ಆ್ಯಪ್ನಗರ

ಉಗ್ರರಿಗೆ ತಕ್ಕ ಪಾಠ ಕಲಿಸಲೇಬೇಕು

ಭಯೋತ್ಪಾದಕರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕೋಣ

Vijaya Karnataka Web 16 Feb 2019, 5:00 am
ಜಮ್ಮು- ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದಲ್ಲಿ ಪಾಕಿಸ್ತಾನಿ ಪ್ರೇರಿತ ಉಗ್ರ ನಡೆಸಿದ ಸ್ಫೋಟಕ ದಾಳಿ ಅತ್ಯಂತ ಹೇಯ, ಪೈಶಾಚಿಕ. ಇದನ್ನು ಖಂಡಿಸಲು ಪದಗಳು ಸಾಲವು. ಕಾಶ್ಮೀರದ ಪ್ರತ್ಯೇಕತಾವಾದವನ್ನು ಪೋಷಿಸಲು ಪಾಕಿಸ್ತಾನ ನಡೆಸುತ್ತಿರುವ ಹತಾಶ ಪ್ರಯತ್ನ ಇದರಲ್ಲಿ ಕಾಣಿಸುತ್ತಿದ್ದು, ಭಾರತವನ್ನು ಮುಖಾಮುಖಿಯಾಗಿ ಎದುರಿಸಲಾಗದ ಅದರ ಹೇಡಿತನ ಎದ್ದು ತೋರುತ್ತದೆ. ಆದರೆ ಪಾಕ್‌ ಉಗ್ರಗಾಮಿಗಳ ಈ ವಿಕೃತಿಗೆ ಭಾರತದ 40ಕ್ಕೂ ಅಧಿಕ ವೀರ ಯೋಧರು ತಮ್ಮ ಅಮೂಲ್ಯ ಜೀವ ತೆತ್ತಿದ್ದಾರೆ. ಇವರ ಕುಟುಂಬದ ನೂರಾರು ಮಂದಿ ಹಾಗೂ ಸ್ಪಂದನಶೀಲ ಭಾರತೀಯರು ಕಣ್ಣೀರಿಡುವಂತಾಗಿದೆ. ಇದು ತನಗೆ ದೊರೆತ ಗೆಲುವು ಎಂದು ಪಾಕಿಸ್ತಾನ ಬೀಗಬೇಕಿಲ್ಲ; ಅದು ಹಾವಿನ ಹೆಡೆಗೇ ಕೈಹಾಕಿದೆ ಎನ್ನುವುದನ್ನು ಮರೆಯಬಾರದು.
Vijaya Karnataka Web edit


ಪುಲ್ವಾಮಾ ದಾಳಿಯನ್ನು ಪಂಥಾಹ್ವಾನವಾಗಿಯೇ ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ್ದು, ಯೋಧರ ಪ್ರತಿಯೊಂದು ನೆತ್ತರ ಹನಿಗೂ ಉತ್ತರ ಕೊಡುವೆವು ಎಂದು ಹೇಳಿದ್ದಾರೆ. ಪ್ರತಿಕಾರಕ್ಕೆ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದಾಗಿ ಘೋಷಿಸಿದ್ದಾರೆ. ಪಾಕಿಸ್ತಾನದ ರಾಯಭಾರಿಯನ್ನು ಕರೆಸಿ ಈ ಕುರಿತು ಕಠಿಣ ಎಚ್ಚರಿಕೆ ನೀಡಲಾಗಿದೆ. ಪಾಕಿಸ್ತಾನಕ್ಕೆ ನೀಡಲಾಗಿದ್ದ 'ಅತ್ಯಂತ ಮಿತ್ರ ರಾಷ್ಟ್ರ' ಸ್ಥಾನಮಾನ ಮರಳಿ ಪಡೆಯಲಾಗಿದೆ. ಉಗ್ರ ಕೃತ್ಯಕ್ಕೆ ಪಾಕಿಸ್ತಾನವನ್ನು ಉತ್ತರದಾಯಿಯಾಗಿ ಮಾಡುವ, ಸಂಚಿನ ರೂವಾರಿ ಮಸೂದ್‌ ಅಜರ್‌ನನ್ನು ಭಾರತಕ್ಕೆ ಒಪ್ಪಿಸುವಂತೆ ಒತ್ತಡ ಹೇರುವ ಹಾಗೂ ಅಂತಾರಾಷ್ಟ್ರೀಯ ವಲಯದಲ್ಲಿ ಪಾಕಿಸ್ತಾನದ ಮೇಲೆ ಒತ್ತಡ ಹೇರಿ ಅದನ್ನು ಒಂಟಿಯಾಗಿ ಮಾಡುವ ಕ್ರಮಗಳಿಗೆ ಸರಕಾರ ಮುಂದಾಗಿದೆ. ಈ ಕುರಿತು ಭಾರತ ಸರಕಾರ ತೆಗೆದುಕೊಳ್ಳುವ ಯಾವುದೇ ಕಠಿಣ ಕ್ರಮಕ್ಕೂ ಎಲ್ಲ ಬಗೆಯ ಸಹಕಾರ ನೀಡುವುದಾಗಿ ಸರ್ವ ಪಕ್ಷ ಸಭೆ ನಿರ್ಣಯಿಸಿದ್ದು ಸ್ವಾಗತಾರ್ಹವಾಗಿದೆ. ಇಂಥ ಸಂದರ್ಭದಲ್ಲಿ ದೇಶದ ಎಲ್ಲರೂ ಒಗ್ಗಟ್ಟಾಗಿ ನಿಂತು ವೈರಿಯನ್ನು ಎದುರಿಸುವುದು ಅಗತ್ಯವಾಗಿದೆ.

ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ. ಭಯೋತ್ಪಾದನೆಯ ಮೂಲಕ ಅದನ್ನು ಪಡೆಯಬಹುದೆಂದು ದುರಾಸೆಯನ್ನು ಹೊಂದಿದ್ದರೆ ಪಾಕಿಸ್ತಾನದ ಪಾಲಿಗೆ ಅದು ಕನ್ನಡಿಯ ಗಂಟು. ಅಲ್ಲಿ ಪ್ರತ್ಯೇಕತಾವಾದದ ಭಾವನೆ ಹಬ್ಬಿಸುವವರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕು. ಕಾಶ್ಮೀರಕ್ಕೆ ನೀಡಲಾಗಿರುವ 370ನೇ ವಿಧಿಯ ವಿಶೇಷ ಸ್ಥಾನಮಾನ ದುರ್ಬಳಕೆಯಾಗುತ್ತಿದೆ; ಇದನ್ನು ಹಿಂತೆಗೆದುಕೊಳ್ಳುವ ಕುರಿತು ಹಲವು ವರ್ಷಗಳಿಂದ ನಡೆಯುತ್ತಿರುವ ಚರ್ಚೆಗೆ ಒಂದು ತಾರ್ಕಿಕ ಅಂತ್ಯ ಕಾಣಿಸುವ ಕಾಲವೂ ಈಗ ಸನ್ನಿಹಿತವಾಗಿರುವಂತಿದೆ.

ಎಲ್ಲ ದೇಶಗಳೂ ಅಕ್ಕಪಕ್ಕದ ದೇಶಗಳ ಜತೆಗೆ ಶಾಂತಿಯುತ ಸಹಬಾಳ್ವೆ ನಡೆಸುವ ಬಗ್ಗೆ ಕನಸು ಕಾಣುವುದು ಸಹಜ. ಆದರೆ ಪಾಕಿಸ್ತಾನದ ಜತೆಗೆ ಅಂಥ ಸಹಬಾಳ್ವೆ ಸಾಧ್ಯವಿಲ್ಲ ಎಂಬುದು ಮತ್ತೆ ಮತ್ತೆ ರುಜುವಾತಾಗುತ್ತಲೇ ಬಂದಿದೆ. ಹುಟ್ಟುತ್ತಲೇ ಭಾರತ ದ್ವೇಷವನ್ನು ಹೊಂದಿದ್ದ ಪಾಕಿಸ್ತಾನ, ಕಾಶ್ಮೀರದ ಕಾರಣದಿಂದ ಅದನ್ನು ವರ್ಧಿಸಿಕೊಂಡಿದೆ. ಅಲ್ಲಿನ ರಾಜಕಾರಣಿಗಳು ಭಾರತದ ಜತೆ ಸ್ನೇಹದ ನಟನೆ ಮಾಡುತ್ತಿದ್ದು, ಅಲ್ಲಿನ ಸೈನ್ಯ ಹಾಗೂ ಗೂಢಚರ ಸಂಸ್ಥೆಗಳು ಉಗ್ರರನ್ನು ಪೋಷಿಸುತ್ತಿವೆ. ಹೀಗೆ ಎರಡು ತಲೆಯ ಹಾವಿನಂತೆ ವರ್ತಿಸುತ್ತಿರುವ ಪಾಕ್‌ ನಮ್ಮ ದೇಶದಲ್ಲಿ ಸೃಷ್ಟಿಸುತ್ತಿರುವ ಅಶಾಂತಿಯ ಅಧ್ಯಾಯಕ್ಕೆ ಕೊನೆ ಹಾಡಬೇಕಾದ ಕಾಲ ಸನ್ನಿಹಿತವಾಗಿದೆ. ನೆರೆಯ ರಾಷ್ಟ್ರಕ್ಕೆ ದಿಟ್ಟವಾದ ಪ್ರತ್ಯುತ್ತರ ನೀಡುವುದು, ನಮ್ಮ ಯೋಧರ ಬಲಿದಾನ ವ್ಯರ್ಥವಾಗದಂತೆ ನೋಡಿಕೊಳ್ಳುವುದು ಇಂದಿನ ತುರ್ತು ಅಗತ್ಯ. ಶಾಂತಿ ಮಾತುಕತೆಗೆ ಸಮಯವಿದಲ್ಲ. ಕಠಿಣ ಮಿಲಿಟರಿ ಕಾರ್ಯಾಚರಣೆಯಿಂದಲಾದರೂ, ಭಾರತದ ತಂಟೆಗೆ ಬಂದರೆ ಬಿಡಲಾರೆವು ಎಂಬ ಮಾರುತ್ತರವನ್ನು ಅಂತಾರಾಷ್ಟ್ರೀಯ ವಲಯದಲ್ಲಿ ರವಾನಿಸಬೇಕಾಗಿದೆ. ಪ್ರಕರಣದ ತನಿಖೆ ತಕ್ಷಣ ನಡೆದು ಸಂಚುಕೋರರಿಗೆ ಕಠಿಣ ಶಿಕ್ಷೆಯಾಗಬೇಕು. ಜಮ್ಮು- ಕಾಶ್ಮೀರದಲ್ಲಿ ನೆಲೆಯೂರಿರುವ ಉಗ್ರರು, ಪ್ರತ್ಯೇಕತಾವಾದಿಗಳನ್ನು ಪತ್ತೆ ಹಚ್ಚಿ ನಿರ್ಮೂಲನಗೊಳಿಸಬೇಕು. ಇದಕ್ಕಾಗಿ ಸೈನ್ಯಕ್ಕೆ ಮುಕ್ತಹಸ್ತವನ್ನು ನೀಡಬೇಕು. ಎಲ್ಲ ಪಕ್ಷಗಳು, ಜವಾಬ್ದಾರಿಯುತ ಪ್ರಜೆಗಳು ಈ ನಿಟ್ಟಿನಲ್ಲಿ ಸರಕಾರದ ಜತೆಗೆ ಕೈ ಜೋಡಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ