ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ವೀರಚಕ್ರ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಯುದ್ಧಕಾಲದಲ್ಲಿ ಅಪ್ರತಿಮ ಸಾಹಸ ಪ್ರದರ್ಶನಕ್ಕೆ ನೀಡಲಾಗುವ ಮೂರು ಶ್ರೇಷ್ಠ ಪುರಸ್ಕಾರಗಳ ಪೈಕಿ ವೀರಚಕ್ರವೂ ಒಂದಾಗಿದ್ದು, 73ನೇ ಸ್ವಾತಂತ್ರ್ಯ ದಿನಾಚರಣೆಯ ದಿನ ಅವರಿ ಪುರಸ್ಕಾರ ನೀಡಲಾಗುತ್ತದೆ. ಫೆಬ್ರವರಿಯಲ್ಲಿ ಪಾಕ್ ವಿರುದ್ಧ ಬಾಲಕೋಟ್ ಭಾಗದಲ್ಲಿ ನಡೆಸಿದ ವಾಯುದಾಳಿಯಲ್ಲಿ ವಿಂಗ್ ಕಮಾಂಡ್ ಅಭಿನಂದನ್ ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಪಾಕ್ ದಾಳಿಗೆ ತುತ್ತಾದ ಅಭಿನಂದನ್ ಅವರ ಫೈಟರ್ ಜೆಟ್ ಪತನಗೊಂಡು ಪಾಕಿಸ್ತಾನ ಸೇನೆಗೆ ಸೆರೆ ಸಿಕ್ಕಿದ್ದರು. 60 ಗಂಟೆಗಳ ಕಾಲ ಪಾಕ್ ವಶದಲ್ಲಿದ್ದರು. ಅಭಿನಂದನ್ ಅವರು 2004ರಲ್ಲಿ ವಾಯುಪಡೆ ಉದ್ಯೋಗಿಯಾಗಿ ಆಯ್ಕೆಯಾದರು. ಚೆನ್ನೈನ ತಂಬರಂ ವಾಯುನೆಲೆಯಲ್ಲಿ ಅವರು ತರಬೇತಿ ಪಡೆದಿದ್ದ ಅವರು ಕಳೆದ 14 ವರ್ಷಗಳಿಂದ ಯುದ್ಧ ವಿಮಾನಗಳ ಚಾಲನೆ ಮಾಡುತ್ತಿದ್ದಾರೆ. ಖಡಕ್ವಾಸ್ಲಾ ಮೂಲದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆ ವಿದ್ಯಾರ್ಥಿಯಾಗಿರುವ ಅಭಿನಂದನ್, ಎಂಐಜಿ -21 ಬಿಸಾನ್ ಸ್ವಾಡ್ರನ್ಗೆ ನಿಯೋಜಿತರಾಗುವ ಮುನ್ನ ಸುಕೋಯ್ -30 ಯುದ್ಧ ವಿಮಾನದ ಪೈಲಟ್ ಆಗಿದ್ದರು. ಅಭಿನಂದನ್ ಶಿಕ್ಷ ಣದ ಪ್ರಮುಖ ಘಟ್ಟ 11 ಮತ್ತು 12ನೇ ತರಗತಿ ಪೂರೈಸಿದ್ದು ಬೆಂಗಳೂರಿನ ಎನ್ಎಎಲ್ (ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್) ಕೇಂದ್ರೀಯ ವಿದ್ಯಾಲಯದಲ್ಲಿ. ನಿವೃತ್ತ ಮಾರ್ಷಲ್ ಸಿಂಹಕುಟ್ಟಿ ವರ್ಧಮಾನ್ ಅವರ ಮಗ ಅಭಿನಂದನ್ ವರ್ಧಮಾನ್. ಸಿಂಹಕುಟ್ಟಿ ಅವರು ಖ್ಯಾತ ಯುದ್ಧ ವಿಮಾನ ಪೈಲಟ್ ಹಾಗೂ 1999ರ ಕಾರ್ಗಿಲ್ ಸಂಘರ್ಷದ ವೇಳೆ ಮಹತ್ವದ ಪಾತ್ರ ವಹಿಸಿದ್ದರು. ಸಿಂಹಕುಟ್ಟಿಯವರು, ಶಿಲ್ಲಾಂಗ್ನಲ್ಲಿರುವ ಪೂರ್ವ ವಾಯು ಕಮಾಂಡ್ನಲ್ಲಿ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ನಿವೃತ್ತರಾಗಿದ್ದಾರೆ. ಅಭಿನಂದನ್ ರವರ ಪತ್ನಿ ತಾನ್ವಿ ಕೂಡ ಭಾರತೀಯ ವಾಯುಸೇನೆಯಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಅಭಿನಂದನ್ ವರ್ಧಮಾನ್ಗೆ ವೀರಚಕ್ರ ಪುರಸ್ಕಾರ
ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ವೀರಚಕ್ರ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
Vijaya Karnataka 16 Aug 2019, 6:30 pm