ಆ್ಯಪ್ನಗರ

ಪ್ರಜಾತಂತ್ರ ವ್ಯವಸ್ಥೆ ಗೆಲ್ಲಿಸೋಣ

ಒಟ್ಟು ಏಳು ಹಂತಗಳಲ್ಲಿ 39 ದಿನಗಳ ಕಾಲ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಸುದೀರ್ಘ ಚುನಾವಣಾ ಪ್ರಕ್ರಿಯೆಯಲ್ಲಿ ಏಪ್ರಿಲ್‌ 11ರ ಗುರುವಾರ 20 ರಾಜ್ಯಗಳನ್ನೊಳಗೊಂಡು 91 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತಚಲಾವಣೆ ಆಗಲಿದ್ದು, ಮುಂದಿನ ಮೇ 19ರಂದು ಏಳನೇ ಮತ್ತು ಕೊನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ.

Vijaya Karnataka 11 Apr 2019, 9:47 am
ಬಹು ನಿರೀಕ್ಷಿತ 17ನೇ ಲೋಕಸಭೆ ರಚನೆಗೆ ಮೊದಲ ಹಂತದ ಮತದಾನ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಒಟ್ಟು ಏಳು ಹಂತಗಳಲ್ಲಿ 39 ದಿನಗಳ ಕಾಲ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಸುದೀರ್ಘ ಚುನಾವಣಾ ಪ್ರಕ್ರಿಯೆಯಲ್ಲಿ ಏಪ್ರಿಲ್‌ 11ರ ಗುರುವಾರ 20 ರಾಜ್ಯಗಳನ್ನೊಳಗೊಂಡು 91 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತಚಲಾವಣೆ ಆಗಲಿದ್ದು, ಮುಂದಿನ ಮೇ 19ರಂದು ಏಳನೇ ಮತ್ತು ಕೊನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ.
Vijaya Karnataka Web Election12


2014ರ ಲೋಕಸಭಾ ಚುನಾವಣೆಯಲ್ಲಿ ಅಚ್ಚರಿಯ ರೀತಿಯಲ್ಲಿ ಸರಳ ಬಹುಮತ ಗಳಿಸಿ ಎನ್‌ಡಿಎ ಸರಕಾರ ರಚನೆ ಮಾಡಿ ಐದು ವರ್ಷಗಳ ಅಧಿಕಾರಾವಧಿ ಪೂರ್ತಿ ಮಾಡಿರುವ ನರೇಂದ್ರ ಮೋದಿ ಈ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಮೊದಲ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಾಗಿದೆ ಎಂಬುದನ್ನೇ ಚುನಾವಣಾ ಗೆಲುವಿನ ಟ್ರಂಪ್‌ ಕಾರ್ಡ್‌ ಮಾಡಿಕೊಂಡು ಮತ್ತೊಂದು ಅವಧಿಗೆ ಜನಾಶೀರ್ವಾದ ಬಯಸಿದ್ದಾರೆ. ಹಾಗೆಯೇ ಕಾಂಗ್ರೆಸ್‌ ಅಧ್ಯಕ್ಷರಾದ ಬಳಿಕ ಮೊದಲ ಸಾರ್ವತ್ರಿಕ ಚುನಾವಣೆ ಎದುರಿಸುತ್ತಿರುವ ರಾಹುಲ್‌ ಗಾಂಧಿ ಮಹಾಘಟಬಂಧನದ ಮೂಲಕ ಅಧಿಕಾರದ ಗದ್ದುಗೆ ಏರುವ ಕನಸು ಪ್ರಯತ್ನದಲ್ಲಿದ್ದಾರೆ.

ರಾಜಕೀಯ ಆರೋಪ, ಪ್ರತ್ಯಾರೋಪ, ಸವಾಲು, ಪ್ರತಿಸವಾಲುಗಳ ಜೊತೆಜೊತೆಗೇ ಈ ಸಲದ ಚುನಾವಣೆ ಹತ್ತು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿದೆ. ಅವುಗಳ ಪೈಕಿ ಪ್ರಮುಖವಾದದ್ದು ಈ ಸಲ ನವ ಮತದಾರರ ಸಂಖ್ಯೆಯಲ್ಲಿ ದಾಖಲೆ ಏರಿಕೆಯಾಗಿರುವುದು. ಕಳೆದ 2014 ಲೋಕಸಭಾ ಚುನಾವಣೆಯಲ್ಲಿ ನವ ಮತದಾರರ ಸಂಖ್ಯೆ 2.3 ಕೋಟಿ ಆಗಿತ್ತು. ಆದರೆ ಈ ಬಾರಿ ಅವರ ಸಂಖ್ಯೆ 8.3 ಕೋಟಿಗೇರಿದೆ. ಇದೇ ಕಾರಣಕ್ಕೆ ಎಲ್ಲ ಪಕ್ಷಗಳೂ ಈ ಬಾರಿ ಹೊಸ ಮತದಾರರ ಮನಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಹೊಸ ತಲೆಮಾರಿನ ಆಶೋತ್ತರಗಳನ್ನು ಈಡೇರಿಸಿಕೊಳ್ಳುವ ಕನಸು ಹೊತ್ತ ನವಮತದಾರರು ಪ್ರಜಾತಂತ್ರದ ಈ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಪಾರದರ್ಶಕ ಮಾದರಿಯಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ವಿಶೇಷ ಗಮನ ಕೊಟ್ಟಿರುವುದು ಈಸಲದ ಚುನಾವಣೆಯ ವಿಶೇಷತೆಗಳಲ್ಲೊಂದು. ಹಣಬಲ, ತೋಳ್ಬಲ ಮತ್ತು ಹಿಂಸೆರಹಿತವಾದ ಚುನಾವಣೆ ನಡೆಸಲು ಆಯೋಗವು ಈ ಬಾರಿ ವಿಶೇಷ ನಿಗಾ ವಹಿಸಿದೆ. ಅದರ ಪರಿಣಾಮವಾಗಿ ಪ್ರಚಾರದ ಸಂದರ್ಭದಲ್ಲಿ ಇಲ್ಲಿಯವರೆಗೆ ಅಕ್ರಮ ಹಣ ಹರಿವಿನ ಮೇಲೆ ಕಟ್ಟುನಿಟ್ಟಿನ ಕಡಿವಾಣ ಬಿದ್ದಿದೆ. ಪ್ರಚಾರದ ಭರಾಟೆಯ ನಡುವೆ ರಾಜಕೀಯ ಹಿಂಸಾಚಾರದ ಪ್ರಕರಣಗಳೂ ಗಣನೀಯ ಇಳಿಕೆ ಆಗಿರುವುದು ಗಮನಾರ್ಹವಾಗಿದೆ. ಭಯೋತ್ಪಾದನೆ ಪೀಡಿತ ಜಮ್ಮು ಕಾಶ್ಮೀರ, ನಕ್ಸಲ್‌ ಉಗ್ರಪೀಡಿತ ಛತ್ತೀಸ್‌ಗಢ, ಜಾರ್ಖಂಡ್‌, ಬಿಹಾರ, ಆಂಧ್ರಪ್ರದೇಶವೂ ಸೇರಿ ಎಲ್ಲ ರಾಜ್ಯಗಳಲ್ಲಿ ಚುನಾವಣೆ ಪ್ರಕ್ರಿಯೆ ನಿರ್ಭೀತ ಮತ್ತ ಪಾರದರ್ಶಕವಾಗಿರಬೇಕೆಂಬ ಉದ್ದೇಶದಿಂದ ಚುನಾವಣಾ ಆಯೋಗ ಏಳು ಹಂತಗಳಲ್ಲಿ ಮತದಾನಕ್ಕೆ ಏರ್ಪಾಟು ಮಾಡಿಕೊಂಡಿದೆ.

ಬೇರೆಲ್ಲದರ ಜೊತೆಗೆ ಗರಿಷ್ಠ ಪ್ರಮಾಣದಲ್ಲಿ ಮತದಾನ ನಡೆಯುವಂತೆ ಮಾಡಲು ಆಯೋಗ ಈ ಬಾರಿ ಎಲ್ಲ ಕ್ಷೇತ್ರಗಳಲ್ಲಿ ವಿಶೇಷ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಸರಾಸರಿ ಶೇ.66.38ರಷ್ಟು ಮತದಾನವಾಗಿತ್ತು. ಅದು ಇಲ್ಲಿಯವರೆಗಿನ ಎಲ್ಲ ಸಾರ್ವತ್ರಿಕ ಚುನಾವಣೆಗಳ ಪೈಕಿ ಅತಿ ಗರಿಷ್ಠ ಮತದಾನ ಪ್ರಮಾಣವೆಂದು ದಾಖಲಾಗಿತ್ತು. ಈ ಸಲ ಆ ದಾಖಲೆಯನ್ನೂ ಮುರಿಯುವ ಗುರಿಯನ್ನು ಆಯೋಗ ಹೊಂದಿದೆ. ಆಯೋಗದ ಪ್ರಯತ್ನ ಫಲ ನೀಡಬೇಕೆಂದರೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿದೆ.

ಇಲ್ಲಿ ಒಂದು ಸಂಗತಿಯನ್ನು ಪ್ರತಿಯೊಬ್ಬ ಮತದಾರ ಗಮನದಲ್ಲಿಟ್ಟುಕೊಳ್ಳಬೇಕಿದೆ. ಮತದಾನ ಯಾರಿಗೋ ಮಾಡುವ ಉಪಕಾರವಲ್ಲ, ಮಾರಾಟದ ಸರಕೂ ಅಲ್ಲ. ಅದು ಮತದಾರನ ಹಕ್ಕು. ಈ ಪ್ರಜ್ಞಾವಂತಿಕೆ ಹೆಚ್ಚೆಚ್ಚು ಬೆಳೆದಷ್ಟೂ ನಮ್ಮ ಪ್ರಜಾತಂತ್ರ ಬಲಿಷ್ಠಗೊಳ್ಳುವುದರಲ್ಲಿ ಅನುಮಾನವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ