ಶಿವಮೊಗ್ಗ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮಗಳು ಡಾ.ರಾಜನಂದಿನಿ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆ ಆದರು. ಸಾಗರದಿಂದ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ. ರಾಜನಂದಿನಿ ಸ್ಪರ್ಧೆ ಮಾಡಲು ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲ. ಬದಲಾಗಿ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಅವರು ಇದೀಗ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ
ಮಗಳ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಕಾಗೋಡು ತಿಮ್ಮಪ್ಪ, ''ಅವಳು ಈ ರೀತಿ ಮಾಡುತ್ತಾಳೆ ಎಂದು ಕನಸು ಮನಸಿನಲ್ಲೂ ನಾನು ಅಂದುಕೊಂಡವನಲ್ಲ. ರಾಜಕಾರಣದಲ್ಲಿ ಒಂದು ಸ್ಥಿರತೆ ಬದ್ಧತೆ ಇಟ್ಟುಕೊಂಡು ಬೆಳೆದು ಬಂದವರು ನಾವು. ಆ ಬಗ್ಗೆ ನನಗೆ ಸಂತೋಷ ನನಗೆ ಇದೆ. ಅಂತಹದ್ದರಲ್ಲಿ ಆಕೆ ಬಿಜೆಪಿ ಸೇರಿದ್ದಾಳೆ ಎಂದರೆ, ನನಗೆ ಎದೆಗೆ ಚೂರಿ ಹಾಕಿದ ಹಾಗೆ ಆಗಿದೆ. ಈ ಕೆಲಸ ಮಾಡಬಾರದಾಗಿತ್ತು'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.