ಆ್ಯಪ್ನಗರ

ಐಸಿಸ್‌ನ ಆತಂಕ

ಸಂಭಾವ್ಯ ದಾಳಿಗಳ ಮುನ್ನ ಎಚ್ಚೆತ್ತುಕೊಳ್ಳೋಣ

Vijaya Karnataka Web 13 May 2019, 5:00 am
ಜಾಗತಿಕ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಭಾರತದ ಕಾಶ್ಮೀರದಲ್ಲಿ ತನ್ನದೇ ಆದ 'ಪ್ರಾಂತ್ಯ'ವನ್ನು ಸ್ಥಾಪಿಸಿರುವುದಾಗಿ ಹೇಳಿಕೊಂಡಿದೆ. ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ನೂತನ 'ಇಸ್ಲಾಮಿಕ್‌ ಪ್ರಾಂತ್ಯ'ವನ್ನು ಸ್ಥಾಪಿಸಿರುವುದಾಗಿ ಐಸಿಸ್‌ ಮುಖವಾಣಿಯಾದ ಅಮಕ್‌ ನ್ಯೂಸ್‌ ಏಜೆನ್ಸಿ ಹೇಳಿಕೊಂಡಿದ್ದು, ಅದಕ್ಕೆ 'ವಿಲಾಯಹ್‌ ಆಫ್‌ ಹಿಂದ್‌' ಎಂದು ಹೆಸರಿಟ್ಟುಕೊಂಡಿದೆ. ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿರುವುದಾಗಿಯೂ ಅದು ಹೇಳಿಕೊಂಡಿದೆ. ಆದರೆ ಅದಕ್ಕೆ ಸಾಕ್ಷಿಗಳು ಕಂಡುಬಂದಿಲ್ಲ. ಆದರೆ ಐಸಿಸ್‌ನ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲೇಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.
Vijaya Karnataka Web edit


ಇದಕ್ಕೆ ಕಾರಣಗಳು ಹಲವು. ಮೊದಲನೆಯದಾಗಿ, ಅದು ದಕ್ಷಿಣ ಏಷ್ಯಾದಲ್ಲಿ ತನ್ನ ಬೇರುಗಳನ್ನು ಚಾಚಲು ಹವಣಿಸುತ್ತಿದೆ. ಕಳೆದ ತಿಂಗಳು ಪಕ್ಕದ ದೇಶ ಶ್ರೀಲಂಕಾದಲ್ಲಿ ಈಸ್ಟರ್‌ ಭಾನುವಾರದಂದು ಚರ್ಚ್‌ಗಳ ಮೇಲೆ ನಡೆಸಿದ ಸರಣಿ ಆತ್ಮಾಹುತಿ ದಾಳಿಗಳೇ ಇದಕ್ಕೆ ಸಾಕ್ಷಿ. ನಾವು ಎಚ್ಚರಿಕೆ ವಹಿಸದಿದ್ದರೆ, ಶ್ರೀಲಂಕಾದಿಂದ ಭಾರತಕ್ಕೆ ನುಸುಳುವುದೇನೂ ಉಗ್ರರಿಗೆ ಕಷ್ಟವೆನಿಸಲಾರದು. ಈಗಾಗಲೇ ಮಾರಿಷಸ್‌, ಫಿಲಿಪ್ಪೀನ್ಸ್‌ ಮುಂತಾದ ದಕ್ಷಿಣ ಏಷ್ಯಾದ ದೇಶಗಳಲ್ಲಿ ಹಲವು ಕಡೆ ಇಸ್ಲಾಮಿಕ್‌ ಉಗ್ರರ ದಾಳಿಗಳು ನಡೆದಿದ್ದು, ಇದೆಲ್ಲದರ ಹಿಂದೆ ಐಸಿಸ್‌ ಕೈವಾಡವನ್ನು ಶಂಕಿಸಲಾಗಿದೆ. ಶ್ರೀಲಂಕಾದ ದಾಳಿಯನ್ನು ಐಸಿಸ್‌ ಸ್ವತಃ ತನ್ನದೆಂದೇ ಹೇಳಿಕೊಂಡಿದ್ದು, ಅದರ ಕ್ರೂರ ನೆರಳು ಭಾರತದ ಮಗ್ಗುಲಿಗೂ ಚಾಚಿಕೊಂಡಿರುವುದು ಸ್ಪಷ್ಟ.

ಎರಡನೆಯದಾಗಿ, ಇಸ್ಲಾಮಿಕ್‌ ಸ್ಟೇಟ್‌ ಭಯೋತ್ಪಾದನೆ ಹುಲುಸಾಗಿ ಬೆಳೆಯಲು ಅಗತ್ಯವಾದ ಪ್ರಚೋದನಕಾರಿ ವಾತಾವರಣವನ್ನು ಕಾಶ್ಮೀರದಲ್ಲಿ ಸೃಷ್ಟಿಸಲು ಸಾಕಷ್ಟು ಸಾಧ್ಯತೆಗಳಿವೆ. ಕಾಶ್ಮೀರದ ಒಂದು ವರ್ಗದ ಯುವಜನತೆಯಲ್ಲಿ ಪ್ರತ್ಯೇಕತಾವಾದ ಬೇರೂರಿದ್ದು, ಅದಕ್ಕೆ ಪಾಕಿಸ್ತಾನದ ನುಸುಳುಕೋರ ಉಗ್ರರು ಬೆಂಬಲ ನೀಡುತ್ತಿದ್ದಾರೆ. ಇದಕ್ಕೆ ಪೂರಕವಾದ ವಿಚಾರಗಳನ್ನೂ ಅಲ್ಲಿ ಪಾಕಿಸ್ತಾನದ ನೆರವಿನಿಂದ ಬಿತ್ತಲಾಗುತ್ತಿದ್ದು, ಅಲ್ಲಿನ ಒಂದು ತಲೆಮಾರಿನ ಜನತೆ ಶಾಂತಿಯುತ ಜೀವನದ ಮೌಲ್ಯವನ್ನು ಕಾಣಲಾಗದೆ ಹೋಗಿದ್ದಾರೆ. ಕಾಶ್ಮೀರದ ಪ್ರಜೆಗಳಲ್ಲೇ ಕೆಲವರು ಬಂದೂಕು ಕೈಗೆತ್ತಿಕೊಳ್ಳುತ್ತಿದ್ದಾರೆ. ಇದನ್ನು ನಿವಾರಿಸಲು ಅಗತ್ಯವಾದ ಸಾಮಾಜಿಕ ಸುಧಾರಣೆಯ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿದ್ದರೂ ಅದಿನ್ನೂ ತುಂಬ ದೂರ ಸಾಗಬೇಕಾಗಿದೆ. ಐಸಿಸ್‌ನ ಮೂಲಸ್ಥಾನದಿಂದ ಚದುರಿ ತಮ್ಮ ದೇಶಗಳಿಗೆ ಬಂದಿರುವ ಪರಿಣತ ಉಗ್ರರು ಕಾಶ್ಮೀರದಲ್ಲೂ ಇರಬಹುದು; ಅವರನ್ನು ಹುಡುಕಿ ಕಾನೂನಿನ ಕಕ್ಷೆಯೊಳಗೆ ತರುವ ಕೆಲಸ ಆಗಬೇಕಿದೆ.

ಇನ್ನು ಐಸಿಸ್‌ನ ಕಾರ್ಯತಂತ್ರವನ್ನು ವಿಶ್ಲೇಷಿಸಿದರೆ, ಅದು ಇರಾಕ್‌ ಹಾಗೂ ಸಿರಿಯಾಗಳಲ್ಲೂ ಇದೇ ರೀತಿ ವರ್ತಿಸಿರುವುದು ಕಾಣುತ್ತದೆ. ಅದು ತನ್ನ ಘೋರ ಕೃತ್ಯಗಳ ಪ್ರಮಾಣವನ್ನು ಭೀಕರವೆನಿಸುವ ಮಟ್ಟಕ್ಕೆ ತರುವ ಮುನ್ನ ಇರಾಕ್‌ ಹಾಗೂ ಸಿರಿಯಾದ ಕೆಲವು ಭಾಗಗಳನ್ನು 'ಇಸ್ಲಾಮಿಕ್‌ ಸ್ಟೇಟ್‌' ಎಂದು ಘೋಷಿಸಿಕೊಂಡಿತ್ತು. ನಂತರ ಸಾವಿರಾರು ಕಿಲೋಮೀಟರ್‌ ವಿಸ್ತಾರದ ಪ್ರದೇಶಗಳನ್ನು ವ್ಯವಸ್ಥಿತವಾಗಿ ಕೈವಶ ಮಾಡಿಕೊಂಡಿತ್ತು. ನಂತರ ಸಿರಿಯಾ ಹಾಗೂ ಇರಾಕ್‌ ಆಡಳಿತಗಳು ಅಮೆರಿಕದ ಸಹಾಯದಿಂದ ಈ ಉಗ್ರರನ್ನು ನಾಶ ಮಾಡಬೇಕಾದರೆ ಸಾಕುಬೇಕಾಗಿತ್ತು. ಐಸಿಸ್‌ ಹಿಡಿತದಲ್ಲಿದ್ದ ಪ್ರಾಂತ್ಯಗಳು ಅದರ ಕೈತಪ್ಪಿದ್ದರೂ, ಐಸಿಸ್‌ ಪೂರ್ತಿ ಶರಣಾಗತವಾಗಿಲ್ಲ ಎಂಬುದು ಅದರ ಕಾರ್ಯಾಚರಣೆಗಳಿಂದಲೇ ಸ್ಪಷ್ಟವಾಗುತ್ತದೆ. ಇಲ್ಲೂ ಕೂಡ ಐಸಿಸ್‌ ತನ್ನ 'ಪ್ರಾಂತ್ಯ'ದ ಘೋಷಣೆಯೊಂದಿಗೆ ಆರಂಭಿಸಿದೆ. ಹೀಗಾಗಿ ಕುಕೃತ್ಯಗಳು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಮುನ್ನವೇ ನಾವು ಎಚ್ಚೆತ್ತುಕೊಳ್ಳಬೇಕಿದೆ.

ಭಾರತದಲ್ಲಿ ಐಸಿಸ್‌ ಉಗ್ರರು ಕ್ರಿಯಾಶೀಲರಾಗಿದ್ದಾರೆ ಎಂಬುದು ಕಳೆದ ಕೆಲವಾರು ವರ್ಷಗಳಲ್ಲಿ ನಮ್ಮ ತನಿಖಾ ಸಂಸ್ಥೆಗಳು ನಡೆಸಿರುವ ತನಿಖೆಗಳಿಂದ ಸ್ಪಷ್ಟವಾಗಿದೆ. ಹಲವರು ಐಸಿಸ್‌ ತರಬೇತಿ ಪಡೆಯಲು ತೆರಳಿರುವುದು, ನಂತರ ಹಿಂದಿರುಗಿರುವುದು ತಿಳಿದುಬಂದಿದೆ. ಕೆಲವರು ಇನ್ನೂ ನಾಪತ್ತೆಯಾಗಿದ್ದು, ತೆರೆಮರೆಯಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಶ್ರೀಲಂಕಾದ ದಾಳಿಯೊಂದಿಗೆ ದಕ್ಷಿಣ ಏಷ್ಯಾದಲ್ಲಿ ಅದು ತನ್ನ ಕರಾಳ ಹಸ್ತುವನ್ನು ಚಾಚಲು ಉಗುರುಗಳನ್ನು ಹರಿತಗೊಳಿಸಿಕೊಂಡಿರುವುದು ಸ್ಪಷ್ಟ. ಇರಾಕ್‌ ಹಾಗೂ ಸಿರಿಯಾ ಮಾತ್ರವಲ್ಲ ಅಫಘಾನಿಸ್ತಾನದಲ್ಲೂ ತನ್ನ ಕಾರ್ಯಾಚರಣೆ ನಡೆಸಲು ಪೂರಕ ವಾತಾವರಣ ಈಗ ಇಲ್ಲವಾದುದರಿಂದ ಐಸಿಸ್‌ ಹೊಸ ನೆಲೆಗಳನ್ನು ಹುಡುಕುತ್ತಿದೆ. ಭಾರತ ಅದರ ಆಡುಂಬೊಲ ಆಗದಂತೆ ನೋಡಿಕೊಳ್ಳುವ ಹೊಣೆ ಇಲ್ಲಿನ ಸರಕಾರ ಹಾಗೂ ಪ್ರಜ್ಞಾವಂತ ಪ್ರಜೆಗಳದ್ದಾಗಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ