ಆ್ಯಪ್ನಗರ

'ವಿಶ್ವಾಸಮತ ಯಾಚನೆ' ಎಂದರೇನು? ಪ್ರಕ್ರಿಯೆ ಹೇಗೆ?

ದಿನದಿಂದ ದಿನಕ್ಕೆ ರಾಜ್ಯ ರಾಜಕಾರಣ ವಿದ್ಯಮಾನ ಕಗ್ಗಂಟಾಗುತ್ತಿದ್ದು, ವಿಶ್ವಾಸಮತ ಯಾಚನೆಯನ್ನು ಸೋಮವಾರ ಮುಗಿಸಬಹುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಏನಿದು ವಿಶ್ವಾಸಮತ ಯಾಚನೆ ತಿಳಿದುಕೊಳ್ಳೋಣ ಬನ್ನಿ.

Vijaya Karnataka 20 Jul 2019, 2:35 pm
ವಿಶ್ವಾಸಮತ ಎಂದರೇನು?: ವಿಶ್ವಾಸಮತದ ನಿರ್ಣಯವನ್ನು ವಿರೋಧ ಪಕ್ಷಗಳು ಮಂಡಿಸಲು ಸಾಧ್ಯವಿಲ್ಲ. ಹೊಸದಾಗಿ ರಚನೆಯಾದ ಸರಕಾರ ಮೊದಲ ಕಲಾಪದಲ್ಲಿ ವಿಶ್ವಾ ಸಮತವನ್ನು ಸಾಬೀತು ಮಾಡುತ್ತದೆ. ಲೋಕಸಭೆಯಾದರೆ ಪ್ರಧಾನಿ ವಿಶ್ವಾಸಮತ ನೀಡುವಂತೆ ಮನವಿ ಮಾಡುತ್ತಾರೆ. ಹೊಸದಾಗಿ ಅಸ್ತಿತ್ವಕ್ಕೆ ಬಂದ ಸರಕಾರ ವಿಶ್ವಾಸ ಮತ ಗಳಿಸಲು ವಿಫಲವಾದರೆ ಪತನವಾಗಲಿದೆ. ಹೆಚ್ಚು ಸದಸ್ಯರ ಸಂಖ್ಯೆ ಹೊಂದಿರುವ ಮತ್ತೊಂದು ಪಕ್ಷ ಸರಕಾರ ರಚನೆ ಮಾಡಲಿದೆ.
Vijaya Karnataka Web Vidhansabha


ವಿಶ್ವಾಸಮತ ಯಾಚನೆ ಪ್ರಕ್ರಿಯೆ ಹೇಗೆ?
  • ಕಲಾಪ ಪ್ರಾರಂಭವಾಗುತ್ತಿದ್ದಂತೆ ಸ್ಪೀಕರ್‌ ಸೂಚನೆಯಂತೆ ಸಭಾನಾಯಕರಾದ ಸಿಎಂರಿಂದ ವಿಶ್ವಾಮತ ಯಾಚನೆ ಪ್ರಸ್ತಾವ ಮಂಡನೆ.
  • ಪ್ರಸ್ತಾವ ಮಂಡನೆ ಬಳಿಕ ಈ ಕುರಿತ ಚರ್ಚೆಗೆ ಸಿಎಂ ಕೋರಿಗೆ ಸಲ್ಲಿಸುವುದು.
  • ಪ್ರತಿಪಕ್ಷದ ನಾಯಕರ ಅಭಿಪ್ರಾಯವನ್ನೂ ಪಡೆದು ಚರ್ಚೆಗೆ ಸ್ಪೀಕರ್‌ ಅನುಮತಿಸಬಹುದು.
  • ಚರ್ಚೆಗೆ ಸ್ಪೀಕರ್‌ ಕಾಲಮಿತಿ ನಿಗದಿ ಪಡಿಸಬಹುದಾದರೂ ಇಂತಿಷ್ಟೇ ಸಮಯದಲ್ಲಿ ಚರ್ಚೆ ಮುಗಿಸಬೇಕೆಂದು ನಿಯಮದಲ್ಲಿ ಸ್ಪಷ್ಟತೆಯಿಲ್ಲ. ಹಾಗಾಗಿ ಚರ್ಚೆ ಎಷ್ಟು ಹೊತ್ತಾದರೂ ಎಳೆದುಕೊಂಡು ಹೋಗಬಹುದು.
  • ಚರ್ಚೆ ಬಳಿಕ ಆಡಳಿತ ಪಕ್ಷ ಅಪೇಕ್ಷಿಸಿದರೆ ಮತದಾನ ನಡೆಯಲಿದೆ.
  • ಮತದಾನಕ್ಕೆ ತೀರ್ಮಾನವಾಗುತ್ತಿದ್ದಂತೆ 3 ನಿಮಿಷ ಕಾಲ ಬೆಲ್‌ ಬಾರಿಸಲಾಗುತ್ತದೆ.
  • ಬೆಲ್‌ ಬಾರಿಸುವ ಅವಧಿಯಲ್ಲಿ ಸದನದ ಹೊರಗಿರುವ ಶಾಸಕರು ಒಳ ಬರಬಹುದು. ಒಳಗಿದ್ದ ಸದಸ್ಯರು ಹೊರ ಹೋಗಬಹುದು.
  • ಬೆಲ್‌ ಅಂತ್ಯಗೊಳ್ಳುತ್ತಿದ್ದಂತೆ ವಿಧಾನಸಭೆಯ ಎಲ್ಲ ಪ್ರವೇಶ ದ್ವಾರಗಳನ್ನು ಬಂದ್‌ ಮಾಡಲಾಗುತ್ತದೆ.
  • ಬಳಿಕ ವಿಶ್ವಾಸಮತದ ಪರವಿರುವವರು ಎದ್ದು ನಿಲ್ಲಲು ಸೂಚಿಸಲಾಗುತ್ತದೆ. ಹೆಡ್‌ ಕೌಂಟ್‌ ಮಾದರಿಯಲ್ಲಿ ಈ ಮತ ಚಲಾವಣೆಯ ಲೆಕ್ಕ ಮಾಡಲಾಗುತ್ತದೆ.
  • ನಂತರ ವಿಶ್ವಾಸಮತದ ವಿರೋಧ ಇರುವವರು ಎದ್ದು ನಿಲ್ಲಲು ಸೂಚಿಸಿ ಕೌಂಟ್‌ ಮಾಡಲಾಗುತ್ತದೆ.
  • ಪರ, ವಿರೋಧ ಮತಗಳ ಆಧಾರದಲ್ಲಿ ಸರಕಾರ ವಿಶ್ವಾಸಮತ ಗೆದ್ದಿದೆಯೊ ಇಲ್ಲವೊ ಎನ್ನುವುದನ್ನು ಸ್ಪೀಕರ್‌ ಪ್ರಕಟಿಸುತ್ತಾರೆ.
ಅವಿಶ್ವಾಸ ನಿರ್ಣಯ ಎಂದರೇನು?: ರಾಜ್ಯ ಸರಕಾರ ಜನಾದೇಶದಂತೆ ಅಧಿಕಾರದಲ್ಲಿ ಮುಂದುವರಿಯಬೇಕಾದರೆ ವಿಧಾನಸಭೆಯಲ್ಲಿ ಬಹುಮತ ಹೊಂದಿರಬೇಕು. ಒಂದು ವೇಳೆ ಆಡಳಿತಾರೂಢ ಪಕ್ಷ ಅಥವಾ ಮೈತ್ರಿಕೂಟಕ್ಕೆ ಬಹುಮತ ಇಲ್ಲ ಎಂದು ಸಾಬೀತುಪಡಿಸಲು ವಿಪಕ್ಷ ಗಳು ರಾಜ್ಯ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುತ್ತವೆ. ಇಂಥ ನಿರ್ಣಯದ ಮಂಡನೆಗೆ ಯಾವುದೇ ಕಾರಣ ನೀಡುವ ಅಗತ್ಯವಿರುವುದಿಲ್ಲ. ವಿಪಕ್ಷ ಸದಸ್ಯರು ಪ್ರಸ್ತಾಪಿಸುವ ಅವಿಶ್ವಾಸ ನಿರ್ಣಯವನ್ನು ವಿಧಾನಸಭಾಧ್ಯಕ್ಷ ರು ಒಪ್ಪಿಕೊಂಡರೆ, ರಾಜ್ಯ ಸರ್ಕಾರವೂ ವಿಧಾನಸಭೆಯಲ್ಲಿ ತನ್ನ ಬಹುಮತ ಸಾಬೀತುಮಾಡಬೇಕಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌