2018 ರಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಡ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಇದಾದ ಬಳಿಕ ಜಾರ್ಖಂಡ್ ವಿಧಾನಸಭೆಯಲ್ಲೂ ಸೋಲನ್ನು ಅನುಭವಿಸಿತು. ಅದರ ಜೊತೆಗೆ ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದುಕೊಂಡಿದೆ. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯ ಸರದಿ. ಬಿಜೆಪಿ ಹೀಗೆ ಒಂದರ ನಂತರ ಒಂದು ರಾಜ್ಯಗಳಲ್ಲಿ ಮುಗ್ಗರಿಸಲು ಕಾರಣ ಏನು ಎಂಬುವುದರ ಕುರಿತಾದ ವಿಶ್ಲೇಷಣೆ ಇಲ್ಲಿದೆ.
ಕಾಂಗ್ರೆಸ್ ಮುಕ್ತ ಎಂದು ಸೋಲುತ್ತಿದೆ ಬಿಜೆಪಿ!
ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಕ್ತಗೊಳಿಸಲಾಗುವುದು ಎಂದು ಅಬ್ಬರಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಇದೀಗ ಒಂದರ ನಂತರ ಒಂದರಂತೆ ಹಿನ್ನಡೆಗಳನ್ನು ಅನುಭವಿಸುತ್ತಿದೆ. ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣ, ಭ್ರಷ್ಟಾಚಾರ, ಕುಟುಂಬ ರಾಜಕಾರಣಗಳನ್ನು ಮುಂದಿಟ್ಟು ಜನರ ಗಮನ ಸೆಳೆದಿತ್ತು ಕಮಲ. ಕಮಲದ ಅಬ್ಬರವನ್ನು ನೋಡಿದ ರಾಜಕೀಯ ವಿಶ್ಲೇಷಕರು ಕಾಂಗ್ರೆಸ್ ದೇಶದಲ್ಲಿ ಧೂಳಿಪಟವಾಗುವುದು ಸತ್ಯ ಎಂದೇ ಚರ್ಚೆ ನಡೆಸುತ್ತಿದ್ದರು. ಆದರೆ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಡದಲ್ಲಿ ಕಾಂಗ್ರೆಸ್ ಅಧಿಕಾರವನ್ನು ಮತ್ತೆ ಗಳಿಸಿಕೊಳ್ಳುವಲ್ಲಿ ಯಶಸ್ಸು ಕಂಡಿತು. ಬಳಿಕ ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿದ್ದು ಶಿವಸೇನೆಯ ಜೊತೆಗೆ ಕೈಜೋಡಿಸಿತು. ಆದರೆ ಬಿಜೆಪಿ ಅಬ್ಬರ ಕಡಿಮೆಯಾಗುತ್ತಿದೆ. ಒಂದೇ ವರ್ಷದಲ್ಲಿ ಆರು ರಾಜ್ಯಗಳಲ್ಲಿ ಸೋಲು ಕಂಡಿದೆ.
ಕೋಮು ಧ್ರುವೀಕರಣ ಅಸ್ತ್ರ ಯಶಸ್ಸು ಕಾಣುತ್ತಿಲ್ಲ !
ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಅಸ್ತ್ರ ಕೋಮುಧ್ರುವೀಕರಣ. ಈ ಅಸ್ತ್ರವನ್ನೇ ಬಳಸಿಕೊಂಡು ಬಿಜೆಪಿ ಮುನ್ನಡೆಯುತ್ತಿದೆ. ಅದರಲ್ಲಿ ಒಂದು ಹಂತದ ಯಶಸ್ಸನ್ನು ಕಂಡಿತ್ತು. ಪ್ರತಿ ಚುನಾವಣೆಯ ಸಂದರ್ಭದಲ್ಲಿ ಕೋಮು ಅಸ್ತ್ರಗಳು ಬಿಜೆಪಿಗೆ ದೊಡ್ಡ ಮಟ್ಟದ ಲಾಭವನ್ನು ತಂದುಕೊಡುತ್ತಿದ್ದವು. ಈ ಕಾರಣಕ್ಕಾಗಿ ಪಾಕಿಸ್ತಾನ, ಹಿಂದೂ ಮುಸ್ಲಿಂ ಪ್ರಶ್ನೆಗಳು ಚುನಾವಣಾ ಸಂದರ್ಭದಲ್ಲಿ ಮುನ್ನಲೆಗೆ ಬರುತ್ತಿದ್ದವು. ಹಲವು ಚುನಾವಣೆಗಳಲ್ಲಿ ಇದು ಯಶಸ್ಸು ಕಂಡರೂ ಇತ್ತೀಚೆಗೆ ವಿಫಲವಾಗುತ್ತಿದೆ. ಅದಕ್ಕೆ ಉದಾಹರಣೆ ಕಳೆದ ಒಂದು ವರ್ಷದ ಚುನಾವಣಾ ಫಲಿತಾಂಶಗಳಾಗಿವೆ.
ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿ ಬೀರಿದ್ಯಾ ಪರಿಣಾಮ
ಬಿಜೆಪಿಯ ಚುನಾವಣಾ ಪ್ರಣಾಳಿಕೆಯಂತೆ ಆರ್ಟಿಕಲ್ 370 ರದ್ದು, ಸಿಎಎ ಜಾರಿ ಹಾಗೂ ಎನ್ಆರ್ಸಿ ಜಾರಿಗೆ ಚಿಂತನೆ ನಿರೀಕ್ಷಿತ ಫಲಿತಾಂಶವನ್ನು ನೀಡಿಲ್ಲ. ಆರ್ಟಿಕಲ್ 370 ರದ್ದು ದೇಶದ ಪ್ರಮುಖ ಚುನಾವಣೆಯ ಅಸ್ತ್ರವಾಗುತ್ತದೆ ಎಂಬ ನಿರೀಕ್ಷೆಯೂ ಇತ್ತು. ಅದರ ಜೊತೆಗೆ ಪೌರತ್ವ ಕಾಯ್ದೆ ಜಾರಿಗೆ ದೇಶದಲ್ಲಿ ಪರವಾದ ಅಭಿಪ್ರಾಯಗಳು ವ್ಯಕ್ತವಾಗುತ್ತದೆ ಎಂಬ ನಿರೀಕ್ಷೆಯನ್ನು ಬಿಜೆಪಿ ಇಟ್ಟುಕೊಂಡಿತ್ತು. ಆದರೆ ಇದು ಯಶಸ್ಸು ಕಂಡಿಲ್ಲ. ಬದಲಾಗಿ ಪೌರತ್ವ ಕಾಯ್ದೆಯ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ಅದಕ್ಕೆ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು ಎಲ್ಲೋ ಒಂದು ಕಡೆ ಬಿಜೆಪಿಗೆ ಹಿನ್ನಡೆಯಾಗುತ್ತಿದೆ ಎಂಬುವುದು ಸ್ಪಷ್ಟ.
ಬಿಜೆಪಿ ಹಿನ್ನಡೆಯಾಯ್ತಾ ಪ್ರಚೋದನಾತ್ಮಕ ಹೇಳಿಕೆಗಳು
ಆರ್ಟಿಕಲ್ 370 ಹಾಗೂ ಪೌರತ್ವ ಕಾಯ್ದೆ, ರಾಮ ಮಂದಿರ ನಿರ್ಮಾಣ ನಿರ್ಧಾರಗಳು ದೇಶದಲ್ಲಿ ರಾಜಕೀಯ ಬದಲಾವಣೆಗಳಿಗೆ ಕಾರಣವಾಗಿವೆ. ಈ ನಡುವೆ ಪರ ವಿರೋಧ ಚರ್ಚೆಗಳು ಅಭಿಪ್ರಾಯಗಳು ವ್ಯಕ್ತವಾಗುತ್ತಿರುವಾಗಲೇ ಬಿಜೆಪಿಯ ಕೆಲವು ನಾಯಕರು ನೀಡುತ್ತಿರುವ ಪ್ರಚೋದನಾತ್ಮಕ ಹೇಳಿಕೆಗಳು ಭಾರೀ ಸದ್ದು ಮಾಡುತ್ತಿವೆ. ಬಿಜೆಪಿಯ ಕೇಂದ್ರ ಸಚಿವ ಅನುರಾಗ್ ಠಾಕೂರ್ ದೆಹಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ‘ಗೋಲಿ ಮಾರೋಂ’ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಜೆಎನ್ಯು ವಿದ್ಯಾರ್ಥಿಗಳ ಮೇಲೆ ದಾಳಿ, ಜಾಮೀಯಾ ಗುಂಡಿನ ದಾಳಿ, ಶಾಹೀನ್ ಬಾಗ್ನಲ್ಲಿ ಗುಂಡಿನ ದಾಳಿ ಪ್ರಕರಣ ಬಿಜೆಪಿಯ ವಿರುದ್ಧವಾದ ಅಭಿಪ್ರಾಯ ರೂಪಿತವಾಗಲು ಕಾರಣವಾಯಿತು.
ವಿಫಲವಾಯಿತೇ ‘ವಿಕಾಸ್’ ಮಂತ್ರ ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಕಾಸದ ಮಂತ್ರದಲ್ಲಿ ಭರ್ಜರಿಯಾಗಿ ಅಧಿಕಾರವನ್ನು ಪಡೆದುಕೊಂಡರು. ಆದರೆ ದೇಶದ ಅಭಿವೃದ್ದಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯಲ್ಲಿ ಜನರು ಇಟ್ಟಿದ್ದ ನಿರೀಕ್ಷೆ ಹುಸಿಯಾಗತೊಡಗಿತು. ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರಕಾರ ವಿಫಲವಾಯಿತು. ನಿರುದ್ಯೋಗ, ಬೆಲೆ ಏರಿಕೆ, ಕೈಗಾರಿಕಾ ನೀತಿಗಳು, ಕೃಷಿ ಬಿಕ್ಕಟ್ಟು ಮೋದಿ ಸರಕಾರಕ್ಕೆ ತಿರುಗು ಬಾಣವಾಗಿ ಪರಿಣಮಿಸುತ್ತಿದೆ ಎನ್ನಲಾಗುತ್ತಿದೆ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲಾಗಿ ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಬಿಜೆಪಿ ತಂತ್ರಗಾರಿಕೆ ವಿಫಲವಾಗುತ್ತಿದೆ.
ಆರ್ಥಿಕ ಹಿನ್ನೆಡೆಯಿಂದ ಕಮಲಕ್ಕೂ ಹಿನ್ನಡೆ!
ಸದ್ಯ ದೇಶ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಏನಂದರೆ ಆರ್ಥಿಕ ಹಿನ್ನಡೆ. ಮೋದಿ ಸರಕಾರ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಲು ನಾನಾ ಪ್ರಯತ್ನಗಳನ್ನು ಪಟ್ಟರೂ ಅದು ಸಾಧ್ಯವಾಗುತ್ತಿಲ್ಲ. ದೇಶದ ಜಿಡಿಪಿ ಕುಸಿಯುತ್ತಿದೆ. ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. 2020 ಬಜೆಟ್ನಲ್ಲೂ ಇಟ್ಟ ನಿರೀಕ್ಷೆಗಳು ಈಡೇರಲಿಲ್ಲ. ಆರ್ಥಿಕ ಕುಸಿತದ ಬಗ್ಗೆ ದೇಶದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಭಾರತದ ಆರ್ಥಿಕ ಹಿನ್ನಡೆ ಕಮಲದ ಪಾಲಿಗೆ ರಾಜಕೀಯ ಹಿನ್ನಡೆಯಾಗಿಯೂ ಪರಿಣಮಿಸುತ್ತಿದೆ ಎಂಬುವುದಂತೂ ಸತ್ಯ.
ಈ ಎಲ್ಲಾ ಕಾರಣಗಳು ದೇಶದಲ್ಲಿ ಆರು ರಾಜ್ಯಗಳಲ್ಲಿ ಬಿಜೆಪಿ ಹಿನ್ನಡೆಗೆ ಕಾರಣವಾಗಿದೆ. ಐದು ರಾಜ್ಯಗಳ ಜತೆಗೆ ದೆಹಲಿ ಚುನಾವಣೆಯ ಸೋಲಿನ ಬಳಿಕ ಕಮಲ ಪಾಳಯ ಪರಾಮರ್ಶೆ ನಡೆಸುತ್ತಾ ಹಾಗೂ ರಾಜಕೀಯ ತಂತ್ರಗಾರಿಕೆಯನ್ನು ಮುಂದಿನ ದಿನಗಳಲ್ಲಿ ಬದಲಾಯಿಸುತ್ತಾ ಎಂಬುವುದು ಸದ್ಯದ ಕುತೂಹಲ