ಆ್ಯಪ್ನಗರ

ಪಂಚ ಪ್ರಶ್ನೆ: ಮೈಸೂರಲ್ಲಿ ಜೆಡಿಎಸ್‌, ಬಿಜೆಪಿ ಮ್ಯಾಚ್‌ ಫಿಕ್ಸಿಂಗ್‌ ಆಗಿಲ್ಲ

ರಾಜ್ಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರೂ ಆಗಿರುವ ಪ್ರತಾಪಸಿಂಹ ಅವರು ಮೈಸೂರು-ಕೊಡಗು ಲೋಕಸಭಾ ಸದಸ್ಯ.

Vijaya Karnataka 24 Apr 2018, 10:51 am
ರಾಜ್ಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರೂ ಆಗಿರುವ ಪ್ರತಾಪಸಿಂಹ ಅವರು ಮೈಸೂರು-ಕೊಡಗು ಲೋಕಸಭಾ ಸದಸ್ಯ. ತೀಕ್ಷ್ಣ ಬರಹ, ವಾದ-ಪ್ರತಿವಾದ, ವಾಗ್ದಾಳಿಗೆ ಹೆಸರುವಾಸಿ. ಮಾತಿನ ಏಟಿಗೆ ಪ್ರತಿ ಏಟು ನೀಡುವಾಗ ಅವರಿಗೆ ಯಾವುದೇ ಮುಲಾಜಿಲ್ಲ. ಎದುರಾಳಿ ಯಾರೇ ಆಗಿರಲಿ ಅವರದ್ದು ಡೋಂಟ್‌ ಕೇರ್‌ ಸ್ವಭಾವ. ಅವರ ಈ ನಡೆಗೆ ರಾಜಕೀಯವಾಗಿ ವಿರೋಧಿಗಳೂ ಹೆಚ್ಚು. ಪಕ್ಷದ ಒಳಗೂ, ಹೊರಗೂ ಅವರಿಗೆ ಅಭಿಮಾನಿಗಳಿರುವಂತೆ ವಿರೋಧಿಗಳೂ ಇದ್ದಾರೆ.
Vijaya Karnataka Web pratap sinha


1. ಮೈಸೂರು ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಹೆಸರು ನೋಡಿದರೆ ಬಿಜೆಪಿ-ಜೆಡಿಎಸ್‌ ಮ್ಯಾಚ್‌ ಫಿಕ್ಸಿಂಗ್‌ ಆದಂತಿದೆ?

ಇಲ್ಲ. ಈ ಮಾತನ್ನು ಒಪ್ಪೋದಿಲ್ಲ. ನಮಗೆ ಕಾಂಗ್ರೆಸ್‌-ಜೆಡಿಎಸ್‌ ರಾಜಕೀಯ ಎದುರಾಳಿಗಳು. ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿರುವ ಚಾಮುಂಡೇಶ್ವರಿ ಕ್ಷೇತ್ರದ ವಿಚಾರಕ್ಕೆ ಬಂದರೆ ಈ ಕ್ಷೇತ್ರದ ವ್ಯಾಪ್ತಿಯ ನಗರ ಪ್ರದೇಶದಲ್ಲಿ ಸುಮಾರು ಒಂದು ಲಕ್ಷ ಮತದಾರರಿದ್ದಾರೆ. ನಗರ ಪ್ರದೇಶದಲ್ಲಿ ಬಿಜೆಪಿಗೆ ಹೆಚ್ಚಿನ ಒಲವು ಇದೆ.

2. ನಿಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಟಿಕೆಟ್‌ ಹಂಚಿಕೆಯಲ್ಲಿ ನಿಮ್ಮ ಬಗ್ಗೆ ಪಕ್ಷದಲ್ಲಿ ಅಸಮಾಧಾನ ತೀವ್ರವಾಗಿದೆ?

ಟಿಕೆಟ್‌ ಹಂಚಿಕೆಗೆ ಪಕ್ಷದಲ್ಲಿ ಸಮೀಕ್ಷೆಗಳೇ ಮಾನದಂಡವಾಗಿವೆ. ಯಾವುದೇ ಕ್ಷೇತ್ರದಲ್ಲಿ ಟಿಕೆಟ್‌ ನೀಡುವಾಗ ಆಯಾ ಕ್ಷೇತ್ರದ ಪಕ್ಷದ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಪಕ್ಷದ ಕೇಂದ್ರ ಸಮಿತಿ ಸಮೀಕ್ಷೆ ನಡೆಸಿದೆ. ರಾಜ್ಯ ಹಾಗೂ ಜಿಲ್ಲೆಗಳ ಪ್ರಮುಖರು ಚರ್ಚಿಸಿ ತೀರ್ಮಾನ ಕೈಗೊಂಡಿದ್ದಾರೆ.

3. ನೀವು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತೀರಿ. ಮೈದಾನದ ರಾಜಕಾರಣದಲ್ಲಿ ಕಾಣುವುದಿಲ್ಲವಲ್ಲ ?

ನೋಡಿ, ನಾನು ಹೆಚ್ಚಿನ ರಾಜಕಾರಣಿಗಳ ಥರ ಕಾಡು ಹರಟೆ ಹೊಡೆದು ಟೈಂ ಹಾಳು ಮಾಡೋದಿಲ್ಲ. ನನ್ನ ಫೇಸ್‌ಬುಕ್‌, ಟ್ವಿಟರ್‌ ಅಕೌಂಟ್‌ನ ಟೈಮ್‌ ಲೈನ್‌ ನೋಡಿದರೆ ರಾತ್ರಿ ವೇಳೆಯಲ್ಲೇ ನಾನು ಹೆಚ್ಚು ಪೋಸ್ಟ್‌, ಟ್ವೀಟ್‌ ಮಾಡಿರುತ್ತೇನೆ. ಹಗಲುವೇಳೆ ಸಮಯ ಸಿಗೋದಿಲ್ಲ. ಪ್ರವಾಸದ ವೇಳೆ ಸಿಕ್ಕ ಸಮಯದಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸುತ್ತೇನೆ. ರಾಜ್ಯಾದ್ಯಂತ ಹೆಚ್ಚು ಪ್ರವಾಸ ಮಾಡುವ ಕೆಲವೇ ಸಂಸದರ ಪೈಕಿ ನಾನೂ ಒಬ್ಬ. ವಿಧಾನಸಭೆಯ 15 ಕ್ಷೇತ್ರಗಳಲ್ಲಿ ನಾನು ಪಕ್ಷದ ಉಸ್ತುವಾರಿ ಇದ್ದೇನೆ.

4. ನೀವು ಮತ್ತೊಬ್ಬರನ್ನು ಟೀಕಿಸುವಾಗ ಸಂಸದೀಯ ನಡೆಯನ್ನು ಮೀರುತ್ತೀರಿ, ಪ್ರಚೋದನಾಕಾರಿಯಾಗಿ ಮಾತಾಡ್ತೀರಿ ಅಂತಾರೆ. ಏಕೆ ಹೀಗೆ?

ಇತ್ತೀಚಿನ ರಾಜಕಾರಣ ತೀರಾ ವೈಯಕ್ತಿಕ ಮೇಲಾಟಗಳೇ ಆಗಿವೆ. ಸಿಎಂ ಸಿದ್ದರಾಮಯ್ಯ ಏಕವಚನದಲ್ಲೇ ನಿಂದಿಸುತ್ತಾರೆ. ಮೈಸೂರು ಮಹಾರಾಜರನ್ನೂ ಏಕವಚನದಲ್ಲಿ ನಿಂದಿಸುತ್ತಾರೆ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಅಂತ ನಾನು ಕಾಂಗ್ರೆಸ್‌ ಭಾಷೆಯಲ್ಲೇ ಮಾತಾಡ್ತೀನಿ. ನಾನಾಗಿಯೇ ಹೇಳಿಕೆ ಕೊಡಲ್ಲ. ಆದರೆ, ಪ್ರತಿಕ್ರಿಯಿಸುವ ಸಂದರ್ಭ ಬಂದಾಗ ಎದುರಾಳಿಗಳಿಗೆ ನಾಟುವಂತೆಯೇ ಕೊಡ್ತೀನಿ.

5. ನಿಮ್ಮ ಎಂಪಿ ಸ್ಥಾನ ಪ್ರಧಾನಿ ನರೇಂದ್ರ ಮೋದಿ ಅವರ ದಯಾಭಿಕ್ಷೆ ಅಂತ ಹೇಳಿದ್ದೀರಿ. ಇದು ಮತ ಕೊಟ್ಟವರಿಗೆ ಮಾಡಿದ ಅಪಮಾನವಲ್ಲವೇ?

ರಾಜಕಾರಣಕ್ಕೆ ನಾನು ಹೊರಗಿನಿಂದ ಬಂದೆ. ಇವತ್ತು ರಾಜಕಾರಣದಲ್ಲಿ ಟಿಕೆಟ್‌ ಕೊಡುವಾಗ ಆತ ಯಾರ ಶಿಷ್ಯ? ಆತನ ಬಳಿ ಎಷ್ಟು ದುಡ್ಡಿದೆ? ಆತ ಎಷ್ಟು ಇನ್‌ವೆಸ್ಟ್‌ ಮಾಡಬಲ್ಲ? ಎಂಬ ಮಾತುಗಳು ಬರುತ್ತವೆ. ಇಂತಹ ಸಂದರ್ಭದಲ್ಲಿ ನರೇಂದ್ರ ಮೋದಿ ಅವರಿಲ್ಲದಿದ್ದರೆ ನನಗೆ ಟಿಕೆಟ್‌ ಸಿಗುತ್ತಿತ್ತಾ? ಮೋದಿ ಅವರು ನನಗೆ ಟಿಕೆಟ್‌ ಕೊಟ್ಟು ನನ್ನ ಪರ ಪ್ರಚಾರ ಮಾಡಿ ಮತ ನೀಡುವಂತೆ ಜನತೆಗೆ ಮನವಿ ಮಾಡಿದರು. ಮೈಸೂರು-ಕೊಡಗಿನ ಜನತೆ ನನ್ನನ್ನು ಆಶೀರ್ವದಿಸಿ ಗೆಲ್ಲಿಸಿದರು. ಈ ಎಲ್ಲ ಹಿನ್ನೆಲೆಯಲ್ಲಿ ಮೋದಿ ಅವರು ನನ್ನ ಮೇಲೆ ಕೃಪೆ ತೋರಿದರು ಎಂಬ ಅರ್ಥದಲ್ಲಿ ಹೇಳಿದ್ದೇನೆ. ಅದೊಂದು ಧನ್ಯತಾಭಾವ.

ಸಂದರ್ಶನ: ಕೂಡ್ಲಿ ಗುರುರಾಜ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌