ಆ್ಯಪ್ನಗರ

ಆಪ್‌ ಯಾವತ್ತಿದ್ದರೂ ಬಿಜೆಪಿಯ ಬಿ ಟೀಮ್‌: ಕಾಂಗ್ರೆಸ್‌

ದಿಲ್ಲಿಯಲ್ಲಿ ಕಾಂಗ್ರೆಸ್‌ ತನ್ನ ಹಳೆಯ ವೈಭವಕ್ಕೆ ಮರಳಲು ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ. ಈಗಾಗಲೇ ಮೂರು ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿ ಕಣಕ್ಕಿಳಿದಿವೆ. ಈ ಬಗ್ಗೆ ದಿಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಸುಭಾಷ್‌ ಚೋಪ್ರಾ ಮಾತನಾಡಿದ್ದಾರೆ. ಇದು ವಿಜಯ ಕರ್ನಾಟಕದ ಸಹೋದರ ಪತ್ರಿಕೆ ದಿ ಎಕನಾಮಿಕ್‌ ಟೈಮ್ಸ್‌ ನಡೆಸಿದ ಸಂದರ್ಶನ.

THE ECONOMIC TIMES 20 Jan 2020, 1:07 pm
ಸಂದರ್ಶನ: ಪ್ರೇರಣಾ ಕಟಿಯಾರ್‌, ದಿ ಎಕನಾಮಿಕ್‌ ಟೈಮ್ಸ್‌
Vijaya Karnataka Web Subhash Chopra


ಒಬ್ಬಂಟಿ ಹೋರಾಟದಿಂದ ಕಾಂಗ್ರೆಸ್‌ಗೆ ಎಷ್ಟು ಸೀಟು ಸಿಗಬಹುದು?
- ಈ ಬಾರಿ ನಾವು ಅಧಿಕಾರಕ್ಕೆ ಬರುತ್ತೇವೆ.

2015ರಲ್ಲಿಕಾಂಗ್ರೆಸ್‌ ಶೂನ್ಯ ಸಾಧನೆ ಮಾಡಿತ್ತಲ್ವಾ?
- ಬಿಜೆಪಿಗೆ ಸಿಕ್ಕಿದ್ದು ಕೂಡಾ ಮೂರೇ ಸೀಟು. ಒಮ್ಮಿಂದೊಮ್ಮೆಗೇ ಎದ್ದ ಜನಪ್ರಿಯತೆಯ ಅಲೆಯಿಂದ ಕೇಜ್ರಿವಾಲ್‌ಗೆ ಲಾಭವಾಗಿತ್ತು. ಕೇಜ್ರಿವಾಲ್‌ ಚಂದ್ರನನ್ನು ತೋರಿಸಿದ್ದರು. ಗಾಡಿ, ಬಂಗಲೆ ಯಾವುದನ್ನೂ ಸ್ವೀಕರಿಸದೆ ಶ್ರೀಸಾಮಾನ್ಯನಾಗಿ ಇರ್ತೇನೆ ಅಂತ ಹೇಳಿದ್ದರು. ಡಬಲ್‌ ಬೆಡ್‌ ರೂಮ್‌ನ ಮನೆಯಲ್ಲಿರ್ತೇನೆ ಅಂದಿದ್ದವರು ಈಗ 50 ಕೊಠಡಿಗಳ ಬಂಗಲೆಯಲ್ಲಿದ್ದಾರೆ. ಜಾಹೀರಾತಿಗೆ ಸಿಕ್ಕಾಪಟ್ಟೆ ಹಣ ಖರ್ಚು ಮಾಡಿದ್ದಾರೆ. ಅದನ್ನು ಅಭಿವೃದ್ಧಿಗೆ ಬಳಸಿದ್ದರೂ ಸಾಕಿತ್ತು.

ದಿಲ್ಲಿಯಲ್ಲಿ ಕಾಂಗ್ರೆಸ್‌ನ ಪುನಃಶ್ಚೇತನ ಹೇಗೆ?
- ನಮ್ಮದು ಏನಿದ್ದರೂ ಅಭಿವೃದ್ಧಿ ಮಾತ್ರ. ನಾವು 15 ವರ್ಷ ಮಾಡಿ ತೋರಿಸಿದ್ದೇವೆ. ಆಮ್‌ ಆದ್ಮಿ ಪಾರ್ಟಿಯಿಂದಾಗಿ ದಿಲ್ಲಿಹಾಳಾಗಿದೆ. ನಮಗೆ ಸ್ಪಷ್ಟವಾದ ದೂರದೃಷ್ಟಿ ಇದೆ. ದಿಲ್ಲಿಯನ್ನು ಕ್ಲೀನ್‌ ಆ್ಯಂಡ್‌ ಗ್ರೀನ್‌ ಮಾಡುವ ಶಕ್ತಿ ನಮಗಿದೆ. ಮಾಲಿನ್ಯದಿಂದಾಗಿ ದಿಲ್ಲಿಯಲ್ಲಿ ದಿನಕ್ಕೆ 58 ಮಂದಿ ಸಾಯುತ್ತಿದ್ದಾರೆ. ಟ್ಯಾಪ್‌ಗಳಲ್ಲಿ ಕೊಳಕು ನೀರು ಬರುತ್ತಿದೆ. ಶೀಲಾ ದೀಕ್ಷಿತ್‌ ಸಿಎಂ ಆಗಿದ್ದಾಗಲೂ ಈರುಳ್ಳಿ ಬೆಲೆ ಏರಿತ್ತು. ಆಗ ಅವರು ಅಕ್ರಮ ದಾಸ್ತಾನುಕೋರರನ್ನು ಬೇಟೆಯಾಡಿದ್ದರು. ಕೇಜ್ರಿವಾಲ್‌ಗೆ ಅದು ಸಾಧ್ಯವಾಗಿಲ್ಲ. ಇಲ್ಲಿ 16 ಲಕ್ಷ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಸರಕಾರ ಏನು ಮಾಡುತ್ತಿದೆ?

ಹಾಗಿದ್ದರೆ ದಿಲ್ಲಿಜನರಿಗೆ ನೀವು ನೀಡುವ ನಿರ್ದಿಷ್ಟ ಭರವಸೆ ಏನು?
- ವಿದ್ಯುತ್‌ ಪೂರೈಕೆಯಲ್ಲಿ 600 ಯುನಿಟ್‌ಗಳಿಗೆ ರಿಯಾಯಿತಿ ಕೊಡುತ್ತೇವೆ ಎಂದು ಆಗಲೇ ಹೇಳಿದ್ದೇವೆ. ಅದು ಉಚಿತವಾಗಿರುವುದಿಲ್ಲ. ಶೀಲಾ ಪಿಂಚಣಿ ಯೋಜನೆಯಡಿ 5000 ರೂ. ಕೊಡ್ತೇವೆ. 1998ರಲ್ಲಿ 2000 ರೂ.ನಿಂದ ಆರಂಭವಾದ ಯೋಜನೆ 2,500 ರೂ.ವರೆಗೆ ಏರಿತ್ತು. 2016ರಲ್ಲಿ ಆಪ್‌ ಸರಕಾರ ಪಿಂಚಣಿ ಯೋಜನೆ ಬಂದ್‌ ಮಾಡಲು ಹೊರಟಾಗ ಹೈಕೋರ್ಟ್‌ ತಪರಾಕಿ ಹಾಕಿತ್ತು. ವಿಧವೆಯರು, ವಿಶೇಷ ಚೇತನರಿಗೆ ಕೊಡಲೇಬೇಕು ಎಂದು ಸೂಚಿಸಿತ್ತು. ಕೇಜ್ರಿವಾಲ್‌ ಅವರು ಇತ್ತೀಚೆಗೆ ವೃದ್ಧಾಶ್ರಮ ಆರಂಭಿಸುವುದಾಗಿ ಹೇಳಿದ್ದರು. ವೃದ್ಧಾಶ್ರಮ ನಮ್ಮ ಸಂಸ್ಕೃತಿಯಲ್ಲ. ಹಿರಿಯ ನಾಗರಿಕರಿಗೆ ಅವರ ಕುಟುಂಬ ನಿರ್ವಹಣೆ, ಅಗತ್ಯಗಳ ಪೂರೈಕೆಗೆ ತಿಂಗಳಿಗೆ 10,000 ರೂ. ಕೊಟ್ಟರೆ ಸಾಕು.

ಏಕಾಂಗಿ ಹೋರಾಟದಿಂದ ಬಿಜೆಪಿಗೆ ಲಾಭವಾಗದೇ? 2019ರ ಲೋಕಸಭಾ ಚುನಾವಣೆಯಲ್ಲೂ ಹೀಗೇ ಆಗಿತ್ತು.
- ಆಮ್‌ ಆದ್ಮಿ ಪಾರ್ಟಿ ಯಾವತ್ತಿದ್ದರೂ ಬಿಜೆಪಿಯ ಬಿ-ಟೀಮ್‌. ಜೆಎನ್‌ಯು ಮತ್ತು ಜಾಮಿಯಾ ಮಿಲಿಯಾ ವಿವಿಯಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆದಾಗ ಕೇಜ್ರಿವಾಲ್‌ ಎಲ್ಲಿ ಹೋಗಿದ್ದರು? ಯಾವಾಗಲೂ ಧರಣಿಯಲ್ಲೇ ಇರುವ ಅವರು ವಿದ್ಯಾರ್ಥಿಗಳ ಪರ ಯಾಕೆ ನಿಲ್ಲಲಿಲ್ಲ? 2013ರಲ್ಲಿ ರಾಮ್‌ಲೀಲಾ ಮೈದಾನದಲ್ಲಿ ಧರಣಿ ಕೂತವರು ಯಾರು? ಹೆಚ್ಚಿನವರು ಬಿಜೆಪಿಯವರು. ಆದರೆ, ಕೇಜ್ರಿವಾಲ್‌ ಜನರ ಆಶಾಭಾವನೆಗೆ ಪೂರಕವಾಗಿ ನಡೆದುಕೊಳ್ಳಲಿಲ್ಲ. ನಾನು ಕೇಜ್ರಿವಾಲ್‌ಗೆ ಒಂದು ವಿಷಯದಲ್ಲಿ ನೂರಕ್ಕೆ ನೂರು ಅಂಕ ಕೊಡ್ತೇನೆ. ಅದು ಯಾವುದೆಂದರೆ ಜಾಹೀರಾತು! ಅವರು ಜನರ ಹಣವನ್ನು ಚೆನ್ನಾಗಿ 'ಬಳಸಿಕೊಂಡಿದ್ದಾರೆ'.

ನಿಮ್ಮ ಸಿಎಂ ಅಭ್ಯರ್ಥಿ ಯಾರು?- ಅದೇನೂ ಪ್ರಮುಖ ವಿಷಯವಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ