತ್ತಿನ ಮಾತುಕತೆ ನಡೆಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿತ್ತು. ಇದೀಗ ಮೊಯ್ದೀನ್‌ ಖ್ವಾಜಾ ಉಗ್ರ ಗ್ಯಾಂಗ್‌ಗೆ ಬೆಂಗಳೂರು ನಗರದಲ್ಲಿನೆಲೆ ಒದಗಿಸಿ ತಲೆಮರೆಸಿಕೊಂಡಿದ್ದ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಇನ್ನಷ್ಟು ವ್ಯಾಪಕವಾದ ಜಾಲ ಬೆಳಕಿಗೆ ಬಂದಿದೆ. ಇದರ ಜೊತೆಜೊತೆಗೇ, ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳಲ್ಲಿಶಾಮೀಲಾಗಿರುವ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿತೊಡಗಿರುವ ಕೆಲವು ಸಂಘಟನೆಗಳ ನಿಷೇಧಕ್ಕೂ ರಾಜ್ಯ ಸರಕಾರ ಕೇಂದ್ರದ ಮೊರೆ ಹೋಗುವ ಸಾಧ್ಯತೆ ಕಂಡುಬಂದಿದೆ. ಒಬ್ಬರು ಬಿಜೆಪಿ ಸಂಸದ ಹಾಗೂ ಇನ್ನೊಬ್ಬ ಪ್ರಮುಖ ಕಾರ್ಯಕರ್ತರ ಹತ್ಯೆಗೆ ಇವರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಮಾಹಿತಿಯಿದ್ದು, ಈ ಹೊತ್ತಿನಲ್ಲಿಇದನ್ನು ಗಂಭೀರವಾಗಿ ಪರಿಗಣಿಸಬೇಕಿರುವುದು ಅಗತ್ಯವಾಗಿದೆ.
Vijaya Karnataka Web edit


ಉಗ್ರ ಕೃತ್ಯಗಳು ನಡೆಯುವ ಮುನ್ನವೇ ಪೊಲೀಸರು ಚುರುಕಾಗಿ ಮಾಹಿತಿ ಪಡೆದು ಶಂಕಿತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿರುವುದು ಶ್ಲಾಘನೀಯ. ಪ್ರಸ್ತುತ ಈ ಜಾಲದ ಮೂಲವನ್ನು ಭೇದಿಸುವುದು ಹಾಗೂ ಕಠಿಣ ಕ್ರಮಗಳಾಗುವಂತೆ ನೋಡಿಕೊಳ್ಳುವುದು ಮುಂದಿನ ಅಗತ್ಯ. ಆದರೆ ಭಯೋತ್ಪಾದನೆ ಗುಪ್ತವಾಗಿ ವಿಸ್ತರಿಸಲಾರದು ಎಂದು ಹೇಳುವಂತಿಲ್ಲ. ಅದು ನಾವು ನಿರೀಕ್ಷಿಸದ ಕಡೆಯೇ ಎರಗಬಹುದಾದ ಸಾಧ್ಯತೆ ಅಧಿಕ. 2008ರಲ್ಲಿಬೆಂಗಳೂರಿನಲ್ಲಿನಡೆದ ಸರಣಿ ಬಾಂಬ್‌ ಸ್ಫೋಟಗಳನ್ನು ಇಲ್ಲಿನೆನಪಿಸಿಕೊಳ್ಳಬಹುದು. ಅಂತಾರಾಷ್ಟ್ರೀಯ ಉಗ್ರರು ಕೂಡ ಇಲ್ಲಿತಲೆಮರೆಸಿಕೊಂಡು ಇದ್ದ ಉದಾಹರಣೆ ಇದೆ. ಜತೆಗೆ, ಅಂತಾರಾಷ್ಟ್ರೀಯ ಮತ್ತು ರಾಷ್ಟ್ರ ರಾಜಕಾರಣದ ಹಲವು ಬೆಳವಣಿಗೆಗಳು ಭಯೋತ್ಪಾದನೆಗೆ ಹೆಚ್ಚಿನ ಪ್ರಚೋದನೆ ನೀಡುವಂತಿವೆ. ಹೀಗಾಗಿ, ನಮ್ಮ ದಕ್ಷಿಣ ಭಾರತ ಉಗ್ರರಿಂದ ಸುರಕ್ಷಿತ ಎಂಬ ಭಾವನೆ ಎಳ್ಳಷ್ಟೂ ಸಲ್ಲದು. ಪುರಾವೆಗಳು ರುಜುವಾತುಪಡಿಸುವಂತೆ, ಬೆಂಗಳೂರು ಉಗ್ರರ ಸ್ಲೀಪರ್‌ ಸೆಲ್‌ ಕೂಡ ಆಗಿರುವ ಸಾಧ್ಯತೆ ಹೆಚ್ಚಿದೆ. ಇದನ್ನು ಮೊಳಕೆಯಲ್ಲೇ ಚಿವುಟಿ ಹಾಕದಿದ್ದರೆ ಮುಂದಿನ ದಿನಗಳಲ್ಲಿಆತಂಕ ಕಾದಿದೆ. ಇದರಿಂದ ಪಾರಾಗಲು ಸುರಕ್ಷತಾ ಕ್ರಮಗಳು ಹಾಗೂ ಪೌರ ಮುನ್ನೆಚ್ಚರಿಕೆ ಮದ್ದು. ಗುಪ್ತಚರ ಮಾಹಿತಿ ವ್ಯವಸ್ಥೆಯನ್ನು ಬಲಪಡಿಸುವುದು, ಪೊಲೀಸ್‌ ವ್ಯವಸ್ಥೆಯನ್ನು ಚುರುಕಾಗಿಸುವುದು, ಕಾನೂನು ಸುವ್ಯವಸ್ಥೆಯನ್ನು ಬಿಗಿ ಮಾಡುವುದು, ಜನಸಂದಣಿ ಇರುವ ಪ್ರದೇಶಗಳಲ್ಲಿಬಿಗಿ ನಿಗಾ ಇಡುವುದು ಮುಂತಾದವು ಆಳುವವರ ಕರ್ತವ್ಯ. ಬಸ್‌, ರೈಲು ನಿಲ್ದಾಣ, ಮೆಟ್ರೊ, ಮಾರುಕಟ್ಟೆ, ಮಾಲ್‌ಗಳು, ಪೂಜಾಸ್ಥಳಗಳಂಥ ಜನನಿಬಿಡ ಪ್ರದೇಶಗಳಲ್ಲಿಸಾಕಷ್ಟು ಸಂಖ್ಯೆಯ ಭದ್ರತಾ ಸಿಬ್ಬಂದಿಗಳು, ಲೋಹಶೋಧಕ ಹಾಗೂ ಸಿಸಿಟಿವಿ ಕ್ಯಾಮೆರಾಗಳಿರುವಂತೆ ನೋಡಿಕೊಳ್ಳಬೇಕು. ಭದ್ರತೆಯಲ್ಲಿಲೋಪವಿದ್ದರೆ ಅದನ್ನು ತಕ್ಷಣವೇ ಪೊಲೀಸರು ಅಥವಾ ಭದ್ರತಾ ಸಂಸ್ಥೆಗಳ ಗಮನಕ್ಕೆ ತರಬೇಕು. ಬಹುಮಂದಿ ಸೇರುವ ಕಾರ್ಯಕ್ರಮ ಏರ್ಪಡಿಸುವಾಗ ಪರವಾನಗಿ ಹಾಗೂ ಭದ್ರತೆ ಪಡೆಯುವುದು ಅಗತ್ಯ. ಅನುಮಾನಾಸ್ಪದ ವಸ್ತುಗಳ ಮೇಲೆ ನಿಗಾ ಇಡುವುದು, ಸಂಶಯಕ್ಕೆ ಎಡೆಮಾಡಿಕೊಡುವ ಯಾವುದೇ ಚಟುವಟಿಕೆಗಳನ್ನು ಎಚ್ಚರದಿಂದ ಗಮನಿಸಿ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡುವುದು, ಜನಸಂದಣಿ ತಾಣಗಳಲ್ಲಿರುವ ಭದ್ರತಾ ವ್ಯವಸ್ಥೆಗಳನ್ನು ಉಲ್ಲಂಘಿಘಿಸದೆ ಸಹಕರಿಸಬೇಕಾದ್ದು ನಾಗರಿಕರ ಹೊಣೆ. ಬಾಡಿಗೆ ಮನೆ, ವಾಹನಗಳನ್ನು ನೀಡುವಾಗ, ಪಡೆಯುವವರ ಪೂರ್ತಿ ಪೂರ್ವಾಪರ ತಿಳಿದು ವ್ಯವಹರಿಸುವುದು ಸುರಕ್ಷಿತ. ಇತ್ತೀಚೆಗೆ ಉಗ್ರರು ದೂರವಾಣಿ, ಇಂಟರ್‌ನೆಟ್‌ ಮೂಲಕವೂ ಸಂಪರ್ಕವನ್ನು ವಿಸ್ತರಿಸುತ್ತಿದ್ದು, ಉಗ್ರರು ಹೈಟೆಕ್‌ ಆಗುತ್ತಿರುವ ಸಂದರ್ಭದಲ್ಲಿಪೊಲೀಸ್‌ ವ್ಯವಸ್ಥೆಯೂ ಇನ್ನಷ್ಟು ವೃತ್ತಿಪರವಾಗಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ