ಆ್ಯಪ್ನಗರ

Editorial: ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆ

ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್‌) ಕುಟುಂಬಗಳ ಬ್ಯಾಂಕ್‌ ಖಾತೆಗೆ ಮಾಸಿಕ 2,500 ರೂ. ನಗದನ್ನು ನೇರ ವರ್ಗಾವಣೆ ಮಾಡುವ ಯೋಜನೆ ಕುರಿತು ಕೇಂದ್ರ ಸರಕಾರ ಚಿಂತನ ಮಂಥನ ನಡೆಸುತ್ತಿದೆ. 2017ರ ಆರ್ಥಿಕ ಸಮೀಕ್ಷೆಯ ಒಂದಿಡೀ ಅಧ್ಯಾಯದಲ್ಲಿ ಈ ಯೋಜನೆಯ ದೂರಗಾಮಿ ಪರಿಣಾಮಗಳ ಕುರಿತು ಚರ್ಚಿಸಲಾಗಿತ್ತು. ಫಿನ್ಲೆಂಡ್‌, ನೆದರ್ಲೆಂಡ್‌, ಕೆನಡಾದಂಥ ರಾಷ್ಟ್ರಗಳಲ್ಲಿ ಸಾರ್ವತ್ರಿಕ ಆದಾಯ ಯೋಜನೆ ಯಶಸ್ವಿಯಾಗಿದೆ.

Vijaya Karnataka 14 Jan 2019, 5:00 am
ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್‌) ಕುಟುಂಬಗಳ ಬ್ಯಾಂಕ್‌ ಖಾತೆಗೆ ಮಾಸಿಕ 2,500 ರೂ. ನಗದನ್ನು ನೇರ ವರ್ಗಾವಣೆ ಮಾಡುವ ಯೋಜನೆ ಕುರಿತು ಕೇಂದ್ರ ಸರಕಾರ ಚಿಂತನ ಮಂಥನ ನಡೆಸುತ್ತಿದೆ. 2017ರ ಆರ್ಥಿಕ ಸಮೀಕ್ಷೆಯ ಒಂದಿಡೀ ಅಧ್ಯಾಯದಲ್ಲಿ ಈ ಯೋಜನೆಯ ದೂರಗಾಮಿ ಪರಿಣಾಮಗಳ ಕುರಿತು ಚರ್ಚಿಸಲಾಗಿತ್ತು. ಫಿನ್ಲೆಂಡ್‌, ನೆದರ್ಲೆಂಡ್‌, ಕೆನಡಾದಂಥ ರಾಷ್ಟ್ರಗಳಲ್ಲಿ ಸಾರ್ವತ್ರಿಕ ಆದಾಯ ಯೋಜನೆ ಯಶಸ್ವಿಯಾಗಿದೆ. ವಿದ್ಯುತ್‌ ಉತ್ಪಾದನೆಯಲ್ಲಿ ದೊಡ್ಡ ಯಶಸ್ಸು ಸಾಧಿಸಿ ಶೇ. 90ರಷ್ಟು ಜಲ ವಿದ್ಯುತ್‌ಅನ್ನು ಅನ್ಯರಾಜ್ಯಗಳಿಗೆ ರಫ್ತು ಮಾಡಿ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಸಿಕ್ಕಿಂ, ಸಾರ್ವತ್ರಿಕ ಆದಾಯ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿದೆ. ಇದರ ಫಲಾನುಭವಿಗಳಾದವರು ನಗದು ಪಡೆದಾಗ ಅಡುಗೆ ಅನಿಲ, ಆಹಾರ ಸಾಮಗ್ರಿ ಸಬ್ಸಿಡಿ ತಾನೇ ತಾನಾಗಿ ಕಡಿತಗೊಳ್ಳುತ್ತದೆ. ಈಗಾಗಲೇ ಕೇಂದ್ರ ಸರಕಾರ ಅಂದಾಜಿಸಿರುವಂತೆ ಇದನ್ನು ಜಾರಿಗೆ ತರಬೇಕಾದರೆ ವಾರ್ಷಿಕವಾಗಿ 32 ಸಾವಿರ ಕೋಟಿ ರೂ. ಬೇಕಾಗುತ್ತದೆ. ದೇಶದ ಜನಸಂಖ್ಯೆಯಲ್ಲಿ ಶೇ. 27.5 ರಷ್ಟು ಮಂದಿ ಬಿಪಿಎಲ್‌ ವ್ಯಾಪ್ತಿಗೆ ಸೇರಿದ್ದು ಪಡಿತರ ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.
Vijaya Karnataka Web universal basic income scheme
Editorial: ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆ


ಪಡಿತರ ವ್ಯವಸ್ಥೆಯಲ್ಲಿ 'ನಾವು ಕೊಟ್ಟಿದ್ದು ನೀವು ತಿನ್ನಿ' ಎನ್ನುವ ನೀತಿ ಚಾಲ್ತಿಯಲ್ಲಿದೆ. ಒಂದು ರಾಜ್ಯದ ಹಲವು ಜಿಲ್ಲೆಗಳಲ್ಲೇ ವಿಭಿನ್ನ ಆಹಾರ ಕ್ರಮ ಇರುವ ದೇಶ ನಮ್ಮದು. ಜನರ ಕೈಗೆ ನಗದು ಸಿಗುವುದರಿಂದ ತಮಗೆ ಬೇಕಾದ ಹಾಗೂ ಉತ್ತಮ ಗುಣಮಟ್ಟದ ಆಹಾರವನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಬಹುದು. ಇಷ್ಟರ ಮಟ್ಟಿಗೆ ಈ ಯೋಜನೆ ಜನರ ಆಯ್ಕೆಯ ಸ್ವಾತಂತ್ರ್ಯವನ್ನು ವಿಸ್ತರಿಸುತ್ತದೆ. ಪಡಿತರ ವಿತರಣೆ ದೋಷ ಮುಕ್ತವಾಗಿಯೇನೂ ಇಲ್ಲ. ಪಡಿತರಕ್ಕೆ ವಿತರಣೆಯಾಗುವ ಧಾನ್ಯಗಳು ಕಾಳಸಂತೆಯಲ್ಲಿ ಮಾರಾಟವಾಗುವ ಪ್ರಕರಣಗಳು ಪದೇಪದೆ ವರದಿಯಾಗುತ್ತಲೇ ಇದೆ. ಇನ್ನು ಇವುಗಳ ದಾಸ್ತಾನು, ಸರಬರಾಜು, ವಿತರಣೆಗೆ ದೊಡ್ಡ ಕಾರ್ಯಜಾಲವೇ ಬೇಕಾಗುತ್ತದೆ. ಪ್ರತಿ ಹಂತದಲ್ಲೂ ಅಕ್ರಮಗಳಿಗೆ ದೊಡ್ಡ ಅವಕಾಶಗಳಿದ್ದೇ ಇದೆ. ನಗದು ವರ್ಗಾವಣೆಯಿಂದ ಇಂಥ ಪರಿಮಿತಿಗಳನ್ನು ಖಂಡಿತ ದಾಟಿಕೊಳ್ಳಬಹುದು. ಆದರೆ ಇಲ್ಲೊಂದು ದೊಡ್ಡ ತೊಡಕು ಕೂಡ ಇದೆ.ಸಾಮಾನ್ಯವಾಗಿ ಬಿಪಿಎಲ್‌ ಕುಟುಂಬಗಳಲ್ಲಿ ಕುಟುಂಬದ ಪೋಷಣೆಯ ಹೊಣೆ ಹೆಣ್ಣು ಮಕ್ಕಳದ್ದೇ ಆಗಿರುತ್ತದೆ. ಪಡಿತರದಿಂದ ಪಡೆಯುವ ಧಾನ್ಯಗಳ ವಿಷಯದಲ್ಲಿ ಪುರುಷರ ಮಧ್ಯಪ್ರವೇಶವಿರುವುದಿಲ್ಲ. ಆದರೆ ಆಹಾರ ಪದಾರ್ಥಗಳ ಬದಲಿಗೆ ನಗದು ಕೊಟ್ಟಾಗ ಸಹಜವಾಗಿಯೇ ಆ ಹಣದ ಮೇಲಿನ ಅಧಿಕಾರ ಪುರುಷನ ಕೈಗೆ ಹೋದರೆ ಒಟ್ಟಾರೆ ಕುಟುಂಬದ ಒಳಿತಿಗೇ ಆ ಹಣ ಮೀಸಲಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ದುಶ್ಚಟಗಳಿಗೆ ದಾಸರಾದವರು ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಅವಕಾಶಗಳಿದ್ದೇ ಇರುತ್ತವೆ. ಕುಟುಂಬ ಸಾಮರಸ್ಯ ಕೆಡುವ ಸಂಭವವನ್ನೂ ಅಲ್ಲಗಳೆಯಲಾಗದು. ಇದನ್ನು ನಿವಾರಿಸುವ ರೀತಿಯಲ್ಲಿ ಕಾರ್ಯಯೋಜನೆಯನ್ನು ರೂಪಿಸಬೇಕಾಗುತ್ತದೆ. ವಿವಾಹಿತ ಹೆಣ್ಣು ಮಕ್ಕಳ ಆರ್ಥಿಕ ಅಧಿಕಾರ ಮತ್ತು ಸ್ವಾತಂತ್ರ್ಯವನ್ನು ಎತ್ತರಿಸುವ ರೀತಿಯಲ್ಲಿ ಗಾಢ ಚಿಂತನೆ ನಡೆಸಬೇಕಾಗುತ್ತದೆ. ಈಗಾಗಲೇ ಆಸ್ತಿ ವಿಷಯದಲ್ಲಿ ಪುರುಷನಿಗಿರುವಷ್ಟೇ ಅಧಿಕಾರ ಸ್ತ್ರೀಯರಿಗೂ ಇದೆ ಎಂಬುದನ್ನು ಸಾರ್ವಜನಿಕ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿಸಲಾಗಿದೆ. ಇಂಥ ದೃಷ್ಟಿಕೋನವನ್ನು ಬೆಳೆಸುವುದರ ಮೂಲಕ ಸಂಭವನೀಯ ಸಂಘರ್ಷಗಳನ್ನು ನಿವಾರಣೆ ಮಾಡಬಹುದು. ಈ ನಿಟ್ಟಿನಲ್ಲಿ ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆ ಜಾರಿ ಅಪೇಕ್ಷಣೀಯ. ಇದು ಜನರ ಸ್ವಾತಂತ್ರ್ಯವನ್ನು ಖಂಡಿತ ಹೆಚ್ಚು ಮಾಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ