ಬಿಜೆಪಿ ಹಿರಿಯ ಮುಖಂಡರಾದ ಬಿಸ್ವಾ ಭೂಷಣ್ ಹರಿಚಂದನ್ ಅವರನ್ನು ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಈ ಸಂಬಂಧ ಕೇಂದ್ರ ಸರಕಾರ ಮಾಡಿದ್ದ ಶಿಫಾರಸ್ಸಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಂಗಳವಾರ ಅಂಗೀಕಾರ ನೀಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಆಂಧ್ರಪ್ರದೇಶ ರಾಜ್ಯಪಾಲರಾಗಿದ್ದ ಇ.ಎಸ್.ಎಲ್.ನರಸಿಂಹನ್ ಅವರಿಗೆ ವಿಶ್ರಾಂತಿ ನೀಡಿ, ಒಡಿಶಾ ಮೂಲದ ಹರಿಚಂದನ್ ಅವರನ್ನು ನೇಮಿಸಲಾಗಿದೆ. ಹರಿಚಂದನ್, 1971ರಲ್ಲಿ ಭಾರತೀಯ ಜನ ಸಂಘದ ಮೂಲಕ ರಾಜಕೀಯ ವೃತ್ತಿ ಜೀವನ ಆರಂಭಿಸಿದರು. 1977ರಲ್ಲಿ ಜನತಾ ಪಕ್ಷ ಸೇರಿ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯರಾಗಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. 1975ರಲ್ಲಿ ಜಾರಿಯಾದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧನವಾಗಿದ್ದರು. ಆನಂತರ ಬಿಜೆಪಿ ಸೇರಿ, 1980ರಿಂದ 1988ರವರೆಗೆ ಒಡಿಶಾ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದರು. 1988ರಲ್ಲಿ ಪುನಃ ಜನತಾ ಪಕ್ಷ ಸೇರಿ ಒಡಿಶಾ ರಾಜ್ಯ ಉಪಾಧ್ಯಕ್ಷರಾದರು. 1996ರಲ್ಲಿ ಪುನಃ ಭಾರತೀಯ ಜನತಾ ಪಾರ್ಟಿಗೆ ಮರಳಿದರು. ಆನಂತರ ಐದು ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು. ಒಡಿಶಾ ರಾಜ್ಯ ಕಂದಾಯ ಸಚಿವರಾಗಿಯೂ ಸೇವೆಸಲ್ಲಿಸಿದ್ದಾರೆ. ಬಿಎ, ಎಲ್ಎಲ್ಬಿ ಪದವೀಧರರಾಗಿರುವ ಬಿಸ್ವಾ ಭೂಷಣ್ ಹರಿಚಂದನ್ ಆಗಸ್ಟ್ 3, 1934ರಲ್ಲಿ ಒಡಿಶಾದಲ್ಲಿ ಜನಿಸಿದರು.
ಬಿಸ್ವಾ ಭೂಷಣ್ ಹರಿಚಂದನ್ ಆಂಧ್ರಪ್ರದೇಶದ ನೂತನ ರಾಜ್ಯಪಾಲ
ಬಿಜೆಪಿ ಹಿರಿಯ ಮುಖಂಡರಾದ ಬಿಸ್ವಾ ಭೂಷಣ್ ಹರಿಚಂದನ್ ಅವರನ್ನು ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.
Vijaya Karnataka 18 Jul 2019, 7:43 pm