ಆ್ಯಪ್ನಗರ

ವಿಕ ಜತೆ ಸಂಭ್ರಮ ಹಂಚಿಕೊಂಡ ರಾಜ್ಯದ ಪಿಯುಸಿ ಟಾಪರ್‌ ಒಲ್ವಿಟಾ ಅನ್ಸಿಲ್ಲಾ ಡಿಸೋಜಾ

ಇಂಗ್ಲೀಷ್‌ ಮತ್ತು ಹಿಂದಿ ವಿಷಯಗಳಲ್ಲಿ ತಲಾ 98 ಅಂಕಗಳನ್ನು ಗಳಿಸಿರುವ ಒಲ್ವಿಟಾ'ಲ್ಯಾಂಗ್ವೇಜ್‌ ವಿಷಯಗಳನ್ನು ತಿದ್ದುವವರು ಅಂಕ ಕೊಡಲು ಜಿಪುಣತನ ಮಾಡುತ್ತಾರೆ' ಎಂದು ಹೇಳಿ ತುಂಟು ನಗು ಬೀರಿದರು.

Vijaya Karnataka Web 15 Apr 2019, 8:41 pm
ಮಂಜುನಾಥ್‌ ಎಲ್‌.ಕೆ.,

ಬೆಂಗಳೂರು:
ನಾಲ್ಕು ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳೊಂದಿಗೆ ಒಟ್ಟು 596 ಅಂಕಗಳನ್ನು ಗಳಿಸಿ, ರಾಜ್ಯದ ಟಾಪರ್‌ ಮುಕುಟ ಧರಿಸಿದ ಒಲ್ವಿಟಾ ಅನ್ಸಿಲ್ಲಾ ಡಿಸೋಜಾ ಸಂಭ್ರಮದಲ್ಲಿ ನಲಿಯುತ್ತಿದ್ದಾರೆ.

ನಾನು ಟಾಪರ್‌ ಆಗುತ್ತೇನೆ ಎಂದು ಅಂದುಕೊಂಡೇ ಇರಲಿಲ್ಲ. 585 ರಿಂದ 588 ಅಂಕಗಳು ಬರಬಹುದು ಅಂತ ಗ್ರಹಿಸಿಕೊಂಡಿದ್ದೆ. ಓಹ್‌ ಮೈ ಗಾಡ್‌, ನನಗೆ 596 ಅಂಕಗಳು ಸಿಕ್ಕಿವೆ. ತುಂಬಾ ಅಂದ್ರೆ ತುಂಬಾನೆ ಖುಷಿಯಾಗ್ತಿದೆ. ನನ್ನ ಸಂಭ್ರಮವನ್ನು ಹೇಗೆ ಹೇಳಿಕೊಳ್ಬೇಕು ಅಂತಾನೆ ಗೊತ್ತಾಗುತ್ತಿಲ್ಲ, ಅಷ್ಟು ಹ್ಯಾಪಿ ಆಗ್ತಿದೆ ಎಂದು ಒಂದೇ ಉಸಿರಲ್ಲಿ ಪಟಪಟಾಂತ ಹೇಳಿದ ಒಲ್ವಿಟಾ ಅನ್ಸಿಲ್ಲಾ, ಮುಂದೆ ಚಾರ್ಟೆಡ್‌ ಅಕೌಂಟೆಂಟ್‌ ಆಗಬೇಕು ಎಂಬ ಕನಸಿದೆ ಎಂದರು.

ಇಂಗ್ಲೀಷ್‌ ಮತ್ತು ಹಿಂದಿ ವಿಷಯಗಳಲ್ಲಿ ತಲಾ 98 ಅಂಕಗಳನ್ನು ಗಳಿಸಿರುವ ಒಲ್ವಿಟಾ 'ಲ್ಯಾಂಗ್ವೇಜ್‌ ವಿಷಯಗಳನ್ನು ತಿದ್ದುವವರು ಅಂಕ ಕೊಡಲು ಜಿಪುಣತನ ಮಾಡುತ್ತಾರೆ' ಎಂದು ಹೇಳಿ ತುಂಟು ನಗು ಬೀರಿದರು.

ವಿಜಯ ಕರ್ನಾಟಕದ ಜತೆಗೆ ಟಾಪರ್‌ ಆದ ಖುಷಿಯನ್ನು ಹೇಳಿಕೊಂಡ ಒಲ್ವಿಟಾ, ಪರೀಕ್ಷೆ ಎದುರಾಗುತ್ತಿದ್ದಂತೆ ತುಂಬ ಹಾರ್ಡ್‌ ವರ್ಕ್‌ ಮಾಡುತ್ತಿದ್ದೆ. ಬ್ಲೂಪ್ರಿಂಟ್‌ ಇಟ್ಟುಕೊಂಡು ಅಭ್ಯಾಸ ನಡೆಸುತ್ತಿದ್ದೆ. ಇಂತಹ ಪಠ್ಯದಲ್ಲಿ ಎಂತೆಂಥ ಪ್ರಶ್ನೆಗಳು ಬರುತ್ತವೆ ಎಂಬ ಹಿಂಟ್‌ ಸಿಗುತ್ತದೆ. ಹಾಗಾಗಿ ಬ್ಲೂಪ್ರಿಂಟ್‌ ಇಟ್ಟುಕೊಂಡು ಪರೀಕ್ಷೆಗೆ ತಯಾರಿ ನಡೆಸಿದರೆ ಖಂಡಿತ ಯಶಸ್ಸು ಸಿಗುತ್ತದೆ. ಪರೀಕ್ಷೆಗೆ ಬಾರದೆ ಇರುವ ಅಂಶಗಳನ್ನು ಬಿಟ್ಟು, ಪ್ರಮುಖ ಅಂಶಗಳ ಮೇಲೆ ಹೆಚ್ಚು ಗಮನ ಕೊಡಬಹುದು ಎಂದು ಮುಂದೆ ದ್ವಿತೀಯ ಪಿಯು ಪರೀಕ್ಷೆ ಎದುರಿಸಲಿರುವ ಸ್ನೇಹಿತರಿಗೆ ಸಲಹೆ ನೀಡಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಶೇ.98.56 ಅಂಕಗಳನ್ನು ಗಳಿಸಿರುವ ಜಾಣೆ ಒಲ್ವಿಟಾ, ಜೂನ್‌ ಎರಡನೇ ವಾರದಲ್ಲಿ ನಡೆಯಲಿರುವ ಸಿಪಿಟಿ ಪರೀಕ್ಷೆಗೆ ತಯಾರಿ ಆರಂಭಿಸಿದ್ದಾರೆ. ನನ್ನ ಹ್ಯಾಂಡ್‌ ರೈಟಿಂಗ್‌ ಅಷ್ಟು ಚೆನ್ನಾಗಿಲ್ಲ. ಹಾಗಾಗಿ ಕಡಿಮೆ ಅಂಕ ಬರಬಹುದು ಎಂದುಕೊಂಡಿದ್ದೆ. ಆದರೆ ಕಾಮರ್ಸ್‌ನ ಎಲ್ಲ ಪ್ರಮುಖ ವಿಷಯಗಳಲ್ಲು ಔಟ್‌ ಆಫ್‌ ಔಟ್‌ ಅಂಕಗಳು ಸಿಕ್ಕಿವೆ ಎಂದು ಹರ್ಷ ವ್ಯಕ್ತ ಪಡಿಸಿದರು.

ಸ್ಟಾಟ್ಸ್‌, ಬೇಸಿಕ್‌ ಮ್ಯಾಥ್ಸ್‌, ಅಕೌಂಟೆನ್ಸ್‌ ಎಲ್ಲಾ ಸುಲಭವಾಗಿದ್ದವು. ಬಿಸಿನೆಸ್‌ ಸ್ಟಡೀಸ್‌ ಸ್ವಲ್ಪ ಕಷ್ಟ ಅನಿಸ್ತು ಎಂದ ಒಲ್ವಿಟಾ ದಕ್ಷಿಣ ಕನ್ನಡದ ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ. ಆಳ್ವಾಸ್‌ ಸಂಸ್ಥೆ ಮುಖ್ಯಸ್ಥರಿಗೆ, ಕಾಲೇಜು ಫ್ಯಾಕಲ್ಟಿಗೆ ತುಂಬ ಧನ್ಯವಾದ ಹೇಳಿದ ಒಲ್ವಿಟಾ, ಅಪ್ಪ-ಅಮ್ಮ ಮತ್ತು ಅಣ್ಣನ ಸಹಕಾರವನ್ನು ತುಂಬಾ ನೆನಪಿಸಿಕೊಂಡರು.


ಐದರಲ್ಲಿ ನೂರಕ್ಕೆ ನೂರು, ರಾಜ್ಯಕ್ಕೆ ಟಾಪರ್ರು: ಯಶಸ್ಸಿನ ಗುಟ್ಟು ಹಂಚಿಕೊಂಡ ಶ್ರೀಕೃಷ್ಣ ಶರ್ಮಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌