ಆ್ಯಪ್ನಗರ

ಹರಿಯಾಣದಲ್ಲಿ 'ಚೌಟಾಲಾ' ತಂತ್ರಕ್ಕೆ ಬೆಚ್ಚಿದ 'ಬರಾಲಾ'! ಬಿಜೆಪಿ ರಾಜ್ಯಾಧ್ಯಕ್ಷ ರಾಜೀನಾಮೆ ವದಂತಿ!

ಬಿಜೆಪಿ ಅನಿವಾರ್ಯವಾಗಿ ಜೆಜೆಪಿಗೇ ಮಣೆ ಹಾಕುವಂತೆ ಮಾಡಲು ಚೌಟಾಲಾ ತಂತ್ರಗಾರಿಕೆ ಮಾಡುತ್ತಿದ್ದಾರೆ. ಇಂಥಾ ಸನ್ನಿವೇಶದಲ್ಲಿ ಸರ್ಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

Vijaya Karnataka Web 24 Oct 2019, 3:05 pm
ಚಂಡೀಗಢ: ಹರಿಯಾಣದಲ್ಲಿ ಸರಳ ಬಹುಮತಕ್ಕೂ ಹರಸಾಹಸ ಪಡುತ್ತಿರುವ ಬಿಜೆಪಿ ಪಾಳಯದಲ್ಲಿ ಮೊದಲ ವಿಕೆಟ್ ಪತನವಾಗ್ತಿದೆಯಾ?. ಸೋಲಿನ ಹೊಣೆಹೊತ್ತು ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್‌ ಬರಾಲಾ ರಾಜೀನಾಮೆ ನೀಡುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ಏಕೆಂದರೆ, ಆಡಳಿತ ವಿರೋಧಿ ಅಲೆ ಹರಿಯಾಣ ಬಿಜೆಪಿ ಸರ್ಕಾರಕ್ಕೆ ಸಖತ್ತಾಗೇ ಬಿಸಿ ಮುಟ್ಟಿಸಿದೆ. ಸರಳ ಬಹುಮತವೂ ಬಿಜೆಪಿಗೆ ದಕ್ಕಿಲ್ಲ. ಇತ್ತ, ಪಕ್ಷೇತರರ ಜೊತೆಗೂಡಿ ಮೈತ್ರಿ ಮಾಡಿಕೊಳ್ಳುವ ತಂತ್ರಗಾರಿಕೆಯೂ ವರ್ಕೌಟ್‌ ಆಗ್ತಿಲ್ಲ.
Vijaya Karnataka Web subhash barala


ಹರಿಯಾಣದ ಮನೋಹರ್ ಲಾಲ್ ಕಟ್ಟರ್ ಸರ್ಕಾರಕ್ಕೆ ಅಧಿಕಾರ ಕೈತಪ್ಪುವ ಭೀತಿ ಆರಂಭವಾದ ಕೂಡಲೇ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸುಭಾಷ್ ಬರಾಲಾ ರಾಜೀನಾಮೆ ಘೋಷಿಸಿಬಿಟ್ಟರು ಅನ್ನೋ ವದಂತಿ ಶುರುವಾಯ್ತು. ಆರಂಭಿಕ ‘ಟ್ರೆಂಡ್’ನಲ್ಲೇ ಕಾಂಗ್ರೆಸ್-ಬಿಜೆಪಿ ಜಂಗೀಕುಸ್ತಿ ಗೋಚರವಾಯ್ತು. ಜೆಜೆಪಿ ಬೆಂಬಲವಿಲ್ಲದೆ ಸರ್ಕಾರ ರಚನೆ ಕಷ್ಟ ಎಂಬ ಸನ್ನವೇಶ ಸೃಷ್ಟಿಯಾದಾಗ ಜೆಜೆಪಿ ನಾಯಕ ದುಷ್ಯಂತ್ ಚೌಟಾಲಾ ಸಿಎಂ ಸ್ಥಾನವನ್ನು ಯಾವ ಪಕ್ಷ ಕೊಡುತ್ತೋ ಆ ಪಕ್ಷಕ್ಕೆ ಬೆಂಬಲ ನೀಡೋದಾಗಿ ಘೋಷಿಸಿಬಿಟ್ಟರು. ಕಾಂಗ್ರೆಸ್ ಪಕ್ಷ ಸಿಎಂ ಸ್ಥಾನ ನೀಡೋದಾಗಿ ಭರವಸೆ ನೀಡಿದೆ ಎನ್ನಲಾಗಿದ್ದು, ಚೌಟಾಲಾ ಈವರೆಗೂ ಯಾರಿಗೆ ಬೆಂಬಲ ನೀಡಬೇಕು ಎಂದು ನಿರ್ಧರಿಸಿಲ್ಲ. ಇತ್ತ ಬಿಜೆಪಿ ಕಡೆಯಿಂದ ದುಷ್ಯಂತ್ ಚೌಟಾಲಾಗೆ ಯಾವುದೇ ಆಫರ್ ಬಂದಿಲ್ಲ.

ಹರಿಯಾಣದಲ್ಲಿ ಸರ್ಕಾರ ರಚನೆಗೆ 46 ಶಾಸಕರ ಅಗತ್ಯವಿದೆ. ಹೀಗಾಗಿ ಮೂರರಿಂದ ನಾಲ್ಕು ಸ್ಥಾನಗಳು ಕಡಿಮೆ ಬಂದರೆ ಪಕ್ಷೇತರರನ್ನು ಸಂಪರ್ಕಿಸಲು ಬಿಜೆಪಿ ಪ್ಲಾನ್‌ ಬಿ ಹಾಕಿಕೊಂಡಿತ್ತು. ಆದ್ರೆ ಇದೀಗ ದುಷ್ಯಂತ್ ಚೌಟಾಲಾ ಪಕ್ಷೇತರರನ್ನೂ ತಮ್ಮತ್ತ ಸೆಳೆಯುತ್ತಿದ್ಧಾರೆ. ಬಿಜೆಪಿ ಅನಿವಾರ್ಯವಾಗಿ ಜೆಜೆಪಿಗೇ ಮಣೆ ಹಾಕುವಂತೆ ಮಾಡಲು ಚೌಟಾಲಾ ತಂತ್ರಗಾರಿಕೆ ಮಾಡುತ್ತಿದ್ದಾರೆ. ಇಂಥಾ ಸನ್ನಿವೇಶದಲ್ಲಿ ಸರ್ಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ಆದ್ರೆ, ರಾಜೀನಾಮೆ ವದಂತಿ ಬಗ್ಗೆ ಸ್ಪಷ್ಟನೆ ನೀಡಿರುವ ಬರಾಲಾ, ತಾವು ರಾಜೀನಾಮೆ ನೀಡಿಲ್ಲ ಎಂದಷ್ಟೇ ಹೇಳಿದ್ದಾರೆ.

ಇದೀಗ ಪಕ್ಷೇತರರನ್ನು ಸೆಳೆದುಕೊಂಡು ಸರ್ಕಾರ ರಚಿಸುವಲ್ಲಿ ಬಿಜೆಪಿ ಸಫಲವಾಗುತ್ತೋ, ಇಲ್ಲವೋ ಅನ್ನೋ ಕುತೂಹಲ ಶುರುವಾಗಿದೆ. ಒಂದು ವೇಳೆ ಪಕ್ಷೇತರರು ಬಿಜೆಪಿ ತೆಕ್ಕೆಗೆ ಬರದೇ ಹೋದ್ರೆ, ಜೆಜೆಪಿ ನಾಯಕ ದುಷ್ಯಂತ್ ಚೌಟಾಲಾಗೆ ಕೇಸರಿ ವರಿಷ್ಠರು ಮಣೆ ಹಾಕ್ತಾರಾ ಅನ್ನೋ ಪ್ರಶ್ನೆಯೂ ಇದೆ. ಇವೆಲ್ಲದರ ನಡುವೆ ಪರಿಸ್ಥಿತಿಯ ಲಾಭ ಪಡೆದು ಕರ್ನಾಟಕ ಮಾದರಿಯಲ್ಲಿ ಕಾಂಗ್ರೆಸ್‌ ಪಕ್ಷ ಜೆಜೆಪಿ ಜೊತೆಗೂಡಿ ಸರ್ಕಾರ ರಚಿಸುತ್ತಾ ಅನ್ನೋ ಪ್ರಶ್ನೆಯೂ ಇದೆ. ಒಂದು ವೇಳೆ, ಕಾಂಗ್ರೆಸ್‌ಗೆ ಜೆಜೆಪಿ ಬೆಂಬಲ ನೀಡಿದರೆ, ಸಿಎಂ ಸ್ಥಾನವನ್ನು ಜೆಜೆಪಿ ನಾಯಕ ದುಷ್ಯಂತ್ ಚೌಟಾಲಾ ಅವರಿಗೆ ನೀಡಬೇಕಾಗುತ್ತೆ. ಕಾಂಗ್ರೆಸ್-ಜೆಜೆಪಿ ಒಂದಾದರೆ ಪಕ್ಷೇತರರ ನೆರವಿಲ್ಲದೆಯೂ ಸರ್ಕಾರ ರಚಿಸಬಹುದಾಗಿದೆ. ಆದ್ರೆ, ಬಿಜೆಪಿ ಸರಳ ಬಹುಮತಕ್ಕೆ ತೀರಾ ಸನಿಹದಲ್ಲಿ ಇರುವ ಕಾರಣ, ಪಕ್ಷೇತರರನ್ನು ಸೆಳೆದುಕೊಳ್ಳದಿದ್ದರೆ, ಕಾಂಗ್ರೆಸ್‌-ಜೆಜೆಪಿ ಸುಭದ್ರ ಸರ್ಕಾರ ರಚನೆ ಅಸಾಧ್ಯವಾಗಿಲಿದೆ. ಒಟ್ನಲ್ಲಿ, ಥೇಟ್ ಕರ್ನಾಟಕ ದೋಸ್ತಿ ಸರ್ಕಾರ ಮಾದರಿಯೇ ಹರಿಯಾಣಕ್ಕೂ ಅನ್ವಯಿಸುತ್ತಿದೆ.

ಹರಿಯಾಣ ಫಲಿತಾಂಶ ಮುಖ್ಯಾಂಶಗಳು: ಜಾಟರ ನಾಡಲ್ಲಿ ಕೈ - ಕಮಲ ಜಟಾಪಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ