ಆ್ಯಪ್ನಗರ

ಹಾಸನ ಮತಗಟ್ಟೆಯಲ್ಲಿ ಮರು ಮತದಾನ?

18 ಮತಗಟ್ಟೆಯಲ್ಲಿಯೂ ಅಕ್ರಮ: ಬಿಜೆಪಿ ಆರೋಪ

Vijaya Karnataka 29 Apr 2019, 12:24 pm
- ಪ್ರಕಾಶ್‌ ಜಿ. ಹಾಸನ
ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಸಿಬ್ಬಂದಿಯನ್ನು ಅಮಾನತುಪಡಿಸಿದ ಬೆಳವಣಿಗೆಯು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆ ಮೂಡಿಸಿದೆ. ಅಲ್ಲದೇ, ಈ ಮತಗಟ್ಟೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂಬ ಆರೋಪಕ್ಕೆ ಈ ಕ್ರಮ ಪುಷ್ಟಿ ನೀಡಿದಂತಾಗಿದೆ. ಅಲ್ಲದೇ, ಬಿಜೆಪಿಯು ಇನ್ನೂ 18 ಕಡೆ ಅಕ್ರಮ ನಡೆದಿದೆ ಎಂದು ಆರೋಪಿಸಿ ದೂರು ಸಲ್ಲಿಸಲು ನಿರ್ಧರಿಸಿದೆ.

ಹೀಗಾಗಿ ಮರುಮತದಾನಕ್ಕೆ ಆದೇಶಿಸಲಾಗುವುದೇ? ಚುನಾವಣಾ ಫಲಿತಾಂಶ ಮುಂದೂಡಲಾಗುವುದೇ ಎಂಬ ಅನುಮಾನ ಮೂಡತೊಡಗಿದೆ. ಕಡೂರು ವಿಧಾನಸಭೆ ಕ್ಷೇತ್ರ ಒಳಗೊಂಡಂತೆ ಹಾಸನ ಲೋಕಸಭೆ ಕ್ಷೇತ್ರಕ್ಕೆ ಏಪ್ರಿಲ್‌ 18 ರಂದು ನಡೆದ ಚುನಾವಣೆ ವೇಳೆ ಹೊಳೆನರಸೀಪುರ ಮತಗಟ್ಟೆಯಲ್ಲಿ ಅಕ್ರಮ ಮತದಾನಕ್ಕೆ ಕುಮ್ಮಕು ನೀಡಲಾಗಿದೆ ಎಂಬ ಬಿಜೆಪಿ ಏಜೆಂಟ್‌ ಎನ್‌. ರಾಜು ಮತ್ತು ಮಾಯಣ್ಣ ಎಂಬವರು ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದರು.

ದೂರಿನ ಅನ್ವಯ ವಿಡಿಯೊ ದೃಶ್ಯಾವಳಿ ವೀಕ್ಷಿಸಿದ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಮೇಲ್ನೋಟಕ್ಕೆ ಆರೋಪ ವಾಸ್ತವಾಂಶದಿಂದ ಕೂಡಿದೆ ಎಂದು ತಪ್ಪಿತಸ್ಥರ ವಿರುದ್ಧ ದೂರು ನೀಡುವಂತೆ ಸೂಚಿಸಿದ್ದರು. ಅದರಂತೆ ಚುನಾವಣಾಧಿಕಾರಿ ಗಿರೀಶ್‌ ಎಂ.ನಂದನ್‌ ಹೊಳೆನರಸೀಪುರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಚುನಾವಣಾ ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ಮೂವರು ಮತಗಟ್ಟೆ ಅಧಿಕಾರಿಗಳನ್ನು ಏಪ್ರಿಲ್‌ 28 ರಂದು ಡಿಸಿ ಅಮಾನತು ಮಾಡಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿ ದೂರಿನ ಬಗ್ಗೆ ಆಯೋಗಕ್ಕೆ ವರದಿ ಸಲ್ಲಿಸಿದ ಬಳಿಕ ಆಯೋಗ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿದೆ.

ಇತರ 18 ಮತಗಟ್ಟೆಯಲ್ಲಿ ಯೂ ಅಕ್ರಮ ನಡೆದಿದೆ. ಇದಕ್ಕೆ ಕುಮ್ಮಕ್ಕು ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತೇವೆ.
ಪ್ರೀತಂ ಜೆ. ಗೌಡ ಶಾಸಕ, ಹಾಸನ

ಅಕ್ರಮದ ಬಗ್ಗೆ ಎಲ್ಲಾ 18 ಮತಗಟ್ಟೆ ಏಜೆಂಟರು ಅಂದೇ ದೂರು ನೀಡಬೇಕಿತ್ತು. ಈಗ ದೂರು ನೀಡಿದರೆ ಸಿಂಧುವಾಗಲ್ಲ, ಪಡುವಲಹಿಪ್ಪೆ ಮತಗಟ್ಟೆಗೆ ಸೀಮಿತವಾಗಿ ಫಲಿತಾಂಶ ಬರುವುದರೊಳಗೆ ಮರು ಮತದಾನಕ್ಕೆ ಆದೇಶಿಸಬಹುದು.
ಎಚ್‌.ಕೆ.ಜವರೇಗೌಡ ರಾಜ್ಯಸಭೆ, ಮಾಜಿ ಸದಸ್ಯ ಹಾಗೂ ಹಿರಿಯ ವಕೀಲರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ