ಆ್ಯಪ್ನಗರ

ಗೋಡ್ಸೆ ವಿವಾದ: ಟ್ವಿಟರ್ ಖಾತೆ ಹ್ಯಾಕ್‌ ಆಗಿದೆ ಎಂದ ಅನಂತ್‌ ಕುಮಾರ್ ಹೆಗಡೆ

ತಮ್ಮ ಟ್ವಿಟರ್‌ ಖಾತೆಗೆ ಹಿಂದೆಯೂ ಎರಡು ಬಾರಿ ಕನ್ನ ಹಾಕಲಾಗಿತ್ತು. ಈಗಲೂ ಅದೇ ರೀತಿ ಹ್ಯಾಕ್ ಮಾಡಿ ತಮ್ಮ ಹೆಸರಿನಲ್ಲಿ ಗೋಡ್ಸೆ ಕುರಿತ ಸಮರ್ಥನೆಯ ಟ್ವೀಟ್ ಮಾಡಲಾಗಿತ್ತು. ಅದು ಗಮನಕ್ಕೆ ಬಂದ ಕೂಡಲೇ ಅಳಿಸಿ ಹಾಕಲಾಗಿದ್ದು, ತಮ್ಮ ಹೆಸರಿನಲ್ಲಿ ಪ್ರಕಟವಾದ ವಿವಾದಾತ್ಮಕ ಟ್ವೀಟ್‌ಗೆ ವಿಷಾದಿಸುವುದಾಗಿ ಅನಂತ ಕುಮಾರ್ ಹೆಗಡೆ ಸ್ಪಷ್ಟನೆ ನೀಡಿದ್ದಾರೆ.

Vijaya Karnataka Web 17 May 2019, 12:31 pm
ಬೆಂಗಳೂರು: ತಮ್ಮ ಟ್ವಿಟರ್‌ ಖಾತೆ ನಿನ್ನೆ ಹ್ಯಾಕ್‌ ಆಗಿದ್ದು, ತಮ್ಮ ಹೆಸರಿನಲ್ಲಿ ಪ್ರಕಟವಾದ ವಿವಾದಿತ ಟ್ವೀಟ್‌ ಅನ್ನು ಅಳಿಸಿ ಹಾಕಲಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಟ್ವೀಟ್ ಮೂಲಕವೇ ಸ್ಪಷ್ಟೀಕರಣ ನೀಡಿದ್ದಾರೆ.
Vijaya Karnataka Web Anant Kumar Hegde


ತಮ್ಮ ಟ್ವಿಟರ್‌ ಖಾತೆಗೆ ಹಿಂದೆಯೂ ಎರಡು ಬಾರಿ ಕನ್ನ ಹಾಕಲಾಗಿತ್ತು. ಈಗಲೂ ಅದೇ ರೀತಿ ಹ್ಯಾಕ್ ಮಾಡಿ ತಮ್ಮ ಹೆಸರಿನಲ್ಲಿ ಗೋಡ್ಸೆ ಕುರಿತ ಸಮರ್ಥನೆಯ ಟ್ವೀಟ್ ಮಾಡಲಾಗಿತ್ತು. ಅದು ಗಮನಕ್ಕೆ ಬಂದ ಕೂಡಲೇ ಅಳಿಸಿ ಹಾಕಲಾಗಿದ್ದು, ತಮ್ಮ ಹೆಸರಿನಲ್ಲಿ ಪ್ರಕಟವಾದ ವಿವಾದಾತ್ಮಕ ಟ್ವೀಟ್‌ಗೆ ವಿಷಾದಿಸುವುದಾಗಿ ಅನಂತ ಕುಮಾರ್ ಹೆಗಡೆ ಸ್ಪಷ್ಟನೆ ನೀಡಿದ್ದಾರೆ.




ಮಹಾತ್ಮಾ ಗಾಂಧಿ ಹತ್ಯೆ ಮಾಡಿದ ನಾಥೂರಾಂ ಗೋಡ್ಸೆ ವಿವಾದ ಮತ್ತೆ ಉಲ್ಬಣಿಸುತ್ತಿದೆ. ಭೋಪಾಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಗೋಡ್ಸೆ ಯಾವತ್ತೂ ದೇಶಭಕ್ತನೇ ಎಂದು ಹೇಳಿಕೆ ನೀಡಿದ ಬಳಿಕ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸ್ವತಃ ಬಿಜೆಪಿಯೇ ಸಾಧ್ವಿ ಹೇಳಿಕೆಯಿಂದ ಅಂತರ ಕಾಯ್ದುಕೊಂಡು ಖಂಡಿಸಿತ್ತು.

'ಗೋಡ್ಸೆ ಪರ ಮಾತನಾಡುವಾಗ ಅಪರಾಧ ಭಾವನೆ ಬೇಕಿಲ್ಲ. ಅದಕ್ಕಾಗಿ ಯಾಕೆ ಕ್ಷಮೆ ಕೋರಬೇಕು? ಎಂದು ಅನಂತ ಕುಮಾರ್ ಹೆಗಡೆಯವರ ಹೆಸರಿನಲ್ಲಿ ಟ್ವೀಟ್ ಮಾಡಲಾಗಿತ್ತು.

'7 ದಶಕಗಳ ಬಳಿಕ ಇಂದಿನ ತಲೆಮಾರು ಬದಲಾದ ಗ್ರಹಿಕೆಯ ವಾತಾವರಣದಲ್ಲಿ ಈ ಬಗ್ಗೆ ಚರ್ಚೆ ಆರಂಭಿಸಿದೆ. ಸಾಕಷ್ಟು ಖಂಡನೆಗಳೂ ಕೇಳಿ ಬಂದಿವೆ. ಈ ಚರ್ಚೆಯನ್ನು ಕೇಳಿ ಕೊನೆಗೂ #ನಾಥೂರಾಂಗೋಡ್ಸೆ ಆತ್ಮಕ್ಕೆ ಶಾಂತಿ ದೊರೆತಿರಬಹುದು' ಎಂದು ಟ್ವೀಟ್‌ನಲ್ಲಿ ಹೇಳಲಾಗಿತ್ತು.

ಈ ಲೋಕಸಭಾ ಚುನಾವಣೆ ವೇಳೆ ಗೋಡ್ಸೆ ವಿವಾದಕ್ಕೆ ಮೊದಲು ಕಲ್ಲು ಹೊಡೆದವರು ತಮಿಳುನಾಡಿನ ನಟ, ರಾಜಕಾರಣಿ ಕಮಲ್ ಹಾಸನ್. ತಮ್ಮ ಎಂಎನ್‌ಎಂ ಪಕ್ಷದ ಅಭ್ಯರ್ಥಿ ಪರ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಪ್ರಚಾರ ಮಾಡುತ್ತ 'ಗಾಂಧಿಯನ್ನು ಕೊಂದ ನಾಥೂರಾಂ ಗೋಡ್ಸೆ ಮೊದಲ ಹಿಂದೂ ಭಯೋತ್ಪಾದಕ' ಎಂದು ಹೇಳುವ ಮೂಲಕ ವಿವಾದ ಕಿಡಿ ಹೊತ್ತಿಸಿದ್ದರು. ಇದರ ಫಲಶ್ರುತಿಯಾಗಿ ಕಮಲ್‌ ಹಾಸನ್ ಮೇಲೆ ಚಪ್ಪಲಿ ತೂರಿದ ಘಟನೆಯೂ ನಡೆದಿತ್ತು.

ಕಮಲ್‌ ಹಾಸನ್ ಹೇಳಿಕೆಗೆ ಪ್ರತಿಕ್ರಿಯಿಸುವಂತೆ ಮಾಧ್ಯಮ ಪ್ರತಿನಿಧಿಗಳು ಗುರುವಾರ ಭೋಪಾಲ್‌ನಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಜತೆ ಕೇಳಿದಾಗ ಅವರು, ನಾಥೂರಾಂ ಗೋಡ್ಸೆ ಯಾವತ್ತೂ ದೇಶಭಕ್ತನೇ. ಹಿಂದೆ, ಇಂದು, ನಾಳೆಯೂ ದೇಶಭಕ್ತನೇ ಆಗಿರುತ್ತಾನೆ' ಎಂದು ಹೇಳಿದ್ದರು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಪಕ್ಷಗಳು ಸಾಧ್ವಿ ಹೇಳಿಕೆಯನ್ನು ಖಂಡಿಸಿ, ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದವು. ಸ್ವತಃ ಬಿಜೆಪಿ ನಾಯಕತ್ವ ಕೂಡ ಸಾಧ್ವಿ ಹೇಳಿಕೆಯಿಂದ ದೂರ ಸರಿದು ಖಂಡಿಸಿತ್ತು. ಜತೆಗೆ ಕ್ಷಮೆ ಯಾಚಿಸುವಂತೆ ಆಗ್ರಹಿಸಿತ್ತು.

ಹೀಗಿದ್ದರೂ ಅನಂತ ಕುಮಾರ್ ಹೆಗಡೆ ಅವರು ಟ್ವೀಟ್‌ ಮಾಡಿ, ಗೋಡ್ಸೆ ಕುರಿತ ಚರ್ಚಿಸಲು ಅಪರಾಧಿ ಭಾವನೆ ಏಕೆ ಎಂದು ಪ್ರಶ್ನಿಸಿದ್ದರು.

ಗೋಡ್ಸೆ ಮಾಡಿದ ಕೊಲೆ 1, ರಾಜೀವ್‌ ಗಾಂಧಿ ಮಾಡಿದ ಕೊಲೆ 17,000: ನಳಿನ್ ಕುಮಾರ್ ಕಟೀಲ್


ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಕೂಡ ಇದೇ ಧಾಟಿಯಲ್ಲಿ ಟ್ವೀಟ್ ಮಾಡಿ, ನಾಥೂರಾಂ ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000. ಈಗ ನೀವೇ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು?'ಎಂದು ಪ್ರಶ್ನಿಸಿದ್ದರು. ಆದರೆ ಇದು ಮತ್ತೊಂದು ವಿವಾದಕ್ಕೆ ಕಾರಣವಾಗುತ್ತಿದೆ ಎಂದು ಅರಿವಾದ ಕೂಡಲೇ ನಳಿನ್ ಕುಮಾರ್ ಕಟೀಲ್‌ ಟ್ವೀಟ್‌ ಅನ್ನು ಅಳಿಸಿ ಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌